ಯುವ ದಸರಾದಲ್ಲಿ ಟುವ್ವಿ ಟುವ್ವಿ ಎಂದ ಶಿವರಾಜ್ ಕುಮಾರ್
ಮೈಸೂರು, ಅಕ್ಟೋಬರ್ 4: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಭರ್ಜರಿ ಆರಂಭ ದೊರೆತಿದೆ. ಮಹಾರಾಜ ಮೈದಾನದ ಅದ್ದೂರಿ ವೇದಿಕೆಯಲ್ಲಿ ಯುವ ದಸರಾಗೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಸೋಮವಾರ ಸಂಜೆ ಚಾಲನೆ ನೀಡಿದರು. ಜತೆಗೆ ಡ್ಯಾನ್ಸ್ ಮಾಡಿ, ಪ್ರೇಕ್ಷಕರನ್ನು ಕುಣಿಸಿದರು
ಆ ನಂತರ ಮಾತನಾಡಿದ ಅವರು, ದಸರಾಗೆ ಕೇವಲ ಪ್ರೇಕ್ಷಕನಾಗಿ ಬರುತ್ತಿದ್ದೆ. ಇಂದು ಉದ್ಘಾಟನೆಗೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ. ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿರುವ ದಸರಾ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದರಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಷಯ ಎಂದರು.[ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..]
ಕಾವೇರಿ ವಿವಾದದಿಂದ ದಸರಾ ರಂಗು ಕಡಿಮೆಯಾಗಿದೆ. ಆದರೆ ಈ ಜಲವಿವಾದ ವರ್ಷಗಳಿಂದಲೂ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಕಷ್ಟ ಕಾರ್ಪಣ್ಯಗಳು ತೊಳೆದು ಹೋಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದಾಗಿ ಹೇಳಿದರು.
ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ, ಬೇಡುವೆನು ವರವನ್ನು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಊರಿಂದ ಓಡಿ ಬಂದ ಜೋಗಿನ ಅಲ್ಲ ರೀ... ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ಕುಣಿಸಿದರಲ್ಲದೆ, ತಮ್ಮದೆ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯುವ ದಸರಾಗೆ ಮತ್ತಷ್ಟು ಮೆರುಗು ತಂದರು.[ಮೈಸೂರು ಯುವ ದಸರಾ: ಸ್ಯಾಂಡಲ್ ವುಡ್ ನೈಟ್ಸ್ ಮೂಲಕ ತೆರೆ]
ವಿದ್ಯಾರ್ಥಿಗಳು ಮನಮೋಹಕ ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು. ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾರ್ಥಿಗಳು ಎಲ್ಲರೂ ಹುಬ್ಬೇರುವಂತೆ ನರ್ತಿಸಿ, ಚಪ್ಪಾಳೆ ಗಿಟ್ಟಿಸಿದರು.
ಹಾಸನದ ಸರ್ಕಾರಿ ಕಲಾ ಕಾಲೇಜು, ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜು, ಗುಡ್ ಷಫರ್ಡ್ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜುಗಳು ಕಣ್ಮನ ತಣಿಸಿದರು.[ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ]
ಮೈಸೂರಿನ ಅಖಿಲ ಕರ್ನಾಟಕ ಮಹಿಳಾ ಆಸರೆ ಬಳಗದವರು ಅತ್ಯದ್ಭುತವಾಗಿ ನರ್ತಿಸಿದರು. ಲೇಸರ್ ಡ್ಯಾನ್ಸ್ ಶೋ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಬೆನ್ನಿ ದಯಾಳ್ ಹಾಗೂ ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಮೂಕವಿಸ್ಮಿತರನ್ನಾಗಿಸಿತು. ಒಟ್ಟಾರೆ ಯುವ ದಸರಾ ಎಲ್ಲರನ್ನೂ ರಂಜಿಸುವಲ್ಲಿ ಯಶಸ್ವಿಯಾಯಿತು.