ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ
ರಾವಣ ಸಂಹಾರದ ವಿಜಯಭಾವದಿಂದ ಪಟ್ಟಾಭಿಷೇಕದ ನಂತರ ಸೀತಾರಾಮರ ಅರಮನೆಯ ಜೀವನ ಕೆಲವು ವರ್ಷಗಳು ತುಂಬಾ ಚೆನ್ನಾಗಿಯೇ ಇತ್ತಂತೆ. ಅಗ್ನಿಪರೀಕ್ಷೆ ಎದುರಿಸಿಯೇ ಸೀತೆಯೆನಿಸಿದ್ದರೂ ಅವಳೂ ಹೆಣ್ಣಲ್ಲವೆ? ಈ ಸಂದರ್ಭದಲ್ಲಿ ಅವಳ ಸಚ್ಚಾರಿತ್ರ್ಯದ ಬಗ್ಗೆ ಅಯೋಧ್ಯಾ ಜನಮಾನಸದಲ್ಲಿ ಗುಸುಗುಸು. ಗಾಸಿಪ್ ಅಂತಾರಲ್ಲ ಅದು.
ರಾಜಧರ್ಮವೇ ಶ್ರೇಷ್ಠ ಪಾಲನೆಯೆಂದರಿತಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಿವಿಗೆ ಇದು ಬೀಳದೆ ಇರುತ್ತದೆಯೇ? ಅರೆಘಳಿಗೆಯೂ ಧರ್ಮಭ್ರಷ್ಟನಾಗಲಾರದ ಯಜಮಾನ ಅವನು. ಜನರ ಮಾತು ಜನಾರ್ಧನನ ಆಜ್ಞೆ. ಇನ್ನೊಂದಷ್ಟೇ ಹಗಲುಗಳಲ್ಲಿ ರಾಮವಂಶದ ಕುಡಿಗೆ ಜನ್ಮನೀಡಲಿದ್ದ ಸೀತೆ ಆ ಕ್ಷಣದಲ್ಲಿ ಕೇವಲ ಧರ್ಮಪತ್ನಿ. ಅರೆಘಳಿಗೆಯೂ ನಿಧಾನಿಸಲಾರದೆ ರಾಮ ಅವಳನ್ನು ಕಾಡಿನ ಮಡಿಲಿಗೆ ಹಾಕಿಬಿಟ್ಟಿದ್ದ.
ವಾಲ್ಮಿಕಿ ಆಶ್ರಮದ ಆಶ್ರಯದಲ್ಲಿ ಸೀತೆಯ ಗರ್ಭದಿಂದುದಯಿಸಿದ ಮಕ್ಕಳು ಲವ ಕುಶ. ಬಾಲ್ಯದಿಂದಲೂ ವಾಲ್ಮೀಕಿಯ ಶಿಷ್ಯತ್ವದ ಸುಖ ಕಂಡವರು. ಕುಲಮೂಲವನ್ನರಿಯದೆ ಲವ ಕುಶರು ಅಸ್ತಿತ್ವವನ್ನು ಕಂಡುಕೊಂಡಿದ್ದು ವಾಲ್ಮೀಕಿಯಿಂದ. ರಾಮಕಥಾ ಚರಿತಾಮೃತವನ್ನು ರಾಗಬದ್ಧವಾಗಿ ಪಲುಕಲು ಕಲಿತ್ತಿದ್ದ ಅವಳಿ ಜವಳಿ ಮಕ್ಕಳು ಅವರಾಗಿದ್ದರು.
ರಾಮನ ಅಶ್ವಮೇಧ ಯಾಗದ ಸಂದರ್ಭ. ಸಾಗರೋಪಾದಿಯಲ್ಲಿ ನೆರೆದ ಜನರೆದುರು ಮಕ್ಕಳು ರಾಮಾಯಣದ ಗಾನಸುಧೆ ಹರಿಸಿದ್ದಾಗ, ಸೀತೆಯು ಅರಣ್ಯಪಾಲಾದ ಸಾಲುಗಳಿಗೆ ರಾಮ ಗದ್ಗದಿತನಾಗುತ್ತಾನೆ. ಆಗ, ವಾಲ್ಮೀಕಿಯು ಸೀತೆಯನ್ನು ತೋರುತ್ತಾರೆ. ಪತ್ನಿಯಾಗಿರದ, ತಾಯಿಯಾಗಿರಲೊಲ್ಲದ ಸೀತೆ “ಭೂಮಾತೆ ಬಾಯ್ಬಿಡಲೊಲ್ಲೆಯೇಕೆ?" ಎಂದು ಆರ್ತಳಾಗಿದ್ದೆ ತಡ, ಇಬ್ಭಾಗವಾದ ಧರಿತ್ರಿ ಜಾನಕಿಯನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾಳೆ.
ಸೀತೆ ಇನ್ನಿಲ್ಲವೆಂದಾದ ಮೇಲೆ ಲವ ಕುಶರು ತನ್ನ ಮಕ್ಕಳು ಎನ್ನುವ ಜ್ಞಾನೋದಯ ಶ್ರೀರಾಮನಿಗೆ ಉಂಟಾಗುತ್ತದೆ. ಅದೇ ಸಮಯಕ್ಕೆ ದೇವದೂತರ ಅಶರೀರವಾಣಿಯಿಂದ ರಾಮಾವತಾರದ ಉದ್ದೇಶ ಸಫಲವಾಗಿದ್ದು ತಿಳಿದುಬರುತ್ತೆ. ಅವತಾರಪುರುಷ ಶ್ರೀರಾಮಚಂದ್ರ ವೈಕುಂಠಕ್ಕೆ ಮರಳುತ್ತಾನೆ.