ದಸರಾ: ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ
ಮೈಸೂರು, ಸೆಪ್ಟೆಂಬರ್ 30: ನಾಡಹಬ್ಬ ಮೈಸೂರು ದಸರಾವನ್ನು ಸಾರ್ವಜನಿಕರು ನೆಮ್ಮದಿ ಮತ್ತು ಸಂತಸದಿಂದ ವೀಕ್ಷಿಸಲು ಅನುಕೂಲವಾಗುವಂತೆ ಪೊಲೀಸರು ಬಿಗಿಭದ್ರತೆ ಕಲ್ಪಿಸಲಿದ್ದಾರೆ. ಅ.1ರಿಂದ ಆರಂಭವಾಗಿ ಅ.11 ರವರೆಗೆ ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ನಡೆಸಲು ಸರ್ವ ಸಿದ್ಧತೆ ಕೈಗೊಳ್ಳಲಾಗಿದ್ದು, ಪೊಲೀಸರು ನಗರಾದ್ಯಂತ ಕಣ್ಣಿಟ್ಟು ಕಾಯಲಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದಕ್ಕಾಗಿ 4214 ಸಿವಿಲ್, ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ,[ಮೈಸೂರು ದಸರಾಗೆ ಬಂದಿರುವ ಆನೆಗಳ ಮಾವುತರಿಗೆ ಕ್ಷೌರ]
ಜತೆಗೆ ಆರ್ಎಎಫ್ ಮತ್ತು ಮೈಸೂರು ಕಮಾಂಡೋ ಪಡೆಯ 80 ಕಮಾಂಡೋಗಳು, 46 ಕೆಎಸ್ಆರ್ ಪಿ ಮತ್ತು ಸಿಎಆರ್ ತುಕಡಿಗಳು, 49 ಭದ್ರತಾ ತಪಾಸಣೆ ಪಡೆಗಳು (ಬಾಂಬ್ ಸ್ಕ್ವಾಡ್, ಮೆಟಲ್ ಡಿಟಕ್ಟರ್), 1400 ಹೋಂ ಗಾರ್ಡ್ಸ್ ಗಳನ್ನು ನಿಯೋಜಿಸಲಾಗುತ್ತಿದೆ ಎಂದರು.
ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದು, ಅಪರಾಧ ಕೃತ್ಯ ಎಸಗುವುದನ್ನು ತಡೆಯುವ ಸಲುವಾಗಿ ನುರಿತ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಪಿಕ್ ಪಾಕೆಟರ್ಸ್ ಮತ್ತಿತರ ಕಳವು ಅಪರಾಧಿಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.[ಚೆನ್ನವೀರ ಕಣವಿಯವರಿಗೆ ಸ್ವಾಗತ ಕೋರಿದ್ದು ಪ್ರತಾಪ ಸಿಂಹ]
ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ನಗರದ 20 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿ ತೆರೆಯಲಾಗಿದೆ. ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳಕ್ಕೆ ತೆರಳಲು ಗಸ್ತುವಾಹನ ವ್ಯವಸ್ಥೆ ಮಾಡಲಾಗಿದೆ. 10 ಅಗ್ನಿಶಾಮಕ ದಳಗಳು, 10 ಆಂಬುಲೆನ್ಸ್ ನಿಯೋಜಿಸಲಾಗಿದೆ.
ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಜೊತೆ ಮೈಸೂರು ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ 47 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, 24 ಗಂಟೆಯೂ ರೆಕಾರ್ಡ್ ಆಗಲಿದೆ ಎಂದು ತಿಳಿಸಿದರು.
ಅ.1ರಿಂದ 11ರವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. 1 ರಿಂದ 11ರವರೆಗೆ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಿದ್ದು, ಹೆಲಿಪ್ಯಾಡ್ ನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭ ಸೈಕಲ್ ಪ್ಯೂರ್ ಅಗರ್ ಬತ್ತೀಸ್ ವತಿಯಿಂದ ಸಂಚಾರಿ ಪೊಲೀಸರಿಗೆ 350 ಜಾಕೆಟ್ ವಿತರಿಸಲಾಯಿತು.