ಶ್ರೀರಾಮ ಜಯ ರಾಮ ಜಯ ಜಯ ರಾಮ
ದಕ್ಷಿಣದಲ್ಲಿ ರಾಮನ ಬಗ್ಗೆ ಹೆಚ್ಚು ಪ್ರಚಾರ ಕೊಟ್ಟವನು ನಮ್ಮೂರಿನ ಹನುಮ ದೇವರು, ದಕ್ಷಿಣದಲ್ಲಿ(ಬಹುಶಃ ತಮಿಳುನಾಡು, ಕೇರಳ ಬಿಟ್ಟರೆ) ಎಲ್ಲಾ ಸಣ್ಣ ಪುಟ್ಟ ಊರು ಕೇರಿಗಳಲ್ಲಿ ರಾಮನಾಮ ಗುನುಗುವಂತೆ ಮಾಡಿದ ಕೀರ್ತಿ ವಾನರಶ್ರೇಷ್ಠ ಹಂಪೆಯ ಹನುಮನಿಗೆ ಸಲ್ಲುತ್ತದೆ. ಸ್ನೇಹ, ಪ್ರೀತಿ, ರಾಜತಾಂತ್ರಿಕತೆ ಸೇರಿದಂತೆ ಎಲ್ಲವನ್ನು ಈ ಇಬ್ಬರು ಮಹಾನ್ ಪುರುಷರು ಹೇಳಿಕೊಟ್ಟಿದ್ದಾರೆ.
ರಾಮ ನಾಮ ಸಂಗೀತ ಗಾನ: ಬೆಂಗಳೂರಿನಲ್ಲಿ ಶ್ರೀರಾಮನವಮಿ ಎಂದರೆ ಥಟ್ಟನೆ ನೆನಪಾಗುವುದು ಚಾಮರಾಜಪೇಟೆಯ ಶ್ರೀರಾಮ ಮಂಡಳಿ ಆಯೋಜನೆಯ ಸಂಗೀತ ಸೇವೆ. ಸತತವಾಗಿ 73 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಸಂಗೀತ ಉತ್ಸವಕ್ಕೆ ತನ್ನದೇ ಆದ ಇತಿಹಾಸ, ಮೆರಗು ಇದೆ.
ಜಯನಗರ, ಮಲ್ಲೇಶ್ವರ, ರಾಜಾಜಿನಗರ, ಬಸವನಗುಡಿ, ಹೊಸಕೆರೆಹಳ್ಳಿಗಳಲ್ಲಿ ಇಂದು ಬೆಳಗ್ಗಿನಿಂದಲೇ ಡ್ರಮ್ ಗಟ್ಟಲೆ ಪಾನಕ, ನೀರು ಮಜ್ಜಿಗೆ ತುಂಬಿಸಿಟ್ಟುಕೊಂಡು ಸಾರ್ವಜನಿಕರಿಗೆ ಹಂಚುವ ಕಾರ್ಯದಲ್ಲಿ ಭಕ್ತರು ಮಗ್ನರಾಗಿದ್ದಾರೆ. ಬೆಂಗಳೂರು ನಗರಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಪಾನಕದ ಭರಾಟೆ ಹೆಚ್ಚು. ಉಳಿದಂತೆ, ಸಂಜೆ ಹರಿಕಥೆ, ಕಥಾ ಕಾಲಕ್ಷೇಪ, ಹಾಡುಗಾರಿಕೆ ಸಾಮಾನ್ಯ ಸಂಗತಿ. ಹಿಂದೆ ಪ್ರಸಿದ್ಧಿ ಪಡೆದಿದ್ದ ಗಮಕ ವಾಚನ ಇತ್ತೀಚೆಗೆ ಕಣ್ಮರೆಯಾಗುತ್ತಿರುವುದು ವಿಷಾದಕರ.
ಸಂಗೀತ ದಿಗ್ಗಜರ ಸೇವೆ: ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಮೈದಾನ ಮಹಾನ್ ಸಂಗೀತಗಾರರನ್ನು ಕಂಡಿದೆ. ಎಂ.ಎಸ್. ಸುಬ್ಬುಲಕ್ಷ್ಮಿ, ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿ, ಭೀಮಸೇನ ಜೋಶಿ, ಬಾಲಮುರಳಿಕೃಷ್ಣ, ಆರ್.ಕೆ. ಶ್ರೀಕಂಠನ್, ಕುನ್ನಕ್ಕುಡಿ ವೈದ್ಯನಾಥನ್, ಲಾಲ್ಗುಡಿ ಜಯರಾಮನ್, ಹರಿಹರನ್, ಶ್ರೀನಿವಾಸ್, ಎಂಎಸ್ ಶೀಲಾ, ಬಾಂಬೆ ಜಯಶ್ರೀ, ಕೆಜೆ ಯೇಸುದಾಸ್, ಕದ್ರಿ ಗೋಪಾಲನಾಥ್ ಸೇರಿದಂತೆ ಹತ್ತು ಹಲವು ಮಹನೀಯ ಸಂಗೀತ ಸುಧೆ ಇಲ್ಲಿ ಹರಿದಾಡಿದೆ.
ಈ ಬಾರಿ ಏಪ್ರಿಲ್ 4ರಿಂದ ಮೇ 9ರ ವರೆಗೆ ಈ ಅಖಂಡ ಸಂಗೀತ ಧಾರೆಯಲ್ಲಿ ಮಿಂದು ಪಾವನವಾಗಲು ಭಕ್ತರಿ ಅವಕಾಶವಿದೆ. ಇದರ ಜೊತೆಗೆ ಪ್ರತಿದಿನ ಉಪನ್ಯಾಸ, ಪ್ರವಚನ ಇರುತ್ತದೆ. ನಗರ ತುಂಬಾ ಇರುವ ಶ್ರೀರಾಮ ಸೇವಾ ಮಂಡಳಿಯಲ್ಲಿ ವಿವರಗಳನ್ನು ಪಡೆಯಬಹುದು. ಸ್ಥಳ: ಕೋಟೆ ಹೈಸ್ಕೂಲ್ ಮೈದಾನ, ಚಾಮರಾಜಪೇಟೆ. ಮಾಹಿತಿಗೆ: (080)2660 4031ಗೆ ಕರೆ ಮಾಡಿ. ಶ್ರೀರಾಮ ಜಯ ರಾಮ ಜಯ ಜಯ ರಾಮ ಎನ್ನಿ