ವರಮಹಾಲಕ್ಷ್ಮೀ: ಶ್ರದ್ದೆ, ಭಕ್ತಿ, ಸಂಪ್ರದಾಯದ ಮುಂದೆ ಕೊರೊನಾ ಧೂಳೀಪಟ
ಮಾರ್ಚ್ ತಿಂಗಳಿನಿಂದ ವಕ್ಕರಿಸಿಕೊಂಡಿರುವ ಕೊರೊನಾ ಹಾವಳಿ ಯಾವ ಮಟ್ಟಿಗೆ ವಿಶ್ವವನ್ನು ನಡುಗಿಸಿತ್ತು ಎಂದು ಮತ್ತೆಮತ್ತೆ ಬರೆದು ಜನರ ರೋಗ ನಿರೋಧಕ ಶಕ್ತಿಯನ್ನು ಕಮ್ಮಿಮಾಡುವುದು ಸರಿಯಲ್ಲ.
ಎಲ್ಲೆಲ್ಲೂ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಅದಾದ ನಂತರ ಬಕ್ರೀದ್, ರಕ್ಷಾ ಬಂಧನ. ಶ್ರಾವಣಮಾಸ ಎಂದರೆ ಹಾಗೇನೇ, ಹಬ್ಬಗಳ ಸರಮಾಲೆ. ಆದರೆ, ಕೊರೊನಾದಿಂದ ಹಬ್ಬದ ಆಚರಣೆ ನಿಯಮಿತವಾಗಿರುತ್ತದೆ ಎಂದುಕೊಂಡರೆ, ಅದನ್ನು ಬೆಂಗಳೂರಿಗರು ಉಲ್ಟಾ ಮಾಡಿದ್ದಾರೆ.
ಕೊರೊನಾ ನಡುವೆಯೂ ಮೈಸೂರಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಜೋರು
ಮಡಿವಾಳ, ಬನಶಂಕರಿ, ಮಲ್ಲೇಶ್ವರಂ, ಯಶವಂತಪುರ, ದಾಸರಹಳ್ಳಿ, ಹೆಬ್ಬಾಳ ಮುಂತಾದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಸಾಮಾಜಿಕ ಅಂತರದ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಬೇಕಾದ ಜನಪ್ರತಿನಿಧಿಗಳೇ ಕ್ಯಾರೇ ಅನ್ನದಿದ್ದಾಗ, ಇನ್ನು, ಜನಸಾಮಾನ್ಯರು ಇದರ ಬಗ್ಗೆ ತಲೆಕೆಡಿಸಿಕೊಂಡಾರಾ?
ಕೊರೊನಾ ಭಯಕ್ಕೆ ನಾಲ್ಕು ತಿಂಗಳಿನಿಂದ ಮನೆಯ ಹೊಸ್ತಿಲು ದಾಟದ ಜನರೆಲ್ಲಾ, ಆಗಿದ್ದಾಗಲಿ ಎಂದು ರಸ್ತೆಗಿಳಿದರೋ ಅಥವಾ ದುಡ್ಡೇ ದೊಡ್ಡಪ್ಪ ಆಗಿರುವ ಈ ಜಗತ್ತಿನಲ್ಲಿ, ಲಕ್ಷ್ಮೀಯನ್ನು ಆರಾಧಿಸುವ ಹಬ್ಬವಾಗಿರುವುದರಿಂದ ನಿಯತ್ತಾಗಿ ಪೂಜೆ ಮಾಡೋಣ ಎಂದು ಹೊರಗೆ ಬಂದರೋ, ಗೊತ್ತಿಲ್ಲ, ಒಟ್ಟಿನಲ್ಲಿ ಬರಿದಾಗಿದ್ದ ರಸ್ತೆಯಲ್ಲಿ ಜನ..ಜನ..ಜನ..!
ಭಾರತೀಯರ ಜೀವನಶೈಲಿ, ಮೈಂಡ್ ಸೆಟ್ ಬೇರೆ ಎನ್ನುವುದು ಹಲವು ಬಾರಿ ರುಜುವಾತಾಗಿದೆ. ಶ್ರದ್ದೆ, ಭಕ್ತಿ, ಸಂಪ್ರದಾಯದ ಮುಂದೆ ಕೊರೊನಾ ವೈರಸ್, ಯಾವುದೇ ಲೆಕ್ಕಕ್ಕಿಲ್ಲ ಎನ್ನುವುದನ್ನು ರುಜುವಾತು ಪಡಿಸುವಂತಿತ್ತು, ವರಮಹಾಲಕ್ಷ್ಮಿ ಹಬ್ಬದ ಪೂರ್ವ ತಯಾರಿ.
ಕೊರೊನಾ ಇಲ್ಲದ ವರಮಹಾಲಕ್ಷ್ಮೀ ಹೇಗಿತ್ತೋ, ಅದಕ್ಕೆ ಏನೂ ಕಮ್ಮಿಯಿಲ್ಲದಂತೆ, ಜನರು ಹಬ್ಬದ ಖರೀದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೋದ ವರ್ಷದಂತೆ, ಹೂವು, ಹಣ್ಣು ಹಂಪಲಿನ ಬೆಲೆಗಳು ತೀರಾ ಗಗನಕ್ಕೇರದಿದ್ದರೂ, ಚೌಕಾಸಿ ಮಾತ್ರ ಎಂದಿನಂತಿತ್ತು.
ಬಿಬಿಎಂಪಿ ಹಬ್ಬದಾಚರಣೆಗೆ ಮಾರ್ಗಸೂಚಿಯನ್ನೇನೋ ರೂಪಿಸಿದೆ, ಪಾಲಿಸಬೇಕಾದದ್ದು ಜವಾಬ್ದಾರಿಯುತ ನಾಗರೀಕರ ಕರ್ತವ್ಯ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಜಾಸ್ತಿಯಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಖರೀದಿ ಆಯಿತು, ಇನ್ನೇನು ಮೂರು ವಾರದಲ್ಲಿ ಗೌರೀಗಣೇಶ.
ಗಣೇಶ ಚತುರ್ಥಿ ಯುನಿವರ್ಸಲ್ ಆಗಿ ಆಚರಿಸುವ ಹಬ್ಬ, ಗೌಜಿ ಗದ್ದಲ ಜಾಸ್ತಿಯೇ ಇರುತ್ತದೆ ಎನ್ನುವುದು ತಿಳಿದಿರುವ ವಿಚಾರ. ಆದರೂ, ನಮ್ಮ ಜಾಗೃತೆಯಲ್ಲಿ ನಾವಿದ್ದರೆ ಒಳ್ಳೆಯದು. ಹೇಗೂ, ಗಣೇಶ ನಮ್ಮವನೇ, ಮುಂದಿನ ವರ್ಷ ಅದ್ದೂರಿಯಾಗಿ ನಿನ್ನನ್ನು ಪೂಜಿಸುತ್ತೇನೆ, ಈ ವರ್ಷ ಬೇಸರ ಮಾಡಿಕೊಳ್ಳಬೇಡ ಎಂದರೆ ನಮ್ಮ ಗಣಪ ತಥಾಸ್ತು ಅನ್ನದೇ ಇರುತ್ತಾನಾ..?