World Asteroid Day 2022- ಜೂನ್ 30ರಂದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ
ನವದೆಹಲಿ, ಜೂನ್ 30: ಇಂದು World Asteroid Day 2022, ಅಥವಾ ವಿಶ್ವ ಕ್ಷುದ್ರಗ್ರಹ ದಿನವಾಗಿ ಆಚರಿಸಲಾಗುತ್ತಿದೆ. ಈ ಬ್ರಹ್ಮಾಂಡದಲ್ಲಿರುವ ಅಸಂಖ್ಯಾತ ಆಕಾಶಕಾಯಗಳಲ್ಲಿ ಕ್ಷುದ್ರಗ್ರಹಗಳೂ ಇವೆ. ನಮ್ಮ ಸೌರ ಮಂಡಲದಲ್ಲಿ ನವಗ್ರಹಗಳಂತೆ ಕ್ಷುದ್ರ ಗ್ರಹಗಳೂ ಸೂರ್ಯನನ್ನು ಸುತ್ತುಹಾಕುತ್ತವೆ.
ನಮ್ಮ ಸೌರಮಂಡಲದಲ್ಲೇ ಸಾಕಷ್ಟು ಇರುವ ಕ್ಷುದ್ರಗ್ರಹಗಳಲ್ಲಿ ಹಲವು ನಮ್ಮ ಭೂಮಿಯ ಸಮೀಪವೇ ಹಾದುಹೋಗುತ್ತವೆ. ಹಿಂದೆಲ್ಲಾ ಇವು ಭೂಮಿಯನ್ನು ಅಪ್ಪಳಿಸಿದ ಉದಾಹರಣೆಗಳಿವೆ. ಸೈಬೀರಿಯಾದಲ್ಲಿ 114 ವರ್ಷಗಳ ಹಿಂದೆ ತುಂಗುಸ್ಕಾ ಎಂದು ಹೆಸರಿಸಲಾದ ಕ್ಷುದ್ರ ಗ್ರಹವೊಂದು ಅಪ್ಪಳಿಸಿತ್ತು.
ಕೋಟ್ಯಂತರ ವರ್ಷಗಳ ಹಿಂದೆ ಈ ಭೂಮಿಯನ್ನು ಆಳುತ್ತಿದ್ದ ಡೈನಾಸರ್ಗಳೆಂದ ದೈತ್ಯ ಪ್ರಾಣಿಗಳ ಇಡೀ ಸಂತತಿಯೇ ಅಳಿಸಿಹೋಗಲು ಕ್ಷುದ್ರ ಗ್ರಹವೇ ಕಾರಣ ಎಂದು ಶಂಕಿಸಲಾಗಿದೆ.
ಒಂದು ದೊಡ್ಡದಾದ ಕ್ಷುದ್ರಗ್ರಹವೇನಾದರೂ ಭೂಮಿಗೆ ಅಪ್ಪಳಿಸಿದರೆ ಡೈನಾಸರ್ಗಳಂತೆ ಮನುಷ್ಯನ ಸಂತತಿಯೂ ನಾಶವಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಕ್ಷುದ್ರಗ್ರಹಗಳ ಮೇಲೆ ಒಂದು ಕಣ್ಣಿಡುವುದು ಮನುಷ್ಯನಿಗೆ ಅನಿವಾರ್ಯ.
ಸಾಮಾಜಿಕ ಮಾಧ್ಯಮ ದಿನ 2022: ಮಹತ್ವ ಮತ್ತು ಹೇಗೆ ಆಚರಿಸಬೇಕು
ಈ ಕ್ಷುದ್ರಗ್ರಹಗಳು ಭೂಮಿಗೆ ಬಡಿಯುವ ಸಾಧ್ಯತೆ ಇದೆಯಾ, ಅದರಿಂದ ಆಗುವ ಪರಿಣಾಮಗಳೇನು, ಅದನ್ನು ತಡೆಯಲು ಮಾರ್ಗೋಪಾಯ ಇದೆಯಾ ಎಂಬಿತ್ಯಾದಿ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಕ್ಷುದ್ರ ಗ್ರಹ ದಿನ ಎಂದು ಆಚರಿಸಲಾಗುತ್ತಿದೆ.
ಏನಿದು ಕ್ಷುದ್ರಗ್ರಹ?
ಆಗಲೇ ತಿಳಿಸಿದಂತೆ ನಕ್ಷತ್ರ, ಗ್ರಹಗಳಂತೆ ಕ್ಷುದ್ರಗ್ರಹವೂ ಆಕಾಶ ಕಾಯ. ಇವುಗಳನ್ನು ಕಿರುಗ್ರಹಗಳೆಂದೂ ಕರೆಯುತ್ತಾರೆ. ಇಂಗ್ಲೀಷ್ನಲ್ಲಿ ಅಸ್ಟಿರಾಯ್ಡ್ ಎನ್ನುತ್ತಾರೆ. ಗ್ರಹಗಳಂತೆ ಇವೂ ಕೂಡ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತವೆ. ಮಂಗಳ ಮತ್ತು ಗುರು ಗ್ರಹದ ನಡುವಿನ ಕಕ್ಷೆಗಳಲ್ಲಿ ಈ ಗ್ರಹಗಳು ಸುತ್ತುತ್ತವೆ.
ಗ್ರಹಕ್ಕೂ ಈ ಕ್ಷುದ್ರಗ್ರಹಕ್ಕೂ ವ್ಯತ್ಯಾಸ ಇರುವುದು ಗಾತ್ರದಲ್ಲಿ. ಒಂದು ಸಾವಿರ ಕಿಮೀ ಅಥವಾ ಅದಕ್ಕಿಂತ ಕಡಿಮೆ ವ್ಯಾಸ ಇರುವ ಆಕಾಶಕಾಯವನ್ನು ಕ್ಷುದ್ರ ಗ್ರಹ ಎಂದು ಪರಿಗಣಿಸಲಾಗುತ್ತದೆ. ಒಂದು ಮನೆಯ ಗಾತ್ರಕ್ಕಿಂತ ಚಿಕ್ಕದಿರುವ ಕ್ಷುದ್ರ ಗ್ರಹಗಳನ್ನು ಮಿಟಿಯೋರಾಯ್ಡ್ (Meteoroids) ಎಂದು ವರ್ಗೀಕರಿಸಲಾಗುತ್ತದೆ.
ಈ ಮಿಟಿರಾಯ್ಡ್ಗಳು ಭೂಮಿಗೆ ಬಂದು ಅಪ್ಪಳಿಸುವುದು ಸಾಮಾನ್ಯ. ಆದರೆ ಸಣ್ಣ ಗಾತ್ರದಲ್ಲಿರುವ ಮಿಟಿರಾಯ್ಡ್ ಭೂಮಿಯ ವಾತಾರಣಕ್ಕೆ ಬರುವ ಮುನ್ನವೇ ಸುಟ್ಟು ಭಸ್ಮವಾಗಿ ಹೋಗುತ್ತದೆ. ಹೀಗಾಗಿ, ಇವುಗಳ ಪರಿಣಾಮ ನಮಗೆ ಆಗುವುದಿಲ್ಲ.
ಇನ್ನು, ದೊಡ್ಡ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದು ಬಹಳ ಅಪರೂಪ. ಒಂದು ಕಿಮೀ ವ್ಯಾಸ ಗಾತ್ರ ಇರುವ ಕ್ಷುದ್ರಗ್ರಹಗಳು ಸರಾಸರಿಯಾಗಿ 5 ಲಕ್ಷಕ್ಕೆ ಒಮ್ಮೆ ಭೂಮಿಗೆ ಅಪ್ಪಳಿಸುತ್ತವಂತೆ. 5 ಕಿಮೀ ಗಾತ್ರದ ಕ್ಷುದ್ರ ಗ್ರಹ ಪ್ರತೀ 2 ಕೋಟಿ ವರ್ಷಗಳಿಗೊಮ್ಮೆ ಡಿಕ್ಕಿ ಹೊಡೆಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ರಾಷ್ಟ್ರೀಯ ವೈದ್ಯರ ದಿನ 2022: ಈ ದಿನದ ದಿನಾಂಕ, ಇತಿಹಾಸ, ಥೀಮ್ ತಿಳಿಯಿರಿ
ತುಂಗುಸ್ಕಾ ಅವಘಡ
1908, ಜೂನ್ 30ರಂದು ರಷ್ಯಾದ ಸೈಬೀರಿಯಾದ ಒಂದು ಪ್ರದೇಶದಲ್ಲಿ ಪುಟ್ಟ ಕ್ಷುದ್ರಗ್ರಹವೊಂದು ಅಪ್ಪಳಿಸಿ ಭಾರೀ ಸ್ಫೋಟವಾಗಿತ್ತು. 160-200 ಅಡಿ ಗಾತ್ರದ ಇದ್ದ ಈ ಕ್ಷುದ್ರಗ್ರಹ ಅಪ್ಪಳಿಸಿದ ಪರಿಣಾಮ 2,150 ಚದರ ಕಿಮೀ ವ್ಯಾಪ್ತಿಯ ಅರಣ್ಯ ಪ್ರದೇಶದ 8 ಕೋಟಿ ಮರಗಳು ನೆಲಸಮವಾದವು. ಎರಡು ಸಾವಿರ ಚದರ ಕಿಮೀ ಎಂದರೆ ಸಣ್ಣ ಪ್ರದೇಶವಲ್ಲ. ನಮ್ಮ ಬೆಂಗಳೂರು ನಗರ ಸುಮಾರು 800 ಚದರ ಕಿಮೀ ಪ್ರದೇಶವಾಗಿದೆ. ಅಂದರೆ ನಮ್ಮ ಬೆಂಗಳೂರಿನಂಥ ಮೂರು ನಗರಗಳನ್ನು 150 ಅಡಿ ಗಾತ್ರದ ಹೆಬ್ಬಂಡೆ ನಾಶ ಮಾಡಬಹುದು ಎಂದಾದರೆ ಒಂದು ಕಿಲೋಮೀಟರ್ ಗಾತ್ರದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಏನಾಗಹುದು ಊಹಿಸಿ ನೋಡಿ.
ಪೂರ್ವ ಸೈಬೀರಿಯಾದಲ್ಲಿ 1908ರ ತುಂಗುಸ್ಕಾ ಘಟನೆಯ ನೆನಪಾಗಿ ವಿಶ್ವ ಕ್ಷುದ್ರಗ್ರಹ ದಿನವಾಗಿ ಅಚರಿಸಲು ನಿರ್ಧರಿಸಲಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ 2016ರ ಡಿಸೆಂಬರ್ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇದರ ಮಹತ್ವವೇನು?
ಆಕಾಶ ಕಾಯಗಳಿಂದ ಆಗಬಹುದಾದ ಅನಾಹುತ ಹಾಗೂ ಅದರ ಪರಿಣಾಮದ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಕ್ಷುದ್ರಗ್ರಹ ದಿನವಾಗಿ ನಿಗದಿ ಮಾಡಲಾಗಿದೆ.
ಬಹಳ ಮಂದಿಗೆ ಕ್ಷುದ್ರ ಗ್ರಹ ಎಂದರೆ ಏನು, ಅವು ಭೂಮಿಗೆ ಬಡಿದರೆ ಎಷ್ಟು ಅನಾಹುತ ಆಗಬಹುದು ಇತ್ಯಾದಿಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಹೇಳಲಾಗುತ್ತದೆ.
ಕ್ಷುದ್ರಗ್ರಹಗಳಲ್ಲಿ ಮನುಷ್ಯರಿಗೆ ಬಹಳ ಅಗತ್ಯ ಇರುವ ಸಂಪನ್ಮೂಲ ಇರಬಹುದು.ಕ್ಷುದ್ರಗ್ರಹಕ್ಕೆ ನೌಕೆಗಳನ್ನು ಕಳುಹಿಸುವ ಪ್ರಯತ್ನಗಳೂ ನಡೆದಿವೆ. ಮನುಷ್ಯರಿಗೆ ಸಾಕಷ್ಟು ಕೌತುಕ ಮತ್ತು ಭಯ ಎರಡನ್ನೂ ಒಟ್ಟೊಟ್ಟಿಗೆ ಮೂಡಿಸುವ ಕ್ಷುದ್ರಗ್ರಹದ ಬಗ್ಗೆ ತಿಳಿದುಕೊಂಡಷ್ಟೂ ಆಸಕ್ತಿಕರ ವಿಚಾರಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ.
ಆಚರಣೆ ಹೇಗೆ?
ವಿಶ್ವದ ವಿವಿಧೆಡೆ ಆಸ್ಟಿರಾಯ್ಡ್ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಅಭಿಯಾನಗಳು ಅಲ್ಲಲ್ಲಿ ನಡೆಯುತ್ತವೆ. ಇದು ಜೂನ್ 30ರಂದು ಮಾತ್ರವಲ್ಲ, ಬೇರೆ ದಿನಗಳಲ್ಲೂ ಅಭಿಯಾನಗಳು ಮುಂದುವರಿಯಬಹುದು.
ಈ ವರ್ಷ 'ಸ್ಮಾಲ್ ಈಸ್ ಬ್ಯೂಟಿಫುಲ್' ಎಂಬುದು ಥೀಮ್ ಆಗಿದೆ. ಗ್ರಹಗಳಿಗೆ ಹೋಲಿಸಿದರೆ ಕ್ಷುದ್ರಗ್ರಹ ಗಾತ್ರ ಕಡಿಮೆ ಇರಬಹುದು. ಆದರೆ, ಇವುಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದು ರೋಚಕತೆಯ ಆಗರ. ನಮಗೆ ಇದು ವಿಕೃತ ಆಕಾರದಂತೆ ಕಂಡರೂ ವಿಜ್ಞಾನಿಗಳ ಪಾಲಿಗೆ ಕ್ಷುದ್ರ ಗ್ರಹ ಸುಂದರ ರಮಣೀಯ. ಹೀಗಾಗಿ, ಈ ವರ್ಷ ಖಗೋಲಾಸಕ್ತರ ಅಭಿಪ್ರಾಯ ಮನ್ನಿಸಿ ಸ್ಮಾಲ್ ಈಸ್ ಬ್ಯೂಟಿಫುಲ್' ಎಂಬ ಥೀಮ್ ಇಡಲಾಗಿದೆ.
(ಒನ್ಇಂಡಿಯಾ ಸುದ್ದಿ)