ದಸರಾ ವಿಶೇಷ : ವೈವಿಧ್ಯಮಯ ಚಲನಚಿತ್ರೋತ್ಸವ
ಮೈಸೂರು, ಸೆ. 16 : ಈ ಬಾರಿಯ ದಸರಾ ಚಲನಚಿತ್ರೋತ್ಸವ ಹಲವು ವೈವಿಧ್ಯಗಳಿಂದ ಕೂಡಿದ್ದು, ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಜ್ಯೋತಿ ಬೆಳಗಿಸಲಿದ್ದಾರೆ.
ಸೆ 19 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶೋಭ ಕರಂದ್ಲಾಜೆ ಉಪಸ್ಥಿತರಿರುವರು. ಚಾಮರಾಜ ಕ್ಷೇತ್ರದ ಶಾಸಕ ಹೆಚ್ ಎಸ್ ಶಂಕರಲಿಂಗೇಗೌಡ ಅಧ್ಯಕ್ಷತೆ ವಹಿಸುವರು ಎಂದು ದಸರಾ ಚಲನಚಿತ್ರ ಉಪಸಮಿತಿ ಅಧ್ಯಕ್ಷ ಪ್ರತಾಪ್ ಅವರು ಇಂದು ನಗರದ ವಾರ್ತಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ ಜಯಮಾಲ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಜಗ್ಗೇಶ್, ನಟಿ ತಾರಾ, ದುನಿಯಾ ಖ್ಯಾತಿಯ ವಿಜಯ್, ಶುಭಾ ಪೂಂಜಾ, ರಾಧಿಕಾ ಪಂಡಿತ್, ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಇವರುಗಳಲ್ಲದೆ ಕಂಠೀರವ ಸ್ಟುಡಿಯೋ ಅಧ್ಯಕ್ಷ ಗಿರೀಶ್ ಮಟ್ಟಣ್ಣನವರ್, ಸಹಕಾರ ಸಚಿವ ಲಕ್ಷ್ಮಣ ಸವದಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು, ಮತ್ತಿತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರತಾಪ್ ಹೇಳಿದರು. ನಂತರ ಚಲನಚಿತ್ರೋತ್ಸವದಲ್ಲಿ ವಿವಿದ ಚಿತ್ರಪ್ರದರ್ಶನಗಳ ವಿವರ ನೀಡಿದರು.
(ದಟ್ಸ್ ಕನ್ನಡ ವಾರ್ತೆ)