ಮೈಲಾರ ಲಿಂಗೇಶ್ವರ ಗೊರವಯ್ಯನ ಕಾರ್ಣಿಕೋತ್ಸವ
ಈ ಕಾರಣಿಕೋತ್ಸವದಲ್ಲಿ ಬಿಲ್ಲನ್ನೇರಿದ ವ್ರತಧಾರಿ ಗೊರವಪ್ಪ 'ಅಂಬಲಿ ದುಂಡಗಾದೀತಲೇ ಪರಾಕ್" ಎನ್ನುವ ಹೇಳಿಕೆಯನ್ನು ಹೇಳಿ ಈ ಹೇಳಿಕೆಯ ನಾನಾರ್ಥಗಳನ್ನು ತಿಳಿಯಲು ಭಕ್ತಾದಿಗಳ ಬುದ್ಧಿಮತ್ತೆಗೆ ಮುಕ್ತ ಅವಕಾಶ ನೀಡಿದ್ದಾನೆ.
ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ರೀತಿಯ ಹೇಳಿಕೆ ಇಲ್ಲಿಯ ಕಾರಣಿಕೋತ್ಸವದಲ್ಲಿ ಕೇಳಿಬಂದಿತ್ತು. ಸ್ವಾತಂತ್ರ್ಯಾನಂತರ ಈ ರೀತಿಯ ಹೇಳಿಕೆ ಕೇಳಿಬಂದಿರುವ ಹಿನ್ನಲೆಯಲ್ಲಿ ಭಕ್ತಾಧಿಗಳು ಇತಿಹಾಸವನ್ನು ಕೂಡ ಈ ಸಂದರ್ಭದಲ್ಲಿ ಮೆಲುಕು ಹಾಕುವಂತಾಗಿದೆ.
ಧಾರ್ಮಿಕ ವಿಶ್ಲೇಷಕರು ಈ ಹೇಳಿಕೆಗಳನ್ನು ತಮ್ಮದೇ ಆದ ರೀತಿ - ನೀತಿಗಳಲ್ಲಿ ವಿಶ್ಲೇಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 'ಅಂಬಲಿ" ಗಂಜಿ ಎನ್ನುವ ಅರ್ಥವನ್ನು ಪಡೆಯುತ್ತಿದೆ. 'ದುಂಡಗಾದೀತಲೇ ಪರಾಕ್" ದ್ರವ ರೂಪದ ಆಹಾರ ಪದಾರ್ಥ ದುಂಡಗಾಗಲು ಗಟ್ಟಿಯಾಗಲೇ ಬೇಕು. ಕಾರಣ ಆಹಾರ ಪಧಾರ್ಥಗಳು ಉತ್ತಮವಾಗಿ ಬೆಳೆಯಲಿವೆ.
ಅಥವಾ ಒಡೆದ ಮನಸ್ಸುಗಳು, ಒಡೆದು ಚೆಲ್ಲಾಪಿಲ್ಲಿ ಆಗಿರುವ ರಾಜಕೀಯ ಸಂಘಟನೆಗಳು, ವ್ಯಕ್ತಿಗಳು, ಗುಂಪುಗಳು, ಕುಟುಂಬಗಳು, ಸಹೋದರರು ಒಂದಾಗಲಿವೆ. ಒಗ್ಗೂಡಲಿವೆ. ಉತ್ತಮವಾದ ಮಳೆ - ಬೆಳೆ ಆಗಲಿದೆ. ಸಮೃದ್ಧಿ ಸಿದ್ಧಿಸಲಿದೆ ಎಂದೇ ಹಲವರು ವಿಶ್ಲೇಷಿಸಿದ್ದಾರೆ. ಒಟ್ಟಾರೆ ಗಣನೀಯ ಅಭಿವೃದ್ಧಿ ಸಾಧ್ಯವಾಗಲಿದೆ ಎನ್ನಲಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳು, ಲಕ್ಷಾಂತರ ಭಕ್ತಾಧಿಗಳು, ಬಳ್ಳಾರಿ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಜನಪ್ರತಿನಿಧಿಗಳು ಈ ಹೇಳಿಕೆಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಲಿಸುತ್ತಾರೆ. ಈ ಹೇಳಿಕೆ ಹೇಳುವ ಪೂರ್ವದಲ್ಲಿ ವ್ರತಧಾರಿ ಗೊರವಯ್ಯ ಬಿಲ್ಲನ್ನೇರಿ 'ಸದ್ದಲೇ..." ಎಂದಾಗ ಇಡೀ ಸಮೂಹದಲ್ಲಿ ಮೌನ ಆವರಿಸುತ್ತದೆ.