ವಿಶ್ವ ಗುಬ್ಬಚ್ಚಿ ದಿನ: ಕೇಳದಾಗಿದೆ ಚಿಲಿಪಿಲಿ ಸದ್ದು; ಚಿತ್ರದಲ್ಲಿ ತೋರಿಸುವ ವನ್ಯಜೀವಿಗಳ ಸಾಲಿಗೆ ಗುಬ್ಬಿ
ಕಾರವಾರ, ಮಾರ್ಚ್ 20: ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ದಶಕಗಳ ಹಿಂದಿನವರೆಗೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳು ಈಗ ಕಣ್ಮರೆಯಾಗಿವೆ. ಇಂದಿನ ಮಕ್ಕಳಿಗೆ ಚಿತ್ರದಲ್ಲಿ ತೋರಿಸುವಂತಾಗಿರುವ ವನ್ಯ ಪ್ರಾಣಿಗಳ ಸಾಲಿಗೆ ಗುಬ್ಬಚ್ಚಿಗಳು ಸೇರಿರುವುದು ಬೇಸರದ ಸಂಗತಿಯಾಗಿದೆ.
ಇನ್ನು ಗುಬ್ಬಿಗಳ ಬಗ್ಗೆ ಹೇಳುವುದಾದರೆ, ಗುಬ್ಬಚ್ಚಿ/ಗುಬ್ಬಿ (ಪಾಸರ್ ಡೊಮೆಸ್ಟಿಕಸ್) ವಿಶ್ವದೆಲ್ಲೆಡೆ ಕಂಡುಬರುವ ಪಾಸರೀಡೆ ಕುಟುಂಬಕ್ಕೆ ಸೇರಿದ ಪಕ್ಷಿ. ಚಿಕ್ಕ ಕೀಟಗಳು ಹಾಗೂ ಕಾಳುಗಳು ಇದರ ಆಹಾರವಾಗಿವೆ.
ಚಿಲಿಪಿಲಿ ಗುಬ್ಬಚ್ಚಿಯ ನಿಗೂಢ ಕಣ್ಮರೆ... ವಿಶ್ವ ಗುಬ್ಬಿ ದಿನದ ಆತಂಕ
ದೇಶದಲ್ಲಿವೆ ಐದು ಜಾತಿಯ ಗುಬ್ಬಿಗಳು
ಈವರೆಗೆ ವಿಶ್ವದಲ್ಲಿ 26 ವಿವಿಧ ಜಾತಿಯ ಗುಬ್ಬಿಗಳನ್ನು ಗುರುತಿಸಿದ್ದು, ಇದರಲ್ಲಿ ನಮ್ಮ ದೇಶದಲ್ಲಿ ಪಾಸರ್ ಡೊಮೆಸ್ಟಿಕಸ್, ಪಾಸರ್ ಹಿಸ್ಪಾನಿಯೊಲೆನ್ಸಸ್, ಪಾಸರ್ ಪೈರೊನಾಟಸ್, ಪಾಸರ್ ರುಟಿಲನ್ಸ್, ಪಾಸರ್ ಮೊಂಟನಸ್ ಎಂಬ 5 ವಿಭಿನ್ನ ಜಾತಿಯ ಗುಬ್ಬಿಗಳನ್ನು ಕಾಣಬಹುದು. ಇದರಲ್ಲಿ ಮನೆಗುಬ್ಬಿ ಸರ್ವವ್ಯಾಪಿ. ಇದರ ಜೀವಿತಾವಧಿ 3 ವರ್ಷ. ಪರಿಸರ ನಾಶ ಮತ್ತು (ಆಧುನಿಕ ಕಾಂಕ್ರೀಟ್ ಕಟ್ಟಡಗಳು ಗೂಡು ನಿರ್ಮಿಸಲು ಸೂಕ್ತವಲ್ಲ) ಗೂಡುಕಟ್ಟುವ ತಾಣಗಳ ನಾಶದಿಂದ, ಮೊಬೈಲ್ ಟವರ್, ಅವು ಹೊರಸೂಸುವ ತರಂಗಗಳು, ಶಬ್ದಮಾಲಿನ್ಯ, ಸೂಕ್ಷ್ಮ ಮಾಲಿನ್ಯ ಮತ್ತು ಮಿತಿಮೀರಿದ ಕೀಟನಾಶಕದ ಬಳಕೆಯಿಂದ ಗುಬ್ಬಿಯ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ.
ಗುಬ್ಬಚ್ಚಿಗಳ ಸಂತತಿ ಕ್ಷೀಣಿಸುತ್ತಿದೆ
"ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳು ಇದಕ್ಕೆ ಹೊರತಾಗಿಲ್ಲ. ಪಟ್ಟಣವಿರಲಿ, ಹಳ್ಳಿಯಾಗಲಿ ಹಂಚಿನ ಹಾಗೂ ಸಾಂಪ್ರದಾಯಿಕ ಮಡಿಗೆ ಮನೆಯ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದು ಸಾಮಾನ್ಯ. ಆಧುನಿಕತೆಗೆ ತಕ್ಕಂತೆ ಮಾನವ ಮನೆ ನಿರ್ಮಾಣಕ್ಕೆ ಬಳಸುವ ಕಚ್ಛಾವಸ್ತು ಮತ್ತು ವಿನ್ಯಾಸಗಳು ಗುಬ್ಬಿಗಳು ಗೂಡು ನಿರ್ಮಿಸಲು ಪೂರಕವಾಗದಿರುವುದು ಕೂಡಾ ಸಂತತಿ ಕ್ಷೀಣಿಸಲು ಒಂದು ಕಾರಣವಾಗಿದೆ'' ಎನ್ನುತ್ತಾರೆ ವೈಲ್ಡ್ಲೈಫ್ ವೆಲ್ಫೇರ್ ಸೊಸೈಟಿಯ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ.
ಸಂತತಿ ಕ್ಷೀಣಿಸಲು ಕಾರಣವೇನು?
ಹಿಂದಿನ ದಿನಗಳಲ್ಲಿ ಧಾನ್ಯಗಳನ್ನು ಅಂಗಡಿ/ ಸಂತೆಯಿಂದ ತಂದು ಮರದಿಂದ ಸ್ವಚ್ಛಗೊಳಿಸುವಾಗ ಕಾಳುಗಳನ್ನು ಮನೆ ಅಂಗಳಗಳಲ್ಲಿ ಗುಬ್ಬಿಗೋಸ್ಕರವೇ ಚೆಲ್ಲುತ್ತಿದ್ದರು. ಇದರಿಂದ ಗುಬ್ಬಿಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಬದಲಾದ ಆಧುನಿಕ ಜೀವನ ಶೈಲಿಯಿಂದಲೂ, ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಮೊಬೈಲ್ ಗೋಪುರದಿಂದ ಹೊರಸೂಸುವ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದ ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ತೊಂದರೆ, ಮಿತಿಮೀರಿದ ಶಬ್ದಮಾಲಿನ್ಯದಿಂದಾಗಿ ಸಹ ಗುಬ್ಬಿಗಳ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಬಹುದು. ಮನೆಗುಬ್ಬಿಗಳು ಪರಿಸರದ ನಿರಂತರ ಅವನತಿ/ ವಿಘಟನೆಯ ಸೂಚಕಗಳಾಗಿವೆ ಎಂದು ಮಂಜುನಾಥ ನಾಯಕ ಹೇಳುತ್ತಾರೆ.
ವಿಶ್ವ ಗುಬ್ಬಚ್ಚಿ ದಿನ ಆಚರಣೆ
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ನೇಚರ್ ಫಾರ್ ಎವರ್ ಸೊಸೈಟಿಯ ಸಂಸ್ಥಾಪಕ ಮೊಹ್ಮದ್ ದಿಲಾವರ್ ಮತ್ತು ಎಕೊ- ಸಿಸ್ ಆ್ಯಕ್ಷನ್ ಫೌಂಡೇಷನ್ ಫ್ರಾನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ.71ರಷ್ಟು ಕುಸಿದಿದೆ. ಈ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು ಗುಬ್ಬಚ್ಚಿಯನ್ನು 2012ರಲ್ಲಿ ದೆಹಲಿಯ ರಾಜ್ಯ ಪಕ್ಷಿಯಾಗಿ ಘೋಷಿಸಲಾಯಿತು. ಬಿಹಾರ ರಾಜ್ಯವು ಕೂಡ ಗುಬ್ಬಚ್ಚಿಯನ್ನು ರಾಜ್ಯ ಪಕ್ಷಿಯಾಗಿ ಘೋಷಿಸಿತು' ಎಂದು ಅವರು ವಿವರಿಸಿದರು.
ಗುಬ್ಬಿಗಳ ಸಂರಕ್ಷಣೆ ಹೇಗೆ?
ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಗುಬ್ಬಿಗಳು ಮನೆಯಲ್ಲಿ ಗೂಡು ನಿರ್ಮಿಸುವುದು ಸಾಮಾನ್ಯ. ಅದನ್ನು ಅಪಶಕುನವೆಂದು ಗೂಡು ನಾಶ ಮಾಡಬಾರದು ಎನ್ನುವುದು ಮಂಜುನಾಥ ನಾಯಕ ಅವರ ಕಳಕಳಿ.
ಪ್ರತಿ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಬಹುಮುಖ್ಯ. ಅರಣ್ಯ ವೃದ್ಧಿಯಲ್ಲಿ ಪಕ್ಷಿ ಸಂಕುಲ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲರ ಹೊಣೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಕರೆ ನೀಡುತ್ತಾರೆ.