ಫೇಸ್ ಬುಕ್ ಪ್ರೀತಿಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿಕೊಂಡು ಬಂದ ಮಹಿಳೆ
ಪ್ರೀತಿ ಅಂದರೆ ಹಾಗೆ. ಕಾಲೇಜು, ಪಾರ್ಕ್, ಪಕ್ಕನ ಮನೆಯ ಬಾಲ್ಕನಿ, ಎದುರು ಮನೆಯ ಪಾರ್ಕಿಂಗ್ ಲಾಟ್ ಯುವಕ-ಯುವತಿಯರ ಮನಸ್ಸಿನಲ್ಲಿ ಈ ಪ್ರೀತಿ ಹುಟ್ಟುವುದಕ್ಕೆ ಇಂಥದ್ದೇ ಜಾಗ ಅಂತಾ ಇರುವುದಿಲ್ಲ. ಈಗ ಇದೇ ಲಿಸ್ಟಿಗೆ ಸೋಷಿಯಲ್ ಮೀಡಿಯಾ ಕೂಡ ಸೇರಿಕೊಂಡಿದೆ.
ಅಸಲಿಗೆ ಈಗ ಸೋಷಿಯಲ್ ಮೀಡಿಯಾ ಮೊದಲಿನಂತೆ ಉಳಿದಿಲ್ಲ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟ್ರಾಗ್ರಾಮ್ ನಲ್ಲಿಯೇ ಹುಟ್ಟಿಕೊಳ್ಳುವ ನೂರಾರು ಲವ್ ಸ್ಟೋರಿಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುವ ಪ್ರೀತಿಗೆ ವ್ಯಾಲಿಡಿಟಿ ಕಡಿಮೆ ಅನ್ನುವುದು ಕೆಲವರ ವಾದವಾಗಿದೆ. ಇಂಥದರ ಮಧ್ಯೆ ಬಾಂಗ್ಲಾದೇಶದ ಮಹಿಳೆಯ ದಿಟ್ಟ ನಡೆ ಎಲ್ಲರನ್ನೂ ಹುಬ್ಬೇರಿಸಿ ನೋಡುವಂತೆ ಮಾಡಿದೆ.
ಫೇಸ್ ಬುಕ್ ಪ್ರಿಯಕರನೊಂದಿಗೆ ಹುಟ್ಟಿದ್ದು ಒಲವು, ಪತಿಗೆ ಕೊಟ್ಟಿದ್ದು ಸಾವು!
ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ. ಭಾರತದಲ್ಲಿರುವ ತನ್ನ ಪ್ರೇಮಿಯನ್ನು ಮದುವೆ ಆಗುವುದಕ್ಕಾಗಿ ನೆರೆರಾಷ್ಟ್ರ ಬಾಂಗ್ಲಾದೇಶದಿಂದ ಮಹಿಳೆಯೊಬ್ಬರು ಈಜಿಕೊಂಡೇ ಬಂದಿರುವ ಘಟನೆ ನಡೆದಿದೆ. ಫೇಸ್ ಬುಕ್ ನಲ್ಲಿ ಪ್ರೀತಿ ಹುಟ್ಟಿದ್ದು ಹೇಗೆ, ಮಹಿಳೆಯು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದು ಹೇಗೆ?, ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಏಕೆ ಎನ್ನುವುದರ ಕುರಿತು ಈ ವರದಿಯಲ್ಲಿ ತಿಳಿದು ಕೊಳ್ಳೋಣ.
ಬಾಂಗ್ಲಾ ಯುವತಿ, ಭಾರತದ ಯುವಕನ ಲವ್ ಸ್ಟೋರಿ
ಫೇಸ್ಬುಕ್ ಬಳಸುವ ಸಂದರ್ಭದಲ್ಲಿ ಅಭಿಕ್ ಮಂಡಲ್ ಎಂಬ ಯುವಕನಿಗೆ ಬಾಂಗ್ಲಾದೇಶದ ಯುವತಿ ಕೃಷ್ಣಾ ಮಂಡಲ್ ಪರಿಚಯವಾಯಿತು. ಬಾಂಗ್ಲಾದೇಶದ ಯುವತಿ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿತು. ಮನಮೆಚ್ಚಿದ ಹುಡುಗನನ್ನೇ ಬದುಕಿನ ಸಂಗಾತಿಯಾಗಿ ಪಡೆದುಕೊಳ್ಳುವ ಮಹದಾಸೆಯನ್ನು ಹೊತ್ತ ಯುವತಿಗೆ ಭಾರತಕ್ಕೆ ಆಗಮಿಸುವ ದಾರಿ ಕಾಣಲಿಲ್ಲ. ಆಗ ತೆಗೆದುಕೊಂಡಿದ್ದೇ ಇದೊಂದು ನಿರ್ಧಾರ.
ಒಂದು ಗಂಟೆ ಈಜಿಕೊಂಡು ಬಂದ ಯುವತಿ
ಬಾಂಗ್ಲಾದೇಶದ 22 ವರ್ಷದ ಕೃಷ್ಣಾ ಮಂಡಲ್ ತನ್ನ ಪ್ರಿಯಕರನ್ನೇ ಮದುವೆಯಾಗುವುದಕ್ಕಾಗಿ ಭಾರತಕ್ಕೆ ಹೋಗಲು ನಿರ್ಧರಿಸಿದರು. ಆದರೆ ಭಾರತಕ್ಕೆ ಆಗಮಿಸಲು ಪಾಸ್ ಪೋರ್ಟ್ ಹೊಂದಿರಲಿಲ್ಲ. ಹೀಗಾಗಿ ಅಕ್ರಮವಾಗಿಯೇ ಭಾರತದ ಗಡಿಯನ್ನು ಪ್ರವೇಶಿಸಲು ತೀರ್ಮಾನಿಸಿದರು. ಸುಂದರ್ಬನ್ನ ಅರಣ್ಯವನ್ನು ದಾಟುತ್ತಾ ಭಾರತವನ್ನೇ ಪ್ರವೇಶಿಸಿದರು. ದಟ್ಟ ಕಾಡಿನಲ್ಲಿ ದಿಟ್ಟತನದಿಂದ ನಡೆದುಕೊಂಡು ಬಂದ ಮಹಿಳೆಯು ಅಲ್ಲಿಂದ ಒಂದು ಗಂಟೆಗಳವರೆಗೂ ನೀರಿನಲ್ಲಿ ಈಜಿಕೊಂಡು ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಕೃಷ್ಣಾ ಮಂಡಲ್-ಅಭಿಕ್ ಮಂಡಲ್ ಮದುವೆ
ಮೂರು ದಿನಗಳ ಹಿಂದೆಯಷ್ಟೇ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣಾ ಮಂಡಲ್ ಮತ್ತು ಅಭಿಕ್ ಮಂಡಲ್ ವೈವಾಹಿಕ ಬದುಕಿಗೆ ಕಾಲಿಟ್ಟರು. ಆದರೆ ಬಾಂಗ್ಲಾದೇಶದಿಂದ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಕೃಷ್ಣಾ ಮಂಡಲ್ ಅವರನ್ನು ಪೊಲೀಸರು ಬಂಧಿಸಿದರು. ಯಾವುದೇ ಪಾಸ್ ಪೋರ್ಟ್ ಹೊಂದಿರದೇ ಅಕ್ರಮವಾಗಿ ಗಡಿ ಪ್ರವೇಶಿಸಿದ ಮಹಿಳೆಯನ್ನು ಬಾಂಗ್ಲಾದೇಶ ಹೈಕಮಿಷನ್ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಚಾಕೋಲೇಟ್ ಖರೀದಿಗಾಗಿ ಬಾಂಗ್ಲಾದಿಂದ ಭಾರತಕ್ಕೆ ಆಗಮನ
ಇದೇ ವರ್ಷದ ಆರಂಭದಲ್ಲಿ, ಬಾಂಗ್ಲಾದೇಶದ ಯುವಕನೊಬ್ಬ ಚಾಕೋಲೇಟ್ ಖರೀದಿಸುವುದಕ್ಕಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿಕೊಂಡೇ ಬಂದಿದ್ದರು. ಎಮಾನ್ ಹೊಸೈನ್ ಸಣ್ಣ ನದಿಯನ್ನು ದಾಟಿ ತನ್ನ ನೆಚ್ಚಿನ ಚಾಕೊಲೇಟ್ ಬಾರ್ ಅನ್ನು ಪಡೆಯಲು ಭಾರತದ ಗಡಿಯನ್ನು ದಾಟಿದ್ದರು. ಈ ವ್ಯಕ್ತಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ತದನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಮಾನ್ ಹೂಸೈನ್ ಅನ್ನು ವಿಚಾರಣೆಗೊಳಪಡಿಸಿದ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.