ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷನ ಹೆಗಲಮೇಲೆ ಸ್ಕೀಮುಗಳ ಹೊರೆ

By Staff
|
Google Oneindia Kannada News

Jayakumar Arakalagudu
ಒಂದು ಕಡೆ ಗುರುಗಳ ಗುಣಗಾನ ನಡೆಯುತ್ತಿದ್ದರೆ, ಶಿಕ್ಷಕ ದಿನಾಚರಣೆಯ ಇನ್ನೊಂದು ಮುಖವನ್ನು ಅರಕೂಲಗೂಡು ಜಯಕುಮಾರ್ ತಮ್ಮ ಬ್ಲಾಗಿನಲ್ಲಿ ತೆರೆದಿಟ್ಟಿದ್ದಾರೆ. ನಮ್ಮ ಶಿಕ್ಷಕರ ಹೆಗಲ ಮೇಲೆ ಎಷ್ಟೊಂದು ಸರಕಾರಿ ಸ್ಕೀಮುಗಳು ಬಿದ್ದಿವೆ ಎಂದರೆ, ಅವರು ಪಾಠ ಮಾಡುವುದೊಂದನ್ನು ಬಿಟ್ಟು ಶಾಲೆಯಲ್ಲಿ ಉಳಿದ ಇತರ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ.

ಈ ಮಾಸವಿಡೀ ಶಿಕ್ಷಕರ ದಿನಾಚರಣೆ, ಶಿಕ್ಷಕರನ್ನು ಸ್ಮರಿಸುವ ಗೌರವಿಸುವ ಸುದಿನ. ದಿನಾಚರಣೆಯ ಮುನ್ನಾ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಎಲ್ಲರೂ ಶಿಕ್ಷಕರನ್ನು ಸ್ತುತಿಸುವವರೇ. ಕಾರ್ಯಕ್ರಮಕ್ಕೆ ಬಂದ ಕೆಲ ಗಣ್ಯರೆನಿಸಿಕೊಂಡವರಿಂದ ಉಚಿತ ಗೀತೋಪದೇಶ ಬೇರೆ. ಕರೆಸಿದ ತಪ್ಪಿಗೆ ಅದನ್ನು ಸಹಿಸಿಕೊಳ್ಳುವ ದುರ್ಗತಿ ಶಿಕ್ಷಕರದ್ದು. ಶಿಕ್ಷಕರನ್ನು ಗೌರವಿಸುವ ವೇದಿಕೆಗಳಲ್ಲೂ ರಾಜಕಾರಣಿಗಳದ್ದೇ ಕಾರುಬಾರು. ಶಾಲಾ-ಕಾಲೇಜುಗಳ ಎಲ್ಲಾ ಸಮಾರಂಭಗಳಲ್ಲೂ ದಾಂಗುಡಿ ಇಡುವ ರಾಜಕಾರಣಿಗಳು ಇಂತಹ ಸ್ಮರಣೀಯ ದಿನಗಳಲ್ಲಾದರೂ ಸಾಧನೆ ಮಾಡಿದ ಶಿಕ್ಷಕರು, ಹಿರಿಯ ಶಿಕ್ಷಕರುಗಳು ಮಾತ್ರ ವೇದಿಕೆಯಲ್ಲಿ ಕೂರಿಸಿ ರಾಜಕಾರಣಿಗಳು ಮತ್ತು ಇತರೆ ಗಣ್ಯರು ವೇದಿಕೆಯ ಕೆಳಗೆ ಕುಳಿತು ಸಹಕರಿಸಿದರೆ ಶಿಕ್ಷಕರ ದಿನಾಚರಣೆಗೂ ಒಂದು ಅರ್ಥ ಬಂದೀತು.

ಹಿಂದಿನ ಪರಿಸರದಲ್ಲಿ ಗುರುವಿಗೆ ಇದ್ದ ಸ್ಥಾನ-ಮಾನ-ಆದ್ಯತೆಗಳು ಇಂದಿನ ಆಧುನಿಕ ಪರಿಸರದಲ್ಲಿ ಇರುವ ಸ್ಥಾನ-ಮಾನ-ದ್ಯತೆಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಕರನ್ನು ಸಮಾಜ ನೋಡುವ ನೋಟ ಬದಲಾಗಿದೆ. ಅದಕ್ಕೆ ಹತ್ತು ಹಲವು ಕಾರಣಗಳು ಇರಬಹುದು. ಮೊದಲಾದರೆ ಶಿಕ್ಷಕ ಎನಿಸಿಕೊಂಡವರಿಗೆ ಅರ್ಪಣಾ ಮನೋಭಾವ ಇತ್ತು. ಈಗ ಆ ಭಾವ ಬದಲಾಗಿದೆ. ಹೀಗಾಗಲು ವ್ಯವಸ್ಥೆಯ ದೋಷಗಳು ಕಾರಣ ಇರಬಹುದು. ಹಾಗಾಗಿಯೇ ಇಂದು ಶಿಕ್ಷಕ ವೃತ್ತಿಯಲ್ಲಿ ಸಂಪೂರ್ಣವಾಗಿ ಪಾವಿತ್ರತೆ ಕಾಣುವುದು ಸಾಧ್ಯವಿಲ್ಲ. ಇಂತಹ ಬೆಳವಣಿಗೆಯಿಂದ ಶಿಕ್ಷಕ ವೃತ್ತಿಯಲ್ಲಿರುವ ಎಷ್ಟೋ ಮಂದಿ ವೃತ್ತಿಯನ್ನೇ ತೊರೆದು ಬೇರೆ ಕೆಲಸಗಳಿಗೆ ಹೋಗುವ ಚಿಂತನೆಯಲ್ಲಿರುತ್ತಾರೆ. ಬದಲಾದ ಪರಿಸರ ಇಂತಹದ್ದಕ್ಕೆ ಒತ್ತು ನೀಡುತ್ತದೆ.

ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲನ್ನು ಹತ್ತು ಹಲವು ಜವಾಬ್ದಾರಿ ಹೇರಿಕೊಳ್ಳುತ್ತವೆ ಮತ್ತು ಅಣಕಿಸಲಾರಂಬಿಸುತ್ತವೆ. ಶಿಕ್ಷಕರಿಗೆ ಯೋಜನಾ ಹೊರೆ ಜಾಸ್ತಿಯಾಗಿದೆ. ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿನೀಡಲಾಗುತ್ತಿಲ್ಲ. ಶಾಲಾ ಸಮಿತಿಗಳ ಗೂಂಡಾ ವರ್ತನೆ, ಯಾವುದೇ ಇಲಾಖಾಧಿಕಾರಿಯೂ ಸಹಾ ಯಾವುದೇ ಶಾಲೆಗೆ ಭೇಟಿ ನೀಡಿ ತಪಾಸಣೆ ಮಾಡುವ ಅಧಿಕಾರ ಇರುವಾಗ ಮುಕ್ತ ವಾತಾವರಣದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವುದಾದರೂ ಹೇಗೆ ? ಪ್ರಸಕ್ತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಿಕ್ಷಕನೂ 15ಕ್ಕೂ ಹೆಚ್ಚು ತರಬೇತಿಗಳು ಮತ್ತು ಯೋಜನಾ ಅನುಷ್ಠಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಬಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂಧೋಲನ, ಸಮುದಾಯದತ್ತ ಶಾಲೆ, ನನ್ನೊಳಗಿನ ನಾನು, ಜೀವನ ವಿಜ್ಞಾನ, ಜೀವನ ಶಿಕ್ಷಣ,ಆಂಗ್ಲಭಾಷೆ ತರಬೇತಿ, ಚೈತನ್ಯ, ತರಣಿ-1, ತರಣಿ-2, ನಲಿಕಲಿ, ಬಹುಮುಖಿ, ರಂಗಕಲೆ, ಕ್ರಿಯಾ ಸಂಶೋಧನೆ, ವಿಷಯ ಸಂಪದ್ದೀಕರಣ, ಗಣಕ ತರಬೇತಿ, ಮೂಲಭೂತ ಸೌಕರ್ಯಾಭಿವೃದ್ದಿ, ಕಟ್ಟಡಗಳ ನವೀಕರಣ, ಶಾಲಾಭಿವೃದ್ದಿ ಸಮಿತಿ, ಜನಗಣತಿ, ಮಕ್ಕಳ ಗಣತಿ ಹೀಗೆ ಒಂದೇ ಎರಡೇ? ವರ್ಷವಿಡೀ ಬಿಡುವಿಲ್ಲದಂತೆ ಹೀಗೆ ಶಿಕ್ಷಕ ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಸಾಧ್ಯ? ಗುಣಮಟ್ಟ ಕಾಯ್ದು ಕೊಳ್ಳುವುದು ಹೇಗೆ?

ಶಿಕ್ಷಕರನ್ನು ಹೈರಾಣ ಮಾಡುವ ಇಂತಹ ಯೋಜನೆಗಳು, ಉಸ್ತುವಾರಿಗಳು ಬೇಕೆ? ಶಿಕ್ಷಣದ ಅಭಿವೃದ್ದಿಗೆ ವಿಶ್ವಬ್ಯಾಂಕ್ ನೆರವು ನೀಡುತ್ತದೆ. ಪೊಗದಸ್ತಾಗಿ ಅಲ್ಲಿಂದ ಬರುವ ಹಣವನ್ನು ಥೈಲಿಗೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಮಂತ್ರಿ ಮಹೋದಯರು ಹಾಗೂ ಹಿರಿಯ ಐ ಎ ಎಸ್ ಅಧಿಕಾರಿಗಳು ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ ಯೋಜನೆಯನ್ನು ಜಾರಿಗೆ ತರುತ್ತಾರೆ. ಅದೂ ಸಾಲದೆಂಬಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಅನೇಕ ಉಪ ಹುದ್ದೆಗಳನ್ನು ಸೃಷ್ಟಿಸಲಾಗಿದೆ, ಅಲ್ಲಿಗೂ ಪಾಠ ಹೇಳುವ ಶಿಕ್ಷಕರನ್ನೇ ನೇಮಿಸಲಾಗಿದೆ. ಈ ಬೆಳವಣಿಗೆಯಂತೂ ಶಿಕ್ಷಕರಿಗೆ ನುಂಗಲಾರದಂತಹ ತುತ್ತಾಗಿದೆ. ಇಲಾಖೆಯು ಜಾರಿಗೆ ತರುವ ಯೋಜನೆಗಳ ಬಗ್ಗೆ ಕನಿಷ್ಠ ತಿಳಿವಳಿಕೆಯಿಲ್ಲದ ವ್ಯಕ್ತಿಗಳು ಸಹಾ ಶಾಲಾಭಿವೃದ್ದಿ ಸಮಿತಿಯಲ್ಲಿ ಸೇರಿ ಶಿಕ್ಷಕರನ್ನು ನಿಯಂತ್ರಣದಲ್ಲಿಡ ಬಯಸುತ್ತಾರೆ. ರಾಜಕೀಯ ಬೆರೆಸುತ್ತಾರೆ. ಇವೆಲ್ಲಾ ಸೇರಿ ಶಿಕ್ಷಕರನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತವೆ.

ಶಿಕ್ಷಕ ಸಮುದಾಯದಲ್ಲಿ ವೃತ್ತಿಗೆ ಅಗೌರವ ತಂದು ಕೊಡುವಂತೆ ನಡೆದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕುಡಿತ, ತಂಬಾಕು, ಇಸ್ಪೀಟು, ಕೇರಂ, ಕಾಮ, ರಾಜಕೀಯ ಹೀಗೆ ಎಲ್ಲವೂ ಬೆರೆತ ಶಿಕ್ಷಕರೂ ಇಡೀ ಸಮುದಾಯಕ್ಕೆ ಕಂಟಕ ಪ್ರಾಯರು, ಅವರ ಸಂಖ್ಯೆ ಕಡಿಮೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ. ಇದೆಲ್ಲಾ ಒತ್ತಟ್ಟಿಗಿರಲಿ, ಶಿಕ್ಷಕ ಸಮುದಾಯವನ್ನು ಅನಗತ್ಯವಾಗಿ ಹಾಡಿ ಹೊಗಳುವುದನ್ನು ಬಿಟ್ಟು ಅವರ ಸಮಸ್ಯೆಗಳನ್ನು ಆಲಿಸಿ-ಮುಕ್ತ ವಾತಾವರಣದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಲು ಅವಕಾಸ ಮಾಡಿದರೆ ಅದಕ್ಕಿಂತ ಬೇರೆ ಗೌರವ ಬೇಕಿಲ್ಲ ಅಲ್ಲವೇ? ಅಂದ ಹಾಗೆ ನಿಮ್ಮ ಬದುಕಿಗೆ ತಿರುವು ನೀಡಿದ, ಬದುಕು ರೂಪಿಸಿದ ಗುರುಗಳನ್ನು ನೆನಪು ಮಾಡಿಕೊಂಡಿರಾ? ಅವರಿಗೆ ಶುಭಾಶಯ ಹೇಳಿದ್ರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X