ನಿಜಾಮರ ಕಾಲದ ಬೋನಾಳ್ ಕೆರೆಯ ಸುತ್ತ ಒಂದು ಸುತ್ತು!
ಅದು ನೂರಾರು ಎಕರೆಯ ಪ್ರದೇಶದಲ್ಲಿರುವ ಬೃಹತ್ ಕೆರೆ. ಸುರಪುರದ ದೊರೆಗಳ ಕಾಲದಲ್ಲಿ ನಿರ್ಮಾಣಗೊಂಡು ನಿಜಾಮರ ಕಾಲದಲ್ಲಿ ಸುಧಾರಣೆ ಕಂಡಿತು. ಆ ಕೆರೆ ಈಗ ಅಂತಾರಾಷ್ಟ್ರೀಯ ಪಕ್ಷಿಗಳ ವಲಸೆ ತಾಣ. ಅಲ್ಲದೇ ರಾಜ್ಯದ ಎರಡನೇ ಅತಿದೊಡ್ಡ ಪಕ್ಷಿಧಾಮ.
ಮೈಸೂರಿನ ಹದಿನಾರು ಕೆರೆಗೆ ಮಂಗೋಲಿಯಾ ಅತಿಥಿಗಳ ಪಿಕ್ನಿಕ್!
ತುಂಬಿ ತುಳುಕುತ್ತಿರುವ ಬೃಹತ್ ಕೆರೆಯ ನೀರಲ್ಲಿ ಮಿಂದೆಳುತ್ತಿರುವ ಬಗೆ ಬಗೆ ಪಕ್ಷಿಗಳು. ಮರದಿಂದ ಹಾರುತ್ತ ಹಾರುತ್ತ ಆಕಾಶದೆಲ್ಲೆಡೆ ಹರಡುತ್ತಿರುವ ಪಕ್ಷಿ ಸಂಕುಲ. ಮುಂಜಾವು ಮತ್ತು ಮಸ್ಸಂಜೆ ವೇಳೆ ಹಕ್ಕಿಗಳ ಕಲರವನ್ನು ನೋಡಲು ಎರಡು ಕಣ್ಣುಗಳು ಸಾಲದು.
ಹರಿದ ತುಂಗಭದ್ರಾ ನದಿ ನೀರು, ಗದಗದ ಭೀಷ್ಮ ಕೆರೆ ಭರ್ತಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ್ ಗ್ರಾಮದ ಕೆರೆದಲ್ಲಿ ಕುಳಿತಿದ್ದರೇ ಮೈ ಮರೆತು ಬಿಡ್ತಿವಿ. ತಣ್ಣನೇ ಬೀಸುವ ಗಾಳಿ, ಗಾಳಿಯೊಂದಿಗೆ ತೂರಿ ಬರೋ ನೀರಿನ ವಾಸನೆ, ಕಣ್ಣಿಗೆ ಕಾಣುವಷ್ಟು ಜಲರಾಶಿ.
ಕಬಿನಿಯಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳ ಸಂಭ್ರಮ
ಬೃಹತ್ ಕೆರೆಯ ತುಂಬಾ ವಿಭಿನ್ನ ಪಕ್ಷಿಗಳದ್ದೇ ಕಾರುಬಾರು. ಆಹಾರಕ್ಕಾಗಿ ಹರಸಿ ಹೋಗುವುದು, ದಣಿವಾದಾಗ ಕೆರೆಗೆ ಬರುವುದು, ಬಿಸಿಲಿನ ಧಗೆಯನ್ನ ತಣಿಸಿಕೊಳ್ಳಲು ಈಜುವುದು, ನೀರಿನಲ್ಲೇ ಹಕ್ಕಿಗಳ ಚೆಲ್ಲಾಟ, ಚಿಲಿಪಿಲಿ ಕಲವರ. ಈ ನಿಸರ್ಗದತ್ತವನ್ನ ಸವಿಯಲು ಎರಡು ಕಣ್ಣು, ಕಿವಿಗಳು ಸಾಲು.
ಬೋನಾಳ ಬಳಿಯೇ ಸುಮಾರು 800 ಎಕರೆ ವಿಸ್ತಾರದ ಬೃಹತ್ ಕೆರೆಯಿದೆ. ಬೋನಾಳ ಕೆರೆಯೊಂದಿಗೆ ಹರಡಿಕೊಂಡಿರುವುದೇ ಬೋನಾಳ ಪಕ್ಷಿಧಾಮ. ಇದನ್ನ ಅಂತಾರಾಷ್ಟ್ರೀಯ ಪಕ್ಷಿಗಳ ವಲಸೆ ತಾಣವೆಂದೂ ಕರೆಯುತ್ತಾರೆ.
ಬೋನಾಳ: ಪಕ್ಷಿ ಸಂಪತ್ತು ಇಲ್ಲಿದೆ
ಬೋನಾಳ ಪಕ್ಷಿಧಾಮವು ಸುಮಾರು 10 ಸಾವಿರಕ್ಕೂ ಹೆಚ್ಚು ಬಗೆ ಬಗೆಯ ಪಕ್ಷಿಗಳ ಆಸರೆಯ ತಾಣವಾಗಿದೆ. ಬೋನಾಳ ಪಕ್ಷಿಧಾಮದಲ್ಲಿ ರಾಜಹಂಸ, ರೆಡ್ ಪಿಕಾಕ್, ಕರಿ ತಲೆ ಹಕ್ಕಿ, ಕಿರು ಬೆಳ್ಳಕ್ಕಿ, ದೊಡ್ಡ ಬೆಳ್ಳಕ್ಕಿ, ವೈಟ್ ನೆಕಡ್ ಸ್ಟೋಕ್, ಬಿಳಿ ಕತ್ತಿನ ಕೊಕ್ಕರೆ, ಕೆಂಪು ಬಣ್ಣದ ಬುಲ್ ಬುಲ್, ಡಾರ್ಟರ್, ಬ್ಲಾಕ್ ಹೆಡೆಡ್ ಐಬಿಸ್, ಲಾರ್ಜ್ ಎರೆಟ್, ಪೋಚಾರ್ಡ್ ಇಂಡಿಯನ್ ಶಾಗ್, ಸ್ನೇಕ್ ಬರ್ಡ್, ಇಂಡಿಯನ್ ಮೋರ್ಹೆನ್, ಪ್ವೆಡ್, ಕಿಂಗ್ ಫಿಷರ್ ಸೇರಿದಂತೆ ಇನ್ನೂ ಹಲವಾರು ಪ್ರಭೇದದ ಪಕ್ಷಿ ಸಂಪತ್ತು ಇಲ್ಲಿದೆ.
ಪಕ್ಷಿಗಳು ವಲಸೆ ಬರಲು ಆರಂಭಿಸುತ್ತವೆ
ಬೋನಾಳ ಪಕ್ಷಿಧಾಮಕ್ಕೆ ದೇಶ-ವಿದೇಶದಿಂದ ಹಕ್ಕಿಗಳು ವಲಸೆ ಬರುತ್ತವೆ. ಸುಮಾರು ಎರಡು ಚದರ ಮೈಲು ವಿಸ್ತಾರವಾದ ಬೋನಾಳ ಪಕ್ಷಿಧಾಮಕ್ಕೆ ಅಕ್ಟೋಬರ್ನಿಂದ ಆಸ್ಟ್ರೇಲಿಯಾ, ಮಲೆಷಿಯಾ, ಅರ್ಜೆಂಟೀನಾ, ನೈಜೀರಿಯಾ, ಶ್ರೀಲಂಕಾ ಮುಂತಾದ ದೇಶಗಳಿಂದ ಪಕ್ಷಿಗಳು ವಲಸೆ ಬರಲು ಆರಂಭಿಸುತ್ತವೆ. ಮೂರ್ನಾಲ್ಕು ತಿಂಗಳು ಇಲ್ಲಿರುತ್ತವೆ. ಇವು ನೋಡುಗರನ್ನ ಸೆಳೆಯುತ್ತವೆ.
ಚಳಿಗಾಲದಲ್ಲಿ ವಲಸೆ ಬರುತ್ತವೆ
ಚಳಿಗಾಲದ ವೇಳೆ ಬಹುತೇಕ ಹಕ್ಕಿಗಳು ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತವೆ. ಚಳಿಗಾಲದಲ್ಲಿ ಎಲ್ಲೆಡೆ ಮಂಜು ಬಿದ್ದು ಆಹಾರ, ಆವಾಸಕ್ಕೆ ಅಸಾಧ್ಯ. ಹಾಗಾಗಿ ದಕ್ಷಿಣ ಭೂ ಭಾಗಕ್ಕೆ ಆಹಾರ, ವಸತಿ, ಬೆಚ್ಚನೆಯ ಪರಿಸರ, ಸುರಕ್ಷತೆ ಹುಡುಕಿಕೊಂಡು ಪಕ್ಷಿಗಳು ವಲಸೆ ಬರುತ್ತವೆ. ಸಂತಾನಾಭಿವೃದ್ಧಿ ಮಾಡಿಕೊಂಡು ಮರಳಿ ಹೋಗುತ್ತವೆ.
ನಿಜಾಮರ ಕಾಲದಲ್ಲಿ ಅಭಿವೃದ್ಧಿ
ಬೋನಾಳ ಕೆರೆಯನ್ನ ಸುರಪುರದ ಪ್ರಧಾನಮಂತ್ರಿ ನಿಷ್ಠ ವೀರಪ್ಪನವರ ಸಲಹೆ ಮೇರೆಗೆ ದೊರೆ ರಾಜಾ ಪಾಮ ನಾಯಕ, 17ನೇ ಶತಮಾನದಲ್ಲಿ ನಿರ್ಮಿಸಿದ್ದಾರೆಂಬುದು ಇತಿಹಾಸ. ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ಪಿಲಿಪ್ಸ್ ಮೆಡೋಸ್ ಟೇಲರ್, ಬೋನಾಳ ಕೆರೆ ಅಭಿವೃದ್ಧಿಗೆ ಶ್ರಮಿಸಿದ. ಹೈದ್ರಾಬಾದ್ ನಿಜಾಮರ ಹಣ ಸಹಾಯದಿಂದ ಕ್ರಿ.ಶ 1844ರಲ್ಲಿ ಬೋನಾಳ ಕೆರೆ ಅಭಿವೃದ್ಧಿಗೊಳಿಸಿದ್ರು.
ಪಕ್ಷಿಗಳು ವಿಶ್ರಾಂತಿ ಪಡೆಯಲು ಸಾಲಲ್ಲ
ಇಂಥ ಐತಿಹಾಸಿಕ ಹಿನ್ನೆಲೆಯನ್ನ ಬೋನಾಳ ಕೆರೆ ಹೊಂದಿದೆ. ಬೋನಾಳ ಪಕ್ಷಿಧಾಮ ಅಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಹಣವನ್ನ ಖರ್ಚು ಮಾಡುತ್ತಿದೆ. ಆದ್ರೆ ನಿರೀಕ್ಷಿತ ಪ್ರಯೋಜನವಾಗಿಲ್ಲ. ಕೆರೆಯಲ್ಲಿ ಪಕ್ಷಿಗಳು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿಲ್ಲ. ಸುಮಾರು 10 ಮರದ ತುಂಡುಗಳನ್ನ ನಿಲ್ಲಿಸಿದ್ದು ಬಿಟ್ಟರೇ ಇನ್ನಾವುದೇ ಕೆಲಸ ಮಾಡಿಲ್ಲ. ಕೆಲವು ಮರದ ತುಂಡುಗಳು ಪಕ್ಷಿಗಳು ವಿಶ್ರಾಂತಿ ಪಡೆಯಲು ಸಾಲಲ್ಲ.
ಮೂಲ ಸೌಕರ್ಯಗಳಿಂದ ವಂಚಿತ
ಬೋನಾಳ ಪಕ್ಷಿಧಾಮವೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸುರಪುರದಿಂದ ಬೋನಾಳ ಕೆರೆಯ ಮಾರ್ಗದಲ್ಲಿ ಸುಮಾರು ನಾಲ್ಕು ಕಿಲೋ ಮೀಟರ್ ರಸ್ತೆಯೇ ಇಲ್ಲ. ಜಾಲಿಗಿಡಗಳು ರಸ್ತೆ ಆವರಿಸಿಕೊಂಡಿದ್ದು ಪ್ರವಾಸಿಗರು, ಅಧ್ಯಯನಕಾರರು ಬೋನಾಳ ಕೆರೆಗೆ ತಲುಪಲು ಹರಸಾಹಸ ಪಡಬೇಕು. ಬೋನಾಳ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿದ್ದು ಪಕ್ಷಿ ಸಂಕುಲಕ್ಕೆ ಧಕ್ಕೆ ತರುತ್ತಿದೆ. ಸ್ಥಳದಲ್ಲಿ ಯಾವುದೇ ಸಿಬ್ಬಂದಿ ಇರದಿರೋದು ಅವ್ಯವಸ್ಥೆಗೆ ಕಾರಣವಾಗಿದೆ.
ವೀಕ್ಷಣಾ ಗೋಪುರಗಳು ಪಾಳು ಬಿದ್ದಿವೆ
ಇನ್ನೂ ಬೋನಾಳ ಪಕ್ಷಿಧಾಮದ ಬಳಿಕ ವಿದ್ಯಾರ್ಥಿಗಳು, ಪ್ರವಾಸಿಗರು, ಅಧ್ಯಯನಕಾರರಿಗೆ ಮಾಹಿತಿ ನೀಡಲು ಯಾವುದೇ ಸಿಬ್ಬಂದಿ ಇಲ್ಲ. ಉದ್ಯಾನವನ ನಿರ್ಮಿಸಿದ್ದು ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವೀಕ್ಷಣಾ ಗೋಪುರಗಳು ಪಾಳು ಬಿದ್ದಿವೆ. ವಸತಿ ಗೃಹಗಳಿಗೆ ಬೀಗ ಜಡಿಯಲಾಗಿದೆ. ಆದ್ರೆ ಬೋನಾಳ ಪಕ್ಷಿಧಾಮದ ಹೆಸರಿನಲ್ಲಿ ಹಣ ಮಾತ್ರ ಖರ್ಚಾಗ್ತಿದೆ.
ಪ್ರವಾಸಿಗರಿಂದ ವಂಚಿತವಾಗ್ತಿದೆ
ಈ ಎಲ್ಲಾ ಸಮಸ್ಯೆಗಳಿಂದ ರಾಜ್ಯದ ಎರಡನೇ ಅತಿ ದೊಡ್ಡ ಪಕ್ಷಿಧಾಮ ಪ್ರವಾಸಿಗರಿಂದ ವಂಚಿತವಾಗ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ಕೊಟ್ಟರೇ ವಿನಃ ಸುಧಾರಣೆಗೆ ಶ್ರಮಿಸಿಲ್ಲ. ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಬೋನಾಳ ಕೆರೆ ಸಂರಕ್ಷಣೆಯಾಗಬೇಕಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ನಿಮ್ಮ ಊರಿನ ಕೆರೆ, ಪಕ್ಷಿಗಳ ಆಶ್ರಯತಾಣದ ಬಗ್ಗೆ ನಮಗೆ ಕಳಿಸಿ