ವರ್ಷಾಂತ್ಯದ ವಿಶೇಷ : ಕರ್ನಾಟಕದ ಸರ್ಕಾರದ ಯೋಜನೆಗಳು
Recommended Video
ಬೆಂಗಳೂರು, ಡಿಸೆಂಬರ್ 18 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆರು ತಿಂಗಳ ಅವಧಿ ಪೂರ್ಣಗೊಳಿಸಿದೆ. ಹಲವು ಜನಪ್ರಿಯ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಜನಸ್ನೇಹಿ ಎನಿಸಿಕೊಳ್ಳುತ್ತಿದೆ.
2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಆಗ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದ್ದರಿಂದ, ಮೈತ್ರಿ ಸರ್ಕಾರದಲ್ಲಿ ಅವರು ಮುಖ್ಯಮಂತ್ರಿಗಳಾದ ಬಳಿಕ ಜನರ ನಿರೀಕ್ಷೆ ಹೆಚ್ಚಿತ್ತು.
2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಕೆಲವು ಭರವಸೆಗಳಿಂದಾಗಿ ರೈತರು, ವೃದ್ಧರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಸರ್ಕಾರದ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸರ್ಕಾರ ಈ ಭರವಸೆಗಳನ್ನು ಉಳಿಸಿಕೊಳ್ಳಲು ಹಲವಾರು ಯೋಜನೆ ಜಾರಿಗೆ ತಂದಿದೆ.
ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು
ರೈತರ ಸಾಲಮನ್ನಾ, ಬಡವರ ಬಂಧು, ಇಸ್ರೇಲ್ ಮಾದರಿ ಕೃಷಿ, ಜನತಾ ದರ್ಶನ, ಐರಾವತ ಸೇರಿದಂತೆ ಹಲವು ಯೋಜನೆಗಳ ಮೂಲಕ ಸರ್ಕಾರ ರಾಜ್ಯದ ಎಲ್ಲಾ ವರ್ಗವನ್ನು ತಲುಪಲು ಪ್ರಯತ್ನ ನಡೆಸಿದೆ. ಸಮ್ಮಿಶ್ರ ಸರ್ಕಾರದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.....
2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು
ಸಾಲಮನ್ನಾ ಯೋಜನೆ
ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಮಹತ್ವದ ಯೋಜನೆ ರೈತರ ಸಾಲಮನ್ನಾ. ಕರ್ನಾಟಕ ಸರ್ಕಾರಕ್ಕೆ ಹೊರೆ ಆದರೂ ರೈತರ ಸಾಲಮನ್ನಾ ಯೋಜನೆಗೆ ಚಾಲನೆ ನೀಡಲಾಗಿದೆ. 37,159 ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡಿ, ರೈತರಿಗೆ ಋಣಮುಕ್ತ ಪತ್ರವನ್ನು ನೀಡಲಾಗುತ್ತಿದೆ. ರಾಜ್ಯದ 44.89 ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪ್ರತಿಪಕ್ಷಗಳಿಂದ ಹೆಚ್ಚು ಟೀಕೆಗೆ ಒಳಗಾದ ಯೋಜನೆಯೂ ಇದಾಗಿದೆ. ಋಣಮುಕ್ತ ಪತ್ರ ವಿತರಣೆ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.
ಜನತಾ ದರ್ಶನ
ಜನತಾ ದರ್ಶನ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ ನಡೆಸುತ್ತಿದ್ದರು. ಈಗಲೂ ಅದನ್ನು ಮುಂದುವರೆಸುತ್ತಿದ್ದಾರೆ. ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಹ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 5ಗಂಟೆಗೂ ಹೆಚ್ಚು ಕಾಲ ಜನತಾ ದರ್ಶನವನ್ನು ಕುಮಾರಸ್ವಾಮಿ ನಡೆಸಿದ್ದಾರೆ. ಜನತಾ ದರ್ಶನದ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
ಕಾಯುವುದನ್ನು ತಪ್ಪಿಸಿದ 'ಕಾವೇರಿ'
ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಕರ್ನಾಟಕ ಸರ್ಕಾರ ಅಪ್ಡೇಟ್ ಆಗುತ್ತಿದೆ. ಕಂದಾಯ ಇಲಾಖೆಯ ದಾಖಲೆಗಳನ್ನು ಪಡೆಯಲು ಕಾಯುವುದನ್ನು ತಪ್ಪಿಸಲು 'ಕಾವೇರಿ' ಆನ್ಲೈನ್ ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ನೋಂದಣಿ ಕಚೇರಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವುದು ತಪ್ಪಿದೆ. ಈ ಯೋಜನೆ ಮೂಲಕ ಪ್ರಮುಖವಾಗಿ ಸ್ಥಿರಾಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರ ಹಂಚಿಕೆ, ಆನ್ಲೈನ್ ಇ-ಸ್ಟಾಂಪ್ ಮುದ್ರಾಂಕ ಕಾಗದ ಸೇವೆಗಳನ್ನು ಪಡೆಯಬಹುದಾಗಿದೆ.
ಮಾತೃಶ್ರೀ ಯೋಜನೆ
ಬಿಪಿಎಲ್ ಕುಟುಂಬದ ಗರ್ಭಿಣಿ ಮತ್ತು ಬಾಣಂತಿಯರಿಗೆ 6 ಸಾವಿರ ರೂ. ಮಾಸಿಕ ಭತ್ಯೆ ನೀಡುವ ಮೂಲಕ ಬಡತನದಲ್ಲಿರುವ ಕುಟುಂಬಕ್ಕೆ ನೆರವಾಗಲು 'ಮುಖ್ಯಮಂತ್ರಿ ಮಾತೃಶ್ರೀ ಯೋಜನೆ' ಜಾರಿಗೆ ತರಲಾಗಿದೆ. ಹೆರಿಗೆ ಪೂರ್ವದ ಮೂರು ತಿಂಗಳು, ಹೆರಿಗೆ ನಂತರದ ಮೂರು ತಿಂಗಳ ಕಾಲ ಪ್ರತಿ ತಿಂಗಳು ಭತ್ಯೆಯನ್ನು ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಭತ್ಯೆ ಮೊತ್ತವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಪ್ರಸ್ತಾಪವೂ ಸರ್ಕಾರದ ಮುಂದಿದೆ.
ಐರಾವತ ಯೋಜನೆ
ದಲಿತ, ಹಿಂದುಳಿದ ಸಮುದಾಯದ ಜನರು ಶಿಕ್ಷಣ, ಉದ್ಯೋಗ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಬೇಕು ಎಂಬುದು ಸರ್ಕಾರದ ಕನಸು. ಎಸ್ಸಿ/ಎಸ್ಟಿ ಪಂಗಡದ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲು 'ಐರಾವತ ಯೋಜನೆ' ಜಾರಿಗೆ ತರಲಾಗಿದೆ. ಈ ಯೋಜನೆ ಅನ್ವಯ ಯುವಕರಿಗೆ ಕಾರು ಖರೀದಿ ಮಾಡಲು ಸಹಾಯಧನ ನೀಡಲಾಗುತ್ತದೆ. ಕಾರು ಖರೀದಿ ಮಾಡಿ ಅವರು ಟ್ಯಾಕ್ಸಿ ಸೇವೆಯನ್ನು ಆರಂಭಿಸಬಹುದಾಗಿದೆ. ಇದಕ್ಕಾಗಿ ಪ್ರತಿಷ್ಠಿತ ಊಬರ್ ಸಂಸ್ಥೆಯ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಬಡವರ ಬಂಧು ಯೋಜನೆ
ಮೀಟರ್ ಬಡ್ಡಿ ದಂಧೆ ನಡೆಸುವವರ ಕೈಗೆ ಸಿಕ್ಕಿ ಸಣ್ಣ ವ್ಯಾಪಾರಿಗಳು ಸಂಕಷ್ಟ ಅನುಭವಿಸುವುದನ್ನು ತಪ್ಪಿಸಲು 'ಬಡವರ ಬಂಧು ಯೋಜನೆ' ಜಾರಿಗೆ ತರಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆ ಅಡಿ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಈ ಯೋಜನೆಯಡಿ 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ 5 ಸಾವಿರ. ತುಮಕೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರ. ಇನ್ನುಳಿದ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ 1 ಸಾವಿರ ಸಾಲ ನೀಡಲಾಗುತ್ತದೆ.