ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಅಶೋಕ್ ಮುಖಾಮುಖಿ?!
Recommended Video
ರಾಜ್ಯ ಬಿಜೆಪಿಯಲ್ಲಿ ಈಗ ಮಂಡ್ಯ ಲೋಕಸಭೆ ಸ್ಥಾನಕ್ಕೆ ಸಂಬಂಧಿಸಿದಂತೆ ವರಿಷ್ಠರ ಮೌನ ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಇದರ ಜತೆಗೆ ಕೆಲವು ರಾಜ್ಯ ನಾಯಕರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಖಚಿತ ಮೂಲಗಳ ಪ್ರಕಾರ, ನೀವು ಸ್ಪರ್ಧೆಗೆ ಸಿದ್ಧರಿರಿ ಎಂಬ ಸೂಚನೆಯನ್ನು ಕೆಲವರಿಗೆ ಈಗಾಗಲೇ ನೀಡಿಯೂ ಆಗಿದೆ.
ಮೇಲ್ಮೈಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದೆ, ಒಳಗೇ ಹರಿಯುವ ವಿದ್ಯುತ್ ನಂತೆ ಬೆಳವಣಿಗೆಗಳು ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿವೆ. ಅದರಲ್ಲೂ ಯಾವಾಗ ದೇವೇಗೌಡರು ಈ ಸಲ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವು ಸಿಕ್ಕಿತೋ ಆಗಿನಿಂದ ಬಿಜೆಪಿಯು ಸಹ ಸರಿಯಾದ ನಡೆಯನ್ನೇ ಮುಂದಿಡಲು ಆಲೋಚಿಸುತ್ತಿದೆ.
ಬಿಜೆಪಿಯೊಳಗೆ 'ಸಾಮ್ರಾಟ್' ಅಶೋಕ ಸಾಮ್ರಾಜ್ಯದ ಅಂತ್ಯ ಕಾಲ ಸನ್ನಿಹಿತವೇ?!
ದೇವೇಗೌಡರ ವಿರುದ್ಧ ಗೆಲುವು ಅಸಾಧ್ಯದ ಮಾತು. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡು ಅಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸಿದರೆ ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ ಎಂಬುದು ಒಂದು ಲೆಕ್ಕಾಚಾರ. ಗೆದ್ದುಬಿಟ್ಟರೆ, ಆ ಮಾತು ದೂರದಲ್ಲಿ ದೂರವಾಯಿತು (ಏಕೆಂದರೆ, ಮಂಡ್ಯದಲ್ಲಿ ಏಳಕ್ಕೂ ಏಳು ಸ್ಥಾನವೂ ಜೆಡಿಎಸ್ ತೆಕ್ಕೆಯಲ್ಲಿದೆ).
ದೇವೇಗೌಡರ ವಿರುದ್ಧ ಕಣಕ್ಕಿಳಿಯುತ್ತಾರಾ ಅಶೋಕ್
ಆದರೂ ಕಾಂಗ್ರೆಸ್ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು, ಸರಕಾರ ರಚನೆ ಮಾಡಿದ ಸಿಟ್ಟನ್ನು ಮತದಾರರು ಹೊರಹಾಕಿದರೆ ಫಲಿತಾಂಶ ತಾರುಮಾರು ಆಗಬಹುದು ಎಂಬ ಸಣ್ಣ ನಿರೀಕ್ಷೆ-ಭರವಸೆ ಕೂಡ ಬಿಜೆಪಿಗೆ ಇದೆ. ಆದರೆ ದೇವೇಗೌಡರ ವಿರುದ್ಧ ಯಾರನ್ನು ಅಖಾಡಕ್ಕೆ ಇಳಿಸುತ್ತಾರೆ? ಜೆಡಿಎಸ್ ಭದ್ರಕೋಟೆಯ ಕನಿಷ್ಠ ಎರಡು ಮೂರು ಕಲ್ಲಾದರೂ ಮುಕ್ಕು ಮಾಡಬಲ್ಲಂಥ ತಾಕತ್ತು ಇರುವವರು ಯಾರು? ಎಂಬ ಲೆಕ್ಕಾಚಾರ ಶುರುವಾಗಿದೆ. ಈ ಸಲ ಲೋಕಸಭೆ ಚುನಾವಣೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ವಹಿಸಬಹುದು ಎಂಬುದು ಒಂದು ಮಾಹಿತಿ. ಇಲ್ಲ, ಸ್ವತಃ ಅವರನ್ನೇ ದೇವೇಗೌಡರ ವಿರುದ್ಧ ಅಭ್ಯರ್ಥಿಯನ್ನಾಗಿ ಮಾಡುತ್ತಾರೆ ಎಂಬುದು ಮತ್ತೊಂದು ಸುತ್ತಿನ ಸುದ್ದಿ. ಆದರೆ ಇವೆರಡರಲ್ಲಿ ಯಾವುದೇ ನಿಜವಾದರೂ ಅಶೋಕ್ ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲೇ ಬೇಕಾದ ದೊಡ್ಡ ಪರೀಕ್ಷೆ ಎಂಬುದಂತೂ ಸತ್ಯ.
ಜೆಡಿಎಸ್ಗೆ ಆನೆ ಜತೆ ಲವ್, ಕಾಂಗ್ರೆಸ್ ಜತೆ ಮದುವೆ: ಅಶೋಕ್ ಲೇವಡಿ
ಯುದ್ಧ ಗೆದ್ದರೆ ಕಷ್ಟ, ಸೋತರೆ ಮತ್ತೂ ಕಷ್ಟ
ಸ್ವತಃ ಅಶೋಕ್ ಅವರಿಗೆ ಇದರ ದೂರಗಾಮಿ ಪರಿಣಾಮ ಗೊತ್ತಿಲ್ಲ ಎಂದಲ್ಲ. ಹೀಗೆ ಮಂಡ್ಯ ಜಿಲ್ಲೆ ಚುನಾವಣೆ ಉಸ್ತುವಾರಿ ವಹಿಸಿಕೊಂಡರೆ ಇತ್ತ ಬೆಂಗಳೂರು ಪಾಳೇಪಟ್ಟನ್ನು ಬಿಟ್ಟುಕೊಟ್ಟಂತಾಗುತ್ತದೆ. ಮಂಡ್ಯದಲ್ಲಿ ಯುದ್ಧ ಗೆದ್ದರೂ ಕಷ್ಟ, ಸೋತರೆ ಮತ್ತೂ ಕಷ್ಟ. ಒಕ್ಕಲಿಗರ ಅಧಿನಾಯಕ ದೇವೇಗೌಡರಿಗೆ ತಿವಿಯುವುದೋ ಅಥವಾ ಘಾಸಿ ಮಾಡಿ ಜಯಿಸಿಕೊಳ್ಳುವುದೋ ಖಂಡಿತಾ ಸಲೀಸಾದ ವಿಚಾರವಲ್ಲ. ಹಾಗಂತ ಒಂದೆರಡು ಘಾತವೂ ನೀಡದೆ ಶರಣಾಗಿಬಿಟ್ಟರೆ ಪಕ್ಷದೊಳಗೆ ಇರುವ ವರ್ಚಸ್ಸಿಗೆ ಭರ್ತಿ ಪೆಟ್ಟು ಬೀಳುತ್ತದೆ. ಬೆಂಗಳೂರನ್ನು ಬಿಟ್ಟು ಹೊರಗೆ ತೆರಳದೆ, ತಮ್ಮದೇ ಆಧಿಪತ್ಯ ನಡೆಸುತ್ತಿರುವ ಅಶೋಕ್ ಪಾಲಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.
ಮಂಡ್ಯದಿಂದ ಆರ್ ಅಶೋಕ್, ಚಾ. ನಗರದಿಂದ ಶ್ರೀನಿವಾಸ್ ಪ್ರಸಾದ್!
ಅಶೋಕ್ ಗೆ ಅನಾಯಾಸವಾಗಿ ಸಿಕ್ಕ ಹುದ್ದೆ ಬಗ್ಗೆ ಅಸಮಾಧಾನ
ಬಿಜೆಪಿಯೊಳಗೆ ಇರುವ ಪ್ರಮುಖ ನಾಯಕರಿಗೆ ಈ ಸುದ್ದಿ ಬಹಳ ಖುಷಿ ಕೊಡುತ್ತಿದೆ. ಸ್ವತಃ ಅಶೋಕ್ ಒಬ್ಬರನ್ನು ಬಿಟ್ಟು ಹಲವು ಪ್ರಮುಖರಿಗೆ ಇಂಥದ್ದೊಂದು ಸನ್ನಿವೇಶ ಬರಲಿ ಎಂಬ ನಿರೀಕ್ಷೆ ಇತ್ತು. ಮುಖ್ಯವಾಗಿ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಡಿಸಿಎಂನಂಥ ಹುದ್ದೆ ಅಲಂಕರಿಸಿದ ಅಶೋಕ್ ಬಗ್ಗೆ ಹಲವರಿಗೆ ಅಸಮಾಧಾನ ಇದೆ. ತುಂಬ ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸದೆ ಜಾತಿಯ ಕಾರಣಕ್ಕೆ ದೊಡ್ಡ ಹುದ್ದೆ ತಲುಪಿಕೊಂಡರು ಅಶೋಕ್. ಜತೆಗೆ ಬೆಂಗಳೂರಿನ ಮೇಲೆ ತಮ್ಮದೇ ಹಿಡಿತವಿದೆ ಎಂದು ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ಸಾಬೀತುಪಡಿಸಲು ಪ್ರಯತ್ನಿಸಿದರು ಎಂಬುದೇ ಆ ಅಸಮಾಧಾನಕ್ಕೆ ಕಾರಣ. ಆದ್ದರಿಂದಲೇ ಹೀಗೊಂದು ಪರೀಕ್ಷೆ ಆಗಲಿ ಬಿಡಿ ಎನ್ನುತ್ತಿದ್ದಾರೆ.
ಮಾಹಿತಿ ಇದ್ದರೂ ಯಡಿಯೂರಪ್ಪನವರು ಸುಮ್ಮನಿದ್ದಾರೆ
ಮಂಡ್ಯ ಲೋಕಸಭೆ ಕ್ಷೇತ್ರದ ಜವಾಬ್ದಾರಿಯೋ ಅಥವಾ ಅಲ್ಲಿಂದಲೇ ಸ್ಪರ್ಧೆಗೆ ಇಳಿಯುವ ಪರಿಸ್ಥಿತಿಯೋ ಯಾವುದೇ ಆದರೂ ಅದು ಅಶೋಕ್ ಪಾಲಿಗೆ ಬೇಡದ ಬೆಳವಣಿಗೆ. ಆದರೆ ಶತಾಯಗತಾಯ ಈ ಸಲ ಅಶೋಕ್ ರನ್ನು ಬೆಂಗಳೂರಿನಿಂದ ಆಚೆ ಕಳಿಸಲೇ ಬೇಕು ಎಂದು ಕೇಂದ್ರದಲ್ಲಿ ಈಗ ಸಚಿವರಾಗಿರುವ ಒಬ್ಬರು ಬಹಳ ಪ್ರಯತ್ನಿಸುತ್ತಿದ್ದಾರೆ ಎಂಬುದು ಇನ್ನೊಂದು ಮಾಹಿತಿ. ಈ ವಿಚಾರದಲ್ಲಿ ಮಾತ್ರ ಸ್ವತಃ ಅಶೋಕ್ ಕೂಡ ಜಿದ್ದಿಗೆ ಬಿದ್ದು ಆ ನಾಯಕರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಈ ಪೈಪೋಟಿಯಲ್ಲಿ ಪರಸ್ಪರರು ಘಾಸಿ ಮಾಡಿಕೊಂಡರೆ ಯಾವ ಅಚ್ಚರಿಯೂ ಇಲ್ಲ. ಇವೆಲ್ಲದರ ಬಗ್ಗೆ ಮಾಹಿತಿ ಇದ್ದರೂ ಯಡಿಯೂರಪ್ಪನವರು ತುಟಿ ಬಿಚ್ಚುತ್ತಿಲ್ಲ. ಏಕೆಂದರೆ, ಅವರಿಗೆ ತಮ್ಮ ಆಪ್ತರು ಬಿಟ್ಟರೆ ಉಳಿದವರ ಸ್ಥಿತಿ ಏನಾದರೂ ಪರವಾಗಿಲ್ಲ. ಅಂದಹಾಗೆ ಆ ಆಪ್ತರ ಪಟ್ಟಿಯಲ್ಲಿ ಅಶೋಕ್ ಇಲ್ಲವೇ ಇಲ್ಲ.