ವಿಶೇಷ ಲೇಖನ; ಮಹಿಳಾ ಕಾನ್ಸ್ಸ್ಟೇಬಲ್ಗೆ ಸಬ್ ಇನ್ಸ್ಪೆಕ್ಟರ್ ಆಗುವ ಗುರಿ
ಚಾಮರಾಜನಗರ, ಮಾರ್ಚ್ 08: ನಗರದ ಸಶಸ್ತ್ರ ಮೀಸಲು ಪಡೆಯಲ್ಲಿ ಅಪರೂಪದ ಸಾಧಕಿಯೊಬ್ಬರು ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಳ್ಳಿಯ ಬಡತನದ ಬೇಗೆಯಲ್ಲಿ ಅರಳಿ ಬಂದ ಯುವತಿ ಕಾವೇರಿ ಅವರದ್ದು ಸ್ಪೂರ್ತಿದಾಯಕ ಬದುಕು.
ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಕಾವೇರಿ ಅರ್ಥಶಾಸ್ತ್ರ ಪದವಿಯನ್ನು 4 ಚಿನ್ನದ ಪದಕ ಹಾಗೂ 7 ನಗದು ಬಹುಮಾನಗಳನ್ನು ಪಡೆದು ಪೂರೈಸಿದ್ದಾರೆ. ಈ ಅಪರೂಪದ ಸಾಧಕಿ ಈಗ ಕಾನ್ಸ್ಟೇಬಲ್ ಆಗಿರುವುದು ಕೊಂಚ ದುಃಖಕರ ವಿಷಯವೇ.
ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ; 402 ಹುದ್ದೆ
ಕಾವೇರಿ ಅವರು 2020ರ ಆಗಸ್ಟ್ 24ರಂದು ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಸ್ಟೇಬಲ್ ಹುದ್ದೆಗೆ ಆಯ್ಕೆಯಾದರು. ತರಬೇತಿ ಪೂರ್ವದಲ್ಲಿ ನಗರದ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಹಿಳಾ ಸ್ವಸಹಾಯ ಗುಂಪುಗಳಿಗಾಗಿಯೇ ಪ್ರತ್ಯೇಕ ಇಲಾಖೆ
ಕಾವೇರಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದವರು. ಹಿಂದುಳಿದ ಉಪ್ಪಾರ ಸಮುದಾಯದ, ಕಡು ಬಡ ಕುಟುಂಬದಿಂದ ಬಂದವರು. ತಂದೆ ಬೆಳ್ಳಶೆಟ್ಟಿ, ತಾಯಿ ಮಲ್ಲಿಗಮ್ಮ. ಸಣ್ಣ ಪ್ರಮಾಣದ ಭೂಮಿಯುಳ್ಳ, ಒಣಬೇಸಾಯ ನೆಚ್ಚಿದ ಅತಿ ಸಣ್ಣ ರೈತರು.
ಮಹಿಳಾ ದಿನ; ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆ
2019ರ ಮೇ ನಲ್ಲಿ ನಡೆದ ಅಂತಿಮ ಬಿಎ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಅರ್ಥಶಾಸ್ತ್ರ ವಿಷಯದಲ್ಲಿ 1000 ಅಂಕಗಳಿಗೆ 910 ಅಂಕ ಗಳಿಸಿ ಇಡೀ ವಿಶ್ವ ವಿದ್ಯಾಲಯಕ್ಕೆ ಮೊದಲಿಗರಾದರು.
ಕಳೆದ ಅಕ್ಟೋಬರ್ನಲ್ಲಿ ನಡೆದ ಮೈಸೂರು ವಿವಿ ಘಟಿಕೋತ್ಸವದಲ್ಲಿ ಅವರಿಗೆ ನಾಲ್ಕು ಚಿನ್ನದ ಪದಕ ಮತ್ತು 7 ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು. ಚಿನ್ನದ ಪದಕ ಪಡೆದ ಕಾವೇರಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದ್ದರು. ಕಾವೇರಿ ಅವರ ಸಾಧನೆಯನ್ನು ಎಸ್ಪಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು.
ಹಿಂದುಳಿದ ಉಪ್ಪಾರ ಸಮುದಾಯದ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳೊಬ್ಬಳು ಪದವಿ ಪೂರೈಸುವುದೇ ಒಂದು ಸಾಹಸದ ಕೆಲಸ. ಈ ಸಮಾಜದಲ್ಲಿ ಬಾಲ್ಯ ವಿವಾಹಗಳು ಹೆಚ್ಚು. ಹೆಣ್ಣು ಮಕ್ಕಳನ್ನು ಎಸ್ಎಸ್ಎಲ್ಸಿವರೆಗೆ ಓದಿಸಿದರೆ ಅದೇ ಹೆಚ್ಚೆಂಬ ಭಾವನೆಯಿದೆ. ಇಂತಹ ಸನ್ನಿವೇಶದಲ್ಲಿ ಕಾವೇರಿ ಪದವಿ ಪೂರೈಸಿ, ಅರ್ಥಶಾಸ್ತ್ರ ವಿಷಯದಲ್ಲಿ ಇಡೀ ಮೈಸೂರು ವಿವಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಕಾವೇರಿ, "ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ನೋಡಿದಾಗ, ಓದಿ ಏನಾದರೂ ಸಾಧಿಸಿ ಉತ್ತಮ ಹುದ್ದೆ ಪಡೆಯಬೇಕೆಂಬ ಅಭಿಲಾಷೆ ಇತ್ತು. ಹಾಗಾಗಿ ಹೆಚ್ಚು ಶ್ರಮವಹಿಸಿ ಓದುತ್ತಿದ್ದೆ. ನಾನು ಕಷ್ಟಪಟ್ಟಿದ್ದಕ್ಕೂ ಉತ್ತಮ ಪ್ರತಿಫಲ ಬಂತು. ಪ್ರತಿ ಸೆಮಿಸ್ಟರ್ನಲ್ಲಿ ಅತ್ಯಧಿಕ ಅಂಕ ಪಡೆಯುತ್ತಿದ್ದೆ. ನನ್ನ ಆಸಕ್ತಿಯ ವಿಷಯ ಅರ್ಥಶಾಸ್ತ್ರ. ಇದರಲ್ಲಿ ವಿವಿಗೆ ಪ್ರಥಮ ಸ್ಥಾನ ಬಂತು" ಎಂದು ಹೇಳಿದರು.
"ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಉದ್ಯೋಗವೇ ಮುಖ್ಯವಾಯಿತು. ಪೊಲೀಸ್ ಹುದ್ದೆಯಲ್ಲೇ ಮುಂದುವರೆಯುತ್ತೇನೆ. ಹುದ್ದೆಯಲ್ಲಿದ್ದುಕೊಂಡೇ ಇಲಾಖಾ ಪರೀಕ್ಷೆ ಎದುರಿಸಿ ಪಿಎಸ್ಐ ಆಗುವ ಗುರಿ ಹೊಂದಿದ್ದೇನೆ" ಎಂದು ಕಾವೇರಿ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.