2021ರ ಜೂನ್ ವಿಶೇಷ: ಭಾರತದಲ್ಲಿ "Unlock" ಬದುಕಿಗೆ ಚಿತ್ರಸಾಕ್ಷ್ಯ
ನವದೆಹಲಿ, ಡಿಸೆಂಬರ್ 24: ಜೂನ್ ತಿಂಗಳು ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಿಸುವುದಕ್ಕೆ ಸಾಕ್ಷಿ ಆಯಿತು. ಕೊವಿಡ್-19 ಲಾಕ್ಡೌನ್ ಜಾರಿಗೊಳಿಸಿರುವುದರಿಂದ ಬಹುತೇಕ ಮಧ್ಯಮ ಮತ್ತು ಬಡವರ್ಗದ ಜನರು ಹೊತ್ತಿನ ಊಟಕ್ಕೂ ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿತ್ತು.
ಜೂನ್ ತಿಂಗಳಿನಲ್ಲಿ ಲಾಕ್ಡೌನ್ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಘ ಸಂಸ್ಥೆಯಗಳಿಂದ ಆರ್ಥಿಕ ನೆರವು ಹಾಗೂ ಅಗತ್ಯವಾದ ದಿನಸಿ ಕಿಟ್ಗಳನ್ನು ವಿತರಿಸಲಾಗುತ್ತಿತ್ತು.
2021ರ ಮೇ ವಿಶೇಷ: ಭಾರತದಲ್ಲಿ ಪಿಪಿಇ ಕಿಟ್ಗಳದ್ದೇ ಕಾರುಬಾರು!
ದೇಶದಲ್ಲಿ ಆಹಾರ ಸಾಮಗ್ರಿ ಕಿಟ್ಗಳನ್ನು ಸಂಗ್ರಹಿಸಲು ಕಾರ್ಮಿಕರು ಸಾಲುಗಟ್ಟಿ ನಿಲ್ಲುವುದು, ವಸತಿ ವೇತನ ಹೆಚ್ಚಿಸುವಂತೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ, ನೆತ್ತಿ ಸುಡುವ ಬಿಸಿಲಿನಲ್ಲೂ ಸೈಕಲ್ ಏರಿ ಹೊರಟ ಬಲೂನ್ ವ್ಯಾಪಾರಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವೈಖರಿ ಹಾಗೂ ವೈದ್ಯರನ್ನು ದೇವರು ಎಂದು ಬಿಂಬಿಸುವ ಮರಳಿನ ಚಿತ್ರಗಳು ಜೂನ್ ತಿಂಗಳಿನ ಪ್ರಮುಖ ಸುದ್ದಿ ಆಕರ್ಷಣೆಗಳಾಗಿದ್ದವು. ಈ ಜೂನ್ ತಿಂಗಳಿನಲ್ಲಿ ವೈರಲ್ ಆಗಿರುವ ಪ್ರಮುಖ ಫೋಟೋಗಳ ಹಿಂದಿನ ಕಥೆಯನ್ನು ಮುಂದೆ ಓದಿ.
ಕೋಲ್ಕತ್ತಾದಲ್ಲಿ ಪರಿಹಾರ ಸಾಮಗ್ರಿಗಾಗಿ ಸಾಲುಗಟ್ಟಿ ನಿಂತ ಕಾರ್ಮಿಕರು
ಕೊರೊನಾವೈರಸ್ ಕಾಟದ ನಡುವೆ ಲಾಕ್ಡೌನ್ ಜನರ ಬದುಕಿನಲ್ಲಿನ ಸ್ವಾದವನ್ನು ಕಿತ್ತುಕೊಂಡಿತು. ಹೊತ್ತಿನ ಊಟಕ್ಕಾಗಿ ಮಧ್ಯಮ ಹಾಗೂ ಬಡವರ್ಗದ ಕಾರ್ಮಿಕರು ಪರಿತಪಿಸುವಂತಾ ಸ್ಥಿತಿ ಎದುರಾಗಿತ್ತು. ಈ ವೇಳೆ ಕೇಂದ್ರ ಸರ್ಕಾರವು ಉಚಿತ ಅಕ್ಕಿ-ಬೇಳೆ ಸೇರಿದಂತೆ ರಾಜ್ಯ ಸರ್ಕಾರಗಳು ಕಾರ್ಮಿಕರ ಖಾತೆಗೆ 2,000 ರಿಂದ 5,000 ರೂಪಾಯಿವರೆಗೂ ಆರ್ಥಿಕ ನೆರವು ನೀಡಿತು. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕರ ತಿಂಗಳಿಗೆ ಆಗುವಷ್ಟು ಆಹಾರದ ಕಿಟ್ ಅನ್ನು ವಿತರಿಸಲಾಗುತ್ತಿತ್ತು. ಜೂನ್ ತಿಂಗಳ 30ರಂದು ಸೀಲ್ದಾಹ್ ರೈಲ್ವೆ ನಿಲ್ದಾಣದಲ್ಲಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಕಾರ್ಮಿಕರು ಸರತಿ ಸಾಲಿನಲ್ಲಿ ಕಾದು ನಿಂತಿರುವ ಚಿತ್ರವು ಅಂದಿನ ಪರಿಸ್ಥಿತಿಯನ್ನು ಸಾರಿ ಹೇಳುವಂತಿತ್ತು.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದೋರ್ನಲ್ಲಿ ದಾರಿಯರ ಪ್ರತಿಭಟನೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ವೈದ್ಯರಿಗೆ ಸರಿಸಮನಾಗಿ ಇತರೆ ವೈದ್ಯಕೀಯ ಸಿಬ್ಬಂದಿಯೂ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದರು. ಇಂದೋರ್ನಲ್ಲಿ ಸರ್ಕಾರ ನೀಡುತ್ತಿರುವ ಸ್ಟೇ ಫಂಡ್ ಸಾಕಾಗುತ್ತಿಲ್ಲ. ತಮ್ಮ ಸ್ಟೇ ಫಂಡ್ ಅನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ದಾದಿಯರು ಪ್ರತಿಭಟನೆ ನಡೆಸಿದರು. ಜೂನ್ ತಿಂಗಳಿನಲ್ಲಿ ದಾದಿಯರು ನಡೆಸಿದ ಈ ಪ್ರತಿಭಟನೆಯ ಫೋಟೋ ಅಂದು ಸಖತ್ ಸದ್ದು ಮಾಡಿದ್ದು ಅಲ್ಲದೇ, ಸರ್ಕಾರವು ಅವರ ವೇತನವನ್ನು ಹೆಚ್ಚಿಸಬೇಕು ಎಂಬ ಆಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಸೈಕಲ್ ಏರಿದ ವ್ಯಾಪಾರಿ ಹಿಂದೆ ಬಣ್ಣದ ಬಲೂನ್
ಕೊರೊನಾವೈರಸ್ ಭೀತಿ ಹಾಗೂ ಲಾಕ್ಡೌನ್ ಕಟ್ಟುನಿಟ್ಟಿನ ನಿಯಮಗಳು ಸಾಕಷ್ಟು ವ್ಯಾಪಾರಿಗಳನ್ನು ಮನೆಯಲ್ಲೇ ಕೂರುವಂತಾ ಸ್ಥಿತಿಗೆ ತಳ್ಳಿತು. ಜೂನ್ ತಿಂಗಳಿನಲ್ಲಿ ದೆಹಲಿ ಸರ್ಕಾರವು ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿತು. ಇದರ ಬೆನ್ನಲ್ಲೇ ಸುಡುಬಿಸಿಲಿನ ನಡುವೆಯೂ ಬೀದಿಯಲ್ಲಿ ವ್ಯಾಪಾರಿಯು ಬಣ್ಣಬಣ್ಣದ ಬಲೂನ್ ಅನ್ನು ಇಟ್ಟುಕೊಂಡು ಸೈಕಲ್ ಏರಿವ ಹೊರಟ ಚಿತ್ರವು ನೆತ್ತಿ ಸುಡುವ ಬಿಸಿಲಿಗಿಂತ ಹಸಿವಿನ ನೋವು ದೊಡ್ಡದು ಎಂಬುದನ್ನು ಸಾರಿ ಹೇಳುವಂತಿತ್ತು.
ಟ್ರ್ಯಾಕ್ಟರ್-ಟ್ರಾಲಿಯಲ್ಲಿ ವಿಶ್ರಾಂತಿ ತೆಗೆದುಕೊಂಡ ಟಿಕಾಯತ್
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿ ನವೆಂಬರ್ 26ರಂದು ರೈತರು ಮೊದಲ ಬಾರಿಗೆ ಪ್ರತಿಭಟನೆ ಶುರು ಮಾಡಿದರು. ಜೂನ್ 26ರಂದು ರೈತರ ಹೋರಾಟಕ್ಕೆ ಏಳು ತಿಂಗಳು ಪೂರೈಸಿತು. ಅಂದು ನವದೆಹಲಿಯ ಗಾಜಿಪುರ ಗಡಿಯಲ್ಲಿ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಿಯಾತ್ ಮಾರ್ಪಡಿಸಿದ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ವಿಶ್ರಾಂತಿ ತೆಗೆದುಕೊಂಡರು.
ಅಂದು ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ಆಕ್ರೋಶಕ್ಕೆ ಕಾರಣವಾಗಿದ್ದವು.
ಮರಳು ಶಿಲ್ಪಕಲೆಯಲ್ಲಿ ವೈದ್ಯರಿಗೆ ಶುಭಾಷಯ
ಪ್ರತಿವರ್ಷ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅದಕ್ಕೂ ಒಂದು ದಿನ ಪೂರ್ವದಲ್ಲಿ ಅಂದರೆ ಜೂನ್ 30ರಂದು ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅದ್ಭುತ ಕಲಾಕೃತಿಯನ್ನು ರಚಿಸಿದ್ದರು. ಪುರಿ ಬೀಚ್ನಲ್ಲಿ Doctors Are Next To God ಎಂಬ ಬರಹದ ಮೇಲೆ ವೈದ್ಯರ ಕಲಾಕೃತಿಯನ್ನು ರಚಿಸಿದ್ದರು. ಈ ಮರಳು ಶಿಲ್ಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.