ಕನ್ನಡಿಗರನ್ನು ಒಂದುಗೂಡಿಸಿದ ಗಣಪತಿ ಬಪ್ಪಾ
ಇಲ್ಲಿನ ರಾಧಾಕೃಷ್ಣ ಸೆ-4ನ ಪುಟ್ಟ ವೇದಿಕೆಯನ್ನು ನಿರ್ಮಿಸಿ ಸೆ.1 ರಂದು ಗಣೇಶ ಮೂರ್ತಿಯನ್ನು ಸ್ಥಾಪಿಸಿದಾಗ ಕೇವಲ 100 ಜನ ಮಾತ್ರ ಇದ್ದರು. ವಿದ್ವಾನ್ ರಾಘವೇಂದ್ರ ಭಟ್ ಅವರ ಕಂಚಿನ ಕಂಠದಲ್ಲಿ ಹೊರಡುತ್ತಿದ್ದ ಮಂತ್ರ ಕೇಳಿಸಿಕೊಂಡ ಹಾದಿಹೋಕರು ಸೇರಿದಂತೆ ಸುತ್ತಮುತ್ತಲಿನ ಫ್ಲಾಟ್ ಗಳ ಜನರೆಲ್ಲ ಗಣೇಶನೆಡೆಗೆ ಬರತೊಡಗಿದರು.
ಬೆಂಗಳೂರಿನ ನಿವಾಸಿ ಪ್ರಭಾಕರ್ ಎಂಬುವವರು ಗುರ್ ಗಾಂವ್ ಕನ್ನಡಿಗರಿಗೆ ಸುಂದರವಾದ ಗಣೇಶ ಮೂರ್ತಿಯನ್ನು ಕಳಿಸಿಕೊಟ್ಟಿದ್ದು ವಿಶೇಷ ಸಂಗತಿ.
ಸಂತೃಪ್ತನಾದ ಗಣೇಶ: ಪ್ರತಿ ದಿನ ಭಜನೆ, ವಾದ್ಯಗೋಷ್ಠಿ ನಡೆಸಲಾಯಿತು. ಎಲ್ಲವೂ ಕನ್ನಡದಲ್ಲೇ ಆಗಿದ್ದು ವಿಶೇಷ. ಅನಿಲ್ ಹಾಗೂ ಭೀಮರಾವ್ ಗಾಯನದಿಂದ ಸ್ಪೂರ್ತಿ ಪಡೆದ ಆರ್ಟ್ ಆಫ್ ಲಿವಿಂಗ್ ನ ಸದಸ್ಯರು ಮರುದಿನ ಅಜಯ್ ಚಾವ್ಲಾ ನೇತೃತ್ವದಲ್ಲಿ ಗಾನ ಗೋಷ್ಠಿ ನಡೆಸಿ ಗಣೇಶನನ್ನು ಸಂತೃಪ್ತಿಗೊಳಿಸಿದರು.
ಕೊನೆ ದಿವಸ ಶಿವಾನಂದ ಅವರಿಂದ ಮಹಾ ಮಂಗಳಾರತಿ ನಡೆಸಿದ ಮೇಲೆ ಸುಮಾರು 250ಕ್ಕೂ ಹೆಚ್ಚು ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹೋಂಡಾ ಸಂಸ್ಥೆ ಕನ್ನಡಿಗರು ಭೋಜನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
ಸಮೀಪದ ಧಮ್ ಧಮ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುವ ಮುನ್ನ ಚಿಣ್ಣರು ಸೇರಿದಂತೆ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡರು. ವಿಸರ್ಜನೆ ದಿವಸದ ಪ್ರಸಾದ ವಿನಿಯೋಗದ ಜವಾಬ್ದಾರಿಯನ್ನು ಹೀರೋ ಕಾರ್ಪ್ ಸಂಸ್ಥೆ ವಹಿಸಿಕೊಂಡಿದ್ದು ವಿಶೇಷ.
ಸಣ್ಣ ಪ್ರಮಾಣದಲ್ಲಿ ಗಣೇಶ ಹಬ್ಬ ಆಚರಣೆ ಮಾಡಲು ಹೊರಟ ಗುರ್ ಗಾಂವ್ ಸಂಘಕ್ಕೆ ಹೋಂಡಾ, ಹೀರೋ ಸೇರಿದಂತೆ ಅನೇಕ ಸಂಸ್ಥೆಗಳ ಹಾಗೂ ಸ್ಥಳೀಯ ಕನ್ನಡಿಗರೆಲ್ಲರ ಬೆಂಬಲ ಸಿಕ್ಕಿತು. ಗಣೇಶ ಮೂರ್ತಿಯ ದೆಸೆಯಿಂದ ಎಲ್ಲರೂ ಒಂದೆಡೆ ಸೇರಿ ಹರುಷದಿಂದ ನಲಿವಂತಾಯಿತು ಎಂದು ಸಂಘದ ಸದಸ್ಯ ದಯಾನಂದ ಹೇಳುತ್ತಾರೆ.