ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು
ಸಾಲು ಸಾಲು ದೀಪ, ಹೊಸ ಬಟ್ಟೆ ತೊಟ್ಟ ಲಲನೆಯರು, ತಳಿರು-ತೋರಣ, ಸಿಹಿ ತಿಂಡಿ... ನಿಸ್ಸಂದೇಹವಾಗಿ ಇದು ದೀಪಾವಳಿ ತಂದಿತ್ತ ಸಂಭ್ರಮ!
ದೀಪಾವಳಿಯ ಹಿಂದಿದೆ ಹಲವಾರು ಪುರಾಣೈತಿಹಾಸಕ ಕತೆ
ಎಲ್ಲೆಲ್ಲೂ ಈಗ ದೀಪಾವಳಿಯದ್ದೇ ಜಪ. ಹಿಂದುಗಳ ಪಾಲಿನ ಮಹತ್ವದ ಹಬ್ಬವಾದ ದೀಪಾವಳಿಯನ್ನು ಇತರೆ ಮತೀಯರೂ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.
ಪಟಾಕಿಯ ಅಬ್ಬರವಿಲ್ಲದೆ, ಸ್ನೇಹಮಯ-ಸಂಭ್ರಮದ ದೀಪಾವಳಿ ಆಚರಿಸುವುದು ಹೇಗೆ? ದೀಪಾವಳಿಯ ಕೆಲವು ಆಚರಣೆಯ ಹಿಂದಿನ ನಿಜವಾದ ಅರ್ಥವೇನು? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ದೀಪಾವಳಿಯ ಸಂಭ್ರಮ ಹೆಚ್ಚಿಸವುದಕ್ಕೆ 10 ಸಲಹೆಗಳು ಇಲ್ಲಿವೆ.(ಚಿತ್ರಕೃಪೆ: ಪಿಟಿಐ)
ದೀಪ ಬೆಳಗಿ, ಸಂಭ್ರಮ ಹೆಚ್ಚಿಸಿ
ಬೆಂಕಿಗೆ ಹಿಂದು ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಶುದ್ಧತೆ, ಜ್ಞಾನೋದಯ, ಮಂಗಳದ ಸಂಕೇತವಾದ ಬೆಂಕಿಯನ್ನು ಪುಟ್ಟ ದೀಪದಲ್ಲಿ ಬೆಳಗಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಉದ್ದೇಶ ಇದರ ಹಿಂದಿದೆ. ಈ ದೀಪ ದುಷ್ಟಶಕ್ತಿಯ ವಿರುದ್ಧ ಶಿಷ್ಟರ ವಿಜಯದ ಸಂಕೇತ ಸಹ.
ಮನೆ ಹಸನಾದರೆ ಮನ ಹಸನು
ಮನೆ ಸ್ವಚ್ಛವಾಗಿದ್ದರೆ ಮನಸ್ಸೂ ಸಂಭ್ರಮದಿಂದಿರುತ್ತದೆ. ಆದ್ದರಿಂದ ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಹಸನು ಮಾಡುವುದಕ್ಕೆ ದೀಪಾವಳಿ ಒಂದು ನೆಪ. ಯಾವ ಮನೆ ಸ್ವಚ್ಛವಾಗಿರುತ್ತದೋ ಆಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಸಂಪತ್ತು ಮತ್ತು ಐಶ್ವರ್ಯವನ್ನು ಸ್ವಾಗತಿಸುವುದಕ್ಕಾಗಿ ಮನೆಯನ್ನು ಸ್ವಚ್ಛಗೊಳಿಸಿ, ಸಿಂಗರಿಸಲಾಗುತ್ತದೆ.
ತರಹೇವಾರಿ ಸಿಹಿ ತಿನಿಸು
ಈಗೀಗ ಹಬ್ಬ ಹರಿದಿನವೆಂದರೆ ಸಾಕು ಅಂಗಡಿಗಳಿಂದ ಸಿದ್ಧ ತರಹೇವಾರಿ ಸಿಹಿ-ತಿಂಡಿಗಳನ್ನು ತಂದು ಹಬ್ಬ ಆಚರಿಸುವುದು ಮಾಮೂಲು. ಆದರೆ ಹಬ್ಬದಲ್ಲಿ ಮನೆಯಲ್ಲಿಯೇ ಸಿಹಿ ತಯಾರಿಸುವುದು ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಖುಷಿ ಕೊಡುತ್ತದೆ. ಆದ್ದರಿಂದ ಸುಲಭದ ತಿಂಡಿಯಾದರೂ ಸರಿ. ಮನೆಯಲ್ಲಿಯೇ ತಯಾರಿಸಿ ತಿನ್ನಿ. ಅದು ರಾಸಾಯನಿಕ ಮುಕ್ತವಾಗಿರುತ್ತದೆ.
ತೈಲಾಭ್ಯಂಜನದ ಸೊಬಗು
ದೀಪಾವಳಿ ಮತ್ತೊಂದು ಪ್ರಮುಖ ಆಚರಣೆ ಎಂದರೆ ತೈಲಾಭ್ಯಂಜನ. ಬೆಳಿಗ್ಗೆ ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಈ ತೈಲಾಭ್ಯಂಜನ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದಷ್ಟೇ ಪವಿತ್ರ.
ಹೊಸ ಬಟ್ಟೆಯ ರಂಗೋ ರಂಗು
ಹೊಸಬಟ್ಟೆತೊಡುವುದು ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಅದು ಒಂದರ್ಥದಲ್ಲಿ ಜೀವನಪ್ರೀತಿಯ ಸಂಕೇತ. ಹೊಸ ಬಟ್ಟೆಯೇ ಆಗಬೇಕಿಂದಿಲ್ಲ. ಅನುಕೂಲಕ್ಕೆ ತಕ್ಕಂತೆ ತೊಳೆದ ಶುದ್ಧವಾದ ಬಟ್ಟೆ ತೊಟ್ಟು ಹಬ್ಬ ಆಚರಿಸಿ.
ಪುರಾಣ ಕತೆಯ ಪಾಠ
ದೀಪಾವಳಿಯ ಬಗೆಗಿರುವ ಪುರಾಣ ಕತೆಗಳನ್ನು ತಿಳಿದುಕೊಂಡು ಅದನ್ನು ಮನೆಯಲ್ಲಿರುವ ಮಕ್ಕಳಿಗೆ ಹೇಳುವುದರಿಂದ ಅವರಲ್ಲಿಯೂ ಇಂಥ ಆಚರಣೆಗಳ ಬಗ್ಗೆ ಶಸ್ರದ್ಧೆ ಮೂಡುತ್ತದೆ. ಆದ್ದರಿಂದ ಪ್ರತಿ ಹಬ್ಬವನ್ನೂ ಆಅಚರಿಸುವ ಉದ್ದೇಶ, ಅವುಗಳ ಹಿನ್ನೆಲೆ, ಪುರಾಣ ಕತೆಗಳನ್ನು ತಿಳಿದುಕೊಂಡು ಮಕ್ಕಳಿಗೆ ಹೇಳುವುದು ಅಷ್ಟೇ ಮುಖ್ಯ.
ದೇಹ ಮತ್ತು ಮನಸ್ಸು ಶುದ್ಧವಾಗಿರಲಿ
ಹಿಂದು ಮತದ ಪ್ರಕಾರ ಮದ್ಯಪಾನ, ಧೂಮಪಾನ, ಜೂಜಾಟ ಅಥವಾ ದೇಹ ಮತ್ತು ಮನಸ್ಸನ್ನು ಕೆಡಿಸುವಂಥ ಯಾವುದೇ ಕೆಲಸಗಳು ಒಳ್ಳೆಯದಲ್ಲ. ಆದ್ದರಿಂದ ಹಬ್ಬದ ಸಮಯದಲ್ಲಿ ಇವೆಲ್ಲವುಗಳಿಂದ ದೂರವಿರಿ. ಯಾವಾಗಲೂ ಅವುಗಳನ್ನ ತ್ಯಜಿಸಿದರೆ ಇನ್ನೂ ಉತ್ತಮ. ಇಂಥವುಗಳಿಂದ ದೂರವಿರುವುದರಿಂದ ಮನಸ್ಸ ಮತ್ತು ದೇಹ ಶುದ್ಧವಾಗಿರಬಲ್ಲದು. ಶುದ್ಧ ಮನಸ್ಸಿನಿಂದ ಹಬ್ಬ ಆಚರಿಸುವುದರಿಂದ ಮನೆಯಲ್ಲಿಯೂ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಪೂಜೆ
ಜ್ಞಾನ, ಶಾಶ್ವತತೆ, ಆಶೀರ್ವಾದಗಳನ್ನು ಬೇಡಿ, ಮನುಷ್ಯ ತಾನೂ ದೈವಿಕ ಭಾವನೆಗಳನ್ನು ಬೆಳೆಸಿಕೊಳ್ಳುವುದಕ್ಕಾಗಿ ಆಚರಿಸುವ ಪೂಜೆ ಹಬ್ಬದ ಅತ್ಯಂತ ಮಹತ್ವ ಹೆಜ್ಜೆ. ಕುಟುಂಬದ ಸಕಲರೂ ದೇವರ ಕೋಣೆಯೆದುರು ನಿಂತು ಭಕ್ತಿ-ಭಾವದಿಂದ ದೇವರಿಗೆ ವಂದಿಸಿ ಸರ್ವೇ ಜನಾಃ ಸುಖೀನೋ ಭವಂತು ಎಂದು ಪ್ರಾರ್ಥಿಸುವ ಈ ಸಂದರ್ಭ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ದಾನ ಮಾಡುವುದಕ್ಕೆ ಸಕಾಲ
ಹಬ್ಬದ ದಿನ ಅಶಾಯಕರಿಗೆ, ನಿರ್ಗತಿಕರಿಗೆ ದಾನ ಮಾಡುವ ಮೂಲಕ ಅದನ್ನೇ ಪೂಜೆ ಎಂದುಕೊಂಡರೆ ಅದಕ್ಕಿಂತ ಶ್ರೇಷ್ಠ ನಡೆ ಬೇರೆಯಿಲ್ಲ. ಹಬ್ಬದಡುಗೆಯಲ್ಲಿ ಹಸಿದ ಅಸಹಾಯಕರಿಗೂ ದಾನ ಮಾಡುವ ಔದಾರ್ಯವಿದ್ದರೆ ಹಬ್ಬ ಮತ್ತಷ್ಟು ಚೆನ್ನಾಗುತ್ತದೆ.
ಸಸ್ಯಾಹಾರ
ಹಬ್ಬದ ಸಂದರ್ಭದಲ್ಲಿಯಾದರೂ ಸಸ್ಯಾಹಾರವನ್ನು ಅನುಸರಿಸುವುದರಿಂದ ಹೃದಯವೂ ಕ್ರೌರ್ಯದಿಂದ ದೂರ ಉಳಿಯುತ್ತದೆ ಎಂಬ ನಂಬಿಕೆಯಿದೆ. ಮತ್ತೊಂದು ಜೀವಕ್ಕೆ ನಾವು ಬೆಲೆ ಕೊಡುವುದು ಮತ್ತು ಅದನ್ನು ಕಾಪಾಡುವಲ್ಲಿ ನಮಗಿರುವ ಉತ್ಸುಕತೆಯೇ ನಮ್ಮ ಬದುಕನ್ನೂ ಕಾಯುತ್ತದೆ ಎಂಬುದು ನಂಬಿಕೆ.