2021ರ ಆಗಸ್ಟ್ ವಿಶೇಷ: ಆಕಾಶಕ್ಕೆ ಹಾರಿತು ವಿಮಾನದಿಂದ ಜಾರಿದವರ ಪ್ರಾಣಪಕ್ಷಿ!
ನವದೆಹಲಿ, ಡಿಸೆಂಬರ್ 25: ಜೂನ್ ತಿಂಗಳ ಹೊತ್ತಿಗೆ ಉತ್ತರ ಭಾರತದಲ್ಲಿ ಶುರುವಾದ ಮಳೆಯ ಅಬ್ಬರ ಆಗಸ್ಟ್ ಹೊತ್ತಿಗೆ ದಕ್ಷಿಣಕ್ಕೂ ಕಾಲಿಟ್ಟಿತು. ಆಗಸ್ಟ್ ತಿಂಗಳಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳು ಒಂದು ಎರಡಲ್ಲ. ಮಳೆಯ ಹೊಡೆತಕ್ಕೆ ಜನರು ತತ್ತರಿಸಿ ಹೋದರು.
ಆಗಸ್ಟ್ ಹೊತ್ತಿಗೆ ಭಾರತದಲ್ಲಿ ಮಳೆ ಸುದ್ದಿ ಮಾಡಿದರೆ, ಜಾಗತಿಕ ಮಟ್ಟದಲ್ಲಿ ಸುದ್ದಿ ಆಗಿದ್ದು ತಾಲಿಬಾನ್. ಅಫ್ಘಾನಿಸ್ತಾನಕ್ಕೆ ನುಗ್ಗಿದ ತಾಲಿಬಾನಿ ಉಗ್ರರು ಅಂದು ದೇಶದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿಯನ್ನೇ ದೇಶ ಬಿಟ್ಟು ಓಡುವಂತೆ ಮಾಡಿದರು. ಅಲ್ಲಿಂದ ಮುಂದೆ ನಡೆದಿದ್ದು ಬರೀ ತಾಲಿಬಾನಿಗಳು ಆಟ.
2021ರ ಜುಲೈ ವಿಶೇಷ: ಮಳೆಗೆ ತೇಲುತಿಹವು ಕಾರು, ಬೈಕುಗಳು!
2021ರಲ್ಲಿ ಆಗಸ್ಟ್ ತಿಂಗಳಿನಿಂದ ಮುಂದಿನ ಮೂರು ತಿಂಗಳವರೆಗೂ ಮಾಧ್ಯಮಗಳಲ್ಲಿ ಅಫ್ಘಾನಿಸ್ತಾನ್, ತಾಲಿಬಾನ್, ಯುನೈಟೆಜ್ ಸ್ಟೇಟ್ಸ್ ಸೇನೆಯದ್ದೇ ಸುದ್ದಿ ಹರಿದಾಡಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸಿತು. ತಾಲಿಬಾನಿಗಳಿಗೆ ಬೆದರಿದ ಬಹುಪಾಲು ವಿದೇಶಿ ಪ್ರಜೆಗಳನ್ನು ಯುಎಸ್ಎ ಸೇನೆಯು ವಾಪಸ್ ಕರೆದುಕೊಂಡು ಹೋಯಿತು. ಅಮೆರಿಕಾದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚಿಸಿರುವುದಕ್ಕೆ ಹಲವು ರಾಷ್ಟ್ರಗಳಲ್ಲಿ ಜನರು ಸಿಹಿ ಹಂಚಿ ಸಂಭ್ರಮಿಸಿದರು. ಇಂಥ ಬೆಳವಣಿಗೆಗಳನ್ನು ಸಾರಿ ಹೇಳುವ ಚಿತ್ರಗಳು ಮತ್ತು ಅದರ ಹಿಂದಿನ ಕಥೆಯನ್ನು ಇಲ್ಲಿ ಓದಿ ತಿಳಿಯಿರಿ.
ನವದೆಹಲಿಯಲ್ಲಿ ಆಂಬುಲೆನ್ಸ್ ತಳ್ಳಿದ ಜನರು
ಉತ್ತರಾಖಂಡದ ಹೊರತಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಮಳೆ ಅಬ್ಬರ ಹೆಚ್ಚಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ನವದೆಹಲಿ ಪ್ರಮುಖ ರಸ್ತೆಗಳೇ ಜಲಾವೃತೊಂಡಿದ್ದವು. ಏಮ್ಸ್ ಆಸ್ಪತ್ರೆ ಎದುರಿನ ಪ್ರಮುಖ ರಸ್ತೆಯೇ ನೀರಿನಿಂದ ತುಂಬಿ ಹೋಗಿತ್ತು. ಈ ವೇಳೆ ಏಮ್ಸ್ ಆಸ್ಪತ್ರೆ ಬಳಿಯ ಸಾರ್ವಜನಿಕರು ಆಂಬುಲೆನ್ಸ್ ಅನ್ನು ತಳ್ಳಿದ ಘಟನೆ ನಡೆಯಿತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.
ಮಳೆಯಿಂದ ಗುರುಗ್ರಾಮ್ ನಲ್ಲಿ ರಸ್ತೆಗಳೇ ನದಿಗಳು
ರಾಷ್ಟ್ರ ರಾಜಧಾನಿ ದೆಹಲಿಯಷ್ಟೇ ಅಲ್ಲದೇ ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಆಗಸ್ಟ್ ತಿಂಗಳಿನಲ್ಲಿ ಗುರುಗ್ರಾಮ್ ನಗರದಲ್ಲಿ ಭಾರೀ ಮಳೆಯಾಗಿದ್ದು, ದೆಹಲಿ-ಗುರುಗ್ರಾಮ್ ಎಕ್ಸ್ಪ್ರೆಸ್ವೇ ಸಂಪೂರ್ಣ ಜಲಾವೃತಗೊಂಡಿತ್ತು. ಈ ಹಿನ್ನೆಲೆ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು.
ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು
ಕಳೆದ ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿತು. ಎರಡು ದಶಕಗಳ ಕಾಲ ಅಫ್ಘಾನಿಸ್ತಾನದಲ್ಲಿ ಸಂಘರ್ಷದ ಯುದ್ಧವನ್ನು ಯುಎಸ್ ಅಂತ್ಯಗೊಳಿಸಿತು. ಅಫ್ಘಾನಿಸ್ತಾನದಲ್ಲಿ ಪಂಜ್ ಶೀರ್ ಅನ್ನು ಮಣಿಸಿದ ಸಂಭ್ರಮದಲ್ಲಿ ತಾಲಿಬಾನ್ ಸಂಘಟನೆ ಸಿಡಿಸಿದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು, 41ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧಕ ತಂಡವನ್ನು ಸೋಲಿಸಿದ ಖುಷಿಯಲ್ಲಿ ತಾಲಿಬಾನ್ ಉಗ್ರರು ಮನಸೋ-ಇಚ್ಛೆ ಗುಂಡಿನ ಸುರಿಮಳೆಗೈದರು. ಈ ವೇಳೆಯಲ್ಲಿ ಮಕ್ಕಳು ಸೇರಿದಂತೆ ಗುಂಡು ತಗುಲಿದ 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
"ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ, ನಾವು ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತೇವೆ. ನಮಗೆ ಅಡ್ಡಿಯಾದವರನ್ನು ಈಗಾಗಲೇ ಸೋಲಿಸಿದ್ದೇವೆ. ಪಂಜಶೀರ್ ಈಗ ನಮ್ಮ ಅಧೀನದಲ್ಲಿದೆ," ಎಂದು ತಾಲಿಬಾನ್ ಕಮಾಂಡರ್ ಒಬ್ಬರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ತಾಲಿಬಾನ್ ವಿಜಯವನ್ನು ಸಂಭ್ರಮಿಸಿದ ಪಾಕಿಸ್ತಾನ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯು ಹಿಡಿತ ಸಾಧಿಸುತ್ತಿದ್ದಂತೆ ಹಲವು ಮುಸ್ಲೀಂ ರಾಷ್ಟ್ರಗಳು ಸಂಭ್ರಮದ ಪಟಾಕಿ ಸಿಡಿಸಿದವು. ಪಾಕಿಸ್ತಾನದ ಧಾರ್ಮಿಕ ಗುಂಪು ಜಮಿಯತ್ ಉಲೇಮಾ-ಇ ಇಸ್ಲಾಂ ನಜ್ರಿಯಾತಿ ಪಕ್ಷದ ಮುಖಂಡರು ಪಾಕಿಸ್ತಾನದ ಕ್ವೆಟ್ಟಾದಲ್ಲಿನ ಮಾರುಕಟ್ಟೆಯಲ್ಲಿ ಜನರಿಗೆ ಸಿಹಿ ಹಂಚಿದರು. ಆ ಮೂಲಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಬಗ್ಗೆ ಸಂಭ್ರಮಿಸಿದರು. ಅಫ್ಘಾನ್ ನೆಲದಲ್ಲಿ ಮೂಲ ಪ್ರಜೆಗಳು ತಾಲಿಬಾನಿಗಳ ಕೈಗೆ ಸಿಲುಕಿ ನರಳುತ್ತಿದ್ದಂತೆ ಇನ್ನೊಂದುಕಡೆಯಲ್ಲಿ ಪಾಕಿಸ್ತಾನದಲ್ಲಿ ಹೀಗೆ ಸಿಹಿ ಹಂಚಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು.
ಯುಎಸ್ ಕಾರ್ಯಾಚರಣೆ ವೇಳೆ ತುಂಬಿದ ವಿಮಾನದಿಂದ ಹಾರಿದ ಇಬ್ಬರು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಹಿಡಿತ ಸಾಧಿಸಿದ ಬೆನ್ನಲ್ಲೇ ಆ ನೆಲದಲ್ಲಿರುವ ವಿದೇಶಿಗಳನ್ನು ಸುರಕ್ಷಿತವಾಗಿ ರಾಷ್ಟ್ರಗಳಿಗೆ ತಲುಪಿಸುವ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಅಂದು ಸಾವಿರಾರು ಜನರು ಯುಎಸ್ ವಾಯುಪಡೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾದರು. ಆಗಸ್ಟ್ 31ರವರೆಗೂ ಯುಎಸ್ ಸೇನೆ ತಮ್ಮ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ಕಾರ್ಯಾಚರಣೆ ನಡೆಸಿತು. ಯುಎಸ್ ಸೇನೆಯು ದೇಶದಿಂದ ವಾಪಸ್ ಆಗುತ್ತಿದ್ದಂತೆ ಇಡೀ ಅಫ್ಘಾನಿಸ್ತಾನ ತಾಲಿಬಾನ್ ಸಂಘಟನೆಯ ಕೈವಶವಾಯಿತು.
ಅಫ್ಘಾನಿಸ್ತಾನವನ್ನು ತೊರೆಯುವುದಕ್ಕಾಗಿ ಕಾಬೂಲ್ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದರು. ಕಾಬೂಲ್ನಿಂದ ಹಾರಲು ಸಿದ್ಧವಾದ ವಿಮಾನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿದ್ದು, ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆಕಾಶಕ್ಕೆ ಹಾರಿದ ವಿಮಾನದಿಂದ ಇಬ್ಬರು ಪ್ರಯಾಣಿಕರು ಹಾರಿ ಬಿದ್ದು ಪ್ರಾಣ ಬಿಟ್ಟಿರುವ ಘಟನೆ ನಡೆಯಿತು. ವಿಮಾನದ ಚಕ್ರವನ್ನೇ ಇಬ್ಬರು ಪ್ರಯಾಣಿಕರು ಹಿಡಿದುಕೊಂಡು ನಿಂತಿದ್ದರು. ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಪ್ರಯಾಣಿಕರು ಕೆಳಗೆ ಬೀಳುತ್ತಿರುವ ದೃಶ್ಯವು ಎದೆ ಝಲ್ ಎನ್ನಿಸುವಂತಿದೆ. ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.