2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ
ನವದೆಹಲಿ, ಡಿಸೆಂಬರ್ 25: ಜಾಗತಿಕ ಮಟ್ಟದಲ್ಲಿ 2018 ಅನೇಕ ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. ಮುದ ನೀಡುವ ಸಂಗತಿಗಳಂತೆಯೇ ಅನೇಕ ಕಹಿ ಘಟನೆಗಳು ಕೂಡ ನಡೆದಿವೆ. ಅದರಲ್ಲಿಯೂ ನೈಸರ್ಗಿಕ ವಿಕೋಪಗಳು ತೀವ್ರ ಪ್ರಮಾಣದಲ್ಲಿ ಸಂಭವಿಸಿವೆ.
ಭಾರತದಲ್ಲಿ ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹ ಭಾರಿ ಅನಾಹುತ ಸೃಷ್ಟಿಸಿದರೆ, ಚಂಡಮಾರುತಗಳು ಕೂಡ ಜನರನ್ನು ನಿರ್ಗತಿಕರಾಗುವಂತೆ ಮಾಡಿವೆ.
2018ರಲ್ಲಿ ಹಠಾತ್ತನೆ ಪ್ರಸಿದ್ಧರಾದ ಅದೃಷ್ಟವಂತರಿವರು
ಅತಿವೃಷ್ಟಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರು ಪ್ರಕೃತಿಯ ಮುನಿಸಿಗೆ ಜೀವ ಕಳೆದುಕೊಂಡಿದ್ದಾರೆ. ಲೆಕ್ಕಕ್ಕೆ ಸಿಗಲಾರದಷ್ಟು ಬೆಳೆ ಹಾನಿಯಾಗಿದೆ. ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ.
ಇನ್ನೊಂದೆಡೆ ಬರಗಾಲ ಭೂಮಿಯ ಒಡಲನ್ನು ಸುಟ್ಟುಹಾಕುತ್ತಿದೆ. ಮಳೆದ ಯಥೇಚ್ಛವಾಗಿ ಸುರಿದ ಪ್ರದೇಶಗಳಲ್ಲಿಯೂ ಈಗ ಬಿಸಿ ಗಾಳಿ ನೀರಿನ ಸೆಲೆಗಳನ್ನು ಬತ್ತಿಸುತ್ತಿವೆ. ಭಾರತ ಮಾತ್ರವಲ್ಲ, ಜಾಗತಿಕಮಟ್ಟದಲ್ಲಿಯೂ ಪ್ರಾಕೃತಿಕ ಅವಘಡಗಳು ಭಾರಿ ದುರಂತಗಳನ್ನು ಸೃಷ್ಟಿಸಿವೆ.
2018ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಒನ್ಇಂಡಿಯಾ ವಿಡಿಯೋಗಳು
ಹಾಗೆಯೇ ರೈಲು ದುರಂತಗಳೂ ಭಾರತದಲ್ಲಿ ಜನರನ್ನು ಬಲಿತೆಗೆದುಕೊಂಡಿವೆ. 2018ರಲ್ಲಿ ಸಂಭವಿಸಿದ ಇಂತಹ ಕೆಲವು ಘಟನೆಗಳು ಇಲ್ಲಿವೆ.
ಕೇರಳ, ಕೊಡಗು ಪ್ರವಾಹ
ಆಗಸ್ಟ್ನಲ್ಲಿ ಸುರಿದ ಭಾರಿ ಮಳೆ ಮತ್ತು ಭೂಕುಸಿತಗಳಿಂದ ಬಹುತೇಕ ದಕ್ಷಿಣ ಭಾರತ ತತ್ತರಿಸಿತ್ತು. ಅದರಲ್ಲಿಯೂ ಕೇರಳ ಮತ್ತು ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಇಡೀ ಭಾರತವನ್ನು ತಲ್ಲಣಗೊಳಿಸಿತ್ತು. 500ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡರು. ಕೇರಳದ ಎಲ್ಲ 14 ಜಿಲ್ಲೆಗಳಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿತ್ತು. ನೋಡನೋಡುತ್ತಿದ್ದಂತೆಯೇ ಮನೆಗಳು, ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಜೀವನೋಪಾಯದ ಕೆಲಸಗಳನ್ನೂ ಕಳೆದುಕೊಂಡರು. ಕರಾವಳಿ, ಮಲೆನಾಡು ಭಾಗಗಳಲ್ಲಿಯೂ ವಿಪರೀತ ಮಳೆ ಅನೇಕ ಅನಾಹುತಗಳನ್ನು ಸೃಷ್ಟಿಸಿತು.
ದೂಳಿನ ಬಿರುಗಾಳಿ
ಈ ವರ್ಷದ ಮೇ 2 ಮತ್ತು 3ರಂದು ಉತ್ತರ ಭಾರತದ ಅನೇಕ ಕಡೆ ಬೀಸಿದ ದೂಳಿನ ಬಿರುಗಾಳಿ ಸುಮಾರು 125 ಜನರ ಜೀವಕ್ಕೆ ಸಂಚಕಾರ ತಂದಿತು. 200 ಹೆಚ್ಚು ಮಂದಿ ಗಾಯಗೊಂಡರು. ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ದೂಳಿನ ಬಿರುಗಾಳಿಯ ಪ್ರಮಾಣ ತೀವ್ರವಾಗಿತ್ತು.
ಹತ್ತು ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದವು. ರಾತ್ರಿ ವೇಳೆ ಗಾಳಿಯ ವೇಗ ಹೆಚ್ಚಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಯಿತು. ಬೇಸಿಗೆ ಅವಧಿಯಲ್ಲಿ ಈ ರೀತಿ ದೂಳಿನ ಗಾಳಿ ಸಹಜವಾಗಿದ್ದರೂ, ಈ ವರ್ಷದ ಅನಾಹುತ ಹೆಚ್ಚಾಗಿತ್ತು.
ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು
ಅಮೃತಸರ ರೈಲು ದುರಂತ
ಪಂಜಾಬಿನ ಅಮೃತಸರದಲ್ಲಿ ದಸರಾ ಹಬ್ಬದ ಸಲುವಾಗಿ ರಾವಣನ ಪ್ರತಿಕೃತಿ ಸುಡುವ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದವರ ಮೇಲೆ ರೈಲು ಹರಿದು ಕನಿಷ್ಠ 59 ಮಂದಿ ಮೃತಪಟ್ಟರು. ಭಾರತದಲ್ಲಿ ಈ ವರ್ಷದ ಅತ್ಯಂತ ಭೀಕರ ರೈಲು ದುರಂತವಿದು. ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಹೌರಾ-ಮುಂಬೈ ಮೇಲ್ ರೈಲಿನಲ್ಲಿ ಮೇ 6ರಂದು ಉಂಟಾದ ಬೆಂಕಿ ಆಕಸ್ಮಿಕ ಸಹಾಯಕ ಲೊಕೊ ಪೈಲಟ್ ಸಾವಿಗೆ ಕಾರಣವಾಯಿತು. ಜುಲೈ 24ರಂದು ಚೆನ್ನೈ ಬೀಚ್ ಸಮೀಪದಲ್ಲಿ ಉಂಟಾದ ರೈಲು ಅಪಘಾತದಲ್ಲಿ ಐದು ಮಂದಿ ಮೃತಪಟ್ಟರು. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಅಕ್ಟೋಬರ್ 10ರಂದು ನ್ಯೂ ಫರಕ್ಕಾ ಎಕ್ಸ್ಪ್ರೆಸ್ ಬೋಗಿಗಳು ಹಳಿ ತಪ್ಪಿ 7 ಮಂದಿ ಪ್ರಾಣಕಳೆದುಕೊಂಡರು.
ಕ್ಯಾಲಿಫೋರ್ನಿಯಾ ಬೆಂಕಿ
ಪ್ರಸಕ್ತ ವರ್ಷದ ಭೀಕ ಅಗ್ನಿ ದುರಂತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿತು. ನವೆಂಬರ್ನಲ್ಲಿ ಕ್ಯಾಂಪ್ ಫೈರ್ ವ್ಯಾಪಕವಾಗಿ ಆವರಿಸಿ 1.53 ಲಕ್ಷ ಎಕರೆ ಭೂಮಿಯನ್ನು ಸುಟ್ಟುಹಾಕಿತು. 296 ಜನರು ನಾಪತ್ತೆಯಾದರು. 85ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. 14 ಸಾವಿರಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡರು. ಸತತ ಎರಡು ವಾರಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಗ್ರೀಸ್ನಲ್ಲಿಯೂ ಜುಲೈನಲ್ಲಿ ಆವರಿಸಿದ ಕಾಳ್ಗಿಚ್ಚು 126 ಜನರನ್ನು ಕೊಂದು ಹಾಕಿತು. ಪಾಕಿಸ್ತಾನದಲ್ಲಿ ಮೇ ತಿಂಗಳಿನಲ್ಲಿ ಬೀಸಿದ ಬಿಸಿ ಗಾಳಿ ಸುಮಾರು 180 ಜನರ ಸಾವಿಗೆ ಕಾರಣವಾಯಿತು.
ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು
ಪಪುವಾ ನ್ಯೂಗಿನಿ ಭೂಕಂಪ
ಫೆಬ್ರುವರಿಯಲ್ಲಿ ಪುಟ್ಟ ದೇಶ ಪಪುವಾ ನ್ಯೂಗಿನಿಯಲ್ಲಿ 7.5 ತೀವ್ರತೆಯ ಭೂಕಂಪಕ್ಕೆ ಸುಮಾರು 160 ಮಂದಿ ಬಲಿಯಾದರು. ಕೊಮೊ ಪಟ್ಟಣದಿಂದ 10 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು. ಇದಾದ ಬಳಿಕವೂ ಮಾರ್ಚ್ವರೆಗೂ ಅನೇಕ ಬಾರಿ ಭೂಮಿ ಕಂಪಿಸಿತ್ತು. ಮತ್ತೆ 25 ಮಂದಿ ಮೃತಪಟ್ಟರು. ಏಪ್ರಿಲ್ನಲ್ಲಿ ಇನ್ನೂ ನಾಲ್ಕು ಮಂದಿ ಜೀವತೆತ್ತರು.
2.70 ಲಕ್ಷಕ್ಕೂ ಹೆಚ್ಚು ಮಂದಿ ಭೂಕಂಪದಿಂದ ಸಂಕಷ್ಟಕ್ಕೆ ಒಳಗಾದರು. ಕಾಡುಗಳು, ಹಳ್ಳಿಗಳು ಮತ್ತು ಬೃಹತ್ ಚಿನ್ನದ ಗಣಿ ಕುಸಿದುಹೋದವು.
ವಿವಿಧ ದೇಶಗಳಲ್ಲಿ ಪ್ರವಾಹ
ನೈಜೀರಿಯಾದಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಸಂಭವಿಸಿದ ಭಾರಿ ಪ್ರವಾಹ 199 ಜನರನ್ನು ಬಲಿತೆಗೆದುಕೊಂಡಿತು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. 5.60 ಲಕ್ಷಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡರು.
ಆಗಸ್ಟ್ 28ರಂದು ಉತ್ತರ ಕೊರಿಯಾದಲ್ಲಿ ಉಂಟಾದ ಭಾರಿ ಪ್ರವಾಹ 76 ಜನರ ಸಾವಿಗೆ ಕಾರಣವಾಯಿತು. ನೂರಾರು ಮಂದಿ ಕಾಣೆಯಾದರು. ವಿಪರೀತವಾಗಿ ಸುರಿದ ಮಳೆ ಮತ್ತು ಭೂಕುಸಿತ ಕೆಳಮಟ್ಟದ ಪ್ರದೇಶಗಳಲ್ಲಿ ಅಪಾರ ಹಾನಿ ಉಂಟುಮಾಡಿತು. 17 ಸಾವಿರ ಹೆಕ್ಟೇರ್ಗೂ ಅಧಿಕ ಕೃಷಿ ಭೂಮಿ ನಾಶವಾಯಿತು. ಇದರಿಂದಾಗಿ ಆಹಾರ ಉತ್ಪಾದನೆಗೆ ಹೊಡೆತ ಬಿದ್ದಿತು.
ಜುಲೈ ಮಧ್ಯದಲ್ಲಿ ಜಪಾನ್ನ ಸುಮಾರು ಒಂದು ತಿಂಗಳವರೆಗೂ ಪ್ರವಾಹ ಪರಿಸ್ಥಿತಿ ಎದುರಿಸಿತು. ಮಳೆ, ಭೂಕುಸಿತ ಕನಿಷ್ಠ 225 ಜನರ ಪ್ರಾಣಕ್ಕೆ ಎರವಾಯಿತು. 600 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಯಿತು.
ಗ್ವಾಟೆಮಾಲ ಅಗ್ನಿಪರ್ವತ
ಗ್ವಾಟೆಮಾಲದಲ್ಲಿ ಈ ವರ್ಷ ಅಗ್ನಿಪರ್ವತಗಳು ಪದೇ ಪದೇ ಬೆದರಿಕೆ ಒಡ್ಡಿದವು. ಅಗ್ನಿ ಪರ್ವತ ಸ್ಫೋಟದ ಭಯದಿಂದ 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಯಿತು. 12,300 ಅಡಿ ಆಳದಿಂದ ಸಿಡಿದ ಅಗ್ನಿಪರ್ವತ ಎತ್ತರದ ಪರ್ವತ ಶ್ರೇಣಿಗಳ ನಡುವಿನಿಂದ ಜ್ವಾಲಾಮುಖಿಯನ್ನು ಹರಿಸಿತ್ತು.
ಕೇಂದ್ರ ಅಮೆರಿಕದಲ್ಲಿ ಜೂನ್ನಲ್ಲಿ ಅಗ್ನಿಪರ್ವತದ ಬೆಂಕಿಯಿಂದ 194 ಮಂದಿ ಮೃತಪಟ್ಟರು. 234 ಜನರು ನಾಪತ್ತೆಯಾದರು.
ಇಂಡೋನೇಷ್ಯಾದ ಭೂಕಂಪ-ಸುನಾಮಿ
ಇಂಡೋನೇಷ್ಯಾ ಈ ಬಾರಿ ನೈಸರ್ಗಿಕ ವಿಕೋಪದಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ ದೇಶವಾಗಿದೆ. ಏಪ್ರಿಲ್, ಜುಲೈ ಮತ್ತು ಆಗಸ್ಟ್ನಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸಿದವು. ಆಗಸ್ಟ್ನಲ್ಲಿ 500ಕ್ಕೂ ಹೆಚ್ಚಿನ ಜನರು ಜೀವ ಕಳೆದುಕೊಂಡರು. ನೂರಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿತು.
ಸೆಪ್ಟೆಂಬರ್ನಲ್ಲಿ ಕೇಂದ್ರ ಸುಲವೆಸಿ ಪ್ರಾಂತ್ಯದಲ್ಲಿ ಭೂಕಂಪದಿಂದ 2 ಸಾವಿರ ಜನರು ಸತ್ತರು. ನಾಲ್ಕು ಸಾವಿರ ಮಂದಿ ಗಾಯಗೊಂಡರು.
ಡಿಸೆಂಬರ್ 23ರಂದು ಸಂಭವಿಸಿದ ಸುನಾಮಿಯಲ್ಲಿ 373 ಜನರು ಬಲಿಯಾದರು. ಸಾವಿನ ಸಂಖ್ಯೆ ಇನ್ನೂ ಏರುತ್ತಲೇ ಇದೆ.