2021ರ ನವೆಂಬರ್: ಪ್ರಧಾನಿ ಮೋದಿ ಮನೆಯಲ್ಲಿ ದೇವೇಗೌಡರಿಗೆ ಅದೆಂಥಾ ಆಹ್ವಾನ!?
ನವದೆಹಲಿ, ಡಿಸೆಂಬರ್ 30: ಭಾರತದಲ್ಲಿ ವರ್ಷಾಂತ್ಯದ ವೇಳೆಗೆ ಸುದ್ದಿಯಾಗಿ ಸದ್ದು ಮಾಡಿದ ವಿಷಯಗಳು ಸಾಕಷ್ಟಿವೆ. ನವೆಂಬರ್ ತಿಂಗಳಿನಲ್ಲಿ ಶುರುವಾದ ಕೇಂದ್ರ ಸಂಸತ್ ಚಳಿಗಾಲ ಅಧಿವೇಶವು ಸಾಕಷ್ಟು ಬೆಳವಣಿಗೆಗಳಿಗೆ ಸಾಕ್ಷಿ ಆಯಿತು.
ನವದೆಹಲಿಯಲ್ಲಿ ನವೆಂಬರ್ 29ರಂದು ಆರಂಭವಾದ ಚಳಿಗಾಲ ಅಧಿವೇಶನ ಡಿಸೆಂಬರ್ 23ರವರೆಗೂ ನಡೆಯಿತು. ಕಳೆದ ಬಾರಿ ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿ ಮೇಲ್ಮನೆಗೆ ಅಗೌರವ ತೋರಿದ 12 ಸದಸ್ಯರನ್ನು ಕಲಾಪದಿಂದ ಅಮಾನತುಗೊಳಿಸಲಾಯಿತು. ಸದನ ನಡೆಸಿದ ಅಷ್ಟೂ ದಿನ ಇದೊಂದು ವಿಷಯವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ಮಾಡುವುದು ಪ್ರತಿನಿತ್ಯದ ಸುದ್ದಿ ಆಯಿತು. ಇದರ ಮಧ್ಯೆಯೂ ಸಾಕಷ್ಟು ಸುದ್ದಿಯಾದ ವಿಷಯವೇ ವಿವಾದಿತ ಕೃಷಿ ಕಾಯ್ದೆಗಳ ರದ್ದತಿ.
2021 ಅಕ್ಟೋಬರ್: ಅಭಿಮಾನಿಗಳನ್ನು ಅಳಿಸಿದ 'ಅಪ್ಪು' ಅಗಲಿಕೆ ಕಹಿ ನೆನಪು
ದೇಶದ ಅನ್ನದಾತರ ನಿರಂತರ ಹೋರಾಟದ ಎದುರು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಯೂರಿತು. ರೈತರ ಕಣ್ಣು ಕೆಂಪಾಗಿಸಿದ್ದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಹೊಸ ಕಾಯ್ದೆಯು ಸಂಸತ್ ಉಭಯ ಸದನದಲ್ಲಿ ಅಂಗೀಕಾರಗೊಂಡಿತು. ಚಳಿ, ಗಾಳಿ, ಬಿಸಿಲು, ಮಳೆಗೆ ಮೈಯೊಡ್ಡಿ ಪ್ರತಿಭಟನೆ ನಡೆಸಿದ ಲಕ್ಷಾಂತರ ರೈತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಈ ಎಲ್ಲ ಘಟನೆಗಳ ಕುರಿತು ತಿಳಿಸುವ ಚಿತ್ರಗಳ ಜೊತೆಗೆ ಅದರ ಹಿನ್ನಲೆಯನ್ನು ಅರಿತುಕೊಳ್ಳೋಣ.

ಸಂಸತ್ ಆವರಣದಲ್ಲಿ ಕಟ್ಟಿಗೆ ಕುರ್ಚಿ ಹಿಡಿದು ಹೊರಟ ಕಾರ್ಮಿಕ
2022ರ ವರ್ಷಾಂತ್ಯದ ವೇಳೆಯಲ್ಲಿ ಸಂಸತ್ ಚಳಿಗಾಲ ಅಧಿವೇಶನ ನಡೆಯಿತು. ನವೆಂಬರ್ 29ರಿಂದ ಆರಂಭವಾದ ಅಧಿವೇಶನ ಡಿಸೆಂಬರ್ 23ರವರೆಗೂ ನಡೆಯಿತು. ಅಂದು ಆಡಳಿತರೂಢ ಬಿಜೆಪಿ ತನ್ನ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸದನಕ್ಕೆ ಹಾಜರಿರಾಗಬೇಕು ಎಂದು ವಿಪ್ ಜಾರಿ ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ ಕೂಡ ತನ್ನ ಸದಸ್ಯರ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ ಮಾಡಿತ್ತು. ಇದರ ನಡುವೆ ಕಲಾಪ ಆರಂಭಕ್ಕೂ ಮೊದಲು ಸಂಸತ್ ಆವರಣದಲ್ಲಿ ಕಾರ್ಮಿಕರೊಬ್ಬರು ಕಟ್ಟಿಗೆಯ ಕುರ್ಚಿಯನ್ನು ಹಿಡಿದು ಸಾಗುತ್ತಿರುವ ಫೋಟೋ ಸಖತ್ ವೈರಲ್ ಆಗಿತ್ತು. ಈ ಚಿತ್ರದ ಹಿಂದೆ ಸಂಸತ್ ಕಲಾಪ ಮತ್ತು ಬಿಸಿ ಬಿಸಿ ಚರ್ಚೆಯ ಸಂದೇಶವನ್ನು ಸಾರಿ ಹೇಳುವಂತಿತ್ತು.

ಕೆಳಮನೆ ಕಲಾಪದಲ್ಲಿ ಕಿರುಚಾಟ, ಕೂಗಾಟ
ನವೆಂಬರ್ 29ರಂದು ಆರಂಭಿಸಲಾದ ಸಂಸತ್ ಚಳಿಗಾಲ ಅಧಿವೇಶನದ ಲೋಕಸಭೆ ಕಲಾಪದಲ್ಲಿ ಸದಸ್ಯರ ಪ್ರತಿಭಟನೆ ಕೂಗು ಮೊಳಗಿತು. ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗುತ್ತಿದ್ದರೆ, ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಸಭಾಪತಿ ಓಂ ಬಿರ್ಲಾ ಹರಸಾಹಸ ಪಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಈ ಚಿತ್ರವು ಸಂಸತ್ ಕಲಾಪದಲ್ಲಿ ಪ್ರತಿಪಕ್ಷಗಳ ಹೋರಾಟದ ಪರಿಯನ್ನು ತೋರಿಸುವಂತಿತ್ತು.

ಮೋದಿ-ದೇವೇಗೌಡರ ಆತ್ಮೀಯತೆ ಫೋಟೋ ಹಿಂದಿನ ಕಥೆ
ಭಾರತದ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ಹಾಡಿ ಹೊಗಳಿದ್ದಾರೆ. ದೇವೇಗೌಡರ ವಿಚಾರದಲ್ಲಿ ಪ್ರತಿಬಾರಿ ಗೌರವ ಸೂಚಿಸುವ ಮೋದಿಯವರ ನಿವಾಸಕ್ಕೆ ನವೆಂಬರ್ 30ರಂದು ದೇವೇಗೌಡರು ಭೇಟಿ ನೀಡಿದ್ದರು. ಈ ವೇಳೆ ದೇವೇಗೌಡರ ಕೈ ಹಿಡಿದುಕೊಂಡು ಆಹ್ವಾನವಿತ್ತ ಪ್ರಧಾನಿ ಮೋದಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸುತ್ತಿರುವ ಫೋಟೋ ಇಬ್ಬರ ನಡುವಿನ ಆತ್ಮೀಯತೆ ಸಂಕೇತವಾಗಿತ್ತು. ರಾಜಕೀಯದ ಹೊರತಾಗಿ ದೇವೇಗೌಡರ ಬಗ್ಗೆ ಪ್ರಧಾನಿ ಮೋದಿ ವಿಶೇಷ ಗೌರವ ಹೊಂದಿದ್ದಾರೆ. ಅದು ಹಲವು ಸನ್ನಿವೇಶಗಳಲ್ಲಿ ಸಾಬೀತು ಆಗಿದೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಉಡುಪಿಯಲ್ಲಿ ನಡೆದ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮೋದಿಯವರು ಗೌಡರನ್ನು ಶ್ಲಾಘಿಸಿದ್ದರು. "ದೇವೇಗೌಡರು ಪ್ರತೀಬಾರಿ ನನ್ನನ್ನು ಭೇಟಿ ಮಾಡಲು ಬರುವುದಾದರೆ, ಯಾವಾಗಲು ಅವರಿಗೆ ನನ್ನ ಮನೆ ಬಾಗಿಲು ತೆರೆದಿರುತ್ತದೆ. ಅವರ ಕಾರಿನ ಬಳಿಗೆ ಹೋಗಿ ಕರೆದುಕೊಂಡು ಬಂದು, ಹಾಗೇಯೇ ಬೀಳ್ಕೊಡುತ್ತೇನೆ. ಇದು ಮಾಜಿ ಪ್ರಧಾನಿಯೊಬ್ಬರಿಗೆ ನಾನು ಕೊಡುತ್ತಿರುವ ಗೌರವ, ಇದೆಲ್ಲಾ ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರಿಗೆ ಅರ್ಥವಾಗುವುದಿಲ್ಲ," ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿಕೆ ನೀಡಿದ್ದರು.
ದೆಹಲಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ
ನವದೆಹಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ 12 ರಾಜ್ಯಸಭೆ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ನಾಯಕರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ರಾಜ್ಯಸಭೆ ವಿರೋಧ ಪಕ್ಷದ 12 ಸಂಸದರ ಅಮಾನತು ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಮೇಲ್ಮನೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸದನದಲ್ಲಿ ದೌರ್ಜನ್ಯ ಎಸಗಿದ ಸದಸ್ಯರ ಮೇಲೆ ಕನಿಕರ ತೋರಲ್ಲ. ಹೀಗಾಗಿ ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯಲು ಪ್ರತಿಪಕ್ಷಗಳು ಮಾಡಿರುವ ಮನವಿಯು ಪರಿಗಣಿಸಲು ಯೋಗ್ಯವಾಗಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ನಾಯ್ಡು ಹೇಳಿದರು.

ವಿವಾದಿತ ಕೃಷಿ ಕಾಯ್ದೆ ರದ್ದುಗೊಳಿಸಿದ ಹಿನ್ನೆಲೆ ಹರ್ಷೋದ್ಘಾರ
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಯನ್ನು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು. ಹೊಸ ಮಸೂದೆ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಇದರ ಹೊರತಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ತದನಂತರ ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಮಸೂದೆ ಅಂಗೀಕರಿಸಲಾಯಿತು. ಇದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಘೋಷಿಸಿದ್ದರು.
ಕೇಂದ್ರ ಸರ್ಕಾರದ ಘೋಷಣೆ ಬೆನ್ನಲ್ಲೇ ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಫುಲ್ ಖುಷ್ ಆದರು. ರೈತರ ಪರ ಘೋಷಣೆಗಳು ಮೊಳಗಿದವು. ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ರೈತರು ತಮ್ಮ ಗೆಲುವನ್ನು ಸಂಭ್ರಮಿಸಿದರು.