World Youth Skills Day: ಉದ್ಯೋಗಸೃಷ್ಟಿಗೆ ಜನಸಂಖ್ಯಾ ಬಲ ಬಳಕೆ ಹೇಗೆ?
ನವದೆಹಲಿ, ಜುಲೈ 15: ಯಾವುದೇ ಆರ್ಥಿಕತೆ ಬೆಳವಣಿಗೆ ಸಾಧಿಸಬೇಕಾದರೆ ಹಲವು ಅಂಶಗಳ ಸಮರ್ಪಕ ಸಂಯೋಗವಾಗಬೇಕು. ಉದ್ಯೋಗಗಳು ಹೆಚ್ಚಬೇಕು, ಉದ್ಯೋಗಿಗಳ ಉತ್ಪನ್ನಶೀಲತೆ ಹೆಚ್ಚಬೇಕು. ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು, ಅದಕ್ಕೆ ತಕ್ಕಂತೆ ಆರ್ಥಿಕ ನೀತಿಗಳು ರೂಪಿತವಾಗಬೇಕು.
ಭಾರತ ಭವಿಷ್ಯದಲ್ಲಿ 5 ಟ್ರಿಲಿಯನ್ ಡಾಲರ್ (400 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆ ರೂಪಿಸುವ ಗುರಿ ಹೊಂದಲಾಗಿದೆ. ಇದು ಸಾಕಾರವಾಗಬೇಕಾದರೆ ಸರ್ವತೋಮುಖ ಆರ್ಥಿಕ ಅಭಿವೃದ್ಧಿ ಆಗಬೇಕು. ಉದ್ಯೋಗ ಸೃಷ್ಟಿ ಇಲ್ಲದ ಆರ್ಥಿಕ ಅಭಿವೃದ್ಧಿ ಬಹುತೇಕ ಅಸಮತೋಲಿತ ಹಾಗು ಅಪ್ರಬುದ್ಧ ಎನಿಸುತ್ತದೆ.
ಹಣದುಬ್ಬರ ಎಫೆಕ್ಟ್; ಅಮೆರಿಕದಲ್ಲಿ ಆಹಾರಕ್ಕಾಗಿ ಹಾಹಾಕಾರ, ಫುಡ್ ಬ್ಯಾಂಕ್ಗಳ ಎದುರು ಕ್ಯೂ ನಿಂತ ಜನರು
ಉದ್ಯೋಗ ಸೃಷ್ಟಿ ಆಗುವುದು ಒಂದೆಡೆಯಾದರೆ, ಉದ್ಯೋಗಕ್ಕೆ ಅವಶ್ಯಕತೆ ಇರುವ ಕೌಶಲ್ಯಗಳಿರುವ ವ್ಯಕ್ತಿಗಳನ್ನು ತಯಾರಿಸುವುದು ಇನ್ನೊಂದು ಪ್ರಮುಖ ಸವಾಲು. ಸೂಕ್ತ ಕೌಶಲ್ಯಗಳು ಇಲ್ಲದ ಉದ್ಯೋಗಿಗಳಿಂದ ಉತ್ಪನ್ನಶೀಲತೆ ಅಪೇಕ್ಷಿಸುವುದು ಅಸಾಧ್ಯ. ಇದರಿಂದ ಉದ್ಯೋಗಸೃಷ್ಟಿಯ ಆಶಯಕ್ಕೆ ಹಿನ್ನಡೆಯಂತೂ ಹೌದು.
ಇಂದು ಜುಲೈ 15ರಂದು ವಿಶ್ವ ಯುವ ಕೌಶಲ್ಯಗಳ ದಿನವಾಗಿದೆ. ಭಾರತದಲ್ಲಿ ಯುವ ಜನತೆಗೆ ಕೌಶಲ್ಯಗಳ ಶಕ್ತಿ ತುಂಬುವಂಥ ವ್ಯವಸ್ಥೆ ಮತ್ತು ಸೌಕರ್ಯ ಇದೆಯಾ ಎಂಬುದನ್ನು ಅವಲೋಕಿಸಲು ಸಕಾಲ.]
ಸೇವಾ ವಲಯ
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸೇವಾ ವಲಯದ ಪಾಲು ಗಣನೀಯವಾಗಿ ಹೆಚ್ಚುತ್ತಿದೆ. ಇಲ್ಲಿ ಉದ್ಯೋಗ ಸೃಷ್ಟಿಗೆ ತಕ್ಕಂತೆ ಇದರ ಪ್ರಗತಿ ಅವಲಂಬಿತವಾಗಿದೆ. ಸರ್ವಿಸ್ ಸೆಕ್ಟರ್ನಲ್ಲಿ ವಿವಿಧ ರೀತಿಯ ಕೌಶಲ್ಯಗಳಿರುವ ವಿವಿಧ ವರ್ಗಗಳ ಕೆಲಸಗಾರರ ಅವಶ್ಯಕತೆ ಇದೆ. ಶಿಕ್ಷಣ, ಪ್ರವಾಸೋದ್ಯಮ, ಐಟಿ ಮುಂತಾದವು ಸರ್ವಿಸ್ ಸೆಕ್ಟರ್ ವ್ಯಾಪ್ತಿಗೆ ಬರುತ್ತವೆ.
ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿವೆ. ವಾಸ್ತವ ಸಂಗತಿ ಎಂದರೆ ಭಾರತದಲ್ಲಿ ಈ ವಲಯದಲ್ಲಿ ಬೇಡಿಕೆಗೆ ತಕ್ಕಷ್ಟು ಕುಶಲಕರ್ಮಿಗಳ ಸಂಖ್ಯೆ ಇಲ್ಲ. ಅಗತ್ಯ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಿಗಳ ಕೊರತೆ ಕಾಡುತ್ತಿದೆ. ಉದ್ಯೋಗ ಸೃಷ್ಟಿಗೆ ಅವಕಾಶ ಇದ್ದರೂ ಈ ಕೌಶಲ್ಯ ಸಮಸ್ಯೆ ಅಡ್ಡಿಯಾಗಿದೆ.
ಬ್ರಿಟನ್ ಬ್ಯಾಕ್ ಬೆಂಚರ್ಸ್, 1922 ಕಮಿಟಿ- ಪ್ರಧಾನಿ ರೇಸ್ನ ಸೋಜಿಗದ ಸಂಗತಿಗಳು
ಜನಸಂಖ್ಯಾ ಬಲ
ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಬೇಕಾದ ಅಗತ್ಯವಾಗಿರುವ ಉದ್ಯೋಗಿಗಳನ್ನು ಸೃಷ್ಟಿಸುವಷ್ಟು ಜನಸಂಖ್ಯಾ ಬಲ ಇದೆ. ಆದರೆ, ಪ್ರಮುಖ ಸವಾಲು ಇರುವುದು ಈ ಅಪಾರ ಜನಸಂಖ್ಯೆಯಲ್ಲಿ ವಿವಿಧ ರೀತಿಯ ಕೌಶಲ್ಯಗಳಿರುವ ಹಾಗೂ ಉದ್ಯೋಗಗಳಿಗೆ ಅರ್ಹವಾಗಿರುವ ವರ್ಗಗಳನ್ನು ಸೃಷ್ಟಿಸುವುದರಲ್ಲಿ.
ಕೆಲಸ ಮಾಡಲು ಅಸಮರ್ಥರಾದ ಜನರಿಗಿಂತ ಕೆಲಸ ಮಾಡುವವರ ಜನರ ಸಂಖ್ಯೆ ಹೆಚ್ಚಿದ್ದರೆ ಅದು ಆರ್ಥಿಕತೆಗೆ ಸಿಗುವ ಜನಸಂಖ್ಯಾ ಬಲವಾಗಿರುತ್ತದೆ. ಈ ಜನಸಂಖ್ಯಾ ಬಲ ನಿಜವಾಗಿಯೂ ಬಲವಾಗಿ ಪರಿಣಮಿಸಬೇಕೆಂದರೆ ಕೌಶಲ್ಯಗಳನ್ನು ಹೆಚ್ಚಿಸಬೇಕು. ಅದೇ ಆಶಯದಲ್ಲಿ ಕೇಂದ್ರ ಸರಕಾರದ ಸ್ಕಿಲ್ ಇಂಡಿಯಾ ಯೋಜನೆ ಇದೆ.
ಕೌಶಲ್ಯ ಭಾರತ
ಕೇಂದ್ರ ಸರಕಾರ 2015ರಲ್ಲಿ ಸ್ಕಿಲ್ ಇಂಡಿಯಾ ಅಭಿಯಾನದ ಭಾಗವಾಗಿ ಹಲವು ಯೋಜನೆ ಮತ್ತು ನೀತಿಗಳನ್ನು ಘೋಷಿಸಿತು. ಸೃಷ್ಟಿಯಾಗುವ ಉದ್ಯೋಗಗಳಿಗೆ ತಕ್ಕಂತೆ ಕುಶಲಕರ್ಮಿಗಳನ್ನು ಸೃಷ್ಟಿಸುವುದು ಈ ಸ್ಕಿಲ್ ಇಂಡಿಯಾದ ಆಶಯ.
ಇದರ ಜೊತೆಗೆ ಯುವ ಜನತೆಗೆ ಉದ್ಯೋಗಕ್ಕೆ ಅರ್ಹವಾದ ಕೌಶಲ್ಯ ಬೆಳೆಸುವುದರ ಜೊತೆಗೆ ಅವರೇ ಸ್ವಂತವಾಗಿ ಉದ್ಯಮ ಆರಂಭಿಸುವ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವುದು ಸ್ಕಿಲ್ ಇಂಡಿಯಾದ ಒಂದು ಆಶಯ. ಭಾರತದಲ್ಲಿ ಹೊಸ ಹೊಸ ಸ್ಟಾರ್ಟಪ್ಗಳು ತಲೆ ಎತ್ತುತ್ತಿವೆ. ಯುನಿಕಾರ್ನ್ ಕಂಪನಿಗಳು ತಯಾರಾಗುತ್ತಿವೆ. ವಿಶ್ವದ ಅನೇಕ ಹೂಡಿಕೆ ಸಂಸ್ಥೆಗಳು ಹೊಸ ಮಾದರಿಯ ಸ್ಟಾರ್ಟಪ್ಗಳಿಗೆ ಬೆಂಬಲವಾಗಿ ನಿಲ್ಲಲು ಹಾತೊರೆಯುತ್ತಿವೆ. ಉದ್ಯಮಶೀಲತೆಯ ಗುಣ ಇರುವ ಮತ್ತು ಅಗತ್ಯ ನಿರ್ವಹಣಾ ಕೌಶಲ್ಯ ಇರುವ ವ್ಯಕ್ತಿಗಳಿಗೆ ಉದ್ಯಮದಲ್ಲಿ ಬೆಳೆಯಲು ಒಳ್ಳೆಯ ಅವಕಾಶಗಳಿವೆ.
ಸ್ತ್ರೀ ವರ್ಗ
ಉದ್ಯೋಗ ಸೃಷ್ಟಿಗೆ ಒಳ್ಳೆಯ ಅವಕಾಶಗಳಿವೆ. ಆದರೆ, ಅದಕ್ಕೆ ಪೂರಕವಾಗಿ ಉದ್ಯೋಗಿಗಳು ಸಿಗಬೇಕೆಂದರೆ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳಾ ವರ್ಗದಲ್ಲಿ ಹೆಚ್ಚೆಚ್ಚು ಮಂದಿ ಉದ್ಯೋಗಕ್ಕೆ ತೆರೆದುಕೊಳ್ಳುವ ಅಗತ್ಯ ಇದೆ.
ತಂತ್ರಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಗೆ ಬಹಳ ಕಡಿಮೆ. ಈ ಕೊರತೆ ನೀಗಿಸಲು ಮಹಿಳೆಯರನ್ನು ಶಾಲಾ ಹಂತದಿಂದಲೇ ಪ್ರೇರೇಪಿಸುವ, ಕೌಶಲ್ಯ ಹೆಚ್ಚಿಸುವಂತಹ ನೀತಿಯನ್ನು ರೂಪಿಸಬೇಕಿದೆ.
ಒಂದು ಹಂತದವರೆಗೆ ಓದಿ ಬಳಿಕ ಮದುವೆಯಾಗುವುದೇ ಜೀವನ, ಅಷ್ಟೇ ಸಾಕು ಎನ್ನುವ ಸಂತೃಪ್ತಿ ಭಾವವನ್ನು ಮಹಿಳೆಯರ ಮನದಿಂದ ಹೋಗಲಾಡಿಸಬೇಕು. ಉದ್ಯೋಗ ಮಾಡಿದರೆ ಸ್ವಂತಕ್ಕೆ ಸಂಪಾದನೆ ಜೊತೆಗೆ ದೇಶಕ್ಕೂ ಸಂಪಾದನೆ ಆಗುತ್ತದೆ ಎಂಬ ಅರಿವು ಮೂಡಿಸುವ ಅಗತ್ಯತೆ ಇದೆ. ಶಾಲೆ ಮತ್ತು ಕಾಲೇಜು ಹಂತದಲ್ಲೇ ಹೆಣ್ಮಕ್ಕಳಿಗೆ ಇದರ ಅರಿವಿರಬೇಕು. ಹಾಗೆಯೇ ಪೋಷಕರಿಗೂ ತಿಳಿದಿರಬೇಕು.
ಪಟ್ಟಣ, ಗ್ರಾಮೀಣ ಭಾಗದ ಜನರು
ಕೌಶಲ್ಯಗಳು ಇರುವ ಉದ್ಯೋಗಿಗಳ ವರ್ಗ ಸೃಷ್ಟಿಸಲು ಸರಕಾರದ ಗಮನ ನಗರಗಳ ಮೇಲಷ್ಟೇ ಕೇಂದ್ರಿತವಾಗಿರಬಾರದು. ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿನ ಉತ್ಸಾಹಿ ಯುವಜನರನ್ನು ಬಳಸಿಕೊಳ್ಳಬಹುದು. ಹೀಗಾದಲ್ಲಿ ಉದ್ಯೋಗ ಸೃಷ್ಟಿಯೂ ಸರ್ವತೋಮುಖವಾಗಿರುತ್ತದೆ. ಗ್ರಾಮೀಣ ಭಾಗದ ಜನರೂ ಆರ್ಥಿಕವಾಗಿ ಮುಂಬರಲು ಮತ್ತು ಸಂಪಾದನೆಗೆ ಹೆಚ್ಚಿನ ಅವಕಾಶ ಪಡೆಯಲು ಇದು ನೆರವಾಗುತ್ತದೆ. ಆಗ ಮಾತ್ರ ಸ್ಕಿಲ್ ಇಂಡಿಯಾ ಯೋಜನೆಯ ಆಶಯಕ್ಕೆ ಸಾರ್ಥಕತೆ ಸಿಗುತ್ತದೆ.
(ಒನ್ಇಂಡಿಯಾ ಸುದ್ದಿ)