ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹಾಲಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

By Staff
|
Google Oneindia Kannada News

NK Vishukumar, Director Information dept
ಮೊಹಾಲಿ, ನ. 20 : ಚಂಡೀಗಢ, ಮೊಹಾಲಿ ಮತ್ತು ಪಂಚಕುಲಾದಲ್ಲಿ ನೆಲೆಸಿರುವ ಕನ್ನಡಿಗರು ನಮ್ಮ ಸಂಸ್ಕೃತಿಯಲ್ಲಿ ಒಂದಾಗಿದ್ದುಕೊಂಡೂ ಕೂಡ ತಮ್ಮ ನಾಡು ನುಡಿ, ಕಲೆ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಯಾವಾಗಲೂ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಚಂಡೀಗಢ ಕನ್ನಡ ಸಂಘಕ್ಕೆ ಸೂಕ್ತ ಕಟ್ಟಡ ಇಲ್ಲವೆಂದು ಅವರು ಸದಾ ನನ್ನಲ್ಲಿ ಹೇಳುತ್ತಿರುತ್ತಾರೆ. ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಸ್ಥಳವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಯೋಜನಾ ಮಂಡಳಿಯ ಅಧ್ಯಕ್ಷ ಎನ್.ಕೆ. ಶರ್ಮಾ ಭರವಸೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಹಾಗೂ ಚಂಡೀಗಢ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಇಲ್ಲಿ ಏರ್ಪಡಿಸಿದ್ದ 53ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಲವಾರು ಕಾರಣಗಳಿಂದ ಪಂಜಾಬ್‌ಗೆ ಬಂದು ನೆಲೆಸಿರುವ ಕನ್ನಡಿಗರನ್ನು ನಾನು ಕಳೆದ 20 ವರ್ಷಗಳಿಂದಲೂ ಹತ್ತಿರದಿಂದ ನೋಡುತ್ತಿದ್ದೇನೆ. ಅವರು ಇಲ್ಲಿನ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಂಡಿದ್ದಾರೆ. ಹಾಲಿನಲ್ಲಿ ಜೇನು ಬೆರೆತಂತೆ ಆಗಿದೆ. ನಾವೂ ಕೂಡ ಕನ್ನಡಿಗರನ್ನು ಹೊರಗಿನವರು ಎಂದು ಭಾವಿಸಿಯೇ ಇಲ್ಲ. ಯಾಕೆಂದರೆ, ಅವರದು ಸೌಮ್ಯ ಸ್ವಭಾವ ಹಾಗೂ ಶ್ರಮದಾಯಿ ಜೀವನ. ಅವರು ತಮ್ಮ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಾರೆ. ಅವರು ಆತ್ಮತೃಪ್ತಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು, ಕೇವಲ ಹಣ ಸಂಪಾದನೆಗಾಗಿ ಅಲ್ಲ. ಹೀಗಾಗಿ ನಾನು ಇಲ್ಲಿನ ಕನ್ನಡಿಗ ಬಾಂಧವರನ್ನು ನನ್ನ ಅಣ್ಣ ತಮ್ಮಂದಿರೆಂದೇ ಭಾವಿಸಿದ್ದೇನೆ. ಅವರಿಗೆ ತಮ್ಮದೇ ಆದ ಒಂದು ಸಮುದಾಯ ಭವನದ ಅಗತ್ಯವಿದೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ನಾನು ಅವರಿಗೆ ನಿವೇಶನ ಒದಗಿಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, "ಕನ್ನಡಿಗರಾದ ನಾವುಗಳು ಅಪಾರ ರಾಷ್ಟ್ರಪ್ರೇಮಿಗಳು; ನಾವು ಪಂಜಾಬ್‌ನ ದಲೇರ್ ಮೆಹಂದಿ ಅವರನ್ನು ಇಷ್ಟಪಟ್ಟಷ್ಟು ಕಾಶ್ಮೀರದವರಾದ ಪ್ರೀತಿ ಜಿಂಟಾ ಅವರನ್ನೂ ಅಭಿಮಾನದಿಂದ ಕಾಣುತ್ತೇವೆ; ರಾಹುಲ್ ಡ್ರಾವಿಡ್‌ರನ್ನು ಪ್ರೀತಿಸಿದಷ್ಟೇ ಯುವರಾಜ್ ಸಿಂಗ್ ಅವರ ಮೇಲೆಯೂ ಪ್ರೀತಿ ಇಟ್ಟುಕೊಂಡಿದ್ದೇವೆ. ಇಡೀ ದೇಶವನ್ನೇ ತನ್ನದೆಂದು, ಇಡೀ ಮಾನವ ಕುಲವೇ ತನ್ನ ಕುಲವೆಂದು ಪ್ರೀತಿಸುವ ಜನಾಂಗ ನಮ್ಮದು. ಹೀಗಾಗಿ ಕನ್ನಡಿಗರು ದೇಶದ ಎಲ್ಲ ಮೂಲೆ ಮೂಲೆಗಳಲ್ಲಿದ್ದರೂ ಒಳ್ಳೆಯ ಕೆಲಸಗಾರರು; ಬುದ್ಧಿವಂತರು, ಸಹೃದಯಿಗಳು, ಸಂಸ್ಕೃತಿ- ಸಂಸ್ಕಾರ ಹೊಂದಿದವರು ಎಂದು ಕರೆಸಿಕೊಂಡಿದ್ದೇವೆ. ಇದು ನಮ್ಮ ಹೆಮ್ಮೆಯ ಸಂಗತಿ" ಎಂದರು.

"ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ರಾಜ್ಯೋತ್ಸವದ ಈ ಸಂದರ್ಭದಲ್ಲಿ ರಾಜ್ಯದ ಕಲೆ, ಸಂಸ್ಕೃತಿ, ಜನಪದ ಮತ್ತು ತವರು ನಾಡಿನ ಸುಗಂಧವನ್ನು ಹರಡುವುದು ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ಇಲ್ಲಿನ ಕನ್ನಡಿಗರಿಗೂ ತಲುಪಿಸುವ ಉದ್ದೇಶದಿಂದ ಈ ರೀತಿ ಕಾರ್ಯಕ್ರಮಗಳನ್ನು ಈ ವರ್ಷವೂ ನಾವು ಹಾಕಿಕೊಂಡಿದ್ದೇವೆ. ಈ ಬಾರಿ ದೆಹಲಿ ಸುತ್ತಮುತ್ತಲಿನ ನಾಲ್ಕು ಕಡೆಗಳಲ್ಲಿ ಈ ರೀತಿಯ ರಾಜ್ಯೋತ್ಸವ ಕಾರ್ಯಕ್ರಮವನ್ನು ನಾವು ದೆಹಲಿಯಲ್ಲಿರುವ ಕರ್ನಾಟಕ ವಾರ್ತಾ ಕೇಂದ್ರದ ಮೂಲಕ ಏರ್ಪಡಿಸಿದ್ದೇವೆ. ಇದು ನಿಮಗೆ ಸಂತಸ ತಂದಿದೆ ಎಂಬುದು ನನ್ನ ಭಾವನೆ" ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ನಬಾರ್ಡ್‌ನ ಚಂಡೀಗಢ ಶಾಖೆಯ ವ್ಯವಸ್ಥಾಪಕ ಕುಮ್ಮೂರ್, ದೆಹಲಿ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕ ವೀರಣ್ಣ ಕಮ್ಮಾರ, ಚಂಡೀಗಢ ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಜಂಬಗಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ದೆಹಲಿ ಕನ್ನಡಿಗರ ಮಕ್ಕಳಿಂದ ಕನ್ನಡ ನಾಟಕ "ಗೋಡೆ" ಹಾಗೂ ಚಂಡೀಗಢ ಕನ್ನಡಿಗರ ಮಕ್ಕಳಿಂದ "ಆಗಸ್ಟ್ ಕ್ರಾಂತಿ" ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ವೀಣಾ ಶರ್ಮಾ ನಿರ್ದೇಶಿಸಿದ "ಗೋಡೆ" ನಾಟಕ ಪ್ರಸ್ತುತಿಗೆ ಸುಶೀಲ್ ಶರ್ಮಾ ಸಹಕಾರ ನೀಡಿದರು. ಸಂಗೀತ ಸಹಕಾರವನ್ನು ಟಿ.ಎಸ್. ರಮೇಶ್ ಒದಗಿಸಿದರೆ, ಪ್ರಸನ್ನ ಸೋನಿ ಅವರು ಬೆಳಕು ನಿರ್ವಹಣೆ ಮಾಡಿದರು.

ಮೈಸೂರಿನಿಂದ ಆಗಮಿಸಿದ್ದ ಸ್ಯಾಕ್ಸೊಫೋನ್ ವಾದಕಿ ಕುಮಾರಿ ಸೌಮ್ಯಶ್ರೀ ಅವರ ಪ್ರತಿಭಾಪೂರ್ಣ ಸ್ಯಾಕ್ಸೊಫೋನ್ ವಾದನವು ಎಲ್ಲರನ್ನೂ ರಂಜಿಸಿತು. ಎಲ್ಲಕ್ಕೂ ಮುಖ್ಯವಾಗಿ ಕನ್ನಡದ ಖ್ಯಾತ ಗಾಯಕ ಅಪ್ಪಗೆರೆ ತಿಮ್ಮರಾಜ್ ಅವರಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮ್ಮ ಅಮೋಘ ಕಂಠದಿಂದ ಹಾಗೂ ವಿಶಿಷ್ಟ ಹಾವಭಾವಗಳಿಂದ ಅಪ್ಪಗೆರೆ ಅವರು ಚಂದೀಗಡ ಕನ್ನಡಿಗರನ್ನು ರಂಜಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X