ವಿಶ್ವ ಛಾಯಾಚಿತ್ರ ದಿನ 2021: ಈ ವರ್ಷ ವೈರಲ್ ಆದ ಚಿತ್ರಗಳಿವು
ನವದೆಹಲಿ, ಆ. 19: ಛಾಯಾಚಿತ್ರ/ಛಾಯಾಗ್ರಹಣ (ಫೋಟೋಗ್ರಫಿ) ಎಂಬುವುದು ಇಲ್ಲದಿದ್ದರೆ ಜಗತ್ತಿನ ಯಾವುದೇ ಘಟನೆಗಳನ್ನು ಸೆರೆಹಿಡಿಯಲು ಆಗುತ್ತಿರಲಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಈ ಹಿಂದಿನ ಘಟನೆಗಳನ್ನು ಬರೀ ಥಿಯರಿ ಆಗಿಯೇ ಉಳಿದು ಬಿಡುತ್ತಿತ್ತೇ ವಿನಃ, ಆ ದೃಶ್ಯ ಹೀಗಿತ್ತು ಎಂದು ನೋಡಲು ಸಾಧ್ಯವಾಗುತ್ತಿರಲಿಲ್ಲ. ಒಬ್ಬೊಬ್ಬರ ಊಹೆಯ ಮೇಲೆ ಎಲ್ಲಾ ಘಟನೆಗಳ ಚಿತ್ರಣ ನಿಂತಿರುತ್ತಿತ್ತು.
ಈ ಛಾಯಾಚಿತ್ರಗಳು ಎಂಬುವುದು ಇಲ್ಲದಿದ್ದರೆ ಈ ಜಗತ್ತಿನ ಎಲ್ಲಾ ಪ್ರಮುಖ ಘಟನೆಗಳು, ಮೈಲಿಗಲ್ಲುಗಳು ಬರೀ ಕಟ್ಟು ಕಥಯಂತೆ ಉಳಿಯುತ್ತಿದ್ದವು. ದಿನ ಕಳೆದಂತೆ ಈ ಛಾಯಾಚಿತ್ರಗಳು ಒಂದು ಹಳೆಯ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವ ಸಂತಸದ ಬುತ್ತಿಯಾಗಿದೆ. ಇತಿಹಾಸವನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ಸಾಧನ ಛಾಯಾಗ್ರಹಣವಾಗಿದೆ. ಈ ಛಾಯಾಚಿತ್ರಗಳು ಇತಿಹಾಸದ ಘಟನೆಗಳ ಟೈಮ್ಲೈನ್ ಇದ್ದಂತೆ, ಈ ಘಟನೆಗಳ ಬಗ್ಗೆ ಸಾಹಿತ್ಯ ನೀಡದ ವಿವರಣೆಯನ್ನು ಛಾಯಾಚಿತ್ರಗಳು ನೀಡಬಲ್ಲದು.
ವಿಶ್ವ ಫೋಟೊಗ್ರಫಿ ದಿನ: ವೀರೇಂದ್ರ ಹೆಗ್ಗಡೆಯವರ ಫೋಟೊಗ್ರಫಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!
ಇಂದು ಈ ಎಲ್ಲಾ ನೆನಪುಗಳ ಕೂಡಿಡುವ ವಿಶ್ವ ಛಾಯಾಚಿತ್ರ ದಿನ. ಪ್ರತಿ ವರ್ಷವೂ ಆಗಸ್ಟ್ 19 ರಂದು ವಿಶ್ವ ಛಾಯಾಚಿತ್ರ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. 1837 ರ ಇದೇ ದಿನ ಮೊಟ್ಟ ಮೊದಲ ಬಾರಿಗೆ ಫೋಟೋಗ್ರಫಿ ತಂತ್ರಜ್ಞಾನವನ್ನು ಪರಿಚಯಿಸಿದ್ದರಿಂದ ಈ ದಿನವನ್ನು ಫೋಟೋಗ್ರಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಫ್ರೆಂಚ್ ಸರ್ಕಾರವು ಡಾಗೆರೋಟೈಪ್ ಕ್ಯಾಮರಾಕ್ಕೆ ಪೇಟೆಂಟ್ ಖರೀದಿಸಿದ ದಿನ ಇದಾಗಿದೆ. ಹಾಗೆಯೇ ಇಡೀ ವಿಶ್ವವೇ ಈ ತಂತ್ರಜ್ಞಾನವನ್ನು ಉಚಿತವಾಗಿ ಬಳಸಲು ಅಂದಿನಿಂದ ಆರಂಭವಾಗಿದೆ. ಈ ವಿಶ್ವ ಛಾಯಾಚಿತ್ರ ದಿನದಂದು 2021 ರಲ್ಲಿ ಹೆಚ್ಚು ವೈರಲ್ ಆದ ಛಾಯಾಚಿತ್ರಗಳ ಬಗ್ಗೆ ನಾವು ತಿಳಿಯಲೇ ಬೇಕು, ಹಾಗಾದರೆ ಮುಂದೆ ಓದಿ.
ಫೋಟೋಗ್ರಾಫಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗಂಗಾವತಿ ಇಂಜಿನೀಯರ್
ತಾಲಿಬಾನ್ ಹುಟ್ಟಿಸಿದ ಆತಂಕ: ಯುಎಸ್ ವಿಮಾನದಲ್ಲಿ 600 ಪ್ರಯಾಣಿಕರು
ಯುಎಸ್ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್ ಪಡೆಯುತ್ತಿದ್ದಂತೆ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ತಾಲಿಬಾನ್ ಈಗ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ತಾಲಿಬಾನ್ನ ಈ ಹಿಂದಿನ ಆಡಳಿತದಿಂದಾಗಿ ರೋಸಿ ಹೋಗಿರುವ ಅಫ್ಘಾನ್ ಜನರು ತಮ್ಮ ಜೀವ ಉಳಿಸಿದರೆ ಸಾಕು ಎನ್ನುವ ನಿಟ್ಟಿನಲ್ಲಿ ಯುಎಸ್ ವಿಮಾನವನ್ನು ಗಡಿಬಡಿಯಲ್ಲಿ ಏರಿದ್ದಾರೆ. ಅಫ್ಘಾನಿಸ್ತಾನದ ಅದೇಷ್ಟೋ ಛಾಯಾಚಿತ್ರಗಳು ಈಗ ವೈರಲ್ ಆಗುತ್ತಿದ್ದರೂ ಅದರಲ್ಲಿ ಹೆಚ್ಚು ವೈರಲ್ ಆದ ಚಿತ್ರ ಇದಾಗಿದೆ. ಸುಮಾರು 600 ಪ್ರಯಾಣಿಕರು ಒಂದೇ ವಿಮಾನದಲ್ಲಿ ತುಂಬಿರುವ ದೃಶ್ಯ ಇದು. ಈ ಛಾಯಾಚಿತ್ರವೇ ಅಫ್ಘಾನಿಸ್ತಾನದ ಜನರಲ್ಲಿ ತಾಲಿಬಾನ್ ಆಡಳಿತದ ಬಗ್ಗೆ ಹೆಚ್ಚು ಆತಂಕ ಮನೆ ಮಾಡಿದೆ ಎಂಬುದುದಕ್ಕೆ ಸ್ಪಷ್ಟ ಉಹಾಹರಣೆಯಾಗಿದೆ.
ಒಲಿಂಪಿಕ್ಸ್ನಲ್ಲಿ ಉಲನ್ ಹೋಲಿಯುತ್ತಾ ಕೂತುಬಿಟ್ಟ!
ಟೋಕಿಯೋ ಒಲಿಂಪಿಕ್ಸ್ ಸಂದರ್ಭದ ಚಿತ್ರ ಇದು. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕೋವಿಡ್ ಅಲೆಯ ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿತ್ತು. ಎಲ್ಲಾ ದೇಶಗಳ ಅಥ್ಲೆಟ್ಗಳು ತಮ್ಮ ದೇಶಕ್ಕೆ ಪದಕಗಳನ್ನು ಗಳಿಸುವ ನಿಟ್ಟಿನಲ್ಲಿ ಆಡಿದ ಆಟಗಳ ಚಿತ್ರಗಳು ಒಂದೆಡೆ ಗಮನ ಸೆಳೆಯುತ್ತಿದ್ದರೆ ಇನ್ನೊಂದೆಡೆ ಈ ಒಂದು ಚಿತ್ರ ಮಾತ್ರ ಎಲ್ಲರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ. ಈ ಚಿತ್ರದಲ್ಲಿ ಬ್ರಿಟನ್ ಅಥ್ಲೆಟ್ ಟಾಮ್ ಡೀಲೆ ಮಹಿಳೆಯರ 3 ಮೀ ಸ್ಪ್ರಿಂಗ್ಬೋರ್ಡ್ ಪಂದ್ಯವನ್ನು ನೋಡುತ್ತಾ ಉಲನ್ ಅನ್ನು ಹೆಣೆಯುತ್ತಿರುವ ದೃಶ್ಯವಾಗಿದೆ. ಈ ಛಾಯಾಚಿತ್ರವು ವೈರಲ್ ಆಗುವ ಒಂದು ದಿನಕ್ಕೂ ಮುನ್ನ 27 ವರ್ಷದ ಟಾಮ್ ಡೀಲೆ 10 ಮೀ ಪ್ಲಾಟ್ಫಾರ್ಮ್ ಡೈವಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಎಲ್ಬಿಜಿಟಿಕ್ಯೂ ಐಕಾನ್ ಕೂಡಾ ಆಗಿರುವ ಟಾಮ್, ಉತ್ತಮ ಉಲನ್ ಹೆಣಿಗೆದಾರೂ ಹೌದು.
ಮೈದಾನದಲ್ಲಿ ಕುಸಿದು ಬಿದ್ದ ಕ್ರಿಶ್ಚಿಯನ್ ಎರಿಕ್ಸೆನ್: ಅಭಿಮಾನಿಗಳ ಕಣ್ಣೀರು
ಜೂನ್ನಲ್ಲಿ ನಡೆದ ಪಂದ್ಯದ ವೇಳೆ ಡೆನ್ಮಾರ್ಕ್ ಮಿಡ್ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸೆನ್ ಮೈದಾನದಲ್ಲಿ ಕುಸಿದು ಬಿದ್ದ ಬಳಿಕದ ದೃಶ್ಯ ಇದಾಗಿದೆ. ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಂತೆ ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳ ಹೃದಯ ಬಡಿತವೇ ನಿಂತಂತೇ ಆಗಿತ್ತು. ಕ್ರಿಶ್ಚಿಯನ್ ಎರಿಕ್ಸೆನ್ ಮೈದಾನದಲ್ಲಿ ಚಲನೆಯಲ್ಲದೆ ಮಲಗಿದ್ದರಿಂದ, ಡೆನ್ಮಾರ್ಕ್ ತಂಡದ ಸದಸ್ಯರು ಮತ್ತು ಎದುರಾಳಿ ಫಿನ್ಲ್ಯಾಂಡ್ ತಂಡದ ಸದಸ್ಯರು ಆತನ ಸಹಾಯಕ್ಕೆ ಧಾವಿಸಿದರು. ಕ್ರಿಶ್ಚಿಯನ್ ಎರಿಕ್ಸೆನ್ ಅನ್ನು ಕಂಡು ಅಭಿಮಾನಿಗಳು ಹಾಗೂ ಸಹ ಆಟಗಾರರು ಕಣ್ಣೀರು ಸುರಿಸುತ್ತಿದ್ದಂತೆ ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಎರಿಕ್ಸೆನ್ಗೆ ಗೌಪ್ಯತೆ ಮುಖ್ಯ ಎಂದು ಅರಿತು ತಂಡಗಳು ಆತನ ಸುತ್ತಲೂ ಕಾವಲಾಗಿ ನಿಂತಿತು. ಈ ಛಾಯಾಚಿತ್ರ ಆ ಸಂದರ್ಭದ್ದು ಆಗಿದೆ. ಈ ಸೋದರತ್ವ ಮತ್ತು ಬಂಧುತ್ವದ ಪ್ರತೀಕವಾದ ಈ ಚಿತ್ರವು ಭಾರೀ ವೈರಲ್ ಆಗಿದೆ. ಕ್ರಿಶ್ಚಿಯನ್ ಎರಿಕ್ಸೆನ್ ಬಳಿಕ ಚೇತರಿಸಿಕೊಂಡಿದ್ದಾರೆ. ಹಾಗೆಯೇ ಇಂಟರ್ ಮಿಲನ್ ತರಬೇತಿ ಮೈದಾನಕ್ಕೆ ಮರಳಿದ್ದಾರೆ.
ಮ್ಯಾನ್ಮಾರ್ ಮಿಲಿಟರಿ ಮುಂದೆ ಮಂಡಿಯೂರಿದ ಕ್ರೈಸ್ತ ಸನ್ಯಾಸಿನಿ
ನಾಗರಿಕ ನಾಯಕ ಆಂಗ್ ಸಾನ್ ಸೂಕಿಯ ಮಿಲಿಟರಿ ಉಚ್ಚಾಟನೆಯ ನಂತರ ಮ್ಯಾನ್ಮಾರ್ನಲ್ಲಿ ಮಿಲಿಟರಿ ಧಂಗೆಯಿಂದಾಗಿ ಭಾರೀ ಸಂಘರ್ಷ ಉಂಟಾಗಿತ್ತು. ಆ ನಡುವೆ ಈ ಒಂದು ಚಿತ್ರವು ಸಹಾನುಭೂತಿ ಹಾಗೂ ಧೈರ್ಯಕ್ಕೆ ಹಿಡಿದ ಕೈಗನ್ನಡಿಯಾಯಿತು. ಭಾರೀ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಗುಂಪಿನ ಮುಂದೆ ಮಂಡಿಯೂರಿ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಆನ್ ರೋಸ್ ನು ತಾವ್ಂಗ್ ಮನವಿ ಮಾಡುತ್ತಿರುವ ಚಿತ್ರ ಇದಾಗಿದೆ. "ಮಕ್ಕಳನ್ನು" ಉಳಿಸಿ ಮತ್ತು ಬದಲಾಗಿ ತನ್ನ ಜೀವವನ್ನು ನೀವು ತೆಗೆದುಕೊಳ್ಳಿ ಎಂದು ಮ್ಯಾನ್ಮಾರ್ ಮಿಲಿಟರಿ ಪಡೆಯ ಮುಂದೆ ಕ್ರೈಸ್ತ ಸನ್ಯಾಸಿನಿ ಬೇಡಿಕೊಂಡಿದ್ದಾರೆ. ಸಾಧಾರಣ ಕ್ರೈಸ್ತ ಸನ್ಯಾಸಿನಿಯರು ತೊಡುವ ಬಟ್ಟೆಯನ್ನು ಹಾಕಿಕೊಂಡಿರುವ ಸನ್ಯಾಸಿನಿ ತನ್ನ ಎರಡೂ ಕೈಗಳನ್ನು ಅಡ್ಡಲಾಗಿ ಹಿಡಿದು ಬೇಡಿ ಕೊಂಡಿದ್ದಾರೆ. ಹಾಗೆಯೇ ಈ ಚಿತ್ರವು ಶಾಂತಿ, ಸಹಾನುಭೂತಿ ಮತ್ತು ಶೌರ್ಯದ ಸಂಕೇತವಾಗಿ ಭಾರೀ ವೈರಲ್ ಆಗಿದೆ.
ಕೋವಿಡ್ನ ರಣಕೇಕೆಗೆ ಸ್ಮಶಾನದಲ್ಲಿ ನಂದದ ಬೆಂಕಿ
ಭಾರತದಲ್ಲಿ ಎರಡನೇ ಕೊರೊನಾ ವೈರಸ್ ಸಾಂಕ್ರಾಮಿಕದ ಅಲೆಯ ಮಧ್ಯೆ ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಸ್ಮಶಾನದಲ್ಲಿ ಸಾಲು ಸಾಲಾಗಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡುವ ದೃಶ್ಯ ಇದಾಗಿದೆ. ಈ ಕೊರೊನಾ ವೈರಸ್ ಸೋಂಕಿತರ ಸಾವಿನ ಉಲ್ಭಣವು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಮಾತ್ರವಲ್ಲದೇ ಸ್ಮಶಾನದಲ್ಲಿ ಭಾರೀ ಬಿಕ್ಕಟ್ಟನ್ನು ಉಂಟು ಮಾಡಿದೆ. ಹಲವಾರು ಕುಟುಂಬಕ್ಕೆ ತಮ್ಮ ಕುಟುಂಬ ಸದಸ್ಯರ ಅಂತಿಮ ವಿಧಿ ವಿಧಾನವನ್ನು ಸರಿಯಾದ ರೀತಿ ನಡೆಸಲು ಸಾಧ್ಯವಾಗದ ಸ್ಥಿತಿ ಬಂದೊದಗಿತ್ತು. ಈ ದುರ್ಘಟನೆಯ ದೃಶ್ಯವು ನವದೆಹಲಿಯ ಸ್ಮಶಾನ ಮೈದಾನದಲ್ಲಿ ಕೋವಿಡ್ -19 ಸಂತ್ರಸ್ತರ ಸಾಮೂಹಿಕ ಅಂತ್ಯಕ್ರಿಯೆಯ ವೈಮಾನಿಕ ದೃಶ್ಯವಾಗಿದೆ.
(ಒನ್ ಇಂಡಿಯಾ)
Recommended Video