ದಸರಾ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಮೈಸೂರು
ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇವೇಂದ್ರನ ಅಮರಾವತಿಯಂತೆ ಗೋಚರಿಸುತ್ತಿದೆ. ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದು, ಎಲ್ಲರ ಮೈ-ಮನವನ್ನು ಪುಳಕಗೊಳಿಸುತ್ತಿದೆ.
ಸಾಮಾನ್ಯವಾಗಿ ಹಬ್ಬ-ಹರಿದಿನಗಳು ಬರುತ್ತಿದ್ದಂತೆಯೇ ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಇನ್ನು ದಸರಾದಲ್ಲಿ ಹೇಳಬೇಕೆ? ಅದರ ಸಡಗರವನ್ನು ವರ್ಣಿಸಲು ಅಸಾಧ್ಯವಾಗಿ ಬಿಡುತ್ತದೆ.
ಈಗಾಗಲೇ ಐತಿಹಾಸಿಕ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಕಾವೇರಿ ಕಾರ್ಮೋಡ, ಬರದ ಆತಂಕ ಎಲ್ಲವನ್ನೂ ಮರೆತು ನಗರದ ಜನ ದಸರಾ ಸಡಗರದಲ್ಲಿ ಮೀಯುತ್ತಿದ್ದಾರೆ. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾಸಡಗರ.[ಮೈಸೂರು ದಸರಾದಲ್ಲಿ ಕಾದಾಡುವುದು ಸಲೀಸಲ್ಲ ಎನಿಸುವ ವಜ್ರಮುಷ್ಟಿ ಕಾಳಗ]
ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿದ್ದರೆ, ಮತ್ತೊಂದೆಡೆ ಭೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಅಹಾರ ಮೇಳ ಮಾಡುತ್ತಿದೆ.ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ.
ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೆಳೆಯುತ್ತಿವೆ. ಹಿಂದಿನ ರಾಜ ವೈಭವ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಸಿ, ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ. ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ.[ಮೈಸೂರು ದಸರಾ : ಚಿನ್ನದ ಅಂಬಾರಿಗೆ ವಿಮೆ ಎಷ್ಟು ಗೊತ್ತೆ?]
ನಗರದ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ. ರಾಮಸ್ವಾಮಿ ವೃತ್ತದಲ್ಲಿ ಅರಮನೆ ಸೃಷ್ಟಿಯಾಗಿದ್ದರೆ, ರೈಲು ನಿಲ್ದಾಣ ಬಳಿ ವಿಧಾನಸೌಧ, ಸಂಸತ್ತು ಎದ್ದು ನಿಂತಿದೆ.
ಈ ಎಲ್ಲವೂ ಮೈಸೂರು ದಸರಾ ಎಷ್ಟೊಂದು ಸುಂದರಾ.. ಎಂಬ ಪದಕ್ಕೆ ಅರ್ಥ ನೀಡುತ್ತಿದೆ. ಇನ್ನು ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆಗಳು ಸ್ವರ್ಗದ ಹಾದಿಯಂತಿದೆ ಒಟ್ಟಾರೆ ಮೈಸೂರಿಗೆ ಮೈಸೂರೇ ಸಾಟಿ ಎನ್ನುವುದನ್ನು ಸಾರಿ ಹೇಳುತ್ತಿದೆ.