ಇದು ಬರೀ ಅರಮನೆಯಲ್ಲ... ಭೂ ಸ್ವರ್ಗ ಸುಂದರಿ!
ಸಾಮಾನ್ಯವಾಗಿ ಮೈಸೂರು ಎಂದಾಕ್ಷಣ ವಿದ್ಯುದ್ದೀಪಗಳಿಂದ ಮಿನುಗುವ ಅರಮನೆ ನಮ್ಮೆಲ್ಲರ ಕಣ್ಣಮುಂದೆ ಹಾದು ಹೋಗುತ್ತದೆ. ಮೈಸೂರಿಗೆ ಮತ್ತು ಮೈಸೂರು ದಸರಾಕ್ಕೆ ಅರಮನೆ ಕೇಂದ್ರ ಬಿಂದುವಾಗಿದೆ. ಹೀಗಾಗಿ ದಸರಾ ಬರುತ್ತಿದ್ದಂತೆಯೇ ಅರಮನೆಗೊಂದು ಹೊಸ ಕಳೆ ಬಂದು ಬಿಡುತ್ತದೆ. ಅದು ಅಂತಿಂಥ ಕಳೆಯಲ್ಲ ದಸರಾ ಕಳೆ!
ಸುಣ್ಣ ಬಣ್ಣ ಬಳಿದು, ಸುಂದರವಾಗಿ ಕಂಗೊಳಿಸುವ ಅರಮನೆ ಇತರೆ ದಿನಗಳಿಗೆ ಹೋಲಿಸಿದರೆ ದಸರಾ ಸಮಯದಲ್ಲಿ ವಿಶೇಷವಾಗಿ ಆಕರ್ಷಿಸುತ್ತದೆ. ಅರಮನೆ ಸುತ್ತಲೂ ಇರುವ ದೇಗುಲಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತದೆ. ಎಲ್ಲೆಲ್ಲೂ ದಸರಾ ಸಡಗರ ತುಂಬಿ ತುಳುಕುತ್ತಿರುತ್ತದೆ. ದೇಶ ವಿದೇಶಗಳ ಪ್ರವಾಸಿಗರಿಂದ ತುಂಬಿ ತುಳುಕುವಾಗ ಅರಮನೆ ವಿಭಿನ್ನ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಅದರಲ್ಲೂ ರಾತ್ರಿಯಾಗುತ್ತಿದ್ದಂತೆಯೇ ವಿದ್ಯುದ್ದೀಪದಿಂದ ಬೆಳಗುವ ಅರಮನೆಯನ್ನು ನೋಡುವುದೇ ಪರಮಾನಂದ.
Navratri 2022 : ನವರಾತ್ರಿ ಉಪವಾಸ ಮಾಡುತ್ತಿದ್ದೀರಾ? ರೈಲಿನಲ್ಲಿ ನಿಮಗೆ ಸಿಗಲಿದೆ ಈ ವಿಶೇಷ 'ವ್ರತ ಥಾಲಿ'
ದಸರಾ ಸಮಯದಲ್ಲಿ ಅರಮನೆ ಸೇರಿದಂತೆ ಸುತ್ತಮುತ್ತ ಎಲ್ಲೆಂದರಲ್ಲಿ ವಿದ್ಯುದ್ದೀಪ ಜಗಮಗಿಸುತ್ತಿದ್ದರೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ರಾಜರ ಖಾಸಗಿ ದರ್ಬಾರ್ ನಡೆಯುತ್ತಿರುತ್ತದೆ. ಅರಮನೆ ಆವರಣದಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಮೂಡುತ್ತದೆ. ಸಹ್ರಸಾರು ಜನ ಅರಮನೆ ಸುತ್ತಮುತ್ತ ನೆರೆದು ಅರಮನೆಯ ಬೆಳಕಿನಲ್ಲಿ ಮಿಂದೇಳುತ್ತಿರುತ್ತಾರೆ.
22ಸಾವಿರ ಹೊಸ ಬಲ್ಬ್ ಅಳವಡಿಕೆ
ಇವತ್ತು ಮೈಸೂರು ಅರಮನೆ ದೇವಲೋಕದ ಅಮರಾವತಿಯಂತೆ ಕಂಗೊಳಿಸುತ್ತಿದ್ದರೆ ಅದಕ್ಕೆ ಕಾರಣವಾಗಿರುವುದು ಒಂದು ಲಕ್ಷದಷ್ಟು ಇರುವ ವಿದ್ಯುದ್ದೀಪಗಳು. ಇವುಗಳನ್ನು ಪ್ರತಿ ವರ್ಷವೂ ದಸರಾ ಸಮಯದಲ್ಲಿ ದುರಸ್ತಿಗೊಳಿಸಲಾಗುತ್ತದೆ. ಈ ಹಿಂದೆ ಕೆಟ್ಟ ಬಲ್ಬ್ಗಳ ಸಂಖ್ಯೆ ಶೇ.10ರಷ್ಟು ಇದ್ದರೆ ಈ ಬಾರಿ ಮಳೆ ಜಾಸ್ತಿ ಸುರಿದ ಕಾರಣದಿಂದಾಗಿ ಶೇ.22ರಷ್ಟಾಗಿದೆ. ಈ ಬಲ್ಬ್ ಗಳನ್ನು ಕ್ರೇನ್ ಹಾಗೂ ಡ್ರೋಣ್ ಸಹಾಯದಿಂದ ಅಳವಡಿಸುವ ಕೆಲಸ ಮಾಡಲಾಗುತ್ತದೆ.
ಅರಮನೆಗೆ ಬಲ್ಬ್ ಅಳವಡಿಸುವುದು ಒಂದು ದೊಡ್ಡ ಸಾಹಸ. ಅದರಲ್ಲೂ ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಅರಮನೆ ಗೋಪುರಗಳಿಗೆ ಬಲ್ಬ್ಗಳನ್ನು ಅಳವಡಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಅಳವಡಿಕೆ ಕಾರ್ಯ ಮುಗಿದಿದ್ದು ಈಗಾಗಲೇ ಸುಮಾರು 22ಸಾವಿರ ಹೊಸ ಬಲ್ಬ್ ಗಳನ್ನು ಅಳವಡಿಸಲಾಗಿದೆ.
ದಸರಾ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕಾಂಬೋ ಟಿಕೆಟ್; ಸ್ಥಳ, ದರದ ವಿವರ
ಮಸಿ ತುಂಬಿದ್ದ ಅಲಂಕೃತ ದೀಪಗಳ ಸ್ವಚ್ಛತೆ
ಇಷ್ಟೇ ಅಲ್ಲದೆ, ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್ ಸರಿಪಡಿಸುವ ಕೆಲಸವೂ ಮುಗಿದಿದೆ. ಎತ್ತರ ದೀಪದ ಕಂಬಗಳಿಗೆ ಮರದ ಪೋಲ್ಗಳ ಅಟ್ಟಣಿಗೆಗಳನ್ನು ಕಟ್ಟಿ ದುರಸ್ತಿಗೊಳಿಸಲಾಗಿದೆ. ಒಳಾಂಗಣದಲ್ಲಿ ಮಸಿ ತುಂಬಿದ್ದ ಅಲಂಕೃತ ದೀಪಗಳ ಗಾಜುಗಳನ್ನು ಕೆಳಗಿಳಿಸಿ ಅದನ್ನು ಒರೆಸಿ ಹೊಳೆಯುವಂತೆ ಮಾಡಲಾಗಿದೆ. ಇದೀಗ ಇಲ್ಲಿ ಕೈಗೊಳ್ಳ ಬೇಕಾಗಿರುವ ಎಲ್ಲ ಕಾರ್ಯವೂ ಮುಗಿಯುತ್ತಾ ಬಂದಿದೆ.
ಅರಮನೆಗಾಗಿಯೇ ತಯಾರಿಸಿರುವ ಬಲ್ಬ್
ಅರಮನೆಗೆ ಬಳಸುವ ಬಲ್ಬ್ ಗಳನ್ನು ಅರಮನೆಗಾಗಿಯೇ ತಯಾರಿಸಲಾಗಿದ್ದು, 15 ವ್ಯಾಟ್ ಸಾಮರ್ಥ್ಯ ಹೊಂದಿವೆ. ಇವು ಬಂಗಾರದ ಬಣ್ಣವನ್ನು ಹೊರಸೂಸುವುದು ವಿಶೇಷ. ಇವುಗಳು ತಿರುಪಿನ ಬುರುಡೆಯನ್ನು ಹೊಂದಿದ್ದು ಕಳಚುವುದಕ್ಕೆ ಸಾಧ್ಯವಿಲ್ಲದಾಗಿವೆ. ಅರಮನೆ ಹೊರತುಪಡಿಸಿ. ಅರಮನೆ ಆವರಣದ ಬೀದಿಗಳು, ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಎಲ್ಇಡಿ ಬಲ್ಬ್ ಬಳಸಲಾಗಿದೆ. ಫೈವ್ ಲೈಟ್ಸ್, ಅರಮನೆಯ ಒಳಗಿನ ತೂಗುವ ದೀಪಗಳಿಗೂ ಎಲ್ಇಡಿ ಬಲ್ಬ್ಗಳನ್ನೇ ಬಳಸಲಾಗುತ್ತಿದೆ.
ದಸರಾ ವೇಳೆ 15 ಲಕ್ಷ ದಾಟುವ ವಿದ್ಯುತ್ ವೆಚ್ಚ
ದಸರಾ ಸಮಯದಲ್ಲಿ ಈ ಹಿಂದಿನಂತೆಯೇ ಮೂರು ಗಂಟೆಗಳ ಕಾಲ ಅಂದರೆ, ಸಂಜೆ 7ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ. ಉಳಿದ ತಿಂಗಳಲ್ಲಿ ವಿದ್ಯುತ್ ಬಿಲ್ ವೆಚ್ಚ 10 ಲಕ್ಷವಿದ್ದರೆ, ದಸರಾ ವೇಳೆ 15 ಲಕ್ಷ ದಾಟಲಿದೆ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ.
ವಿದ್ಯುತ್ ಪೋಲಾಗುವುದನ್ನು ತಡೆಯಲು ಎಲ್ ಇಡಿ ಬಲ್ಭ್
ಅರಮನೆಗೆ ವಿದ್ಯುದ್ದೀಪವನ್ನು ಅಳವಡಿಸಿ ಅದು ನಿತ್ಯವೂ ಉರಿಯುವಂತೆ ಮಾಡಿದ್ದು ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್. 1942ರ ಆಸುಪಾಸಿನಲ್ಲಿ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎಂದು ಹೇಳಲಾಗಿದೆ. ಅವತ್ತಿನ ದಿನಗಳಲ್ಲಿ ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್ನ ಬಲ್ಬ್ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್ಗೆ ಇಳಿಸಲಾಯಿತು. ಇತ್ತೀಚೆಗೆ ವಿದ್ಯುತ್ ಪೋಲಾಗುವುದನ್ನು ತಡೆಯುವ ಸಲುವಾಗಿ ಎಲ್ ಇಡಿ ಬಲ್ಭ್ ಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳ ಬಳಕೆ
ಮೊದಲಿಗೆ ವಿದ್ಯುದ್ದೀಪ ಬಂದಿದ್ದು ಈಗಿನ ಅರಮನೆಗೆ ಅಲ್ಲ. ಸಮೀಪದಲ್ಲಿಯೇ ಇರುವ ಜಗನ್ಮೋಹನ ಅರಮನೆಗೆ ಎಂದು ಹೇಳಲಾಗುತ್ತಿದೆ. ರಾಜರ ಕಾಲದಲ್ಲಿ ಮೈಸೂರು ಹಲವು ಬೀದಿಗಳಿಂದ ಕೂಡಿತ್ತು. ಇಲ್ಲಿನ ಆಯ್ದ ಸ್ಥಳಗಳಲ್ಲಿ ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳನ್ನು ಎತ್ತರದ ಕಲ್ಲು ಅಥವಾ ಮರದ ಕಂಬಗಳಲ್ಲಿ ಇಡಲಾಗುತ್ತಿತ್ತು. ಅದಕ್ಕೆ ಪ್ರತಿದಿನ ರಾತ್ರಿ ಸಿಬ್ಬಂದಿಯೊಬ್ಬ ಬಂದು ಏಣಿ ಸಹಾಯದಿಂದ ಹತ್ತಿ ಎಣ್ಣೆ ಸುರಿದು ದೀಪ ಹಚ್ಚಿ ಹೋಗುತ್ತಿದ್ದನಂತೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿದ್ಯುತ್ ಆಗಮನ
1908ರ ನಂತರ ಅಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿಗೆ ವಿದ್ಯುದ್ದೀಪಗಳು ಬಂದವು. 1908ರ ಸೆಪ್ಟಂಬರ್ 26ರಂದು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಜನಗನ್ಮೋಹನ ಅರಮನೆಯ ಸಿಂಹಾಸನವನ್ನು ಅಲಂಕರಿಸಿ ವಿದ್ಯುತ್ ದೀಪದ ಸ್ವಿಚ್ಚನ್ನು ಒತ್ತುವ ಮೂಲಕ ದೀಪ ಬೆಳಗಿಸಿದರು. ಜಗನ್ಮೋಹನ ಅರಮನೆಯಿಂದ ಬೀದಿಗಳಿಗೆ ಅಲ್ಲಿಂದ ಚಾಮುಂಡಿ ಬೆಟ್ಟಕ್ಕೂ ವಿದ್ಯುತ್ ಸಂಪರ್ಕ ನೀಡಲಾಯಿತು. ಮುಂದೆ ಅಂಬಾ ವಿಲಾಸ ಅರಮನೆ ನಿರ್ಮಿಸಿದಾಗ ಅದಕ್ಕೆ ಅಳವಡಿಸಿದ ವಿದ್ಯುತ್ ದೀಪ ಇವತ್ತು ಅರಮನೆಯನ್ನು ಇಂದ್ರನ ಅಮರಾವತಿಯನ್ನಾಗಿ ಮಾಡಿದೆ. ಅದು ಮೈಸೂರಿಗೆ ಮಾತ್ರವಲ್ಲ ಇಡೀ ಕರುನಾಡಿಗೆ ಹೆಮ್ಮೆಯಾಗಿದೆ.
ಇವತ್ತಿಗೂ ವಿದ್ಯುದ್ದೀಪದ ಬೆಳಕಿನಲ್ಲಿ ಕಂಗೊಳಿಸುವ ಅರಮನೆಯನ್ನು ನೋಡಲು ಸಹಸ್ರಾರು ಕಣ್ಣುಗಳು ಅರಮನೆ ಬಳಿ ಆಗಮಿಸಿ ಕಾತರದಿಂದ ಕಾಯುತ್ತಿರುತ್ತವೆ. ದಸರಾ ಸಮಯದಲ್ಲಿ ಇಡೀ ನಗರವೇ ವಿದ್ಯುದ್ದೀಪದಿಂದ ಬೆಳಗುತ್ತಿದ್ದರೆ ಅದರ ನಡುವೆ ಅರಮನೆ ಭೂ ಸ್ವರ್ಗ ಸುಂದರಿಯಾಗಿ ಆಕರ್ಷಿಸುತ್ತದೆ.