ಯೋಗಸಿರಿ 'ಯೋಗಶ್ರೀ'ಯ ವನಿತಕ್ಕಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ!
ಪ್ರಶಸ್ತಿಯೊಂದು ಅರ್ಹರಿಗೆ ಸಂದಾಗ ಅದರ ಮೌಲ್ಯ, ಗೌರವ ಹೆಚ್ಚುತ್ತದೆ. ಯೋಗಕ್ಕಾಗಿ, ಸಾಮಾಜಿಕ ಕಾರ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ವನಿತಕ್ಕಾ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪುರಸ್ಕಾರ ಸಂದಿರುವುದು ನಿಜಕ್ಕೂ ಸಂತಸದ ವಿಚಾರ.
ಬೆಂಗಳೂರಿನ ಗಿರಿನಗರದ 'ಯೋಗಶ್ರೀ' ಹಾಗೂ ಪಂಚವಟಿ ಯೋಗ ಕೇಂದ್ರದ ನಿರ್ದೇಶಕಿ, ಮಾರ್ಗದರ್ಶಕರಾಗಿರುವ ಸೋದರಿ ವನಿತಾ ದಿನನಿತ್ಯ ಸರಾಸರಿ ೮೦೦ ಮಂದಿ ಎಲ್ಲ ವಯಸ್ಸಿನ ಯೋಗಾಭ್ಯಾಸಿಗಳಿಗೆ ಜಾತಿ ಮತ ಪಂಥ ಭೇದವಿಲ್ಲದೆ ಯೋಗಾಭ್ಯಾಸ ನೀಡುತ್ತಿದ್ದಾರೆ. ಚರಿತ್ರೆ ಹಾಗೂ ಸಮಾಜ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವನಿತಕ್ಕಾ ಶಿಶು ಶಿಕ್ಷಣ ತರಬೇತಿ ಹಾಗೂ ಮಕ್ಕಳ ಮನಶಾಸ್ತ್ರ ಅಧ್ಯಯನ ದಲ್ಲಿ ವಿಶೇಷ ಅನುಭವ ಹೊಂದಿದ್ದಾರೆ.
ಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನ
ಯೋಗಗುರು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ನುರಿತ ಯೋಗಪಟುವಾಗಿ ರೂಪುಗೊಂಡ ವನಿತಕ್ಕಾ ನಂತರ ಅಜಿತಕುಮಾರ್, ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ. ಕೆ. ಎಸ್. ಐಯ್ಯಂಗಾರ್ ಅವರಲ್ಲಿ ಯೋಗ ತರಬೇತಿ ಪಡೆದರು. ಯೋಗದ ಜತೆ ಜತೆಗೇ ಪ್ರಾಣ ಚಿಕಿತ್ಸೆ, ರೇಖೀ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಮನೆಮದ್ದು ಮುಂತಾದ ವಿಷಯಗಳಲ್ಲಿ ಪರಿಣಿತಿ ಗಳಿಸಿದರು.
1985 ರಲ್ಲಿ ಮಾ. ಅಜಿತ್ ರಿಂದ ಪ್ರೇರಣೆ ಪಡೆದು ಹಿಂದೂ ಸೇವಾ ಪ್ರತಿಷ್ಠಾನ ದಲ್ಲಿ ತೊಡಗಿಸಿಕೊಂಡ ವನಿತಕ್ಕಾ ಸುಮಾರು 14 ವರ್ಷಗಳ ಕಾಲ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಯೋಗ ಹಾಗೂ ಮನೆಮದ್ದು ಶಿಬಿರಗಳನ್ನು ನಡೆಸಿದ್ದಾರೆ. ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇವರಿಂದ ಯೋಗ ಹಾಗೂ ಮನೆಮದ್ದಿನ ಶಿಕ್ಷಣ ಪಡೆದಿದ್ದಾರೆ. ಸ್ವಂತ ಕೌಟುಂಬಿಕ ಜೀವನದ ಬಗ್ಗೆ ಯೋಚಿಸದೆ ಚಿಕ್ಕ ವಯಸ್ಸಿನಿಂದಲೂ ಕಳೆದ ೪೦ ವರ್ಷಗಳಿಂದ ಸೋದರಿ ವನಿತಾ ಸಾಮಾಜಿಕ ಹಾಗೂ ಯೋಗ ಕ್ಷೇತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇವರ ಯೋಗ ಹಾಗೂ ಮನೆ ಮದ್ದು ಶಿಕ್ಷಣ ದಿಂದ ಉಪಯೋಗ ಪಡೆದವರಲ್ಲಿ ಎಲ್ಲಾ ವರ್ಗದವರೂ, ಸ್ತ್ರೀ ಪುರುಷರೂ ಮಕ್ಕಳು, ವೃದ್ಧರೂ, ಮಾನಸಿಕ ಹಾಗೂ ದೈಹಿಕ ತೊಂದರೆ ಇರುವವರು, ಖೈದಿಗಳೂ ಇರುವುದು ವಿಶೇಷ.
"ಯೋಗ ಎಂದರೆ ಜೀವನ ಮೌಲ್ಯ!" ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವನಿತಕ್ಕ
ಇವರಿಂದ ತರಬೇತಿ ಪಡೆದ ಸಾವಿರಾರು ಮಂದಿ ಇಂದು ರಾಜ್ಯದ ಅನೇಕ ಊರುಗಳಲ್ಲಿ ಯೋಗ ಹಾಗೂ ಮನೆಮದ್ದು ಪರಿಣಿತರಾಗಿ ಶಿಕ್ಷಣ ನೀಡುತ್ತಾ ಲಕ್ಷಾಂತರ ಜನರ ಬಾಳಿಗೆ ಬೆಳಕಾಗುತ್ತಿದ್ದಾರೆ. ಸಾವಿರಾರು ಮಂದಿ ಯೋಗದ ಮೂಲಕ ಹೊಸ ಬದುಕು ಕಂಡುಕೊಂಡಿದ್ದಾರೆ. ತಮ್ಮಿಡೀ ಬದುಕನ್ನು ಸಮಾಜ ಹಾಗೂ ಯೋಗದ ಅಭಿವೃದ್ಧಿಗೆ ಮೀಸಲಾಗಿರಿಸಿರುವ ಸೋದರಿ ವನಿತಾ ತಮ್ಮೆಲ್ಲಾ ಶಿಷ್ಯ , ಅಭಿಮಾನಿ ಆಪ್ತರ ಪಾಲಿಗೆ 'ವನಿತಕ್ಕಾ' ಆಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಬೆಂಗಳೂರಿನ ಗಿರಿನಗರದ 'ಯೋಗಶ್ರೀ' ಹಾಗೂ ಪಂಚವಟಿ ಯೋಗ ಕೇಂದ್ರಗಳು ವನಿತಕ್ಕ ಅವರ ನಿಸ್ವಾರ್ಥ ಸೇವೆಯ ದೀಪಗಳಾಗಿ ಯೋಗ ಕ್ಷೇತ್ರದ ದೀವಿಗೆಗಳಾಗಿ ಸಮಾಜಕ್ಕೆ ಹೊಸ ದಾರಿ ತೋರುತ್ತಿವೆ. ತಮ್ಮ ಬದುಕನ್ನು ಯೋಗಕ್ಕೆ ಮುಡುಪಾಗಿಟ್ಟ, ಯೋಗದ ಮೂಲಕ ಇತರರ ಬದುಕು ಬದಲಿಸಿದ ವನಿತಕ್ಕಾ ಅವರಿಗೆ ಈ ಗೌರವ ಸಲ್ಲುತ್ತಿರುವುದು ನಿಜಕ್ಕೂ ಹೆಮ್ಮೆಯ, ಖುಷಿಯ ವಿಚಾರ. 2014 ರಲ್ಲಿ ನಮ್ಮ 'ಸಮಾಜ ಸೇವಕರ ಸಮಿತಿ'ಯ ಪರವಾಗಿ ಆಗಸ್ಟ್ 1 ರ ಸಮಾಜ ಸೇವಕರ ದಿನದಂದು ವನಿತಕ್ಕಾ ಅವರನ್ನು ಗೌರವಿಸುವ ಭಾಗ್ಯ ನಮ್ಮದಾಗಿತ್ತು. ವೈಯಕ್ತಿಕವಾಗಿ ಅವರ ಯೋಗ ತರಗತಿಯ ವಿದ್ಯಾರ್ಥಿಯಾಗಿರುವ ಹಾಗೂ ಹಲವು ವರ್ಷಗಳಿಂದ ಅವರ ಸಾಮಾಜಿಕ ಕಾರ್ಯವನ್ನು ಹತ್ತಿರದಿಂದ ಕಂಡಿರುವ ನನಗೆ ವನಿತಕ್ಕಾ ಅವರಿಗೆ ಈ ಗೌರವ ಸಲ್ಲುತ್ತಿರುವುದು ಬಹಳ ಸಂತಸ ತಂದಿದೆ. ಅಭಿನಂದನೆಗಳು ವನಿತಕ್ಕಾ.
ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ
ಹಾಗೆಯೇ ಯೋಗವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಲು ಕಳೆದ ಹಲವು ದಶಕಗಳಿಂದ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಸಂಸ್ಥೆಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಬಹಳ ಖುಷಿಯ ವಿಚಾರ. SPYSS ಅವರಿಗೂ ಅಭಿನಂದನೆಗಳು.