ತುಪ್ಪ-ಹಾಲಿನ ಜುಗಲ್ ಬಂದಿಯ ಶಾವಿಗೆ ಪಾಯಸ
ಬೆಂಗಳೂರು, ಅಕ್ಟೋಬರ್, 16 : ನಮ್ಮ ಕನ್ನಡ ನಾಡು ಹೇಗೆ ರಮಣೀಯವಾದ ಪ್ರಕೃತಿ ಸೌಂದರ್ಯಗಳಿಗೆ ಪ್ರಸಿದ್ದವೋ ಹಾಗೆ ವಿಭಿನ್ನ, ವಿಶೇಷ ಸಂಸ್ಕೃತಿ, ಹಬ್ಬ ಆಚರಣೆಗಳಿಗೂ ಎತ್ತಿದ ಕೈ. ಹಬ್ಬ ಹರಿದಿನಗಳಿಗೆ ಕನ್ನಡ ನಾಡಿನಲ್ಲಿ ಸುಮಾರು 15 ಅಥವಾ ಒಂದು ವಾರದಿಂದಲೇ ತಯಾರಿ ನಡೆದಿರುತ್ತದೆ. ಸ್ವಚ್ಚತೆ ಕಾರ್ಯದಿಂದ ಹಿಡಿದು ಪೂಜೆ , ಅಡುಗೆ ಮಾಡುವವರೆಗೂ ಸಂಬಂಧಿಕರೆಲ್ಲಾ ಹಾಡು ಹರಟೆಯಲ್ಲಿ ಮಿಂದೇಳುತ್ತಾ ಹಬ್ಬವನ್ನು ಬಹಳ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ.
ಮುಂಜಾನೆಯ ತೋರಣ ಕಟ್ಟುವುದರಿಂದ, ರಂಗೋಲಿ ಹಾಕುವುದರಿಂದ ಆರಂಭವಾಗುವ ಹಬ್ಬಗಳಲ್ಲಿ ಪೂಜೆ ಹವನಾದಿಗಳ ನಂತರದ ಸ್ಥಾನ ಸಿಗುವುದು ಹೆಂಗಳೆಯರು ಮಾಡುವ ವಿವಿಧ ರುಚಿ ರುಚಿಯಾದ ವಿಶೇಷ ವಿಭಿನ್ನವಾದ ಖಾದ್ಯಗಳಿಗೆ. ಹೌದು ಪ್ರತಿಯೊಂದು ಹಬ್ಬಗಳಿಗೆ ಅದರದೇ ಆದ ಅಡುಗೆ ವಿಶೇಷಗಳಿರುತ್ತವೆ. ಒಟ್ಟಿನಲ್ಲಿ ಅಂದು ದೇವರಿಗೆ ನೈವೇದ್ಯ ಮಾಡುವ ಹೆಸರಿನಲ್ಲಿ ಎಲ್ಲಾ ಖಾದ್ಯಗಳು ನಮ್ಮ ಹೊಟ್ಟೆಯೊಳಗೆ ಸೇರುತ್ತವೆ.
ಹೌದು ಗಣಪತಿಗೆ ಮೋದಕ, ಲಡ್ಡು, ದಸರಾಕ್ಕೆ ಪಾಯಸ (ಗೋಧಿ ಪಾಯಸ, ಗಸೆಗಸೆ ಪಾಯಸ, ಶಾವಿಗೆ ಪಾಯಸ, ಸೀಬಕ್ಕಿ ಪಾಯಸ) ದೀಪಾವಳಿಗೆ ಸೌತೆಕಾಯಿ ಕಡ್ಬು, ಹೋಳಿಗೆ, ಸಂಕ್ರಾಂತಿಗೆ ಪೊಂಗಲ್ (ಮಲೆನಾಡಿನಲ್ಲಿ ದೋಸೆ), ಹೀಗೆ ಹಬ್ಬಕ್ಕೆ ತಕ್ಕಂತೆ ಅಚ್ಚುಕಟ್ಟಾದ ಅಡುಗೆಯ ಮೆನೂ ಕೂಡ ಮನೆಯಲ್ಲಿ ಬದಲಾವಣೆಯಾಗುತ್ತಾ ಸಾಗುತ್ತದೆ. ಒಟ್ಟಿನಲ್ಲಿ ಆಹಾರ ಪ್ರಿಯರಿಗಂತೂ ಹಬ್ಬ ಯಾಕೆ ಮುಗಿದು ಹೋಗುತ್ತದೋ ಎಂದು ಅನಿಸದೇ ಇರದು. ಯಾಕೆಂದರೆ ಅಷ್ಟೊಂದು ಖಾದ್ಯಗಳು ಪ್ರತಿಯೊಬ್ಬರ ಮನೆಯಲ್ಲಿ ಅರಳುತ್ತವೆ.[ಹಬ್ಬಕ್ಕೆ ಸ್ಪೆಷಲ್ ಆಲೂ ಮಸಾಲಾ ಪಲ್ಯ]
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗಣಪತಿ ಹಬ್ಬಮಾಡಿ ಮೋದಕ, ಲಡ್ಡು ಹೀಗೆ ಇನ್ನು ಏನೇನೋ ವಿಶೇಷ ಖಾದ್ಯಗಳನ್ನು ತಿಂದ ರುಚಿ ಬಾಯಿಯಲ್ಲೇ ಇದೆ. ಅಷ್ಟರಲ್ಲೇ ದಸರಾ ಬಂದಿದ್ದು ಪಾಯಸದ ರುಚಿ ನೋಡುವ ಗಳಿಗೆಗೆ ಲೆಕ್ಕ ಹಾಕುವಂತಾಗಿದ್ದು, ಪಾಯಸ ಆಹಾ...ಪಾಯಸ ಓಹೋ ಎಂದು ಬಾಯಿ ಚಪ್ಪರಿಸಲು ತಯಾರಾಗಿ. ದಸರಾದ ಸಂಭ್ರಮದಲ್ಲಿರೋ ನಿಮಗೆ ಪಾಯಸ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ದಸರಾ ಹಬ್ಬಕ್ಕೆ ಪಾಯಸ ಮಾಡಿ ತಿನ್ನಿ. ಮತ್ತೆ ಹಬ್ಬ ಹರಿದಿನಕ್ಕೆಂದೂ ಕಾಯಬೇಡಿ ಹಬ್ಬ ಮುಗಿದ ನಂತರವೂ ಮಾಡಿಕೊಂಡು ಪಾಯಸದ ರುಚಿ ಸವಿಯಿರಿ.
ಪಾಯಸದ ವಿಧಗಳು :
ಪಾಯಸದಲ್ಲಿ ಗಸೆ ಗಸೆ ಪಾಯಸ, ಶಾವಿಗೆ ಪಾಯಸ, ಗೋಧಿ ಪಾಯಸ, ಸಾಬಕ್ಕಿ ಪಾಯದ, ಬಾಳೆಹಣ್ಣಿನ ಪಾಯಸ ಹೀಗೆ ಪಾಯಸವನ್ನು ವೈವಿಧ್ಯವಾಗಿ ಮಾಡಬಹುದು. ಈ ಹಬ್ಬದ ವಿಶೇಷವಾಗಿ ಶಾವಿಗೆ ಪಾಯಸ ಮಾಡುವುದು ಹೇಗೆ ಓದಿರಿ..ಮಾಡಿ ಸವಿಯಿರಿ
ಬೇಕಾದ ಸಾಮಾಗ್ರಿಗಳು :
ಪಾಯಸದ ಶಾವಿಗೆ, ತುಪ್ಪ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಲವಂಗ, ಸಕ್ಕರೆ, ಹಾಲು.[ದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ]
ಮಾಡುವುದು
ಹೇಗೆ
:
ಮೊದಲು
ಪಾಯಸದ
ಶಾವಿಗೆಯನ್ನು
ತೆಗೆದುಕೊಂಡು,
ನಿಧಾನವಾದ
ಬೆಂಕಿಯಲ್ಲಿ
ಶಾವಿಗೆ
ಕೆಂಪಾಗುವವರೆಗೂ
ತುಪ್ಪದಲ್ಲಿ
ಹುರಿದುಕೊಳ್ಳಬೇಕು.
ಶಾವಿಗೆ
ಕೆಂಪು
ಬಣ್ಣಕ್ಕೆ
ತಿರುಗಿದ
ಮೇಲೆ
ಶಾವಿಗೆ
ಬೇರೆಯಾಗಿ
ತೆಗೆದಿಟ್ಟುಕೊಳ್ಳಬೇಕು..
ಬಳಿಕ ಬೇರೊಂದು ಪಾತ್ರೆಯಲ್ಲಿ 200 ಗ್ರಾಂನಷ್ಟು ತುಪ್ಪ ಹಾಕಿ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಅದು ಸಹ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಂಡು ಅದನ್ನು ಬೇರೆಯಾಗಿ ಎತ್ತಿಟ್ಟುಕೊಳ್ಳಬೇಕು.
ನಂತರ ಒಂದೆರಡು ಚಮಚ ತುಪ್ಪಹಾಕಿ ಹುರಿದ ಶಾವಿಗೆ, ಗೋಡಂಬಿ, ದ್ರಾಕ್ಷಿ, ಬಾದಾಮಿ ಎಲ್ಲವನ್ನು ಒಟ್ಟಾಗಿ ಹಾಕಿ ಒಂದು ಲೀಟರ್ ಹಾಲು ಹಾಗೂ ಸಕ್ಕರೆ ಬೆರೆಸಿ ತುಪ್ಪದ ಘಮಲು ಬರುವವರೆಗೂ ನಿಧಾನವಾದ ಬೆಂಕಿಯಲ್ಲಿ ಕುದಿಯಲು ಬಿಡಬೇಕು. ಬಳಿಕ ಲವಂಗವನ್ನು ಪುಡಿಮಾಡಿ ಪಾಯಸಕ್ಕೆ ಬೆರೆಸಬೇಕು. ಹೀಗೆ ಮಾಡಿದರೆ ಹದವಾದ, ರುಚಿಯಾದ, ಸಿಹಿಯಾದ ಪಾಯಸ ಸವಿಯಲು ಸಿದ್ಧ.