Explained: ಅಸ್ಸಾಂನಲ್ಲಿ ಕಾಂಗ್ರೆಸ್ ಗೆಲುವಿನ ಸೂತ್ರಕ್ಕಾಗಿ ಸಿಎಂ ಬಾಘೆಲ್ ಹೊಸ ಮಂತ್ರ!
ಗುವಾಹಟಿ, ಮಾರ್ಚ್.05: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕಠಿಣ ಪೈಪೋಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸನ್ನದ್ಧವಾಗಿದೆ. ಕಳೆದ ಮೂರು ತಿಂಗಳಿನ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಾಲಿಗೆ ಹೊಸ ವಿಶ್ವಾಸ ಮೂಡಿದೆ.
ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗದ ಮೂಲಕ ವಿಧಾನಸಭಾ ಚುನಾವಣೆ ಎದುರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ನೆರೆರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಚುನಾವಣಾ ಪ್ರಚಾರದ ಅಖಾಡಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ತೈವಾನ್ ಚಹಾ ತೋಟದ ಫೋಟೋ!
ಕೇರಳ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್ ಗಢ ಮುಖ್ಯಮಂತ್ರಿ ಭುಪೇಶ್ ಬಾಘೆಲ್ ರನ್ನು ಪ್ರಚಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಛತ್ತೀಸ್ ಗಢ ಚುನಾವಣಾ ತಂತ್ರಗಳನ್ನು ಅಸ್ಸಾಂನಲ್ಲಿ ಪ್ರಯೋಗಿಸುವುದಕ್ಕೆ ಭುಪೇಶ್ ಬಾಘೆಲ್ ಅಣಿಯಾಗಿದ್ದಾರೆ. ಕಾಂಗ್ರೆಸ್ ಚುನಾವಣಾ ತಂಡಗಳು ಅಸ್ಸಾಂಗೆ ಲಗ್ಗೆ ಇಟ್ಟಿವೆ. ಅಸ್ಸಾಂನಲ್ಲಿ ಚುನಾವಣೆ ಗೆಲ್ಲುವುದಕ್ಕೆ ಕಾಂಗ್ರೆಸ್ ಹಾಕಿಕೊಂಡಿರುವ ಯೋಜನೆಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.
ಅಸ್ಸಾಂಗೆ ಬಾಘೆಲ್ ರಾಜಕೀಯ ಸಲಹೆಗಾರರು
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮತ್ತು ನಿರ್ವಹಣೆ ಹೊಣೆ ಹೊತ್ತುಕೊಂಡಿರುವ ಛತ್ತೀಸ್ ಗಢ ಸಿಎಂ ಭುಪೇಶ್ ಬಾಘೆಲ್ ತಮ್ಮ ರಾಜ್ಯದಲ್ಲಿ ಪ್ರಯೋಗಿಸಿದ ರಾಜಕೀಯ ತಂತ್ರಗಳನ್ನೇ ಇಲ್ಲಿಯೂ ಪ್ರಯೋಗಿಸುವುದಕ್ಕೆ ಸಿದ್ಧರಾಗಿದ್ದಾರೆ. ಸಿಎಂ ಭುಪೇಶ್ ಬಾಘೆಲ್ ಅವರ ರಾಜಕೀಯ ಸಲಹೆಗಾರ ವಿನೋದ್ ವರ್ಮಾ, ರುಚಿರ್ ಗಾರ್ಗ್ ಮತ್ತು ರಾಜೇಶ್ ತಿವಾರಿ ಈಗಾಗಲೇ ಅಸ್ಸಾಂ ತಲುಪಿದಿದ್ದಾರೆ. ಇದರ ಜೊತೆಗೆ ಛತ್ತೀಸ್ ಗಢ ಸ್ಥಳೀಯ ಕಾಂಗ್ರೆಸ್ ನಾಯಕರನ್ನೊಳಗೊಂಡ 24 ತಂಡಗಳು ಚುನಾವಣಾ ಕಾರ್ಯತಂತ್ರಗಳಿಗಾಗಿ ಅಸ್ಸಾಂಗೆ ತಲುಪಿದೆ.
ಅಸ್ಸಾಂ ಕಾಂಗ್ರೆಸ್ ನಲ್ಲಿ ಬಣ ರಾಜಕಾರಣಕ್ಕೆ ಬ್ರೇಕ್
ಅಸ್ಸಾಂ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ನಾಯಕರ ಅತಿರೇಕದ ವರ್ತನೆಯಿಂದಾಗಿ ಪಕ್ಷದಲ್ಲಿ ಬಣಗಳು ಸೃಷ್ಟಿಯಾಗಿದ್ದವು. ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲಾಗಿದೆ. ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಐಸಿಸಿ ಉಸ್ತುವಾರಿ ಜಿತೇಂದ್ರ ಸಿಂಗ್ ಅವರು ಎರಡು ತಿಂಗಳ ಹಿಂದೆ ಕೆಲವು ನಾಯಕರೊಂದಿಗೆ ರೆಸಾರ್ಟ್ ರಾಜಕಾರಣ ನಡೆಸಿದ್ದರು. ಸಂಧಾನ ಮಾತುಕತೆಯಲ್ಲಿ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ
ಅಸ್ಸಾಂ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಹೆಸರನ್ನು ಘೋಷಿಸುವುದಿಲ್ಲ. ರಾಜ್ಯ ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ನೀಡಲಾಗುತ್ತದೆ. ಎಲ್ಲ ನಾಯಕರಿಗೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಚುನಾವಣಾ ಪ್ರಚಾರ ಸಮಿತಿಗಳಲ್ಲಿ ಎಲ್ಲರಿಗೂ ಸ್ಥಾನಮಾನವನ್ನು ನೀಡಲಾಗುತ್ತದೆ. ಈ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿರ್ವಹಿಸುತ್ತಾರೆ ಎನ್ನುವುದರ ಮೇಲೆ ನಾಯಕರ ಮುಂದಿನ ರಾಜಕೀಣ ಹಣೆಬರಹ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.
ನಾಲ್ವರು ನಾಯಕರ ನೇತೃತ್ವದಲ್ಲಿ ಬಸ್ ಯಾತ್ರೆ
ಅಸ್ಸಾಂನಲ್ಲಿ ನಾಲ್ವರು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಬಸ್ ಯಾತ್ರೆ ನಡೆಸಲಾಯಿತು. ಗೌರವ್ ಗೊಗೊಯ್, ಸುಶ್ಮಿತಾ ದೇವ್, ದೆಬಾಬ್ರತಾ ಸೈಕಿಯಾ ಮತ್ತು ಪ್ರದ್ಯುತ್ ಬೊರ್ಡೊಲಾಯ್ ಎಂಬ ನಾಲ್ವರು ನಾಯಕರಿಗೆ ಯಾತ್ರೆಗಳ ನೇತೃತ್ವ ವಹಿಸಲಾಗಿತ್ತು. ಶ್ರೀಮಂತ್ ಶಂಕರ್ ದೇವ್ ಜನ್ಮಸ್ಥಳ ಆಗಿರುವ ನಾಗೋನ್ ಜಿಲ್ಲೆಯ ಬೊರ್ಡುವ ಪ್ರದೇಶದಿಂದ ಆರಂಭವಾಗಿತ್ತು. ಸಿವಸಾಗರ್ ನಗರದಿಂದ ದೆಬಾಬ್ರತಾ ಸೈಕಿಯಾ ಪ್ರಚಾರ ಯಾತ್ರೆ ಶುರು ಮಾಡಿದ್ದರು. ಗುವಾಹಟಿಯಿಂದ ಗೌರವ್ ಗೊಗೊಯ್ ಹಾಗೂ ಸಿಲ್ಚರ್ ಪ್ರದೇಶದಿಂದ ಸುಶ್ಮಿತಾ ದೇವ್ ಪ್ರಚಾರ ಯಾತ್ರೆ ನಡೆಸಿದ್ದರು.
ಸಮೀಕ್ಷೆ: ಪ್ರಧಾನಿ ಸ್ಥಾನಕ್ಕೆ ಮೋದಿಗಿಂತ ರಾಹುಲ್ ಗಾಂಧಿ ಬೆಸ್ಟ್ ಎಂದ 2 ರಾಜ್ಯಗಳು!
ಅಸ್ಸಾಂಗೆ ಎಐಸಿಸಿ ಪದಾಧಿಕಾರಿಗಳ ತಂಡ ಲಗ್ಗೆ
ಛತ್ತೀಸ್ ಗಢದ ರಾಜಕೀಯ ನಾಯಕರ ತಂಡಗಳ ಹೊರತಾಗಿಯೂ ಹೆಚ್ಚುವರಿಯಾಗಿ ಎಐಸಿಸಿ ಪದಾಧಿಕಾರಿಗಳ ತಂಡವನ್ನು ಅಸ್ಸಾಂಗೆ ಕಳುಹಿಸಿ ಕೊಡಲಾಗಿದೆ. ಎಐಸಿಸಿ ಕಾರ್ಯದರ್ಶಿ ಅನಿರುದ್ಧ ಸಿಂಗ್, ಪೃಥ್ವಿರಾಜ್ ಪ್ರಭಾಕರ್ ಸಾಥೆ, ವಿಕಾಸ್ ಉಪಾಧ್ಯಾಯ ಮತ್ತು ಜಂಟಿ ಕಾರ್ಯದರ್ಶಿ ಅದಿತ್ಯ ಶರ್ಮಾ ಅವರನ್ನು ಅಸ್ಸಾಂನ ಹಲವು ಪ್ರದೇಶಗಳಲ್ಲಿ ಚುನಾವಣಾ ಕಾರ್ಯ ನಿರ್ವಹಣೆಗಾಗಿ ನಿಯೋಜನೆ ಮಾಡಲಾಗಿದೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಸಂಕಲ್ಪ ಶಿಬಿರ
ಛತ್ತೀಸ್ ಗಢದ ರಾಜಕೀಯ ನಾಯಕರ ತಂಡವು ಕಳೆದ ಜನವರಿಯಲ್ಲೇ ಅಸ್ಸಾಂಗೆ ತಲುಪಿದೆ. ಜನವರಿ ಮೊದಲ ವಾರದಲ್ಲಿಯೇ ಈ ತಂಡದಲ್ಲಿ ಹಿರಿಯ ಚುನಾವಣಾ ವೀಕ್ಷಕರು, ಪ್ರಚಾರ ನಿರ್ವಹಕರು ಮತ್ತು ಸಂಘಟಕರನ್ನು ಮುಖ್ಯಮಂತ್ರಿ ಭುಪೇಶ್ ಬಾಘೆಲ್ ನೇಮಿಸಿದ್ದಾರೆ. ಈ ತಂಡವು ಬೂತ್ ಮಟ್ಟದ ಕಾರ್ಯಕರ್ತರಿ ಸಂಕಲ್ಪ ಶಿಬಿರಗಳನ್ನು ನಡೆಸುತ್ತಿದೆ. ಬೋಡೋ ಪ್ರದೇಶದ ಕೆಲವು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಎಲ್ಲಾ ಸ್ಥಾನಗಳಲ್ಲಿಯೂ ಅಂತಹ ಶಿಬಿರಗಳನ್ನು ನಡೆಸಲಾಯಿತು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
7 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟ ಅದೃಷ್ಟ
ಕಳೆದ 2014ರಿಂದಲೂ ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೃಷ್ಟ ಕೈಕೊಟ್ಟಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. 2019ರಲ್ಲಿ ಅಂಕಿ-ಅಂಶಗಳ ನಿರ್ವಹಣ ಕೊಂಚ ಸಮಾಧಾನ ತರುವಂತಿತ್ತು. 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮರು ಸಂಘಟನೆ ಸಾಧ್ಯವಾಗಲಿಲ್ಲ. ಬೋಡೋಲ್ಯಾಂಡ್ ಪ್ರಾದೇಶಿಕ ಸಮಿತಿ ಮತ್ತು ತಿವಾ ಸ್ವಾಯತ್ತ ಮಂಡಳಿ ರಚನೆ ಬಳಿಕ ಈ ಹಿಂದೆ ಹಿನ್ನಡೆ ಅನುಭವಿಸಿದ ಪ್ರದೇಶಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತು.
ಛತ್ತೀಸ್ ಗಢ ಚುನಾವಣಾ ಮಾದರಿ ಅಸ್ಸಾಂನಲ್ಲಿ ಪ್ರಯೋಗ
ಈ ಹಿಂದೆ ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಸಂದರ್ಭದಲ್ಲಿ ಭುಪೇಶ್ ಬಾಘೆಲ್ ಶಿಬಿರಗಳ ಮಾದರಿಯನ್ನು ಅನುಸರಿಸಿದ್ದರು. ಅದೇ ಮಾದರಿಯಲ್ಲಿ ಅಸ್ಸಾಂ ಚುನಾವಣೆಯಲ್ಲಿ ಪ್ರಯೋಗಿಸಲು ಇದೀಗ ಮುಂದಾಗಿದ್ದಾರೆ. "ಈ ಸಂಕಲ್ಪ ಶಿಬಿರಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ಮತದಾರರನ್ನು ಗುರುತಿಸುವುದು, ಮತದಾರರ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ಕಾರ್ಯಗಳ ಕುರಿತು ತರಬೇತಿ ನೀಡಲಾಗುತ್ತದೆ" ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಇದರ ಜೊತೆಗೆ ಛತ್ತೀಸ್ ಗಢದ ರಾಜಕೀಯ ನಾಯಕರ ತಂಡವು ಗೋಡೆ ಬರಹ, ಪ್ರಚಾರ ಸಾಮಗ್ರಿಗಳ ವಿತರಣೆ ಹೊಣೆಯನ್ನು ಹೊತ್ತುಕೊಂಡಿದೆ.
ಅಸ್ಸಾಂ ಜನಮನಗಳ ಬಗ್ಗೆ ಕಾಂಗ್ರೆಸ್ ಸಮೀಕ್ಷೆ
ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹಲವು ರೀತಿಯ ಸಮೀಕ್ಷೆಗಳನ್ನು ನಡೆಸಿದೆ. ಈ ಸಮೀಕ್ಷೆಗಳ ಪ್ರಕಾರ, "ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಚಹಾ ತೋಟದ ಕಾರ್ಮಿಕರಲ್ಲಿ ಹೆಚ್ಚಿನ ಅಸಮಾಧಾನವಿದೆ. ರಾಜ್ಯದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಬಗ್ಗೆ ಜನರು ಅಸಮಾಧಾನ ಹೊರ ಹಾಕಿದ್ದಾರೆ" ಎಂದು ಸಮೀಕ್ಷೆಗಳು ಹೇಳುತ್ತಿವೆ.
ಕಳೆದುಕೊಂಡ ಸ್ಥಳದಲ್ಲಿ ಗೆಲುವಿಗೆ ಕಾಂಗ್ರೆಸ್ ಹುಡುಕಾಟ
ಅಸ್ಸಾಂ ಮೇಲ್ಭಾಗದ ಕ್ಷೇತ್ರಗಳಲ್ಲಿ ವರ್ಚಸ್ಸು ಕಳೆದುಕೊಂಡಿರುವ ಕಾಂಗ್ರೆಸ್ ಅದೇ ಪ್ರದೇಶದಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಲು ಪಣ ತೊಟ್ಟಿದೆ. ಕಳೆದ ಡಿಸೆಂಬರ್ ನಲ್ಲಿ ಮಾಜಿ ಸಚಿವ ಮತ್ತು ಗೋಲಘಟ್ ಶಾಸಕ ಅಜಂತಾ ನೋಗ್ ಹಾಗೂ ಲಖಿಪುರ್ ಶಾಸಕ ರಾಜದೀಪ್ ಗೋವಾಲಾ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪಕ್ಷಕ್ಕೆ ಕೊಂಚ ಹಿನ್ನಡೆ ಆಗಿತ್ತು. "ಆ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ಕಾರ್ಯಕರ್ತರು ಅವರ ಜೊತೆಗೆ ಹೋಗಿಲ್ಲ. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಬಲವಾಗಿದೆ. ಆದ್ದರಿಂದ ಅವರು ಪಕ್ಷ ತೊರೆದರೂ ಪಕ್ಷಕ್ಕೆ ಯಾವುದೇ ರೀತಿ ಹಿನ್ನಡೆ ಆಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಉಪಾಧ್ಯಾಯ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ
ಅಸ್ಸಾಂನಲ್ಲಿ ಕಳೆದ 3 ತಿಂಗಳಿನಲ್ಲಿ ಕಾಂಗ್ರೆಸ್ ಕುರಿತು ಜನಾಭಿಪ್ರಾಯದಲ್ಲಿ ಬದಲಾವಣೆ ಗೋಚರಿಸುತ್ತಿದೆ. 2016ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, ಮಿತ್ರಪಕ್ಷಗಳಾದ ಬಿಪಿಎಫ್ 12 ಹಾಗೂ ಎಜಿಪಿ 14 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಕಾಂಗ್ರೆಸ್ 26 ಸ್ಥಾನಗಳನ್ನು ಗೆದ್ದಿದ್ದು, ಎಐಯುಡಿಎಫ್ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
2016ರಲ್ಲಿ ಶೇಕಡಾವಾರು ಮತ ಗಳಿಕೆ ಪ್ರಮಾಣ:
ಬಿಜೆಪಿ - 29.50
ಕಾಂಗ್ರೆಸ್ - 30.90
ಎಜಿಪಿ - 8.1
ಬಿಪಿಎಫ್ - 3.9
ಎಐಯುಡಿಎಫ್ - 13.05