ಗೆಳೆತನ ಸಂತಸ ಆರೋಗ್ಯದ ಸಂಕೇತ ಕ್ರಿಸ್ಮಸ್
ನಾಡಿನಾದ್ಯಂತ ಇಗರ್ಜಿಗಳಲ್ಲಿ, ಕ್ರೈಸ್ತ ಬಾಂಧವರ ಮನೆಮನೆಗಳಲ್ಲಿ ಕ್ರಿಸ್ತ ಹುಟ್ಟಿನ ಸಂದರ್ಭವನ್ನು ಮತ್ತೆ ಜ್ಞಾಪಿಸುವ ಗುಡಿಸಲುಗಳ ನಿರ್ಮಾಣ, ಬಣ್ಣದ ಬಣ್ಣದ ಮಿನುಗು ದೀಪಗಳಿಂದ ಅಲಂಕೃತವಾದ ಕ್ರಿಸ್ಮಸ್ ಗಿಡ, ಕೇಕ್ ಪ್ರದರ್ಶನಗಳನ್ನು ನೋಡುವುದೇ ಒಂದು ಆನಂದ. ಕ್ರಿಸ್ಮಸ್ ಹಿಂದಿನ ದಿನ ನಡುರಾತ್ರಿ ನಡೆಯುವ ಸಮ್ಮಿಲನದಲ್ಲಿ ಕರ್ನಾಟಕದೆಲ್ಲೆಡೆ ಆನಂದ ಮೇರೆ ಮೀರಿತ್ತು. ಮೇಣಬತ್ತಿಗಳು ಬೆಳಗಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಿದರು.
ಅಂಗಡಿ ಮುಂಗಟ್ಟುಗಳಲ್ಲಿ ಭರ್ತಿ ಮಾರಾಟದ ಭರಾಟೆ. ನಾನಾ ರೀತಿಯ ರಿಯಾಯತಿಗಳ ಪ್ರಯೋಜನ ಪಡೆದು ಉಳ್ಳವರು ತಮಗೆ ಮಾತ್ರವಲ್ಲ ಇಲ್ಲದವರಿಗೂ ಉಡುಗೊರೆಗಳನ್ನು ಕೊಂಡಿರುತ್ತಾರೆ. ಕ್ರಿಸ್ಮಸ್ ಹಬ್ಬದ ಆಶಯವೂ ಇದೇ ಆಗಿದೆ. ಜನರೆಲ್ಲ ಒಟ್ಟಾಗಿ ಕೂಡಿ ಆಚರಿಸುವ ಈ ಹಬ್ಬದಲ್ಲಿ ಪರಿಚಯದ ಜೊತೆಗೆ ಗೆಳೆತನವೂ ಬೆಳೆದಿರುತ್ತದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಆಯೋಜಿಸಲಾಗುವ ಕೇಕ್ ಪ್ರದರ್ಶನದಲ್ಲಿ ಕ್ರೈಸ್ತ ಬಾಂಧವರು ಮಾತ್ರವಲ್ಲ ಉಳಿದ ಮತದವರೂ ಅಷ್ಟೇ ಉತ್ಸಾಹದಿಂದ ಭಾಗವಹಿಸಿರುತ್ತಾರೆ. ಎಚ್ಎನ್ ಕಲಾಕ್ಷೇತ್ರದಲ್ಲಿ ಹರಿದ ನಗೆಹೊಳೆಯಲ್ಲಿ ಸರ್ವಧರ್ಮೀಯರೂ ತೇಲಾಡಿದ್ದಾರೆ.
ಪ್ರಕೃತಿಯ ಉಪಾಸನೆ : ಪ್ರಕೃತಿಯನ್ನು ಯಾರು ಇಷ್ಟಪಡುವುದಿಲ್ಲ? ಮಾನಸಿಕವಾಗಿ ಎಷ್ಟೇ ಬಳಲಿದ್ದರೂ ಒಂದು ಕ್ಷಣ ಹಸಿರಿನಿಂದ ಕೂಡಿದ ಪ್ರಕೃತಿಯತ್ತ ಕಣ್ಣು ಹಾಯಿಸಿದರೆ ನೋವು, ಆಯಾಸಗಳೆಲ್ಲ ಮಂಗಮಾಯವಾಗಿರುತ್ತದೆ. ಎಲ್ಲ ಚರ್ಚ್ ಗಳಲ್ಲಿ ಕ್ರಿಸ್ಮಸ್ ಗಿಡವನ್ನು ನೆಟ್ಟು ಅಲಂಕರಿಸುವ ಉದ್ದೇಶವೂ ಇದೇ ಆಗಿದೆ. ಮನೋತಜ್ಞರ ಪ್ರಕಾರ, ಹಸಿರಿನಿಂದ ಕಂಗೊಳಿಸುವ ಕ್ರಿಸ್ಮಸ್ ಗಿಡದತ್ತ ಐದೇ ಐದು ನಿಮಿಷ ಕಣ್ಣಿಟ್ಟು ನೋಡಿದರೆ ರಕ್ತದೊತ್ತಡ ಜರ್ರನೆ ಇಳಿದುಹೋಗಿರುತ್ತದೆ, ಸಹಜವಾಗಿ ಆರೋಗ್ಯವೂ ಉತ್ತಮವಾಗುತ್ತದೆ ಅಂತಾರೆ ತಜ್ಞರು.
ಕ್ರಿಸ್ಮಸ್ ಎಂದರೆ ಸಂತೋಷದ ಆಲಾಪನೆ, ಸಂಗೀತದ ಆರಾಧನೆ. ಗೆಳೆತನದ ಮಹತ್ವ ಸಾರುವ, ಬಾಂಧವ್ಯವನ್ನು ವೃದ್ಧಿಸುವ, ಖುಷಿಯನ್ನು ಹಂಚುವ ಈ ಹಬ್ಬದ ಸಂದರ್ಭದಲ್ಲಿ ಎಲ್ಲ ಕ್ರೈಸ್ತ ಬಾಂಧವರಿಗೆ ಮತ್ತು ದಟ್ಸ್ ಕನ್ನಡ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳು. ಕ್ರಿಸ್ಮಸ್ ಹಬ್ಬದಂದೇ ಹುಟ್ಟುಹಬ್ಬ ಆಚರಿಸುತ್ತಿರುವ 87 ವರ್ಷದ 'ಅಜಾತಶತ್ರು' ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಶುಭಾಶಯಗಳು.