ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ
ನವದೆಹಲಿ, ಜೂನ್.05: ಪ್ರತಿನಿತ್ಯ ಕೆಲಸದ ಒತ್ತಡ, ಬಿಡುವಿಲ್ಲದ ಸಮಯದಲ್ಲಿ ಮನಸಿಗೆ ಕೊಂಚ ನೆಮ್ಮದಿ ನೀಡುವುದೇ ಸುತ್ತಮುತ್ತಲಿನ ಪರಿಸರ. ಬದುಕಿನ ಹಾದಿಯಲ್ಲಿ ಪ್ರತಿಕ್ಷಣವೂ ನವಚೈತನ್ಯ, ಸ್ಪೂರ್ತಿ, ಉತ್ಸಾಹ ಹಾಗೂ ಉಲ್ಲಾಸವನ್ನು ತುಂಬುವ ಶಕ್ತಿ ನಾವೇ ಸೃಷ್ಟಿಸಿಕೊಂಡಿರುವ ಪರಿಸರಕ್ಕೆ ಇದೆ.
ಇಡೀ ಜಗತ್ತು ಜೂನ್.05 ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿದ್ದು, ಮನಸಿಗೆ ಖುಷಿ, ಜೀವನಕ್ಕೆ ನವೋಲ್ಲಾಸ ತುಂಬಿವ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾನವನು ಪರಿಸರದ ಶಿಶು ಎನ್ನುವ ಮಾತಿದೆ. ಅಂಥ ಮನುಷ್ಯ ಇಂದು ಪರಿಸರವನ್ನು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿಟ್ಟುಕೊಂಡಿದ್ದಾರೆ ಎನ್ನುವುದನ್ನು ಪರಾಮರ್ಶಿಸಿಕೊಳ್ಳಬೇಕಿದೆ.
ವಿಶ್ವ ಪರಿಸರ ದಿನ ಇಂದು: ವಿಶ್ವಸಂಸ್ಥೆ ಘೋಷ ವಾಕ್ಯ ಏನು?
1972ರಲ್ಲಿ ಮೊದಲ ಬಾರಿ ಘೋಷಿಸಿದ ಬಳಿಕ 1973ರ ಜೂನ್.05ರಿಂದ ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ಮನುಷ್ಯರ ಅತಿಯಾಸೆಗೆ ಪರಿಸರವು ನಾಶವಾಗುತ್ತಿದೆ. ಕಾಡು ಕಣ್ಮರೆಯಾಗಿ ಗಿಡ-ಮರಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ. ಇಂಥದರ ಮಧ್ಯೆಯೂ ಗಿಡ-ಮರ ಹಾಗೂ ಪರಿಸರದ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾ ಬದುಕು ಕಟ್ಟಿಕೊಳ್ಳಬೇಕಿದೆ. ಪುಟ್ಟ ವಯಸ್ಸಿನಲ್ಲೇ ಪರಿಸರದ ಮೇಲಿನ ಅಪಾರ ಪ್ರೀತಿ ಹಾಗೂ ಕ್ರಾಂತಿ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ಮಕ್ಕಳ ಕುರಿತು ವಿಶೇಷ ವರದಿ ಇಲ್ಲಿದೆ.
17ರ ಬಾಲೆಯಿಂದ ಪರಿಸರ ಬದಲಾವಣೆಯ ಕ್ರಾಂತಿ
ಪರಿಸರದ ಬಗ್ಗೆ ಇಂದಿನ ಜನಸಮುದಾಯ ಜಾಗೃತಿಗೊಂಡಿದೆ. ಗಿಡ-ಮರಗಳನ್ನೊಳಗೊಂಡ ಸುಂದರ ಪರಿಸರ ಸೃಷ್ಟಿಸಲು ಸರ್ಕಾರಗಳ ಎದುರು ಬೇಡಿಕೆ ಇಡುತ್ತಿದ್ದಾರೆ. ಸ್ವೀಡನ್ ನಲ್ಲಿ 17 ವರ್ಷದ ಕ್ರಾಂತಿಕಾರಿ ಯುವತಿ ಗ್ರೆಟಾ ಥಂಬರ್ಗ್ ಪರಿಸರ ಬದಲಾವಣೆಗೆ ಕ್ರಾಂತಿಯನ್ನೇ ಎಬ್ಬಿಸಿದ್ದರು. ಅದೇ ರೀತಿ ಭಾರತ ಸೇರಿದಂತೆ ವಿಶ್ವದಾದ್ಯಂತ ಪರಿಸರ ಸಂರಕ್ಷಣೆಗೆ ಪುಟ್ಟ ಮಕ್ಕಳು ಧ್ವನಿ ಎತ್ತಿರುವುದು ಉತ್ತಮ ಭವಿಷ್ಯದ ಮುನ್ಸೂಚನೆಯಂತಿದೆ.
|
8 ವರ್ಷದ ಬಾಲಕಿಯ ಪರಿಸರ ಕಾಳಜಿ ಅಮೋಘ
ಮಣಿಪುರದಲ್ಲಿ 8 ವರ್ಷದ ಲಿಸಿಪ್ರಿಯಾ ಕಂಗುಜಾಮ್ ಮಗು ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಬದಲಾವಣೆಯ ಕ್ರಾಂತಿಯ ಕೂಗಿಗೆ ಧ್ವನಿಗೂಡಿಸಿತು. 2018ರಿಂದಲೇ ಪರಿಸರದ ಪರವಾಗಿ ಹೋರಾಟಕ್ಕೆ ನಿಂತಿದ್ದು, ಏಳನೇ ವಯಸ್ಸಿನಲ್ಲೇ ಶಾಲೆಗೆ ಹೋಗುವುದನ್ನು ಬಿಟ್ಟಿತ್ತು. ಭಾರತದಲ್ಲಿ ಪರಿಸರ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನವದೆಹಲಿಯ ಸಂಸತ್ ಎದುರಿನಲ್ಲಿ ಕಳೆದ 2019ರ ಫೆಬ್ರವರಿಯಲ್ಲಿ ಪ್ರತಿಭಟನೆ ನಡೆಸಿತು.
2018ರಲ್ಲೇ ಮಗುವಿನ ಮಾತುಗಳು ಮನ ಮುಟ್ಟುವಂತಿತ್ತು
ಪ್ರಕೃತಿಯ ವಿಕೋಪದಿಂದ ಪುಟ್ಟ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದಾಗ. ನೆತ್ತಿ ಮೇಲಿನ ಸೂರನ್ನು ಕಳೆದುಕೊಂಡು ಜನರು ಬೀದಿಯಲ್ಲಿ ನಿಂತಾಗ ಅವರ ಪರಿಸ್ಥಿತಿಯನ್ನು ಕಂಡು ನಾನು ಕಣ್ಣೀರು ಹಾಕುತ್ತಿದ್ದೆನು. ತಮಗೆ ತಾವೇ ಸಹಾಯ ಮಾಡಿಕೊಳ್ಳಲಾಗದಂತಾ ಅಸಹಾಯಕ ಸ್ಥಿತಿಯಲ್ಲಿ ನಿಂತ ಜನರನ್ನು ಕಂಡು ಮನಸು ಮರುಕ ಪಡುತ್ತಿತ್ತು. ಆದರೆ ಇದಕ್ಕೆಲ್ಲ ಪ್ರಾಕೃತಿಕ ಬದಲಾವಣೆ ಹಾಗೂ ಪ್ರಕೃತಿಯು ಮನುಷ್ಯ ಸಂಕುಲದ ಮೇಲೆ ತೋರಿದ ಕೋಪದ ಸಂಕೇತವಾಗಿತ್ತು ಎಂದು 2018ರಲ್ಲೇ ಲಿಸಿಪ್ರಿಯಾ ಕಂಗುಜಾಮ್ ಸಮಾರಂಭವೊಂದರಲ್ಲಿ ಹೇಳಿದ್ದರು.
21 ದೇಶಗಳಲ್ಲಿ ಲಿಸಿಪ್ರಿಯಾ ಕಂಗುಜಾಮ್ ಪರಿಸರ ಕ್ರಾಂತಿಯ ಮಾತು
ಮಣಿಪುರ ಮೂಲದ 8 ವರ್ಷದ ಬಾಲಕಿಯ ಪರಿಸರ ಕ್ರಾಂತಿ ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆಯಿತು. 2019ರ ಡಿಸೆಂಬರ್ ನಲ್ಲಿ ಸ್ಪೇನ್ ನಲ್ಲಿ ನಡೆದ ಕಾಪ್-25 ಸಮ್ಮೇಳನದಲ್ಲಿ ಲಿಸಿಪ್ರಿಯಾ ಕಂಗುಜಾಮ್ ಮಾತನಾಡಿದ್ದರು. ಭಾರತವಷ್ಟೇ ಅಲ್ಲದೇ ವಿಶ್ವದ 21 ರಾಷ್ಟ್ರಗಳಲ್ಲಿ ಪರಿಸರ ಬದಲಾವಣೆ ಬಗ್ಗೆ ಲಿಸಿಪ್ರಿಯಾ ಕಂಗುಜಾಮ್ ಭಾಷಣ ಮಾಡಿದ್ದಾರೆ. ಭಾರತದಲ್ಲಿ ವಾಯುಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಬದಲಾವಣೆಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಗೊಳಿಸಬೇಕು. ಶಾಲಾ ಪಠ್ಯಯಲ್ಲಿ ಪರಿಸರ ಸಂಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಾ ಪಾಠವನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸುವಂತೆ ಹೋರಾಟ ನಡೆಸುತ್ತಿದ್ದಾರೆ.
ಭಾರತದಲ್ಲಿ ಪರಿಸರ ಕ್ರಾಂತಿ ನಡೆಸುತ್ತಿರುವ ಲಿಸಿಪ್ರಿಯಾ ಕಂಗುಜಾಮ್ ಅವರಿಗೆ ಡಾ.ಎಪಿಜೆ ಅಬ್ದುಲ್ ಕಲಾಂ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ, ಮತ್ತು ಭಾರತೀಯ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವಸಂಸ್ಥೆಗೆ ಕೇಂದ್ರ ಸರ್ಕಾರದ ವಿರುದ್ಧ ಬಾಲಕಿಯಿಂದ ದೂರು
ಪ್ರಾಕೃತಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಹರಿದ್ವಾರದ 12 ವರ್ಷದ ಬಾಲಕಿ ರಿಧಿಮಾ ಪಾಂಡೆ ವಿಶ್ವಸಂಸ್ಥೆಗೆ ದೂರು ನೀಡಿದ್ದರು. 2013ರಲ್ಲಿ ಉತ್ತರಾಂಖಡ್ ನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಸಾವಿರಾರು ಜನರು ನೆಲೆ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದರು. 2017ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದ 12ರ ಬಾಲಕಿ ಸಖತ್ ಸದ್ದು ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಹಸಿರು ನ್ಯಾಯಮಂಡಳಿಯು ದೇಶಾದ್ಯಂತ ಪರಿಸರ ಬದಲಾವಣೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿ ವಜಾಗೊಳಿಸಿತ್ತು.
ಗಂಗಾ ನದಿ ಶುದ್ಧೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರ
ಭಾರತದಲ್ಲಿ ಗಂಗಾ ನದಿ ಶುದ್ಧೀಕರಣ ವಿಚಾರದಲ್ಲೂ ಯಾವುದೇ ರೀತಿಯ ಉತ್ತಮ ಬೆಳವಣಿಗೆಗಳು ನಡೆದಿಲ್ಲ ಎಂದು ರಿಧಿಮಾ ಪಾಂಡೆ ದೂಷಿಸಿದ್ದಾರೆ. ನಾವು ಗಂಗಾ ನದಿಯನ್ನು ತಾಯಿಗೆ ಹೋಲಿಸುತ್ತೇವೆ. ಅದೇ ನದಿಯಲ್ಲಿ ಬಟ್ಟೆಗಳನ್ನು ತೊಳೆಯುತ್ತೇವೆ, ಕಸವನ್ನು ಎಳೆಯುತ್ತೇವೆ. ಸರ್ಕಾರವು ನದಿ ಶುದ್ಧೀಕರಣಗೊಳಿಸಲಾಗುತ್ತದೆ ಎಂದು ಬಾರಿ ಬಾರಿ ಹೇಳುತ್ತದೆ. ಆದರೆ ನದಿಯ ಸ್ಥಿತಿಯಲ್ಲೇ ಏನಾದರೂ ಬದಲಾವಣೆ ಕಂಡು ಬಂದಿದೆಯೇ. ಇಂದಿಗೂ ಗಂಗಾ ನದಿ ಅಶುದ್ಧವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಿಧಿಮಾ ಪಾಂಡೆ ಆಗ್ರಹಿಸಿದ್ದಾರೆ.
ರಿಧಿಮಾ ಪಾಂಡೆ ಅಭಿಯಾನ ಬಲು ವಿಭಿನ್ನ
ದೇಶದಲ್ಲಿ ಪರಿಸರ ಸಂಕ್ಷಣೆ ಉದ್ದೇಶದಿಂದ Save The Furure ಅಭಿಯಾನ ಆರಂಭಿಸಲಾಗಿದೆ. ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಿಧಿಮಾ ಪಾಂಡೆ ಕರೆ ನೀಡಿದ್ದಾರೆ. ನನಗೆ ಉತ್ತಮ ಭವಿಷ್ಯ ಬೇಕು, ನಾನು ನನ್ನ ಭವಿಷ್ಯವನ್ನು ಉಳಿಸಿಕೊಳ್ಳಬೇಕಿದೆ, ನಾನು ನಮ್ಮೆಲ್ಲರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ, ನಾವು ಮುಂದಿನ ಪೀಳಿಗೆಯ ಎಲ್ಲ ಮಕ್ಕಳು ಮತ್ತು ಜನರಿಗೆ ಉತ್ತಮ ಭವಿಷ್ಯವನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ರಿಧಿಮಾ ಪಾಂಡೆ ಕರೆ ನೀಡಿದ್ದಾರೆ.
|
ಪ್ಲಾಸ್ಟಿಕ್ ಬಳಕೆ ಅಪಾಯದ ಕುರಿತು ಬಾಲಕನ ಅಭಿಯಾನ
ಭಾರತದಾದ್ಯಂತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ 2018ರಲ್ಲಿ ಆದಿತ್ಯ ಮುಖರ್ಜಿ ಹೊಸ ಅಭಿಯಾನವನ್ನು ಆರಂಭಿಸಿದರು. ದೇಶದಲ್ಲಿ ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ಗಳನ್ನು ಬಳಸದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಆರಂಭಿಸಲಾಯಿತು. ಒಂದು ಬಾರಿ ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ನಿಂದ ಪ್ರಾಣಿಗಳಿಗೆ ಹೇಗೆ ಅಪಾಯವಾಗುತ್ತದೆ ಎನ್ನುವುದನ್ನು ಆದಿತ್ಯ ಮುಖರ್ಜಿ ಎತ್ತಿ ತೋರಿಸಿದ್ದರು. 2019ರಲ್ಲಿ ವಿಶ್ವಸಂಸ್ಥೆಯ ಯೂತ್ ಕ್ಲೈಮೇಟ್ ಆಕ್ಷನ್ ಸಮ್ಮಿಟ್ ನಲ್ಲಿ ಭಾಗವಹಿಸಿದ್ದ ಆದಿತ್ಯ ಮುಖರ್ಜಿ, ಪರಿಸರ ಬದಲಾವಣೆ ಅಭಿಯಾನದ ಒಂದು ಭಾಗವಾಗಿ ಬದಲಾದರು.