ಗಣೇಶ ಚತುರ್ಥಿ 2020: ಗಣೇಶ ಮೂರ್ತಿ ಸ್ಥಾಪನೆ, ಪೂಜಾ ವಿಧಿ-ವಿಧಾನ
ಗಣೇಶನನ್ನು ಬರಮಾಡಿಕೊಳ್ಳಲು ಒಂದೇ ಒಂದು ದಿನ ಬಾಕಿ ಇದೆ, ಎಲ್ಲರಲ್ಲೂ ಸಡಗರ ಮನೆಮಾಡಿದೆ.
ದೇಶದ ಮೂಲೆ ಮೂಲೆಯಲ್ಲೂ ಅತ್ಯಂತ ವಿಜೃಂಭಣೆಯಿಂದ ಪ್ರತಿ ವರ್ಷ ಆಚರಿಸಲಾಗುವ ಗಣೇಶ ಚತುರ್ಥಿಯನ್ನು 2020 ರಂದು ಆಚರಿಸಲಾಗುತ್ತದೆ. ಈ ಬಾರಿ ಕೊರೊನಾದಿಂದ ಗಣೇಶ ಚತುರ್ಥಿ ಹೇಗೆ ಆಚರಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಏಕೆಂದರೆ ನೆಂಟರಿಷ್ಟ ಆಗಮನ ಕಡಿಮೆಯಾಗಲಿದೆ, ಬೀದಿಬೀದಿಗಳನ್ನು ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಕೂಡ ಕಡಿಮೆಯಾಗಲಿದೆ. ಮಣ್ಣಿನಿಂದ ಗಣಪನನ್ನು ತಯಾರಿಸಿ ಪೂಜೆ ಮಾಡಿ ಮೆರವಣಿಗೆ ನಡೆಸಿ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಪ್ರಥಮ ಪೂಜೆಗೆ ಭಾಜನರಾಗಿರುವ ಗಣಪತಿಯ ಪೂಜೆಯನ್ನು ಗಣಪನ ಹಬ್ಬದಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಗಣಪತಿ ಬಪ್ಪಾ ಮೋರೆಯಾ ಮಂಗಳ ಮೂರ್ತಿ ಮೋರೆಯಾ ಎಂಬ ಉದ್ಘೋಷದೊಂದಿಗೆ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಮನೆಯಲ್ಲಿ ನೀವು ಗಣೇಶನನ್ನು ಸ್ಥಾಪಿಸಿ ಮೂರ್ತಿಗೆ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿಧಿವತ್ತಾಗಿ ಮನೆಯಲ್ಲಿ ಗಣಪನ ಪೂಜೆಯನ್ನು ನಡೆಸಬೇಕು.
ಗಣೇಶ ಮೂರ್ತಿ ಸ್ಥಾಪನೆಯ ಮುಹೂರ್ತ ಹೀಗಿದೆ
ಮನೆಯಲ್ಲಿ ಗಣಪನ ಮೂರ್ತಿಯನ್ನು ಸ್ಥಾಪಿಸುವ ಸಮಯ ಮತ್ತು ಪೂಜಾ ಸಮಯವನ್ನು ಇದು ನಿಗದಿಪಡಿಸುತ್ತದೆ. ಈ ಸಮಯ ಹೆಚ್ಚು ಮಂಗಳಕರ ಎಂದು ಹೇಳಲಾಗುತ್ತದೆ. ಈ ಬಾರಿ ಮುಹೂರ್ತವು ಆಗಸ್ಟ್ 21ರ ರಾತ್ರಿ 11.04ರಿಂದ ಮರುದಿನ 22ರ ಸಂಜೆ 7.57ರವರೆಗೆ ಶುಭವಾಗಿದೆ.
ಪೂಜಾ ಮುಹೂರ್ತ ಹೀಗಿದೆ: ಆಗಸ್ಟ್ 22 ಬೆಳಗ್ಗೆ 11:19 ರಿಂದ ಮಧ್ಯಾಹ್ನ 1:49 ರವರೆಗೆ, ಪೂಜಾ ಸಮಯ: 2 ಗಂಟೆ 30 ನಿಮಿಷಗಳುಗಣೇಶನ ಮೂರ್ತಿಯನ್ನು ಸ್ಥಾಪನೆ ವಿಧಾನ
ಸ್ನಾನ ಮಾಡಿ, ಶುಭ್ರ ಬಟ್ಟೆ ತೊಟ್ಟು, ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು, ಬಳಿಕ ದೇವರ ಮಂಟಪ ಅಥವಾ ಮೇಜು, ಸ್ಟೂಲ್ ಏನೇ ಇರಲಿ ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಸಬೇಕು. ಮಧ್ಯಭಾಗದಲ್ಲಿ, ಸ್ವಲ್ಪ ಅಕ್ಕಿ ಹರಡಿ ಮತ್ತು ಅಕ್ಕಿಯ ಪದರದ ಮೇಲೆ ಗಣೇಶ ಮೂರ್ತಿಯನ್ನಿರಿಸಿ. ಗಣೇಶನ ಸೊಂಡಿಲು ಎಡಭಾಗದಲ್ಲಿದೆ ಮತ್ತು ಮೂರ್ತಿಯ ಬಣ್ಣವು ಕೆಂಪು ಇಲ್ಲದಿದ್ದರೆ ಬಿಳಿ ಬಣ್ಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಪೂಜಾ ವಿಧಿ, ವಿಧಾನ
ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ ಈ ಸಮಯದಲ್ಲಿ ದೂರ್ವೆ ಹುಲ್ಲು ಮತ್ತು ವೀಳ್ಯದೆಲೆಯನ್ನು ಬಳಸಬೇಕು ಶೋಡಶೋಪಚಾರ ಪೂಜೆಯನ್ನು ಮಾಡಿ ಅಂತೆಯೆ ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ. ಮೋದಕ ಅಥವಾ ಲಾಡನ್ನು ನೀವು ಪ್ರಸಾದವಗಿ ಗಣಪನಿಗೆ ನೀಡಬಹುದು. ಪಂಚಮೇವವನ್ನು ನೀಡಿ. ನಂತರ, ದೀಪವನ್ನು ಹಚ್ಚಿ ಮತ್ತು ಆರತಿಯನ್ನು ಬೆಳಗಿ. ಕುಂಕುಮ ಮತ್ತು ಅಕ್ಕಿಯಿಂದ ತಿಲಕವನ್ನು ಹಚ್ಚಿ. ಹೂವು ಅರ್ಪಿಸಿ ಮತ್ತು ಗಣಪನಿಗೆ ಸಿಹಿಯನ್ನು ಪ್ರಸಾದವಾಗಿ ನೀಡಿ.
ಕಲಶ ಸ್ಥಾಪನೆ ವಿಧಾನ
ತಾಮ್ರದ ಕಲಶವನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಬೇಕು. ಕೆಂಪು ಬಟ್ಟೆಯಿಂದ ಅದನ್ನು ಮುಚ್ಚಿ ಮತ್ತು ಕಲಶ ಮತ್ತು ಬಟ್ಟೆಯನ್ನು ಕೆಂಪು ದಾರ ಬಳಸಿ ಒಟ್ಟಿಗೆ ಕಟ್ಟಿ. ವಾಯುವ್ಯದಲ್ಲಿ ಕಲಶವನ್ನಿರಿಸಿ ಅಥವಾ ಗಣೇಶನ ವಿಗ್ರಹದ ಎಡಭಾಗದಲ್ಲಿ ಇರಿಸಬೇಕು.
ಗಣೇಶನ ಮಂತ್ರ
1. ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ.
2. ಓಂ ಗಣೇಶಾಯ ನಮಃ