ಮನುಷ್ಯನೇ ಸೃಷ್ಟಿಸಿದ ಪ್ರಳಯ! ಅಳಿಸಿ ಹೋಗುತ್ತಾ ಮಾನವರ ಇತಿಹಾಸ?
ಬೇಡ ಬೇಡ ಅಂದರೂ ಕಾಡು ಕಡಿದಿದ್ದಾಯ್ತು, ಪ್ರಕೃತಿ ಮೇಲೆ ದೌರ್ಜನ್ಯ ಮಾಡಿದ್ದಾಯ್ತು. ವಾತಾವರಣಕ್ಕೆ ಬೇಕಾಬಿಟ್ಟಿ ಕಾರ್ಬನ್ನ ಬಿಡುಗಡೆ ಮಾಡಿದ್ದೂ ಆಯ್ತು. ಇದರ ಪರಿಣಾಮವನ್ನು ಮಾನವರು 'ಮಾಡಿದ್ದುಣ್ಣೋ ಮಾರಾಯ' ಎಂಬಂತೆ ಅನುಭವಿಸುತ್ತಿದ್ದಾರೆ. 200 ವರ್ಷಗಳಿಂದ ನಿರಂತರವಾಗಿ ಭೂಮಿ ಮೇಲೆ ನಡೆಸಿರುವ ದೌರ್ಜನ್ಯ ಫಲ ನೀಡುತ್ತಿದೆ. ಇದೀಗ ಉತ್ತರ ಧ್ರುವ ಪ್ರದೇಶದಿಂದ ಬೃಹತ್ ಹಿಮಪದರ ಕರಗಿ ತೇಲಿಕೊಂಡು ಬರುತ್ತಿದೆ ಎಂದು ಯುರೋಪ್ ಬಾಹ್ಯಾಕಾಶ ವಿಜ್ಞಾನಿಗಳು ಆಘಾತಕಾರಿ ಮಾಹಿತಿ ಕೊಟ್ಟಿದ್ದಾರೆ.
ಹಿಮಪದರ ಅದೆಷ್ಟು ದೊಡ್ಡದಿದೆ ಎಂದರೆ ಸುಮಾರು ಬೆಂಗಳೂರಿನಿಂದ ಮೈಸೂರಿನಷ್ಟು ಉದ್ದವಿದೆ. ಹಾಗೇ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ನೆಲಮಂಗಲದಷ್ಟು ಅಗಲವಿದೆ. ಇಷ್ಟೊಂದು ದೊಡ್ಡದಾದ 'A-76' ಹೆಸರಿನ ಈ ಹಿಮ ಬಂಡೆ ಉತ್ತರ ಧ್ರುವದ ತನ್ನ ಮೂಲಸ್ಥಾನ ತೊರೆದಿದೆ. ಇದು ನಿಧಾನವಾಗಿ ಸಮುದ್ರದಲ್ಲಿ ಕರಗುತ್ತಾ ಕರಗುತ್ತಾ ಬಂದು ಕಡೆಗೆ ಸಮುದ್ರ ನೀರಿನ ಮಟ್ಟ ಹೆಚ್ಚಿಸುತ್ತೆ. ಭವಿಷ್ಯದಲ್ಲಿ ಭೂಮಿ ಮೇಲೆ ಎಷ್ಟೋ ಜಾಗಗಳು ಇದೇ ಕಾರಣಕ್ಕೆ ಮುಳುಗಿ ಹೋಗಲಿವೆ. ಅದರಲ್ಲೂ ದ್ವೀಪಗಳ ಪಾಡು ತೀರಾ ಆತಂಕಕಾರಿ ಪರಿಸ್ಥಿತಿಯಲ್ಲಿದೆ.
ಮಾನವರ ಬದುಕು ಸರ್ವನಾಶ..?
ಅದು ಯಾವಾಗ ಮಾನವ ಆಧುನಿಕತೆ ಸೆಳೆತಕ್ಕೆ ಒಳಗಾದನೋ, ಅಂದಿನಿಂದಲೂ ಭೂಮಿ ಮೇಲಿನ ಇತರ ಜೀವಿಗಳಿಗೆ ನೆಮ್ಮದಿಯೇ ಇಲ್ಲ. ಈಗಾಗಲೇ ಮಾನವನ ದುರಾಸೆ ಪರಿಣಾಮ ನೂರಾರು ಬಗೆಯ ಪ್ರಾಣಿಗಳು, ಪಕ್ಷಿಗಳು ಹಾಗೂ ಸಸ್ಯ ಸಂತತಿ ನಾಶವಾಗಿ ಹೋಗಿದೆ. ಇದೀಗ ಆ ಸರದಿ ಪೆಂಗ್ವಿನ್ಸ್ ಪಾಲಿಗೆ ಬಂದು ನಿಂತಿದೆ. ಉತ್ತರ ಧ್ರುವ ಪ್ರದೇಶದಲ್ಲಿ ತಾಪಮಾನ ಏರಿಕೆ ಪರಿಣಾಮ ಭಾರಿ ಪ್ರಮಾಣದಲ್ಲಿ ಹಿಮ ಕರಗುತ್ತಿದೆ. ಇದರಿಂದ ಇತರ ಜೀವಿಗಳ ಜೊತೆಗೆ ಮಾನವರ ಬದುಕು ಕೂಡ ಕಂಟಕಕ್ಕೆ ಸಿಲುಕಿದೆ.
ಮಹಾ ವಿನಾಶಕ್ಕೆ ಕೌಂಟ್ಡೌನ್, ಹೊತ್ತಿ ಉರಿಯುತ್ತಿದೆ ತಂಪು ಪ್ರದೇಶ..!
ಹಿಮ ಕರಗಿದರೆ ರಷ್ಯನ್ನರಿಗೆ ಖಷಿ..!
ಹೌದು ಇದು ಕಷ್ಟವೆನಿಸಿದರೂ ಸತ್ಯ. ರಷ್ಯಾದ ಸೈಬೀರಿಯಾ ಭಾಗ ಉತ್ತರ ಧ್ರುವ ಪ್ರದೇಶಕ್ಕೆ ಸಮೀಪದಲ್ಲೇ ಇದ್ದು, ತುಂಬಾ ದೊಡ್ಡದಾದ ಪ್ರಾಂತ್ಯವಾಗಿದೆ. ಇಲ್ಲಿನ ಜನರು ಚಳಿಯ ಅಬ್ಬರಕ್ಕೆ ರೋಸಿ ಹೋಗಿದ್ದಾರೆ. ಈ ನಡುವೆ ಕೆಲವು ದಶಕಗಳಿಂದ ಸೈಬೀರಿಯಾ ಭಾಗದಲ್ಲಿ ಬಿಸಿ ಹೆಚ್ಚಾಗುತ್ತಾ ಹೋಗುತ್ತಿದ್ದು, ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ಅಷ್ಟೇ ಏಕೆ ಸೈಬೀರಿಯಾ ತಾಪಮಾನದಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ ನಾವು ಎಲ್ಲರಂತೆ ಜೀವನ ನಡೆಸಬಹುದು, ಹಿಮದಿಂದ ಮುಕ್ತಿ ಪಡೆಯಬಹುದು ಎಂಬ ಮಹದಾಸೆ ರಷ್ಯ ದೇಶದ ಸೈಬೀರಿಯನ್ನರಿಗೆ ಇದೆ. ಆದರೆ ತಾಪಮಾನ ಏರಿಕೆ ಇತರ ಜೀವಿಗಳಿಗೆ ಕಂಟಕವಾಗುತ್ತಿದೆ.
ದ್ವೀಪರಾಷ್ಟ್ರಗಳ ಜನರ ಪರದಾಟ..!
ದ್ವೀಪ ರಾಷ್ಟ್ರಗಳು ರಜಾ ದಿನಗಳನ್ನು ಕಳೆಯಲು ಮಾತ್ರ ಸುಂದರ ತಾಣಗಳು. ಆದರೆ ಅಲ್ಲಿಯೇ ಜೀವಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದರೂ, ಪ್ರಾಕೃತಿಕ ವಿಕೋಪಗಳಿಗೂ ದ್ವೀಪ ರಾಷ್ಟ್ರಗಳು ತುತ್ತಾಗುತ್ತವೆ. ಉದಾಹರಣೆಗೆ ಪದೇ ಪದೇ ಜ್ವಾಲಾಮುಖಿಗಳ ಸ್ಫೋಟ. ಭೂಕಂಪನ ಸೇರಿದಂತೆ ಸುನಾಮಿಯ ಭಯ. ಹೀಗೆ ಸುತ್ತಲೂ ನೀರಿದ್ದು, ನಡುವೆ ರೊಟ್ಟಿಯ ತುಂಡಿನಷ್ಟು ಭೂಮಿ ಹೊಂದಿರುವ ದ್ವೀಪ ರಾಷ್ಟ್ರಗಳು ನಿತ್ಯ ಜೀವ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಜನರಿಗೆ ಇದು ಅನಿವಾರ್ಯ ಕೂಡ. ಬಾಯಲ್ಲಿ ಬಿದ್ದ ಬಿಸಿ ತುಪ್ಪದಂತೆ ಜೀವನ ಸವೆಸುತ್ತಾರೆ.
ಬಿಸಿ ಹೊಗೆ ಧ್ರುವ ಪ್ರದೇಶದತ್ತ ನುಗುತ್ತಿದೆ..!
ಸೈಬೀರಿಯಾ ಅರಣ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಕಾರ್ಬನ್ ವಿಷ ಮಿಶ್ರಿತ ಗಾಳಿಯನ್ನ ಉತ್ತರ ಧ್ರುವ ಪ್ರದೇಶದ ಕಡೆಗೆ ತಳ್ಳುತ್ತಿದೆ. ಈಗಾಗಲೇ ಉತ್ತರ ಧ್ರುವದಲ್ಲಿ ಬಹುಪಾಲು ಮಂಜು ಕರಗಿಹೋಗಿದೆ. ಈ ಮಧ್ಯೆ ಕಾರ್ಬನ್ ವಿಷ ಹಾಗೂ ಬಿಸಿಗಾಳಿ ಅದೇ ಮಂಜು ಆವರಿತ ಪ್ರದೇಶದ ಕಡೆಗೆ ನುಗ್ಗುತ್ತಿರುವುದು ವಿನಾಶಕ್ಕೆ ನಾಂದಿ ಹಾಡಿದೆ. ಧ್ರುವ ಪ್ರದೇಶದಲ್ಲಿ ಹರಡಿರುವ ಹಿಮ ಮತ್ತಷ್ಟು ಕರಗುವಂತೆ ಈ ಗಾಳಿ ಪ್ರಚೋದಿಸುತ್ತಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಸಮುದ್ರದ ಮಟ್ಟ ಏರಿಕೆಯಾಗುವ ಜೊತೆಗೆ, ಭೂಮಿಯ ತಾಪಮಾನ ಹಿಡಿತಕ್ಕೆ ಸಿಗದಷ್ಟು ಹೆಚ್ಚಬಹುದೆಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.