ಉತ್ತರ ಪ್ರದೇಶದಲ್ಲಿ ಸಂಚಲನವೆಬ್ಬಿಸುತ್ತಾರಾ ಪ್ರಿಯಾಂಕಾ ವಾದ್ರಾ?
ಲಕ್ನೋ, ಫೆಬ್ರವರಿ 11 : "ನಾವೆಲ್ಲ ಒಟ್ಟಿಗೆ ಸೇರಿ ನಾಳೆಯಿಂದಲೇ ಹೊಸಬಗೆಯ ರಾಜಕೀಯ ಆರಂಭಿಸೋಣ. ಎಂಥಾ ರಾಜಕೀಯವೆಂದರೆ ಅದರಲ್ಲಿ ನಾವು ನೀವೆಲ್ಲ ಪಾಲುದಾರರು. ಎಂಥಾ ರಾಜಕೀಯವೆಂದರೆ ಯುವ ಸ್ನೇಹಿತರ, ನನ್ನ ಸಹೋದರಿಯರ, ಬಡವರಿಗಿಂತ ಬಡವರ ದನಿ ಕೇಳಬೇಕು" ಎಂದು ಪ್ರಿಯಾಂಕಾ ವಾದ್ರಾ ಕರೆ ನೀಡಿದ್ದಾರೆ.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಮೊದಲ ಬಾರಿ ಬಹಿರಂಗವಾಗಿ ಬೃಹತ್ ರೋಡ್ ಶೋನಲ್ಲಿ ಭಾಗವಹಿಸುತ್ತಿರುವ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನವೆಬ್ಬಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!
ಇಲ್ಲಿಯವರೆಗೆ ತಮ್ಮ ಸಹೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರೂ, ಎಐಸಿಸಿ ಸಭೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರೂ, ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ, ಈಗ ಅವರು ಅಧಿಕೃತವಾಗಿಯೇ ರಾಜಕೀಯ ಪ್ರವೇಶಿಸಿರುವುದರಿಂದ ಇನ್ನು ಮುಂದೆ ಅವರ ಭಾಗವಹಿಸುವಿಕೆಯೂ ಹೆಚ್ಚಾಗಲಿದೆ.
ಅಲ್ಲದೆ, ಇದೇ ಸಂದರ್ಭದಲ್ಲಿ, ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಇದೀಗ ಅಧಿಕೃತವಾಗಿ ಟ್ವಿಟ್ಟರ್ ಬಳಗವನ್ನು ಸೇರಿಕೊಂಡಿದ್ದಾರೆ. ಅವರು ಒಂದೇ ಒಂದು ಟ್ವೀಟ್ ಮಾಡದಿದ್ದರೂ, ಟ್ವಿಟ್ಟರ್ ಸೇರಿಕೊಂಡಿರುವ ಸುದ್ದಿ ಬಿರುಗಾಳಿಯಂತೆ ವ್ಯಾಪಿಸಿ ಅವರ ಹಿಂಬಾಲಕರ ಸಂಖ್ಯೆ 50 ಸಾವಿರ ದಾಟಿದೆ. ತಮ್ಮ ಅಭಿಪ್ರಾಯ ಮಂಡಿಸುವಲ್ಲಿ ಪ್ರಿಯಾಂಕಾ ಅವರು ಸಹೋದರ ರಾಹುಲ್ ಗಿಂತ ಒಂದು ಕೈ ಮುಂದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹಾವಭಾವ ನಡೆನುಡಿ ಅಜ್ಜಿಯಂತೆ
ಅವರ ವೇಷಭೂಷಣದಿಂದಾಗಲಿ, ನಡತೆಯಿಂದಾಗಲಿ, ನೋಟದಿಂದಾಗಲಿ, ವಂಶಪಾರಂಪರ್ಯದ ಕೊಂಡಿಯಿಂದಾಗಲಿ ಪ್ರಿಯಾಂಕಾ ವಾದ್ರಾ ಅವರು ಅವರ ಅಜ್ಜಿ, ನಾಲ್ಕು ಬಾರಿ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಬಹುವಾಗಿ ಹೋಲುತ್ತಾರೆ ಎಂಬುದು ಅವರ ಕಟ್ಟಾ ಅಭಿಮಾನಿಗಳ ಅಂಬೋಣ. ಪ್ರಿಯಾಂಕಾ ಅವರು ಅಜ್ಜಿ ಇಂದಿರಾರಂತೆಯೇ ಮಾತನಾಡುತ್ತಾರೆ ಎಂದೂ ಹೇಳುವವರಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರಿಗಿಂತ ಹೆಚ್ಚಿನ ಜನರನ್ನು ಸೆಳೆಯುವ ತಾಕತ್ತು ಪ್ರಿಯಾಂಕಾ ವಾದ್ರಾ ಅವರಿಗಿದೆ ಎಂಬುದು ಕೂಡ ಒಪ್ಪತಕ್ಕ ಮಾತು. ಚುನಾವಣಾ ಪ್ರಚಾರದಲ್ಲೆಲ್ಲ ಪ್ರಿಯಾಂಕಾ ವಾದ್ರಾ ಅವರು ಆಕರ್ಷಣೆಯ ಕೇಂದ್ರಬಿಂದುವಾಗಲಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ.
'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!
ಸ್ಯಾಮ್ ಪಿತ್ರೋಡಾ ಹೇಳುವುದೇನು?
ಇದಕ್ಕೆ ಪೂರಕವಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಜಂಟಿಯಾಗಿ ಇಡೀ ದೇಶದ ರಾಜಕೀಯದ ಚಿತ್ರಣವನ್ನೇ ಬದಲಿಸಲಿದ್ದಾರೆ, ಇದರಿಂದ ಪಕ್ಷದ ಹಣೆಬರಹ ಕೂಡ ಲೋಕಸಭೆ ಚುನಾವಣೆಯಲ್ಲಿ ಬದಲಾಗಲಿದೆ. ದೇಶಕ್ಕೆ ಬೇಕಾಗಿರುವುದು ಇಂಥ ಯುವ ರಾಜಕಾರಣಿಗಳು ಎಂದು ಕಾಂಗ್ರೆಸ್ಸಿನ ಕಟ್ಟಾ ಬೆಂಬಲಿಗ ಸ್ಯಾಮ್ ಪಿತ್ರೋಡಾ ಅವರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಟಲ್, ಮಿಲಿಂದ್ ದೇವೋರಾರಂಥ ಯುವ ನಾಯಕರು ಪಕ್ಷದಲ್ಲಿ ತುಂಬಾ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿದೆ ಎಂದು ಅವರು ನುಡಿದಿದ್ದಾರೆ.
ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ವಾದ್ರಾ
ಪಣ ತೊಟ್ಟಿದ್ದಾರೆ ಅಣ್ಣ ಮತ್ತು ತಂಗಿ
2014ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ದುರಂತ ಸೋಲನ್ನು ಅನುಭವಿಸಿತ್ತು. 80 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 71 ಸೀಟುಗಳನ್ನು ಬಾಚಿಕೊಂಡಿದ್ದರೆ, ಕಾಂಗ್ರೆಸ್ ಕೇವಲ ಎರಡರಲ್ಲಿ ಮಾತ್ರ ವಿಜಯದುಂಧುಬಿ ಮೆರೆದಿತ್ತು. ಅದು ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತು ರಾಯ್ ಬರೇಲಿಯಲ್ಲಿ ಅವರ ಅಮ್ಮ ಸೋನಿಯಾ ಗಾಂಧಿ ಜಯಶಾಲಿಯಾಗಿದ್ದರು. ಉಳಿದೆಲ್ಲ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತಿತ್ತು ಕಾಂಗ್ರೆಸ್. ಐದು ವರ್ಷಗಳ ಹಿಂದೆ ಕಾಂಗ್ರೆಸ್ 21 ಸೀಟುಗಳನ್ನು ಗೆದ್ದಿತ್ತು. ಇದೀಗ ಕಳೆದ ಚುನಾವಣೆಯ ಫಲಿತಾಂಶವನ್ನು ತಿರುವು ಮುರುವು ಮಾಡುವ ಪಣ ತೊಟ್ಟಿದ್ದಾರೆ ಅಣ್ಣ ಮತ್ತು ತಂಗಿ.
ಎಸ್ಪಿ-ಬಿಎಸ್ಪಿ ಮೈತ್ರಿ ಮುಳುವಾಗುವುದೆ?
ಅಚ್ಚರಿಯ ಸಂಗತಿಯೆಂದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾತ್ರವಲ್ಲ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಕೂಟದ ವಿರುದ್ಧವೂ ಸೆಣಸಬೇಕಿದೆ. ಏಕೆಂದರೆ, ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿ ಕಾಂಗ್ರೆಸ್ ಪಕ್ಷವನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟಿದೆ. ಇದು ಕಾಂಗ್ರೆಸ್ಸಿಗೆ ವರದಾನವಾದರೂ ಆಗಬಹುದು. ಆದರೆ, ಪ್ರಿಯಾಂಕಾ ಎಂಟ್ರಿಗೂ ಮುನ್ನ ನಡೆಸಲಾಗಿದ್ದ ಚುನಾವಣಾ ಸಮೀಕ್ಷೆಗಳಲ್ಲಿ, ಒಂದು ವೇಳೆ ಕಾಂಗ್ರೆಸ್ ಪಕ್ಷ ಎಸ್ಪಿ ಮತ್ತು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುತ್ತದೆ ಎಂದು ಹೇಳಿದ್ದವು. ಇದು ಪ್ರಿಯಾಂಕಾ ಅಧಿಕೃತವಾಗಿ ಆಗಮಿಸುವುದಕ್ಕೂ ಹಿಂದಿನ ಮಾತು. ಒಂದು ವೇಳೆ ಹಾಗಾದರೆ ಕಾಂಗ್ರೆಸ್ ಎರಡು ಸೀಟು ಮಾತ್ರ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದವು. ಇದು ಬದಲಾದರೆ ಅಚ್ಚರಿಯಿಲ್ಲ.
ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್ ಬರೇಲಿಯಿಂದ ಅಥವಾ ಗೋರಖ್ಪುರದಿಂದ
ಈಗಾಗಲೆ ಪ್ರಿಯಾಂಕಾ ವಾದ್ರಾ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿವೆ. ಇದನ್ನು ಪ್ರತಿನಿಧಿಸುತ್ತಿರುವುದು ಅಮ್ಮ ಸೋನಿಯಾ ಗಾಂಧಿ. ಅಮ್ಮನಿಗೆ ಅನಾರೋಗ್ಯವಿರುವುದರಿಂದ ಮಗಳು ಸ್ಪರ್ಧಿಸಬೇಕೆಂಬುದು ಪಕ್ಷದ ಅಭಿಮತ. ಇದು ಇನ್ನೂ ಅಧಿಕೃತವಾಗಿಲ್ಲ. ಅಲ್ಲದೆ, ಪ್ರಿಯಾಂಕಾ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೆ ಪ್ರತಿನಿಧಿಸುತ್ತಿದ್ದ ಗೋರಖ್ಪುರದಿಂದಲೂ ಸ್ಪರ್ಧಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಎರಡೂ ಕಡೆಯಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಿದರೂ ಅಚ್ಚರಿ ಪಡಬೇಕಿಲ್ಲ. ಪ್ರಿಯಾಂಕಾ ಆಗಮನದಿಂದ ಬಿಜೆಪಿ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕಾಲವೇ ಉತ್ತರಿಸಲಿದೆ.