2021ರ ಫೋಟೋ ಹಿಂದಿನ ಕಥೆ: "ಇಲ್ಲಿ ಮದುವೆ ಗಂಡು ಯಾರಪ್ಪಾ"?
ನವದೆಹಲಿ, ಡಿಸೆಂಬರ್ 17: ಒಂದು ಫೋಟೋ ಹಿಂದೆ ಸಾವಿರ ಕಥೆಗಳಿರುತ್ತವೆ. ಒಂದೇ ಒಂದು ಭಾವಚಿತ್ರ ಆ ಚಿತ್ರದ ಹಿಂದಿನ ಭಾವವನ್ನು ಹೇಳುತ್ತದೆ. ಒಂದೇ ಒಂದು ಚಿತ್ರ ಹಳೆಯ ನೆನಪುಗಳನ್ನು ಕೆದಕಿ ತೆಗೆಯುತ್ತದೆ. ಅದೇ ಒಂದೇ ಒಂದು ಚಿತ್ರ ಇತಿಹಾಸದ ಘಟನೆಗಳನ್ನು ನೆನಪಿಸುತ್ತದೆ. 2021ರ ವರ್ಷ ಮುಕ್ತಾಯವಾಗುತ್ತಿರುವ ಈ ದಿನದಲ್ಲಿ ಫೋಟೋಗಳು ಹೇಳುವ ಕಥೆಗಳನ್ನು ಒಮ್ಮೆ ನೋಡೋಣ. ಅದರ ಹಿಂದಿನ ಕಥೆಯನ್ನು ತಿಳಿಯೋಣ.
2020ರ ಆ ವರ್ಷಕ್ಕಿಂತ 2021ರ ಈ ವರ್ಷ ಅಷ್ಟೇನೂ ಭಿನ್ನವಾಗಿರಲಿಲ್ಲ. ಕಳೆದ ವರ್ಷ ಜನರನ್ನು ಕಾಡಿದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು 2021ರಲ್ಲೂ ಜನರ ಬೆನ್ನು ಬಿಡಲಿಲ್ಲ. ಲಾಕ್ ಡೌನ್, ಸೀಲ್ ಡೌನ್ ಬದುಕಿನ ನಡುವೆ ಕೊರೊನಾವೈರಸ್ ಅಲ್ಪ ವಿರಾಮವನ್ನು ಕೊಟ್ಟಿತ್ತು. ಇದರ ಮಧ್ಯೆ ನಡೆದ ಕೆಲವು ಬೆಳವಣಿಗೆಗಳು ಹಾಗೂ ಅದರ ಫೋಟೋಗಳು ಸಖತ್ ಸದ್ದು ಮಾಡಿದವು.
ಇಲ್ಲಿವೆ 2021 ರಲ್ಲಿ ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ ಟಾಪ್ 8 ವೈರಲ್ ವಿಡಿಯೊಗಳು
2021ರಲ್ಲಿ ಸಖತ್ ಸುದ್ದಿ ಮಾಡಿದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಫೋಟೋಗಳು ಯಾವುವು. ಯಾವ ಫೋಟೋ ಯಾವ ಕಾರಣಕ್ಕೆ ಸುದ್ದಿ ಆಯಿತು. ಯಾವ ಫೋಟೋ ಯಾವ ಉದ್ದೇಶಕ್ಕೆ ಸದ್ದು ಮಾಡಿತು ಎಂಬುದನ್ನು ತಿಳಿಯಲು ಮುಂದೆ ನೋಡುತ್ತಾ, ಓದುತ್ತಾ ಹೋಗಿ.
ಮದುವೆ ಗಂಡು ಯಾರಪ್ಪಾ?
ಲೋಕಸಭೆ ಸಂಸದ ಶಶಿ ತರೂರ್ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಆಪ್ತರ ವಿವಾಹಕ್ಕೆ ತೆರಳಿದ್ದರು. ಈ ವೇಳೆ ವಧು-ವರರ ಪಕ್ಕದಲ್ಲಿ ನಿಂತು ಫೋಟೋಗೆ ಫೋಸ್ ಕೊಟ್ಟ ಅವರು, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ಕಂಡ ನೆಟ್ಟಿಗರು ಅಚ್ಚರಿ ಪ್ರಶ್ನೆ ಕೇಳಿದ್ದರು. "ಇಲ್ಲಿ ಮಧುಮಗ ಯಾರು ಸಹೋದರ" ಎಂದು ಕಾಮೆಂಟ್ ಹಾಕುತ್ತಿದ್ದರು.
ಅವರು ಮಹಾಬಲೇಶ್ವರದಲ್ಲಿ ಅಭಿಷೇಕ್ ಕುಲಕರ್ಣಿ ಅವರ ವಿವಾಹಕ್ಕೆ ಭೇಟಿ ನೀಡಿದ್ದರು. ದಂಪತಿಗಳ ಪಕ್ಕದಲ್ಲಿ ನಿಂತಿರುವಾಗ ಶಶಿ ತರೂರ್ ಪಗ್ಡಿ ಮತ್ತು ಹೂವಿನ ಹಾರವನ್ನು ಧರಿಸಿದ್ದರು. ಈ ಸಂದರ್ಭದಲ್ಲಿ ವರನಿಗಿಂತ ಶಶಿ ತರೂರ್ ಅದ್ಧೂರಿಯಾಗಿ ಕಾಣುತ್ತಿದ್ದರು.
ಕ್ಯೂಟ್ ಜೋಡಿ ಚಿತ್ರಕ್ಕೆ ನೆಟ್ಟಿಗರ ಮೆಚ್ಚುಗೆ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ನಾಲ್ಕನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ವೇಳೆ ತಮ್ಮ ಮುದ್ದು ಮಗಳ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಕ್ಯೂಟ್ ಜೋಡಿಯ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.
ನೆಟ್ಟಿಗರಿಗೆ ಆಹಾರವಾದ ಯೋಗಿ-ಮೋದಿ ಚಿತ್ರ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಚಿತ್ರದ ಜೊತೆಗೆ ನಾಲ್ಕು ಸಾಲುಗಳ ಪಂದ್ಯವನ್ನು ಬರೆದುಕೊಂಡಿದ್ದರು. "ನವ ಭಾರತ ನಿರ್ಮಾಣದಲ್ಲಿ ನಾವು ಪ್ರತಿ ತ್ಯಾಗವನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ," ಎಂದು ಬರೆದಿದ್ದರು. ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇಬ್ಬರು ನಾಯಕರ ಭೇಟಿ ಹಾಗೂ ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಡಿಸೆಂಬರ್ 13ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು. ಈ ಯೋಜನೆ ಉದ್ಘಾಟಿಸುವುದಕ್ಕೂ ಮೊದಲು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಈ ವೇಳೆ ಗಂಗೆಯಲ್ಲಿ ನಿಂತುಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಸಖತ್ ಸುದ್ದಿಯಾಗಿತ್ತು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಚಾರಕ್ಕಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದರು. ಕೆಲವರು ಪ್ರಧಾನಿ ಮೋದಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಈ ಫೋಟೋ ಮಾತ್ರ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.