ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಲೇಖನ: ದೀಪಾವಳಿ ಕೇವಲ ಮನೆ ಜ್ಯೋತಿಯಲ್ಲ, ಆತ್ಮಜ್ಯೋತಿ

By ವಿಶ್ವಾಸ ಸೋಹೋನಿ, ಧಾರವಾಡ
|
Google Oneindia Kannada News

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ 'ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) 'ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.

ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ.

ಕಾರ್ತಿಕ ಅಮವಾಸ್ಯೆಗೆ ಭಾರತದ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಅಬಾಲ ವೃಧ್ದರೂ ಸಂತೋಷ ಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ, ಗುಡಿಗಳನ್ನು ಶುಚಿ ಗೊಳಿಸಿ, ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. 'ಅವಳಿ' ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು.[ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]

deepavali festival is not only house light, it is soul of light

ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕಚತುರ್ದಶಿ, ಧನತೇರಸ, ಬಲಿಪಾಡ್ಯಮಿ, ಭಾವನಬಿದಿಗೆ, ಅಕ್ಕನ ತದಿಗೆ, ಪಂಚಮಿವರೆಗೆ ಪ್ರತಿದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ. ಧನ ದೇವತೆ 'ಲಕ್ಷ್ಮೀ' ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎನ್ನುವುದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹೇಳಲಾಗುತ್ತದೆ. ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.[ಮನೆಯನು ಬೆಳಗಲು ಐದು ಬಗೆಯ ದೀಪಗಳು]

ದೀಪಾವಳಿಯ 'ಬಲಿ' ರಾಜಾ ಮತ್ತು ನರಕಾಸುರನ ಎರಡು ಕಥೆಗಳು ಲಾಕ್ಷಣಿಕ ಭಾಷೆಯ ರೂಪದಲ್ಲಿ ವರ್ಣನೆ ಮಾಡಲಾಗಿದೆ. ಈಶ್ವರೀಯ ಜ್ಞಾನದ ದೃಷ್ಟಿಯಲ್ಲಿ ನೋಡಿದಾಗ 'ನರಕಾಸುರ' ಮಾಯೆ ಅಥವಾ ಮನೋವಿಕಾರಗಳ ರೂಪವಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರಗಳು ಆಸುರಿ ಲಕ್ಷಣಗಳು ಮತ್ತು ನರಕದ ದ್ವಾರ ಆಗಿವೆ. ಈ ವಿಕಾರಗಳನ್ನು ಜಯಿಸುವುದು ಎಂದರೆ 'ಬಲಿ' ಕೊಡುವುದು ಎಂದು ಹೇಳಲಾಗುತ್ತದೆ.

ವಿಶ್ವದ ಇತಿಹಾಸದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಕಲಿಯುಗದ ಅಂತಿಮ ಸಮಯವು ಪಂಚವಿಕಾರ ಮತ್ತು ಅಸುರಿಗುಣಗಳ ಸಾಮ್ರಾಜ್ಯದ ಸಮಯವಾಗಿದೆ. ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನ ಮೇಲೆ ವಿಕಾರಗಳ ರಾಜ್ಯ ಇದೆ. ಇದಕ್ಕೆ 'ನರಕಾಸುರ' ಅಥವಾ 'ರಾಜಾಬಲಿಯ' ಅಧಿಪತ್ಯ ಎಂದು ಹೇಳಲಾಗುತ್ತದೆ. ಭಾರತವು ಸತ್ಯಯುಗದಲ್ಲಿ ಸ್ವರ್ಗವಾಗಿತ್ತು. ಅಲ್ಲಿನ ಮನುಷ್ಯರೆಲ್ಲರು ದೇವ-ದೇವತೆಗಳಾಗಿದ್ದರು. ಅವರೇ ಜನ್ಮ ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ 'ನರಕಾಸುರ' ಅಥವಾ 'ಬಲಿ'ಯ ಅಧೀನರಾಗಿದ್ದಾರೆ. ಆತ್ಮಜ್ಞಾನ ಹಾಗೂ ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನ ಮುಕ್ತರಾಗಲು ಸಾಧ್ಯವಿದೆ.

ಆತ್ಮಜ್ಞಾನ ಎಂದರೆ ಆತ್ಮದೀಪವನ್ನು ಬೆಳಗಿಸುವುದು. ನಾನು ಒಂದು ಜ್ಯೋತಿ, ಜಾತಿ ಇಲ್ಲದ ಅತಿಸೂಕ್ಷ್ಮ ಆತ್ಮಜ್ಯೋತಿ. ಶರೀರದ ಹಣೆಯ ಮಧ್ಯದಲ್ಲಿ ಹೊಳೆಯುವ ಚ್ಯೆತನ್ಯ ಜ್ಯೋತಿ, ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ. ಆತ್ಮಜ್ಯೋತಿಯನ್ನು ಬೆಳಗಿಸಲು ಜ್ಞಾನಘೃತ ಬೇಕು.[ದೀಪಾವಳಿ ಹೆಸರು ಹೇಗೆ ಬಂತು ಗೊತ್ತಾ?]

deepavali festival is not only house light, it is soul of light

ಏನಿದು ಪರಮಜ್ಯೋತಿ?

ಎರಡನೆದಾಗಿ, ಸರ್ವ ಆತ್ಮರ ತಂದೆಯಾದ ಪರಮಜ್ಯೋತಿಯ ಪರಿಚಯ ಅತಿ ಅವಶ್ಯಕ. ಪರಮಾತ್ಮನು ನಿರಾಕಾರ, ಅಯೋನಿಜ, ಅಭೊಕ್ತ, ಅಜನ್ಮ, ಅವ್ಯಕ್ತ ಅಶರೀರಿ, ಅವಿಭಾಜ್ಯ, ಅಮರ, ಅವಿನಾಶಿ, ಸರ್ವಶ್ರೇಷ್ಠನಾದ, ಶಿವನು, ಅವನೇ ಅಲ್ಲಾ, ಅವನೆ ಈಶ್ವರ, ಅವನೇ ಗಾಡ್, ಓಂಕಾರನು, 'ದೇವನೊಬ್ಬ, ನಾಮ ಹಲವು, ಭಾವ ಒಂದೇ', ಭಾಷೆ ಹಲವು, ನಮ್ಮಲ್ಲೇಕೆ ಭೇದವೂ. ನಾನು ಹಿಂದು, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಾ ಮಕ್ಕಳಲ್ಲಿ ಜಗಳವೂ. ಬ್ರಹ್ಮ, ವಿಷ್ಣು, ಬಸವ, ಏಸು, ನಾನಕ ಪೈಗಂಬರೆಲ್ಲ ಒಬ್ಬದೇವನ ಮಕ್ಕಳು ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋತಿಬಂಧು ತಂದೆ ಶಿವನ ನೆನೆಸಿದಾಗ ಮುಕ್ತಿ ಮತ್ತು ಜೀವನಮುಕ್ತಿಯು ಪ್ರಾಪ್ತವಾಗುವುದು. ಹೀಗೆ ನಾನು ಆತ್ಮಜ್ಯೋತಿಯಾಗಿ ಪರಮಜ್ಯೋತಿಯನ್ನು ನೆನಪು ಮಾಡುವುದಕ್ಕೆ ಸಹಜ ರಾಜಯೋಗವೆಂದು ಹೇಳುತ್ತಾರೆ.[ದೀಪಾವಳಿಗೆ ಸ್ವಾದಿಷ್ಟಕರ ಡ್ರೈ ಫ್ರುಟ್ಸ್ ಹಲ್ವಾ]

ದೀಪಾವಳಿ ದಿನ ಪ್ರತಿಯೊಬ್ಬರು ತಮ್ಮ ಮನೆಗಳನ್ನು, ಸುಣ್ಣ ಬಣ್ಣಗಳಿಂದ ಶುಚಿಗೊಳಿಸಿ, ದೀಪಾಲಂಕಾರವನ್ನು ಮಾಡುತ್ತಾರೆ. ಅದರ ಜೊತೆಗೆ ಮನಸ್ಸಿನಲ್ಲಿ ಇರುವ ಅಮವಾಸ್ಯೆಯ ಪ್ರತೀಕವಾದ ಅಜ್ಞಾನ ಅಂಧಕಾರವನ್ನು ದೂರ ಮಾಡಲು ಅಂತರ ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಬೇಕಾಗಿದೆ. ನಿರಾಕಾರನಾಗಿರುವ ಶಿವನ ಸಂಬಂಧದಿಂದ ಅಂದರೆ ರಾಜಯೋಗದಿಂದ ಅನೇಕ ಶಕ್ತಿಗಳ, ಸರ್ವಗುಣಗಳ ಪ್ರಾಪ್ತಿ ಆಗುತ್ತದೆ. ಆದ್ದರಿಂದಲೇ ಭಕ್ತರು ಭಗವಂತನ ಮುಂದೆ 'ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ' ಎಂದು ಹಾಡುತ್ತಾರೆ. ದೀಪ ದಾನದ ಅರ್ಥವು ಜ್ಞಾನದಾನವೇ ಆಗಿದೆ.

ದೀಪಾವಳಿ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ, ಸಿಹಿ ಹಂಚುತ್ತಾರೆ, ಹಳೆ ಖಾತೆ ಸಮಾಪ್ತಿ ಮಾಡಿ ಹೊಸ ಖಾತೆ ಶುರು ಮಾಡುತ್ತಾರೆ. ಇದರ ಜೊತೆಗೆ ಹೊಸ ಭಾವ, ಮಧುರ ನುಡಿ, ಸ್ನೇಹ, ಪ್ರೀತಿಯ ಅವಶ್ಯಕತೆ ಇದೆ. ಹಳೆ ಕರ್ಮದ ಖಾತೆಯನ್ನು ರಾಜಯೋಗದ ತಪಸ್ಸಿನ ಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ನಿರಾಕಾರ ಪರಮಜ್ಯೋತಿ ಪರಮಾತ್ಮನು ಪುನಃ ಪವಿತ್ರತೆ, ಸುಖ ಶಾಂತಿ ಸಮೃದ್ಧಿಯ 'ರಾಮರಾಜ್ಯ' ಸ್ಥಾಪನೆ ಮಾಡುತ್ತಿರುವ ಸಂಕೇತವು ದೀಪಾವಳಿ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.

ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ. ಹಾಗಾದರೆ ಬನ್ನಿ ನಾವು ಈ ವರ್ಷದ ದೀಪಾವಳಿಯನ್ನು ಆತ್ಮದೀಪವನ್ನು ಬೆಳಗಿಸಿ, ಈಶ್ವರಾನುಭೂತಿಯನ್ನು ಮಾಡುತ್ತಾ ಅನ್ಯರಿಗೂ ಜ್ಷಾನದೀಪವನ್ನು ದಾನ ಮಾಡಿ ಆಚರಿಸೊಣ.

English summary
This article has enlighten of importance Deepavali, Deepavali is the not only festival, it is soul light and remove our ignorance, negative quality etc. Article written by Vishwasa Sohoni, Dharwad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X