ಸೆ.20 ರಿಂದ ದಸರಾ ಸೈಕ್ಲಿಂಗ್ ಸ್ಪರ್ಧೆ
ಬೆಂಗಳೂರು, ಸೆ. 18 : ನಾಡಹಬ್ಬ ದಸರಾ ಪ್ರಯುಕ್ತ ಸೈಕ್ಲಿಂಗ್ ಉಪ ಸಮಿತಿ ವತಿಯಿಂದ ಸೈಕಲ್ ಸ್ಪರ್ಧೆ ಮತ್ತು ರೇಸ್ಗಳನ್ನು ಸೆ. 20 ರಿಂದ 22 ರವರೆಗೆ ಏರ್ಪಡಿಸಲಾಗಿದೆ.
ಸೆ. 20 ರಂದು ಬೆಳಗ್ಗೆ 9 ಗಂಟೆಗೆ ದಸರಾ ಹೆರಿಟೇಜ್ ಸೈಕಲ್ ಸ್ಪರ್ಧೆಯನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡುವರು. ಇದರಲ್ಲಿ ಸಾರ್ವಜನಿಕರು ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 5000 ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ದಸರಾ ಹೆರಿಟೇಜ್ ಸೈಕಲ್ ಸ್ಪರ್ಧೆಯು ಮಹಾರಾಜ ಕಾಲೇಜು ಮೈದಾನದ ಮುಂಬಾಗದ ರಸ್ತೆಯಲ್ಲಿ ಆರಂಭವಾಗಿ ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್ ವೃತ್ತ, ನಂಜನಗೂಡು ರಸ್ತೆ, ರೇಸ್ ಕೋರ್ಸ್ ರಸ್ತೆ, ಪ್ರಾಣಿ ಸಂಗ್ರಹಾಲಯ, ರೀಜೆನ್ಸಿ ಟಾಕೀಸ್ ರಸ್ತೆ, ಶಾಂತವೇರಿ ಗೋಪಾಲಗೌಡ ಆಸ್ಪತ್ತೆ ವೃತ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ವೃತ್ತ, ಪೊಲೀಸ್ ಆಕಾಡೆಮಿ ರಸ್ತೆ, ಫೈವ್ ಲೈಟ್ ವೃತ್ತ, ಸಂತ ಫಿಲೋಮಿನ್ ಚರ್ಚ್, ಅಶೋಕ ರಸ್ತೆ, ಪುರಭವನ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಹಾದು ಹೋಗಿ ಮೈಸೂರು ವಿಶ್ವವಿದ್ಯಾನಿಲಯದ ಓವಲ್ಗ್ರೌಂಡ್ನಲ್ಲಿ ಅಂತ್ಯಗೊಳ್ಳಲಿದೆ.
ಸೆ. 21 ರಂದು ಬೆಳಗ್ಗೆ 7 ಗಂಟೆಗೆ ಪುರುಷರ ಮುಕ್ತ ಸೈಕಲ್ ಚಾಂಪಿಯನ್ಷಿಪ್ ಮೈಸೂರು-ನಂಜನಗೂಡು ರಸ್ತೆಯ ಎ.ಪಿ.ಎಂ.ಸಿ. ಹತ್ತಿರವಿರುವ ರಿಂಗ್ ರೋಡ್ ಜಂಕ್ಷನ್ನಲ್ಲಿ ಆರಂಭಗೊಳ್ಳಲಿದೆ. ಈ ರೇಸ್ ಮೈಸೂರು ಹೊರ ವರ್ತುಲ ರಸ್ತೆಯಲ್ಲಿ ಹೆಚ್.ಡಿ.ಕೋಟೆ ರಸ್ತೆ, ಹುಣಸೂರು ರಸ್ತೆ, ಬೆಂಗಳೂರು ರಸ್ತೆಯ ರಿಂಗ್ ರೋಡ್ ಜಂಕ್ಷನ್ಗಳ ಮೂಲಕ ಹಾಯ್ದು ಹೋಗಿ ಮೈಸೂರು-ಬನ್ನೂರು ರಸ್ತೆಯ ರಿಂಗ್ರೋಡ್ ಜಂಕ್ಷನ್ನಲ್ಲಿ ಅಂತ್ಯಗೊಳ್ಳಲಿದೆ.
ಅದೇ ದಿನದಂದು ಬೆಳಿಗ್ಗೆ 10 ಗಂಟೆಗೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತ್ರಿಚಕ್ರ ಸೈಕಲ್ ರೇಸ್, 2 ಗಂಟೆಗೆ ಅಂಗವಿಕಲರ ತ್ರಿಚಕ್ರ ಸೈಕಲ್ ರೇಸ್ ಹಾಗೂ ಸೆ 22 ರಂದು ಬೆಳಗ್ಗೆ 9 ಗಂಟೆಗೆ 5 ರಿಂದ 10 ವರ್ಷ ವಯಸ್ಸಿನ ಮಕ್ಕಳ ಸೈಕಲ್ ರೇಸ್ ನಡೆಯಲಿದೆ. ಈ ಮೂರು ರೇಸ್ಗಳು ಮಹಾರಾಜ ಕಾಲೇಜು ಮೈದಾನದ ಮುಂದಿನ ಜೋಡಿ ರಸ್ತೆಯಲ್ಲಿ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸೈಕಲ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
(ದಟ್ಸ್ ಕನ್ನಡ ವಾರ್ತೆ)