ಮಹಾನವಮಿಯಂದು ಸರಸ್ವತಿ ದೇವಿ ಆರಾಧನೆ
ಮಾಹಿತಿ : ಹಂಸಾನಂದಿ
ಮೈಸೂರು ವಾಸುದೇವಾಚಾರ್ಯರು(1865-1961) 20ನೇ ಶತಮಾನದಲ್ಲಿನ ಒಬ್ಬ ಪ್ರಮುಖ ವಾಗ್ಗೇಯಕಾರರು. ತ್ಯಾಗರಾಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸುಮಾರು 300ಕ್ಕೂ ಹೆಚ್ಚು ರಚನೆಗಳನ್ನು ಹೆಚ್ಚಾಗಿ ತೆಲುಗು ಮತ್ತು ಸಂಸ್ಕೃತದಲ್ಲಿ ಮಾಡಿದ್ದಾರೆ. ಕಚೇರಿಗಳಲ್ಲಿ ಕೇಳಬಹುದಾದ ರಚನೆಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ, ಕರ್ನಾಟಕದ ನೆಲದಲ್ಲಿ ಮೂಡಿಬಂದ ಕೃತಿಗಳಲ್ಲಿ ಇವರದ್ದು ದೊಡ್ಡ ಪಾಲು ಇರುತ್ತದೆ ಎನ್ನಬಹುದು.
ಕನಕಪುರದಲ್ಲಿ ಹುಟ್ಟಿದ ವಾಸುದೇವಾಚಾರ್ಯರು ತಮ್ಮ ಜೀವನದ ಬಹುಪಾಲು ಭಾಗವನ್ನು ಮೈಸೂರಿನ ಒಡೆಯರ ಆಶ್ರಯದಲ್ಲಿ ಕಳೆದರು. ಅಷ್ಟೇ ಅಲ್ಲ, ಮೈಸೂರಿನ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರಿಗೆ ಇವರು ಸಂಗೀತಗುರುಗಳು ಕೂಡ. ತಮ್ಮ ರಚನೆಗಳಲ್ಲಿ ವಾಸುದೇವ ಎಂಬ ಅಂಕಿತವನ್ನು ಇಟ್ಟಿರುತ್ತಾರೆ. ಅಭಿನವ ತ್ಯಾಗರಾಜರೆಂದೇ ಪ್ರಸಿದ್ಧರಾದ ವಾಸುದೇವಾಚಾರ್ಯರು ಬರಹಗಾರರು ಕೂಡಾ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು 'ನಾ ಕಂಡ ಕಲಾವಿದರು' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಮಹಾನವಮಿಯ ಸರಸ್ವತಿ ಪೂಜೆಯ ಪ್ರಯುಕ್ತ, ಇಂದು ಇವರ ಸಂಸ್ಕೃತ ಭಾಷೆಯಲ್ಲಿರುವ ಹಿಂದೋಳ ರಾಗದ ಕೃತಿ ಮಾಮವತು ಶ್ರೀ ಸರಸ್ವತೀ ಎಂಬ ರಚನೆಯನ್ನು ಇಲ್ಲಿ ಕ್ಲಿಕ್ಕಿಸಿ ಕೇಳಿದರೆ ಚೆನ್ನಾಗಿರುತ್ತೆ. ಅಲ್ಲವೆ? . ಹಾಡಿರುವವರು ಸಂಗೀತಾ ಕೃಷ್ಣ.
ತಿರುವನಂತಪುರದಲ್ಲಿನ ನವರಾತ್ರಿ ಮಂಟಪದಲ್ಲಿ ನವರಾತ್ರಿಯ ಒಂಬತ್ತನೆ ದಿವಸ ಹಾಡುವ ಕೃತಿ, ಪಾಹಿ ಪರ್ವತ ನಂದಿನಿ ಎಂಬ ಆರಭಿ ರಾಗದ ರಚನೆ, ಅದನ್ನು ಮ್ಯೂಸಿಕ್ ಇಂಡಿಯಾ ತಾಣದಲ್ಲಿ ಇಲ್ಲಿ ಕೇಳಬಹುದು. ಇದು ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿಗಳಲ್ಲಿ ಕೊನೆಯದು.
ಪೂರಕ ಓದಿಗೆ
ನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ