ಕುಸ್ವಾರ್ ತಿನಿಸು ತಿನ್ನಲು ಮಂಗ್ಳೂರು ಕ್ರಿಸ್ಮಸ್ ಹಬ್ಬದಲ್ಲಿ ಪಾಲ್ಗೊಳ್ಳಿ
ಮನುಕುಲಕ್ಕೆ ಪ್ರೀತಿ, ದಯೆಯನ್ನೇ ಧಾರೆಯೆರೆದ ಯೇಸುಕ್ರಿಸ್ತನ ಜನ್ಮದಿನದ ಆಚರಣೆಗೆ ಜಗತ್ತೇ ಸಿದ್ಧಗೊಂಡಿದೆ. ಮಂಗಳೂರಿನಲ್ಲಿ ಕೂಡಾ ಕ್ರೈಸ್ತರು ಮನೆಗಳಲ್ಲಿ ಕ್ರಿಬ್, ಕ್ರಿಸ್ಮಸ್ ಟ್ರೀಯನ್ನಿಟ್ಟು ಯೇಸು ಮತ್ತೊಮ್ಮೆ ಹುಟ್ಟಿಬರಲೆಂದು ಆಶಿಸುತ್ತಾರೆ. ಈ ಸಂದರ್ಭ ಅವರು ತಯಾರಿಸುವ ಕುಸ್ವಾರ್ ಎಂಬ ತಿನಿಸು ಮಂಗಳೂರಿನ ಸ್ಪೆಶಲ್.
ಕ್ರೌರ್ಯ ತುಂಬಿದ ಭೂಲೋಕದಲ್ಲಿ ದಯೆ, ಕರುಣೆ ಕರುಣಿಸಲು ದೇವರು ಭೂಮಿಗೆ ಕಳುಹಿಸಿದ ದೇವಮಾನವ ಯೇಸು ಕ್ರಿಸ್ತ ಎಂಬುದು ಕ್ರೈಸ್ತರ ನಂಬಿಕೆ. ಕ್ರಿಸ್ತನ ಹುಟ್ಟುಹಬ್ಬದ ಸಂತಸವನ್ನು ಎಲ್ಲರೊಂದಿಗೂ ಆಚರಿಸುವ ಕ್ರಿಸ್ಮಸ್ ಸಂದರ್ಭ ಜಗತ್ತಿನೆಲ್ಲೆಡೆ ಕೇಕ್ ಹಂಚುವ ಪದ್ಧತಿಯಿದೆ. ಆದರೆ, ಮಂಗಳೂರಿನಲ್ಲಿ ಕೇಕ್ ಜೊತೆಗೆ ಕುಕೀಸ್, ಅಕ್ಕಿ ರವೆ ಲಡ್ಡು, ವಿವಿಧ ರೀತಿಯ ಚಕ್ಕುಲಿಗಳು, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಸಣ್ಣ ಸಣ್ಣ ಗೋಲಿಯಾಕಾರದ ತಿನಿಸುಗಳ ಕಾಂಬಿನೇಶನ್ ಗೆ 'ಕುಸ್ವಾರ್' ಎನ್ನುತ್ತಾರೆ. ಇವೆಲ್ಲವುಗಳನ್ನು ಸುಂದರವಾಗಿ ಜೋಡಿಸಿ, ಅತಿಥಿಗಳಿಗೆ ಹಾಗೂ ನೆರೆಮನೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ.[ಏಸುವಿನ ಇತಿಹಾಸ ನೆನಪಿಸುವ ಕೊಡಗಿನ ಸಂತ ಅನ್ನಮ್ಮ ಚರ್ಚ್]
ಹಿಂದೆಲ್ಲಾ ಇಂತಹ ತಿಂಡಿಗಳು ಮನೆಯೆಲ್ಲಾ ತಯಾರಾಗುತ್ತಿತ್ತು. ಆದರೆ, ಈಗ ರೆಡಿಮೇಡ್ ತಿಂಡಿಗಳಿಗೇ ಹೆಚ್ಚು ಡಿಮಾಂಡ್. ಹೀಗೆ ಕಾಲಕಾಲಕ್ಕೆ ಜನರ ಇಷ್ಟದ ತಿಂಡಿಗಳನ್ನು ಪೂರೈಸುತ್ತಾ ಬಂದ ಮಂಗಳೂರಿನ ಬೇಕರಿಗಳ ಪೈಕಿ ಅತ್ಯಂತ ಹಳೆಯ ಬೇಕರಿಯೆಂದರೆ ವಾಸ್ ಬೇಕರಿ. 1904ರಲ್ಲಿ ಎಂ. ವಾಸ್ ಎಂದೇ ಪ್ರಸಿದ್ಧರಾದ ಇಮ್ಯಾನುವೆಲ್ ವಾಸ್ ಈ ಬೇಕರಿಯ ಸಂಸ್ಥಾಪಕರು.
ಪ್ರಾರಂಭದಲ್ಲಿ ಬಲ್ಮಠದಲ್ಲಿ ಆರಂಭಗೊಂಡ ಬೇಕರಿ ಕಾಲಕ್ರಮೇಣ ಬೆಂದೂರ್ ವೆಲ್ ನಲ್ಲೂ ತನ್ನ ಶಾಖೆ ತೆರೆಯಿತು. ಬಳಿಕ ಎಂ. ವಾಸ್ ಅವರ ಮಗ ಸೆಬಾಸ್ಟಿಯನ್ ವಾಸ್, ಅವರ ಮಗ ನೋರ್ಮನ್ ಎಸ್. ವಾಸ್ ಬೇಕರಿ ನಡೆಸಿಕೊಂಡು ಬಂದಿದ್ದಾರೆ. ಇಂದಿಗೂ ಮುಂಬಯಿ, ಬೆಂಗಳೂರು ಗಲ್ಫ್ ದೇಶಗಳಿಂದಲೂ ಈ ಬೇಕರಿಯಿಂದ ತಿಂಡಿಗಳು ಪೂರೈಕೆಯಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಆಹಾರ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದೇ ಈ ಬೇಕರಿ ವಿಶೇಷ.[ಕಣ್ಮನಗಳಿಗೆ ಮುದ ನೀಡುವ ಕ್ರಿಸ್ಮಸ್ ಸಿದ್ಧತೆ ಜೋರೋ ಜೋರು]
ಗೋದಳಿ ವಿಶೇಷ:
ಕುಸ್ವಾರ್ ನಷ್ಟೇ ಕ್ರಿಸ್ಮಸ್ ಸಂದರ್ಭದಲ್ಲಿ ಅಲಂಕಾರವಾಗಿಡುವ ಗೋದಳಿ ಹಾಗೂ ಕ್ರಿಸ್ಮಸ್ ಟ್ರೀ ಮಂಗಳೂರಿನಲ್ಲೂ ಫೇಮಸ್. ಮರಿಯಾ ಮೇರಿ ಗೋದಳಿಯಲ್ಲಿ ಯೇಸುವಿನ ಜನ್ಮದ ಸಾಂಕೇತಿಕವಾಗಿ ಕ್ರಿಸ್ಮಸ್ ಸಂದರ್ಭದಲ್ಲಿ ಗೋದಳಿಯಿಟ್ಟು ಅಲಂಕಾರ ಮಾಡಲಾಗುತ್ತಿದೆ ಅನ್ನುವುದು ಪ್ರತೀತಿ.
ಮೊಟ್ಟ ಮೊದಲ ಗೋದಳಿ ನಿರ್ಮಾಣವಾಗಿದ್ದು ಅಸೀಸ್ ನ ಗೆಚಿಯೊ ಎಂಬ ಪುಟ್ಟ ಹಳ್ಳಿಯಲ್ಲಿ. ಸೈಂಟ್ ಫ್ರಾನ್ಸಿಸ್ ಅಸೀಸ್ ಗೆಚಿಯೊ ಎಂಬ ಹಳ್ಳಿಯ ಪಕ್ಕವಿರುವ ಅರಣ್ಯ ಪ್ರದೇಶದಲ್ಲಿರುವ ಗುಹೆಯಲ್ಲಿ ವಿವಿಧ ಹಕ್ಕಿಗಳು, ಕ್ರೂರ, ಸಾಧು ಪ್ರಾಣಿಗಳನ್ನಿಟ್ಟು (ಜೀವಂತ ಪ್ರಾಣಿ, ಪಕ್ಷಿಗಳು) ಗೋದಳಿ ಅಲಂಕಾರ ಮಾಡುತ್ತಿದ್ದರು.
ಬಳಿಕ ಬಾಲಯೇಸುವಿನ ಪ್ರತಿಮೆ ಇಟ್ಟುಕೊಂಡು ಯೇಸುವಿನ ಜೀವನವೃತ್ತಾಂತವನ್ನು ಜನರಿಗೆ ಬೋಧಿಸುವಾಗ ಬಾಲಯೇಸುವಿನ ಪ್ರತಿಮೆ ಗಳಿಗೆಗೊಮ್ಮೆ ಜೀವಂತವಾಗುತ್ತಿತ್ತು ಎಂಬುದು ಕಥೆ. ಈ ಕಥೆ ಬಳಿಕ ಯೇಸು ಮತ್ತೆ ಮತ್ತೆ ಬರಲಿ ಎಂಬ ಆಶಯದೊಂದಿಗೆ ಇಂದು ಜಗತ್ತಿನ ಮೂಲೆಮೂಲೆಗಳಲ್ಲೂ ಗೋದಳಿಯಿಟ್ಟು ಅಲಂಕರಿಸಲಾಗುತ್ತದೆ.[ಕ್ರಿಸ್ಮಸ್, ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು]
ಅದೇ ರೀತಿ ಕ್ರಿಸ್ಮಸ್ ಟ್ರೀಯನ್ನು 13ನೆ ಶತಮಾನದಲ್ಲಿ ಜರ್ಮನಿಯಲ್ಲಿ ಇಡಲಾಗಿತ್ತು. ಮೊತ್ತ ಮೊದಲು ಮರದ ಮೇಲೆಯೇ ಕ್ಯಾಂಡಲ್ ಲೈಟ್ ಇಟ್ಟು ಅಲಂಕರಿಸಿದರೆ, ರಷ್ಯಾದಲ್ಲಿ ಮರದ ಮೇಲೆ ಹೂ ಹಣ್ಣುಗಳನ್ನಿಟ್ಟು ಅಲಂಕರಿಸಲಾಗುತ್ತಿತ್ತು. 19ನೆ ಶತಮಾನದಲ್ಲಿ ಇಂಗ್ಲೆಂಡ್ ರಾಣಿ ವಿಕ್ಟೋರಿಯ ಅವರ ಆಸ್ಥಾನದಲ್ಲಿದ್ದ ರಾಜಕುವರ ಆಲ್ಬೆರ್ಟ್ ಕ್ರಿಸ್ಮಸ್ ಟ್ರೀಯನ್ನಿಡುವ ಮೂಲಕ ಅದಕ್ಕೊಂದು ಖ್ಯಾತಿಯನ್ನು ತಂದುಕೊಟ್ಟ ಎನ್ನುವುದಕ್ಕೆ ದಾಖಲೆಯಿದೆ ಅನ್ನುತ್ತಾರೆ ನಿವೃತ್ತ ಶಿಕ್ಷಕಿ ಜೋನ್.