ದಸರಾ: ಜನಮನ ಗೆದ್ದ ಜನಪದೋತ್ಸವ
ಮೈಸೂರು, ಸೆ. 23:ನಗರದ ಹೃದಯ ಭಾಗದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಗೆಬಗೆಯ ವೇಷಭೂಷಣಗಳೊಂದಿಗೆ ಆರುನೂರಕ್ಕೂ ಹೆಚ್ಚು ಕಲಾವಿದರು ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾ ಚಟುವಟಿಕೆಗಳನ್ನು ಪ್ರದರ್ಶಿಸಿ ಜನರನ್ನು ತನ್ನ ಕಡೆ ಆಕರ್ಷಿಸುವಂತೆ ಮಾಡಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನ ಗತವೈಭವದ ಸಂಸ್ಕೃತಿಯನ್ನು ಸಾರುವ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಯಕ್ಷಗಾನ, ಭಜನೆ, ರಾಮನಾಮ, ಶಿವನಾಮ, ಸ್ವಾಮಿ ಕುಣಿತ, ಕರಡಿ ಮಜಲು, ಹುಲಿ ವೇಷ ನೃತ್ಯಗಳನ್ನು ಕಲಾವಿದರು ಅಪಾರ ಜನರ ಮುಂದೆ ಪ್ರದರ್ಶಿಸಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ, ಸಡಗರದಿಂದ ಆಚರಿಸಲು ಮುಂದಾದರು. ಅಲ್ಲದೆ ಇದೇ ವೇಳೆಯಲ್ಲಿ ಪ್ರವಾಸಿಗರು ಕೂಡ ಇದನ್ನು ನೋಡಿ ಸಂತೋಷಗೊಂಡು ತಾವು ಕೂಡ ನೃತ್ಯ ಮಾಡುವುದರೊಂದಿಗೆ ದಸರಾ ಹಬ್ಬ ಕೂಡಾ ನಮ್ಮ ಹಬ್ಬ ಎಂಬುವಂತೆ ಜನಪದೋತ್ಸವದಲ್ಲಿ ಭಾಗವಹಿಸಿದರು.
ಆರುನೂರಕ್ಕೂ ಹೆಚ್ಚು ಕಲಾವಿದರು ವಿವಿಧ ಬಣ್ಣಬಣ್ಣದ ವೇಷಭೂಷಣಗಳೊಂದಿಗೆ ನೃತ್ಯವನ್ನು ಮಾಡಿದಾಗ ಇನ್ನಷ್ಟು ದಸರಾ ಹಬ್ಬದ ಕಳೆ ಹೆಚ್ಚಿತ್ತು. ಅಲ್ಲದೆ ಹೊರರಾಜ್ಯದ ಅಪಾರಜನತೆ ಕೂಡಾ ಇದರಲ್ಲಿ ಭಾಗವಹಿಸಿದರು ಹಾಗೂ ಕರ್ನಾಟಕ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಜನಪದೋತ್ಸವ ಕಾರ್ಯಕ್ರಮದ ಕಲಾ ಮೆರವಣಿಗೆ ದೇವರಾಜ ಅರಸು ರಸ್ತೆ ಮೂಲಕ ಕಲಾಮಂದಿರದವರೆಗೆ ಸಂಜೆ 6.00ರಿಂದ ಜನಪದ ಕಲಾರಂಗದಲ್ಲಿ ಜಾನಪದ ಕಲಾಮೇಳ ಆರಂಭವಾಯಿತು. ಇದನ್ನು ಕೂಡಾ ಅಪಾರ ಜನಸಂಖ್ಯೆ ನೋಡಿ ಸಂತೋಷ, ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಣೆ ಮಾಡಿದರು.
ಸೆ.26 ರವರೆಗೂ ನಡೆಯಲಿರುವ ಈ ಜಾನಪದ ಹಬ್ಬದ ಉದ್ಘಾಟನೆಗೆ ಸಚಿವ ಸಿಎಂ ಉದಾಸಿ, ಆನಂದ್ ಅಸ್ನೋಟಿಕರ್ ಆಗಮಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅತಿಥಿಗಳನ್ನು ಸ್ವಾಗತಿಸಿದರು.
(ದಟ್ಸ್ ಕನ್ನಡ ವಾರ್ತೆ)