5 ದಶಕದಲ್ಲಿಯೇ ಶೇ 68ರಷ್ಟು ವನ್ಯಜೀವಿ ನಾಶ: ಆಘಾತ ಮೂಡಿಸುವ ವರದಿ
ವಾಷಿಂಗ್ಟನ್, ಸೆಪ್ಟೆಂಬರ್ 10: ಕಳೆದ ಕೇವಲ ನಾಲ್ಕು ದಶಕಗಳಲ್ಲಿಯೇ ಜಗತ್ತಿನ ವನ್ಯಜೀವಿ ಸಂಖ್ಯೆ ಶೇ 68ರಷ್ಟು ತಗ್ಗಿದೆ ಎಂಬ ಕಳವಳಕಾರಿ ಸಂಗತಿ ಬಹಿರಂಗವಾಗಿದೆ. ಈ ಆಘಾತಕಾರಿ ಇಳಿಕೆಗೆ ಮಾನವ ಅನುಭೋಗವೇ ಕಾರಣ ಎಂದು ವಿಶ್ವ ವಿನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಬುಧವಾರ ಬಿಡುಗಡೆ ಮಾಡಿರುವ ವರದಿ ಹೇಳಿದೆ.
1970ರಿಂದ 2016ರ ಅವಧಿಯಲ್ಲಿ ನಿಗಾದಲ್ಲಿ ಇರಿಸಲಾಗಿದ್ದ 4,392ಕ್ಕೂ ಅಧಿಕ ಸಸ್ತನಿಗಳು, ಪಕ್ಷಿಗಳು, ಮೀನು, ಸರೀಸೃಪ ಹಾಗೂ ಉಭಯವಾಸಿ ತಳಿಗಳ ಸಂಖ್ಯೆ ತೀವ್ರ ಇಳಿಕೆಯಾಗಿದೆ ಎಂದು ಲಿವಿಂಗ್ ಪ್ಲಾನೆಟ್ ರಿಪೋರ್ಟ್ 2020 ತಿಳಿಸಿದೆ.
ಅಮೆಜಾನ್ ಕಾಡಿಗೆ ಬೆಂಕಿ ಇಟ್ಟವರು ಯಾರು..?
ಕಡಿಮೆ ಸಂಖ್ಯೆಯಲ್ಲಿದ್ದ 4,392 ಜಾತಿಯ ಪ್ರಾಣಿ, ಪಕ್ಷಿಗಳ 20,811 ಸಂಖ್ಯೆಯ ಮಾಹಿತಿಗಳನ್ನು ಬಳಸಿಕೊಂಡಿರುವ ವಿಶ್ವ ವನ್ಯಜೀವಿ ನಿಧಿಯ ಸೂಚ್ಯಂಕವು 1970-2016ರ ಅವಧಿಯಲ್ಲಿ ನಿಗಾದಲ್ಲಿ ಇರಿಸಲಾಗಿದ್ದ ವನ್ಯಜೀವಿಗಳ ಸಂಖ್ಯೆ ಸರಾಸರಿ ಶೇ 68ರಷ್ಟು ಕುಸಿತ ಉಂಟಾಗಿದೆ ಎಂಬುದನ್ನು ತೋರಿಸಿದೆ. ಮುಂದೆ ಓದಿ.
ವಿವಿಧ ಕಾರಣಗಳು
ಇತ್ತೀಚಿನ ದಶಕಗಳಲ್ಲಿ ಉಂಟಾದ ವನ್ಯಜೀವಿ ಸಂಖ್ಯೆಯಲ್ಲಿನ ಕುಸಿತದ ಮಟ್ಟವು ಹಲವು ಮಿಲಿಯನ್ ವರ್ಷಗಳವರೆಗೆ ಕಂಡಿರಲಿಲ್ಲ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ಗಳಲ್ಲಿನ ವನ್ಯಜೀವಿಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹೊಡೆತ ಕಂಡಿವೆ. ಇಲ್ಲಿ ಸರಾಸರಿ ಶೇ 94ರಷ್ಟು ವನ್ಯಜೀವಿಗಳ ಸಂಖ್ಯೆ ಕುಸಿತ ಕಂಡಿವೆ. ಹುಲ್ಲುಗಾವಲು, ನಿತ್ಯಹರಿದ್ವರ್ಣದ ಅರಣ್ಯ, ಒಣಭೂಮಿ ಸೇರಿದಂತೆ ವನ್ಯಜೀವಿ ಭೂಮಿಗಳನ್ನು ಬದಲಿಸಿರುವುದು, ವನ್ಯಜೀವಿಗಳ ಅತಿಯಾದ ಬಳಕೆ, ಸ್ಥಳೀಯವಲ್ಲದ ತಳಿಗಳನ್ನು ಪರಿಚಯಿಸಿರುವುದು ಮತ್ತು ಹವಾಮಾನ ಬದಲಾವಣೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
1 ಮಿಲಿಯನ್ ಪ್ರಾಣಿಗಳಿಗೆ ಕಂಟಕ
ಭೂಗ್ರಹದ ಶೇ 75ರಷ್ಟು ಹಿಮರಹಿತ ಭೂ ಪ್ರದೇಶದ ಸ್ವರೂಪವನ್ನೇ ಮನುಷ್ಯರು ಬದಲಿಸಿಬಿಟ್ಟಿದ್ದಾರೆ. ಪರಿಸರ ವ್ಯವಸ್ಥೆಯ ನಾಶವು ಈಗ 5 ಲಕ್ಷ ಪ್ರಾಣಿಗಳು, ಗಿಡಗಳು ಮತ್ತು 5 ಲಕ್ಷ ಕೀಟಗಳನ್ನು ಒಳಗೊಂಡಂತೆ 1 ಮಿಲಿಯನ್ ಜಾತಿಯ ಪ್ರಾಣಿಗಳಿಗೆ ಅಪಾಯ ತಂದೊಡ್ಡಿವೆ. ಮುಂಬರುವ ದಶಕಗಳು ಹಾಗೂ ಶತಮಾನಗಳಲ್ಲಿ ಭಾರಿ ಪ್ರಮಾಣದಲ್ಲಿ ವನ್ಯಜೀವಿ ನಾಶವಾಗಲಿದೆ ಎಂದು ವರದಿ ತಿಳಿಸಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪೂರ್ವ ಘಟ್ಟದ ಅಪರೂಪದ 'ಕಳಿಂಗ ಕಪ್ಪೆ' ಪತ್ತೆ
ಜಲಚರಗಳ ಅಳಿವು
ತಾಜಾ ನೀರಿನ ಜೀವವೈವಿಧ್ಯ ವೇಗವಾಗಿ ತಗ್ಗುತ್ತಿದೆ. ಕೈಗಾರಿಕಾ ಕ್ರಾಂತಿಯ ಬಳಿಕ ಜಗತ್ತಿನ ಶೇ 85ರಷ್ಟು ನೀರಾವರಿ ಭೂಮಿಗಳು ನಾಶವಾಗಿವೆ. ಜಲ ಸಸ್ತನಿಗಳು, ಪಕ್ಷಿಗಳು, ಉಭಯವಾಸಿಗಳು, ಸರೀಸೃಪಗಳು ಮತ್ತು ಮೀನುಗಳ ಸಂಖ್ಯೆ 1970ರಿಂದ ಪ್ರತಿವರ್ಷ ಶೇ 4ರಷ್ಟು ಕುಸಿತ ಕಾಣುತ್ತಿವೆ. ತಾಜಾ ನೀರಿನ ಜೀವಿಗಳಲ್ಲಿ ಅತ್ಯಂತ ಹೆಚ್ಚು ನಾಟಕೀಯ ಕುಸಿತ ಉಂಟಾಗಿದೆ.
ಜಲಪರಿಸರ ವ್ಯವಸ್ಥೆಯ ನಾಶ
'ನೀವು ನಿಸರ್ಗದ ಗೋಜಲಿನ ಚಿತ್ರಣಗಳನ್ನು ನೋಡಲು ಆರಂಭಿಸಿದ್ದೀರಿ. ಇದು ಎಚ್ಚರಿಕೆಯ ಗಂಟೆ. ವನ್ಯಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತದೆ ಎಂದೇ ಭಾವಿಸಿದ್ದೆವು. ಆದರೆ ತಾಜಾ ಜಲ ಪರಿಸರ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಾವು ನದಿಗಳಿಗೆ ಅಣೆಕಟ್ಟು ಕಟ್ಟುವ ಬಗೆ ಹಾಗೂ ತಾಜಾ ಜಲ ಮೂಲಗಳನ್ನು ವಿಶ್ವವ್ಯಾಪಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಆಹಾರ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ' ಎಂದು ಡಬ್ಲ್ಯೂಡಬ್ಲ್ಯೂಎಫ್ ಮುಖ್ಯ ವಿಜ್ಞಾನಿ ರೆಬೆಕ್ಕಾ ಶಾ ತಿಳಿಸಿದ್ದಾರೆ.
ಮಿತಿ ಮೀರಿದ ಸಾಮರ್ಥ್ಯ ಬಳಕೆ
'ನಮ್ಮ 21ನೇ ಶತಮಾನದ ಜೀವನಶೈಲಿಗೆ ಬೇಕಾದ ಆಹಾರ ಹಾಗೂ ಅವಶ್ಯಕತೆಗಳನ್ನು ಪೂರೈಸಲು ಭೂಮಿಯ ಜೈವಿಕ ಸಾಮರ್ಥ್ಯವನ್ನು ಮಿತಿಮೀರಿ ಬಳಸುತ್ತಿದ್ದೇವೆ. ಇದರ ಪ್ರಮಾಣ ಕನಿಷ್ಠ 56%ರಷ್ಟಿದೆ. ಅತ್ಯಂತ ಅಪಾಯದಲ್ಲಿರುವ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೇಲೆ ನಾವು ಹೆಚ್ಚು ಗಮನ ಹರಿಸುತ್ತೇವೆ. ಆದರೆ ಈಗಿರುವ ತಳಿಗಳು ತಮ್ಮ ಜೈವಿಕ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ' ಎಂದು ಶಾ ಹೇಳಿದ್ದಾರೆ.
Recommended Video
ಹವಾಮಾನ ವೈಪರೀತ್ಯ ಕಾರಣವಲ್ಲ
ವನ್ಯಜೀವಿಗಳ ನಾಶಕ್ಕೆ ಪ್ರಮುಖ ಮೂಲ ಕೃಷಿ. ಆಹಾರ ಉತ್ಪಾದನೆಗಾಗಿ ಕೃಷಿ ಭೂಮಿಯನ್ನು ವಿಸ್ತರಿಸುತ್ತಿರುವುದು. ಆದರೆ ಈ ಜೀವ ವೈವಿಧ್ಯದ ನಾಶವು ಜಗತ್ತಿನ ಆಹಾರ ಭದ್ರತೆಗೆ ಬೆದರಿಕೆ ಒಡ್ಡುತ್ತಿದೆ. ಜೀವವೈವಿಧ್ಯದ ನಷ್ಟಕ್ಕೆ ಹವಾಮಾನ ವೈಪರೀತ್ಯ ಅತಿ ದೊಡ್ಡ ಕಾರಣವೇನೂ ಆಗಿಲ್ಲ. ಜಾಗತಿಕ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯವೂ ಪ್ರಮುಖ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.