ಗಣೇಶನ ಹಬ್ಬ; ಸರ್ಕಾರದ ಮಾರ್ಗಸೂಚಿಗೆ ತಬ್ಬಿಬ್ಬಾದ ಸಮಿತಿಗಳು
ಕಾರವಾರ, ಆಗಸ್ಟ್ 17: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ಸರಳವಾಗಿ ಗಣೇಶೋತ್ಸವ ಆಚರಿಸಲು ತನ್ನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಕೊನೆಯ ಹಂತದಲ್ಲಿ ಬಂದ ಮಾರ್ಗಸೂಚಿಯಿಂದ ಈಗಾಗಲೇ ಪ್ರತಿಷ್ಠಾಪನೆ ಮಾಡಲೆಂದು ಗಣಪತಿ ಮೂರ್ತಿ ತಯಾರಿಕೆಗೆ ನೀಡಿದ್ದ ಸಾರ್ವಜನಿಕರ ಗಣೇಶೋತ್ಸವ ಸಮಿತಿಯವರಿಗೆ ದಿಕ್ಕು ತೋಚದಂತೆ ಮಾಡಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ಅದ್ಧೂರಿಯಾಗಿ ಗಣೇಶ ಚತುರ್ಥಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಈ ವರ್ಷ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕ ಗಣೇಶೋತ್ಸವ ಆಚರಿಸದಂತೆ, ಕೇವಲ ಮನೆಯಲ್ಲಿ, ಅದು ಎರಡೇ ದಿನ ಗಣಪತಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡುವಂತೆ ಸೂಚಿಸಿದೆ.
ಮಾರ್ಗಸೂಚಿ ತಡವಾಗಿ ಬಿಡುಗಡೆ
ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ತೆರವು ಮಾಡಿದ ನಂತರ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದು, ಇದರ ನಡುವೆ ಎಲ್ಲಾ ಕಾರ್ಯಕ್ರಮಗಳನ್ನು ಸರಳವಾಗಿ ಮಾಡಿಕೊಂಡು ಬಂದಿದೆ. ಅದರಂತೆ ಹಿಂದೂಗಳ ದೊಡ್ಡ ಹಬ್ಬವಾದ ಗಣೇಶೋತ್ಸವ ಆಚರಣೆಗೆ ಸರ್ಕಾರ ಮೊದಲೇ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ ಎಂದು ಜನರು ಕಾಯ್ದಿದ್ದರು. ಸರ್ಕಾರ ಮಾರ್ಗಸೂಚಿ ಬಿಡುಗಡೆಗೆ ತಡ ಮಾಡಿದ ಹಿನ್ನೆಲೆಯಲ್ಲಿ ಸಾಂಪ್ರದಾಯದಂತೆ ಗಣೇಶ ಹಬ್ಬ ಆಚರಿಸಲು ಕೆಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮುಂದಾಗಿದ್ದು, ಈಗಾಗಲೇ ಸಾವಿರಾರು ರೂಪಾಯಿ ಮೌಲ್ಯದ ಮೂರ್ತಿಗಳನ್ನು ಮಾಡಲು ಆರ್ಡರ್ ಕೊಟ್ಟಿದ್ದರು.
ಗಣೇಶ ಚತುರ್ಥಿ ಆಚರಣೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ
ಪ್ರತಿಷ್ಠಾಪನೆಗೆ ಅವಕಾಶ ಕೋರಿಕೆ
ಆದರೆ ಗಣೇಶ ಚತುರ್ಥಿಗೆ ಒಂದು ವಾರ ಇರುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಸಾರ್ವಜನಿಕ ಗಣೇಶ ಮೂರ್ತಿ ಇಡಲು ಅವಕಾಶ ಕೊಡದ ಹಿನ್ನಲೆಯಲ್ಲಿ ಗಣೇಶ ಮೂರ್ತಿ ಮಾಡಲು ಕೊಟ್ಟಿದ್ದನ್ನು ಏನು ಮಾಡಬೇಕು. ಈಗಾಗಲೇ ಭಾಗಶಃ ಮೂರ್ತಿ ತಯಾರಿ ಮುಗಿದಿದ್ದು, ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಅವಕಾಶ ಕೊಡದಿದ್ದರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಸಾರ್ವಜನಿಕವಾಗಿ ಗಣೇಶ್ ಮೂರ್ತಿ ಇಡಬಾರದು ಎನ್ನುವುದರಿಂದ ನಿರಂತರವಾಗಿ ಗಣೇಶ ಮೂರ್ತಿ ಇಟ್ಟು ಹಬ್ಬ ಆಚರಿಸಿಕೊಂಡು ಬಂದವರಿಗೆ ಸಂಪ್ರದಾಯಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಅದರ ಬದಲು ಸರಳವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಾರದ ಮಾರ್ಗಸೂಚಿ ಏನಿದೆ...?
ರಾಜ್ಯ ಸರ್ಕಾರ ಗಣೇಶ ಮೂರ್ತಿ ಪೂಜೆ ಬಗ್ಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಗಣೇಶ ಮೂರ್ತಿಯನ್ನು ರಸ್ತೆ, ಗಲ್ಲಿ, ಓಣಿ, ಮೈದಾನದಲ್ಲಿ ಪ್ರತಿಷ್ಠಾಪಿಸುವಂತಿಲ್ಲ ಎಂದು ಸೂಚಿಸಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ ಎಂದಿದೆ. ಗಣೇಶೋತ್ಸವದಲ್ಲಿ ಗಣೇಶ ಮೂರ್ತಿಯನ್ನು ತರುವ ಹಾಗೂ ವಿಸರ್ಜಿಸುವ ಪದ್ಧತಿಯನ್ನು ನಿರ್ಬಂಧಿಸಿದೆ. ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಅವರ ಮನೆಯ ಆವರಣದಲ್ಲಿಯೇ ವಿಸರ್ಜಿಸುವಂತೆ ಸೂಚಿಸಿದೆ. ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸರ್ ಮಾಡಬೇಕು ಎಂದು ತಿಳಿಸಿದ್ದು, ಈ ಎಲ್ಲಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.
'ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ, ಮೊಹರಂ ಹಬ್ಬದಲ್ಲಿ ತಾಬೂತುಗಳ ಪ್ರತಿಷ್ಠಾಪನೆ ನಿಷೇಧ'
"ಒಂದು ದಿನವಾದರೂ ಅವಕಾಶ ಕೊಡಲಿ"
ನಾವು ಕಳೆದ 25 ವರ್ಷದಿಂದ 11 ದಿನಗಳ ಕಾಲ ಆಟೋ ಚಾಲಕ ಹಾಗೂ ಮಾಲೀಕ ಸಂಘದಿಂದ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದೆವು. ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಆಚರಿಸದಂತೆ ಸರ್ಕಾರ ಮಾರ್ಗಸೂಚಿ ನೀಡಿದೆ. ಈ ಮಾರ್ಗಸೂಚಿಯನ್ನು ಒಂದು ತಿಂಗಳ ಹಿಂದೆಯೇ ಹೊರಡಿಸಬೇಕಿತ್ತು. ಈಗ ನಾವು ಗಣೇಶ ಮೂರ್ತಿ ಮಾಡಲು ಆರ್ಡರ್ ಕೊಟ್ಟಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಿ ಒಂದು ದಿನವಾದರೂ ಗಣೇಶನನ್ನು ಇಡಲು ಅವಕಾಶ ಕೊಡಬೇಕು ಎಂದು ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಅರ್ಗೇಕರ್ ಬೇಡಿಕೆ ಇಟ್ಟಿದ್ದಾರೆ.