ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಕಡಿತದಿಂದ ಜೀವ ಉಳಿಸಿಕೊಳ್ಳಲು ಯುವ ಸಂಶೋಧಕ ನೀಡಿದ ಸಲಹೆ

|
Google Oneindia Kannada News

ಜುಲೈ 16 ಇವತ್ತು ವಿಶ್ವ ಸರ್ಪಗಳ ದಿನ. ಮಾನ್ಯವಾಗಿ ಹಾವುಗಳೆಂದರೆ ಎಲ್ಲರಿಗೂ ಭಯ. ಹಾವು ಕಚ್ಚಿ ಬಿಟ್ಟರೆ ಅಂತೂ ಅರ್ಧ ಜನ ಭಯಕ್ಕೆ ಜೀವ ಬಿಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಾವುಗಳ ಬಗೆಗಿನ ತಿಳುವಳಿಕೆ ಹಾಗೂ ಮಾಹಿತಿ ಕೊರತೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹಾವುಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಯುವ ಪರಿಸರವಾದಿ ಓಂಕಾರ್ ಪೈ ಅಪರೂಪದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾವು ಕಚ್ಚಿದರೆ ನಿಜವಾಗಿಯೂ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.

ಚಿತ್ರ ಕೃಪೆ: ಓಂಕಾರ್ ಪೈ

ವಿಷಕಾರಿ ಹಾವುಗಳ ಚಿತ್ರಣ

ವಿಷಕಾರಿ ಹಾವುಗಳ ಚಿತ್ರಣ

ಭಾರತದ ಕೆಲವೇ ಹಾವುಗಳು ವಿಷಪೂರಿತವಾಗಿದ್ದು, ಬಹಳಷ್ಟು ಹಾವುಗಳು ನಿರುಪದ್ರವಿಗಳಾಗಿವೆ. ವಿಷಪೂರಿತ ಹಾವಿಗಳಲ್ಲಿ 4 ಹಾವುಗಳು ಸಾಮಾನ್ಯವಾಗಿ ನಮ್ಮ ಸುತ್ತ ಕಾಣಸಿಗುತ್ತವೆ. ಅವು ಯಾವುದೆಂದರೆ, ನಾಗರ ಹಾವು, ಕಟ್ಟು ಹಾವು (ಕಡಂಬಳ ಹಾವು) , ಕೊಳಕು ಮಂಡಲ ಹಾಗೂ ರಕ್ತ ಮಂಡಲ (ಬುಕ್ರ್ಯಾ) ಹಾವು. ಈ 4 ಹಾವುಗಳ ಚಿತ್ರವನ್ನು ಇಲ್ಲಿ ನೋಡಬಹುದು.

 ಹಾವುಗಳಿಗೆ ಬೇಕಿರುವುದು ಇಲಿಗಳು

ಹಾವುಗಳಿಗೆ ಬೇಕಿರುವುದು ಇಲಿಗಳು

ಹಾವುಗಳು ಆಹಾರ ಸರಪಣಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಪರಿಸರವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತವೆ. ಇವು ಇಲಿಗಳ ಬೆಳೆಯುತ್ತಿರುವ ಸಂಖ್ಯೆಯನ್ನು ಕಡಿತಗೊಳಿಸಿ, ಬೆಲೆ ಬಾಳುವ ಕೃಷಿ ಉತ್ಪನ್ನಗಳನ್ನು ಉಳಿಸಲು ನೆರವಾಗುತ್ತವೆ. ಬುದ್ಧಿಜೀವಿ ಎನಿಸಿಕೊಂಡ ಮಾನವ, ಸಮತೋಲನದ ವಿರುದ್ಧವಾದ ನಡುವಳಿಕೆಯನ್ನು ತೋರುತ್ತಿರುವುದು ಒಂದು ಮಹಾದುರಂತ. ಸಾಮಾನ್ಯವಾಗಿ ನಮ್ಮ ಮನೆಯ ಸುತ್ತ ಮುತ್ತ ಹಾವುಗಳು ಬರಲಿಕ್ಕೆ ಮುಖ್ಯ ಕಾರಣ ಇಲಿಗಳು. ತ್ಯಾಜ್ಯಗಳು ಇಲಿಗಳನ್ನು ಆಕರ್ಷಿಸುವುದರಿಂದ, ಹಾವುಗಳು ಇಲಿಗಳನ್ನರಸಿ ಬರುತ್ತವೆ. ಹಾಗಾಗಿ ತ್ಯಾಜ್ಯ ವಸ್ತುಗಳನ್ನು ಮನೆಯಿಂದ ನಿರ್ದಿಷ್ಟ ದೂರದಲ್ಲಿ ಎಸೆದರೆ ಹಾವುಗಳು ಸುಳಿಯುವುದಿಲ್ಲ. ಮರ ಗಿಡಗಳ ಕೊಂಬೆಗಳು ಮನೆಯ ಮಹಡಿಗೆ ಅಥವಾ ಕಿಟಕಿಗೆ ತಾಗು ವಂತಿದ್ದರೆ ಅವುಗಳ ಮುಖೇನ ಹಾವುಗಳು ಮನೆಯೊಳಗೆ ಪ್ರವೇಶಿಸಬಹುದು, ಇದಕ್ಕೆ ಅವಕಾಶ ಕೊಡಬಾರದು.

ನಾವು ಏನು ಮಾಡಬೇಕು ?

ನಾವು ಏನು ಮಾಡಬೇಕು ?

ಸಾಮಾನ್ಯವಾಗಿ ಹಾವು ಕಚ್ಚಿದರೆ ಮಂತ್ರ ಹಾಕಿಸುವುದು, ಏನೇನೋ ಎಲೆಗಳನ್ನು ತಿನ್ನಿಸುವ ಪದ್ಧತಿ ನಮ್ಮಲ್ಲಿ ಇದೆ. ಅದರಿಂದ ಯಾವ ವಿಷವೂ ಮಾನವನ ದೇಹದಿಂದ ದೂರವಾಗಲ್ಲ. ಸಾಮಾನ್ಯವಾಗಿ ವಿಷ ಪೂರಿತ ಹಾವುಗಳು ಕಚ್ಚಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಮೊದಲು ಎಲ್ಲರೂ ತಿಳಿದಿರಬೇಕು. ವಿಷವಲ್ಲದ ಹಾವು ಕಚ್ಚಿದರೂ ಏನೂ ಆಗಲ್ಲ ಎಂಬ ಧೈರ್ಯ ಮೊದಲು ನಮ್ಮಲ್ಲಿ ಇರಬೇಕು. ಹಾವಿನಿಂದ ಕಡಿತಕ್ಕೊಳಗಾದ ಭಾಗವನ್ನು ಆದಷ್ಟು ಅಲುಗಾಡಿಸದಿರಿ. ಬಳೆ, ಕೈಗಡಿಯಾರ, ಗೆಜ್ಜೆ, ಉಂಗುರದಂತಹ ರಕ್ತ ಸಂಚಾರಕ್ಕೆ ಅಡ್ಡಿ ಪಡಿಸುವಂತವುಗಳನ್ನು ತೆಗೆಯಬೇಕು. ಕಡಿತಕ್ಕೊಳಗಾದ ಭಾಗಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಬ್ಯಾಂಡೇಜನ್ನು ಕಟ್ಟುವುದು (ತೀರಾ ಗಟ್ಟಿಯಾಗಿ ಬೇಡ) ಇಲ್ಲಿ ನಾವು ರಕ್ತ ಸಂಚಾರವನ್ನು ನಿಯಂತ್ರಿಸಬೇಕೆ ಹೊರತು, ಸ್ಥಗಿತ ಗೊಳಿಸಬಾರದು. ಆದಷ್ಟು ಬೇಗ ಆಸ್ಪತ್ರೆಗೆ ತೆರಳಿ ಕಡಿತದ ನಂತರದ ಲಕ್ಷಣಗಳನ್ನು ವೈದ್ಯರಿಗೆ ತಿಳಿಸಿ. (ವಾಂತಿ ಬರುವಂತಾಗುವುದು, ರಕ್ತಸ್ರಾವ, ತಲೆನೋವು ಇತರ ಯಾವುದೇ ಲಕ್ಷಣಗಳು)

ಓಂಕಾರ್ ಪೈ ಕೊಟ್ಟಿರುವ ಸಲಹೆ

ಓಂಕಾರ್ ಪೈ ಕೊಟ್ಟಿರುವ ಸಲಹೆ

ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಹೆದರಿಸದಿರಿ. (ರಕ್ತದೊತ್ತಡ ಏರಿಕೆಗೆ ಕಾರಣವಾಗುತ್ತದೆ) ಕೋಳಿ ಪ್ರಯೋಗ, ಮಂಜುಗಡ್ಡೆ ಉಪಚಾರ ಮಾಡಬೇಡಿ. ಗಾಯದ ಗಾತ್ರ ಹಿಗ್ಗಿಸಿ, ಕಚ್ಚಿ ವಿಷ ಹೀರುವ ಪ್ರಯತ್ನ ಮಾಡಬೇಡಿ. ವಿಷದ ಪ್ರವಾಹವನ್ನು ಉತ್ತೇಜಿಸುವ ಯಾವುದೇ ಕ್ರಿಯೆ ಮಾಡಬಾರದು. ವಿನಾಕಾರಣ ಸಮಯ ವ್ಯರ್ಥ ಮಾಡದೇ ಆಸ್ಪತ್ರೆಗೆ ಹೋಗಬೇಕು. ಹಾವು ಕಚ್ಚಿದೆ, ವಿಷ ಹತ್ತಿಬಿಡ್ತು ಎಂದು ಹೆದರಿಸಿದರೆ ಖಂಡಿತ ಕಾವು ಕಚ್ಚಿಸಿಕೊಂಡ ವ್ಯಕ್ತಿಯಲ್ಲಿ ವಿಷವಿಲ್ಲದಿದ್ದರೂ ಬದುಕುವುದಿಲ್ಲ!

ಹಾವಿನ ಬಗ್ಗೆ ಭಯ ಬೇಡ

ಹಾವಿನ ಬಗ್ಗೆ ಭಯ ಬೇಡ

ಯಾವ ಎಲ್ಲಿ ಯಾವಾಗ ಬರುತ್ತದೆ ಅಂತ ಯಾರಿಗೂ ಗೊತ್ತಿರುವುದಿಲ್ಲ. ವಿಷಕಾರಿ ಹಾವುಗಳು ಮನೆಗೆ ಸೇರಿದರೆ ಭಯ ಮಿಗಿಲಾಗಿ ಅಪಾಯವೂ ಕಟ್ಟಿಟ್ಟ ಬುತ್ತಿ. ಹೀಗಾಗಿ ಹಾವುಗಳು ಮನೆ ಸಮೀಪ ಬಂದಾಗ ಏನೇನೋ ಮಾಡಿ ಕೆರಳಿಸಬಾರದು. ಹಾವು ಮನೆಯೊಳಗೆ ಬಂದರೆ ಅದರ ಚಲನವಲನ ಬಗ್ಗೆ ಗಮನವಿಡಬೇಕು. ತುಂಬಾ ಜನರು ಸೇರದಂತೆ ನೋಡಿಕೊಳ್ಳಬೇಕು. ಹಾವು ಹೆದರಿ ಅಲ್ಲೇ ಅವಿತು ಕೂರಬಹುದು. ಹಾವು ಹೊರಗೆ ಹೋಗಲು ಯತ್ನಿಸುತ್ತಿದ್ದರೆ, ಯಾವುದೇ ತೊಂದರೆ ಕೊಡದೆ ಅದನ್ನು ಹೊರ ಹೋಗಲು ಬಿಡಿ. ನಮಗೆ ತೊಂದರೆ ಕೊಡಲು ನಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ತಮ್ಮ ಆಹಾರವನ್ನು ಹುಡುಕಿ ಬರುತ್ತವೆ. ಹಾಗೆಯೇ ಹೊರಟು ಹೋಗುತ್ತವೆ. ಅರಣ್ಯ ಇಲಾಖೆಗೆ, ಸಂಬಂಧ ಪಟ್ಟವರಿಗೆ ಹಾಗೂ ಸ್ಥಳೀಯ ಉರಗ ರಕ್ಷಕರಿಗೆ ವಿಷಯ ತಿಳಿಸಿ.

English summary
World snake day: Advice from a young researcher to save lives from snake bites: information About Indian dangerous snakes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X