ವಿಶ್ವ ಸರ್ಪ ದಿನ: ಇಂಜಿನಿಯರಿಂಗ್ ಕೆಲಸ ಬಿಟ್ಟು ಹಾವುಗಳ ಹಿಂದೆ ಬಿದ್ದ ಟೆಕ್ಕಿ
ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಿಗೂ ಭಯ. ಆದರೆ, ಇಲ್ಲೊಬ್ಬ ಇಂಜಿನಿಯರ್ ಪದವೀಧರ ಕೈತುಂಬಾ ಸಂಬಳ ಸಿಗುವ ಅವಕಾಶ ಕೈ ಬೀಸಿ ಕರೆದರೂ ಹೋಗದೇ ಹಾವುಗಳ ಬದುಕಿನ ಬಗ್ಗೆ ಅರಿಯಲು ಕಾನನದಲ್ಲಿ ಹತ್ತು ವರ್ಷದಿಂದ ದಿನ ಕಳೆಯುತ್ತಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಸಿಗುವ ಅಪರೂಪದ ಹಾವುಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿಕ್ಕಂದಿನಿಂದಲೂ ಹಾವುಗಳ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದ ಈ ಯುವಕ ಇಡೀ ದಕ್ಷಿಣ ಭಾರತದಲ್ಲಿರುವ ಹಾವುಗಳು, ಅವುಗಳ ದಿನಚರಿ, ವಿಷಕಾರಿ ಸಂಗತಿ, ಹಾವು ದಾಳಿ ಮಾಡುವ ಮಹತ್ವದ ವಿಚಾರಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಾವುಗಳ ಬಗ್ಗೆ ಇತ್ತೀಚೆಗೆ ಟೆಡ್ಟಾಕ್ನಲ್ಲಿ ವಿಸ್ಮಯಕಾರಿ ಮಾಹಿತಿ ಹಂಚಿಕೊಂಡು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಈ ಯುವಕನ ಹೆಸರು ಓಂಕಾರ್ ಪೈ. ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ನಿವಾಸಿ... ವಿಶ್ವ ಹಾವು ದಿನದ ಅಂಗವಾಗಿ ಯುವ ಪರಿಸರ ವಾದಿಯ ಬಗ್ಗೆ ಒನ್ಇಂಡಿಯಾ ಕನ್ನಡ ಇಲ್ಲಿ ವಿಶೇಷ ವರದಿ ಪ್ರಸ್ತತ ಪಡಿಸುತ್ತಿದೆ.
ಚಿತ್ರ ಕೃಪೆ: ಓಂಕಾರ್ ಪೈ
ಇಂಜಿನಿಯರ್ ಹುಡುಗ ದಟ್ಟ ಕಾನನದತ್ತ ಪಯಣ
ಹಾವುಗಳ ಬಗ್ಗೆ ಇತ್ತೀಚೆಗೆ ಟೆಡ್ಟಾಕ್ನಲ್ಲಿ ವಿಸ್ಮಯಕಾರಿ ಮಾಹಿತಿ ಹಂಚಿಕೊಂಡು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಈ ಯುವಕನ ಹೆಸರು ಓಂಕಾರ್ ಪೈ. ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ನಿವಾಸಿ. ಚಿಕ್ಕಂದಿನಿಂದಲೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ ಓಂಕಾರ್ ಪೈ ಬಹುತೇಕ ಸಮಯನ್ನು ಪರಿಸರದ ಜತೆ ಕಳೆಯುತ್ತಿದ್ದರು. ಹಾವುಗಳ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದರು. ಇಂಜಿನಿಯರಿಂಗ್ ಪದವಿ ಮುಗಿಸಿರುವ ಓಂಕಾರ್ ಪೈಗೆ ಕೈತುಂಬಾ ಸಂಬಳದ ಪಡೆಯುವ ಅವಕಾಶವಿದ್ದರೂ ಹೋಗಲಿಲ್ಲ. ಚಿಕ್ಕಂದಿನಿಂದಲೂ ಪರಿಸರದ ಬಗ್ಗೆ ಬೆಳೆಸಿಕೊಂಡಿದ್ದ ಕಾಳಜಿಯಿಂದಾಗಿ ಹೆಗಲಿಗೆ ಕ್ಯಾಮರಾ ಹಾಕಿಕೊಂಡು ಕಾಡು ಸುತ್ತುತ್ತಿದ್ದಾರೆ. ಪಶ್ಚಿಮಘಟ್ಟದ ಕಾಡು ಗಳ ಜತೆಗೆ ದಕ್ಷಿಣ ಭಾರತದ ಕಾಡುಗಳಲ್ಲಿ ಓಡಾಡಿ ಅಪರೂಪದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಾವು ಕಡಿತದಿಂದ ಜೀವ ಉಳಿಸಿಕೊಳ್ಳಲು ಯುವ ಸಂಶೋಧಕ ನೀಡಿದ ಸಲಹೆ
ಹತ್ತು ವರ್ಷದಿಂದ ಕಾಡಿನಲ್ಲಿ ಅಲೆದಾಟ
ಓಂಕಾರ್ ಪೈ ಕಳೆದ ಹತ್ತು ವರ್ಷದಿಂದ ಹಾವು ಕಪ್ಪೆ, ಪರಿಸರ, ವಜ್ಯ ಜೀವಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೈ ತನ್ನ ಕ್ಯಾಮರಾದಲ್ಲಿ ಅಪರೂಪದ ಹಾವು ಮತ್ತು ಕಪ್ಪೆಗಳನ್ನು ಸೆರೆ ಹಿಡಿದಿದ್ದಾರೆ. ಅವುಗಳ ಬದುಕು, ಮಾನವನ ಮೇಲೆ ದಾಳಿ ಮಾಡುವ ಸಂದರ್ಭ, ವಿಷ ಸರ್ಪಗಳು, ವಿಷವಲ್ಲದ ಸರ್ಪಗಳು, ಅವುಗಳ ಸ್ವಭಾವ ತಿಳಿದು ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೇ ಕರ್ನಾಟಕದಲ್ಲಿರುವ ಅಪರೂಪದ ಕಪ್ಪೆ ಪ್ರಬೇಧಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಓಂಕಾರ್ ಪೈ ಕಲೆ ಹಾಕಿದ್ದಾರೆ. ಈಗಾಗಲೇ ಸಾಕಷ್ಟು ವನ್ಯ ಜೀವಿಗಳು ಕಣ್ಮರೆಯಾಗಿವೆ. ಇರುವ ವನ್ಯ ಜೀವಿಗಳ ಬಗ್ಗೆ ಅರಿವು ಮೂಡಿಸಿ ರಕ್ಷಣೆ ಮಾಡುವ ಸಣ್ಣ ಪ್ರಯತ್ನವಾಗಿ ಕಪ್ಪೆ ಹಾಗೂ ಹಾವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಅಧ್ಯಯನ ಮಾಡುತ್ತಿರುವುದಾಗಿ ಓಂಕಾರ್ ಪೈ ತಿಳಿಸಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸಿದ ಪುಸ್ತಕ
ಇನ್ನು ನಾವು ಕೇವಲ ನಾಗರಹಾವು, ಕೊಳಕುಮಂಡಲ, ಕಟ್ಲು ಹಾವು ಹೀಗೆ ಹತ್ತು ರೀತಿಯ ಹಾವು ನೋಡಿರಬಹುದು. ಆದರೆ, ಓಂಕಾರ್ ಪೈ ಅವರ ಕ್ಯಾಮರಾದಲ್ಲಿ ಅನೇಕ ಹಾವುಗಳನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸುಮಾರು 25 ರೀತಿಯ ಹಾವುಗಳು, ಅವು ಓಡಾಡುವ ಸಮಯ, ಅವುಗಳ ಕಚ್ವುವ ಸ್ವಭಾವದ ಬಗ್ಗೆ ಪುಟ್ಟ ಪುಸ್ತಕವನ್ನು ಹೊರ ತಂದಿದ್ದಾರೆ.ಅದನ್ನು ಉತ್ತರ ಕನ್ನಡ ಜನೆಗೆ ಹಂಚಿ ಜಾಗೃತಿ ಮೂಡಿಸಿದ್ದಾರೆ. ಪರಿಸರವಾದಿಯಾಗಿ ರೂಪಾಂತರಗೊಂಡಿರುವ ಓಂಕಾರ್ ಪೈ ಕೇವಲ ಹಾವುಗಳ ಬಗ್ಗೆ ಮಾತ್ರವಲ್ಲ ಅಪರೂಪದ ಕಪ್ಪೆಗಳ ಬಗ್ಗೆಯೂ ಅಧ್ಯಯನ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಓಂಕಾರ್ ಪೈ ಮನದಾಳದ ಮಾತು
ನಮ್ಮಲ್ಲಿ ವನ್ಯ ಜೀವಿಗಳ ಬಗ್ಗೆ ಮಾಹಿತಿ ಕೊರತೆಯಿದೆ. ಅದೇ ವಿದೇಶಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ. ಮೊದಲಿನಿಂದಲೂ ಕಾಡು, ಪರಿಸರ, ವನ್ಯ ಜೀವಿಗಳ ಮೇಲಿದ್ದ ಪ್ರೀತಿಯಿಂದ ಅದನ್ನೇ ನಾನು ಆಯ್ಕೆ ಮಾಡಿಕೊಂಡೆ. ಹಾವು ಮತ್ತು ಕಪ್ಪೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆ ಇದ್ದಿದ್ದರಿಂದ ಹೆಚ್ಚು ಒತ್ತು ನೀಡಿದ್ದೇನೆ. ಹೀಗಾಗಿ ಜನರಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇನ್ನು ವನ್ಯಜೀವಿ ಪೋಟೋಗ್ರಾಫರ್ ಆಗಿ ನಾನು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ವೃತ್ತಿ ಆಯ್ಕೆಯಿಂದ ಆರೋಗ್ಯಯುತ ಜೀವನ ಮಾಡಬಹುದು, ಆದರೆ ಐಶರಾಮಿ ಜೀವನಕ್ಕೆ ಆಸ್ಪದವಿಲ್ಲ. ಇದನ್ನ ಬದುಕನ್ನಾಗಿ ಸ್ವೀಕರಿಸುವರು ಸರಳ ಜೀವನ ಮಾಡಲಿಕ್ಕೆ ಕಡಿಮೆಯಿಲ್ಲ. ಪರಿಸರ, ವನ್ಯ ಜೀವಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾನು ಶಾಲೆ ತೆರೆದು ಸಂಶೋಧನಾತ್ಮಕ ಸಂಪತ್ತನ್ನು ಕ್ರೋಢೀಕರಿಸುವ ಕನಸು ಕಟ್ಟಿಕೊಂಡಿದ್ದೇನೆ ಎಂದು ಓಂಕಾರ್ ಪೈ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.