ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮೊದಲ ದಲಿತ ಸಿಎಂ ಆಗಲಿದ್ದಾರೆಯೇ?
Recommended Video
ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಮೊಟ್ಟ ಮೊದಲ ದಲಿತ ಸಿಎಂ ಆಗಲಿದ್ದಾರೆಯೇ? ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಅಲ್ಪ ಮತದ ಸರ್ಕಾರ ರಚಿಸಲಿದ್ದಾರೆಯೇ?.
ಈ ಎರಡರ ಪೈಕಿ ಏನಾದರೂ ಆಗಲಿ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಯೂರೋಪ್ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವ ಸುದ್ದಿ ದಿಲ್ಲಿಯ ರಾಜಕೀಯ ಪಡಸಾಲೆಗಳಿಂದ ತೇಲಿ ಬಂದಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯರೇ ಅಥವಾ ಖರ್ಗೆಯವರೇ? : ಬಿಜೆಪಿ ಪ್ರಶ್ನೆ
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ತಮ್ಮನ್ನು ಮುಗಿಸಲು ಜೆಡಿಎಸ್ ನಡೆಸುತ್ತಿರುವ ಆಟಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಉರುಳಿಸಿರುವ ಈ ದಾಳ ಮತ್ತು ದಾಳಕ್ಕೆ ಪೂರಕವಾಗಿ ಹೆಜ್ಜೆ ಇಡುತ್ತಿರುವ ರೀತಿ ರಿಯಲಿ ಅಮೇಜಿಂಗ್ ಅಗಿದೆ.
ಸಿದ್ದರಾಮಯ್ಯ ಎಸೆದ ಬಾಂಬ್ 2019ರ ಚುನಾವಣೆಯ ತಂತ್ರವೇ?
ಅಂದ ಹಾಗೆ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆದು ಅತಂತ್ರ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಮೊದಲು ಕಣ್ಣು ಹಾಕಿದ್ದು ಸಿದ್ದರಾಮಯ್ಯ ಅವರ ಮೇಲೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸದೆ ಜೆಡಿಎಸ್ ಬೆಳೆಯಲು ಸಾಧ್ಯವಿಲ್ಲ.ಹಾಗಾಗಬೇಕೆಂದರೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸಲೇಬೇಕು ಎಂಬುದು ದೇವೇಗೌಡ ಹಾಗೂ ಕುಮಾರಸ್ವಾಮಿ ಲೆಕ್ಕಾಚಾರವಾಗಿತ್ತು.
ಕುಮಾರಸ್ವಾಮಿಗಾಗಿ ಲಿಂಗಾಯತ ವಿವಾದದ ಬೇರಿಗೆ ಎಂಬಿ ಪಾಟೀಲರ ನೀರು
ಸಿದ್ದರಾಮಯ್ಯ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ. ರೈತರು ಸಹಕಾರ ಸಂಘಗಳಲ್ಲಿ ಮಾಡಿರುವ ಕೃಷಿ ಸಾಲ ಮನ್ನಾದಿಂದ ಹಿಡಿದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ ಕೃಷಿ ಸಾಲವನ್ನು ಮನ್ನಾ ಮಾಡುವ ತನಕ ಅವರು ಕೈಗೊಂಡ ಪ್ರತಿಯೊಂದು ನಿರ್ಧಾರಗಳು ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿದ ಕೆಲಸಗಳು.
ತಾವು ಸಮನ್ವಯ ಸಮಿತಿ ಅಧ್ಯಕ್ಷರಾದರೂ ತಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ದೇವೇಗೌಡ ಹಾಗೂ ಕುಮಾರಸ್ವಾಮಿ ಜೋಡಿ ಇಡುತ್ತಿರುವ ಹೆಜ್ಜೆ ಸಹಜವಾಗಿಯೇ ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ವಿದೇಶ ಪ್ರವಾಸಕ್ಕೆ ಹೋದರು
ತಮ್ಮನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿಯೇ ಡಿಫರೆಂಟ್ ತಂತ್ರ ರೂಪಿಸಿದ ಸಿದ್ದರಾಮಯ್ಯ ಇದೇ ಕಾರಣಕ್ಕಾಗಿ ಯೂರೋಪ್ ಪ್ರವಾಸಕ್ಕೆ ಸಜ್ಜಾದರು. ಮೇಲ್ನೋಟಕ್ಕೆ ಅದು ಯೂರೋಪ್ ಪ್ರವಾಸ. ಆದರೆ, ಆಳದಲ್ಲಿ ಅದು ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸುವ ಸಾಹಸ.
ಇದಕ್ಕೆ ಕಾರಣವಾಗಿದ್ದು ಸಣ್ಣ ಬೆಳವಣಿಗೆ. ಅದು ಬೆಳಗಾವಿ ಜಿಲ್ಲೆಯ ಒಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ. ಈ ಚುನಾವಣೆಯ ವಿಷಯ ಬಂದಾಗ ಜಾರಕಿಹೊಳಿ ಗ್ಯಾಂಗ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗ್ಯಾಂಗ್ ಮಧ್ಯೆ ಜಟಾಪಟಿ ಶುರುವಾಯಿತು.
ಕಾಂಗ್ರೆಸ್ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು!
ಡಿ.ಕೆ.ಶಿವಕುಮಾರ್ ಎಂಟ್ರಿ
ಈ ಜಟಾಪಟಿ ಶುರುವಾಗಲು ಮೂಲ ಕಾರಣ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್. ಹೀಗೆ ಡಿಕೆಶಿ ಎಂಟ್ರಿಯಾಗಿದ್ದೇ ತಡ, ಬೆಳಗಾವಿಯ ಕಾಂಗ್ರೆಸ್ ತಲ್ಲಣವೆದ್ದು ಹೋಯಿತು. ಅಷ್ಟೇ ಅಲ್ಲ, ಜಾರಕಿಹೊಳಿ ಗ್ಯಾಂಗಿನ ಆಟದ ವಿರುದ್ದ ಲಕ್ಷ್ಮೀ ಹೆಬ್ಬಾಳ್ಕರ್ ಜಯ ಗಳಿಸುವಂತಾಯಿತು. ಇಂತಹ ಕಿಚ್ಚು ಹಚ್ಚಲು ಡಿಕೆಶಿಗೆ ಬಿಜೆಪಿ ಹೈಕಮಾಂಡ್ ಸುಪಾರಿ ನೀಡಿತ್ತಾ? ಇದು ಸದ್ಯದ ಅನುಮಾನ.
ಐಟಿ ರೈಡಿನ ನಂತರ ಒಂದಲ್ಲ, ಒಂದು ಕಾರಣಕ್ಕೆ ಡಿಕೆಶಿಯನ್ನುಹಿಡಿದುಕೊಂಡು ಅರೆಯುತ್ತಿರುವ ಬಿಜೆಪಿ ಹೈಕಮಾಂಡ್, ಹೇಗಾದರೂ ಮಾಡಿ ಸರ್ಕಾರ ಬೀಳಿಸಲು ಅಗತ್ಯವಾದ ಸ್ಟೆಪ್ ಇಡಿ ಎಂದು ಸೂಚನೆ ನೀಡಿತ್ತಾ?. ಮತ್ತದಕ್ಕೆ ಪ್ರತಿಯಾಗಿ ಡಿಕೆಶಿ ಈ ಕೆಲಸ ಮಾಡಿದರಾ? ಇದು ಕೂಡಾ ಸದ್ಯದ ರಾಜಕೀಯದಲ್ಲಿ ನುಸುಳಿ ಬರುತ್ತಿರುವ ಒಂದು ಶಂಕೆ.
ಜಾರಕಿಹೊಳಿ ಸಹೋದರರು
ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಜಾರಕಿಹೊಳಿ ಬ್ರದರ್ಸ್ ಕೆಂಡಾಮಂಡಲವಾಗಿದ್ದು ಮಾತ್ರ ಸುಳ್ಳಲ್ಲ. ಹೀಗಾಗಿ ಇಪ್ಪತ್ತು ಶಾಸಕರನ್ನು ಒಗ್ಗೂಡಿಸಿಕೊಂಡು ಬಂಡಾಯವೆದ್ದಿರುವ ಜಾರಕಿಹೊಳಿ ಬ್ರದರ್ಸ್ ಸೇರಿದಂತೆ ಆ ಗುಂಪಿನ ಬಹುತೇಕರು ಸಿದ್ಧರಾಮಯ್ಯ ಅವರ ಬೆಂಬಲಿಗರು.
ಈ ಗುಂಪೀಗ ಲಿಟರಲಿ ಸೂಸೈಡ್ ಸ್ಕ್ಯಾಡ್. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಬೀಳಿಸುವುದು ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಇದೇ ಕಾರಣಕ್ಕಾಗಿ ಮೊನ್ನೆ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದೆ. ಹೈಕಮಾಂಡ್ ಹೇಳಿದ್ದನ್ನು ಕೇಳಿದ ಸಿದ್ದರಾಮಯ್ಯ, ನಾನೇನೋ ಶಾಸಕರಿಗೆ ಹೇಳುತ್ತೇನೆ. ಆದರೆ, ಈ ಸರ್ಕಾರ ಹೊಯ್ದಾಟದಲ್ಲಿರುವುದು ಮಾತ್ರ ನಿಜ. ಹೀಗಾಗಿ ನಾನೊಂದು ಸಲಹೆ ನೀಡಬಹುದಾ? ಎಂದು ಕೇಳಿದ್ದಾರೆ.
ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು!
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ?
ಬೇರೆ ದಾರಿಯಿಲ್ಲದೆ ಹೈಕಮಾಂಡ್ ಯೆಸ್ ಅಂದಾಗ, ಒಂದು ವೇಳೆ ಈ ಸರ್ಕಾರ ಬಿತ್ತು ಅಂದುಕೊಳ್ಳೋಣ. ಆಗ ಆಗುವ ಬೆಳವಣಿಗೆಗಳೇನು? ಒಂದೋ, ಜೆಡಿಎಸ್ ಪಕ್ಷದವರು ಸೀದಾ ಹೋಗಿ ಬಿಜೆಪಿ ಜತೆ ಕೈ ಜೋಡಿಸಲು ಯತ್ನಿಸಬಹುದು. ಹಾಗೇನಾದರೂ ಮಾಡಿದರೆ ದೇಶದ ಜನರಿಗೆ ಜೆಡಿಎಸ್ ಎಂಬುದು ಫ್ಯಾಮಿಲಿ ಪಾರ್ಟಿ. ಅವರ ಫ್ಯಾಮಿಲಿಯ ಹಿತಕ್ಕೆ ತಕ್ಕಂತೆ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಮೆಸೇಜು ಹೋಗುತ್ತದೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಸೆಕ್ಯೂಲರ್ ಕ್ರೆಡೆನ್ಷಿಯಲ್ ಗೆ ಯಾವ ತೊಂದರೆಯೂ ಇಲ್ಲ. ಇದಾಗದಿದ್ದರೆ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯೇ ಅಲ್ಪಮತದ ಸರ್ಕಾರ ರಚಿಸಬಹುದು. ಇದನ್ನುಹೊರತು ಪಡಿಸಿದರೆ ಇರುವ ಮತ್ತೊಂದು ಆಫ್ಷನ್ ಎಂದರೆ ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿ. ನಾವು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಹುದ್ದೆಗೆ ತರೋಣ. ಆಗ ಮುಂದಿನ ಸಂಸತ್ ಚುನಾವಣೆ ಮಾತ್ರವಲ್ಲ, ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
ಹೈಕಮಾಂಡ್ ಸಹ ಗೊಂದಲದಲ್ಲಿ
ಸಿದ್ದರಾಮಯ್ಯ ಅವರ ಮಾತು ಕೇಳಿ ಹೈಕಮಾಂಡ್ ವರಿಷ್ಟರೂ ಬೆರಗಾಗಿದ್ದಾರೆ. ಹಾಗಲ್ಲ, ಸಿದ್ದರಾಮಯ್ಯ ಅವರೇ, ಈ ಕೆಲಸ ಮಾಡಿದರೆ ನಾಳೆ ನಮಗೇ ಬೂಮ್ ರಾಂಗ್ ಆಗುವುದಿಲ್ಲವೇ? ಎಂದು ಕೇಳಿದ್ದಾರೆ. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ಸದ್ಯದ ರಾಜಕೀಯದಲ್ಲಿ ಯಾವುದೂ ಬೂಮ್ ರಾಂಗ್ ಆಗುವುದಿಲ್ಲ. ತಕ್ಷಣಕ್ಕೆ ಏನು ಸಾಧ್ಯವಾಗುತ್ತದೋ? ಅದನ್ನು ಮಾಡಿಬಿಡಬೇಕು. ಇಲ್ಲದೇ ಹೋದರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ಜೆಡಿಎಸ್ ಪಕ್ಷ ನಮ್ಮ ಪಕ್ಷವನ್ನು ಬಡಿದು ಹಾಕಿ ಬಿಡುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಕೂಡಾ ಈಗ ಗೊಂದಲದಲ್ಲಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಹಾಕಿರುವ ಲೆಕ್ಕಾಚಾರವೂ ಇಂಟರೆಸ್ಟಿಂಗ್ ಆಗಿದೆ. ಯಾಕೆಂದರೆ ಇವತ್ತು ಸರ್ಕಾರ ಬೀಳಿಸಿ ಯಡಿಯೂರಪ್ಪ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ಆಡಳಿತ ವಿರೋಧಿ ಅಲೆ ಬಿಜೆಪಿಯನ್ನು ಕಾಡಲಿದೆ. ಯಾಕೆಂದರೆ ಜೆಡಿಎಸ್ ಪಕ್ಷದ ವರ್ಚಸ್ಸು ಬೆಳೆಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದೆ. ನಾಳೆ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಇದಕ್ಕೆ ಹಣ ಹೊಂದಿಸಬೇಕು.
ಸರ್ಕಾರ ಪರದಾಡಲಿದೆ
ಅಂದ ಹಾಗೆ ರಾಜ್ಯ ಮಾಡಿರುವ ಬಾಹ್ಯ ಸಾಲಗಳ ಪೈಕಿ ದೀರ್ಘಾವಧಿ ಸಾಲ ಕೂಡಾ ಈಗ ಅಸಲು, ಬಡ್ಡಿಯನ್ನು ಬಯಸಿ ಸರ್ಕಾರದ ಹೆಬ್ಬಾಗಿಲಿಗೆ ಬಂದು ಕುಳಿತಿದೆ. ಹೀಗಾಗಿ ಹಣಕಾಸಿನ ಮುಗ್ಗಟ್ಟು ಎದುರಿಸುವ ಯಡಿಯೂರಪ್ಪ ಸರ್ಕಾರ ಪರದಾಡುತ್ತದೆ. ಯಾವ ಅಭಿವೃದ್ದಿ ಯೋಜನೆಗಳನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರಲಾಗದೆ ನರಳುತ್ತದೆ.
ಒಂದು ವೇಳೆ ಯಡಿಯೂರಪ್ಪ ಅವರು ಸರ್ಕಾರ ರಚಿಸದೆ ಸದ್ಯದ ಎಲ್ಲ ಬೆಳವಣಿಗೆಗಳ ನಡುವೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಏನೇ ವಿರೋಧ ಬಂದರೂ ಅವರನ್ನು ಪದಚ್ಯುತಗೊಳಿಸಲು ಜೆಡಿಎಸ್ ತಯಾರಾಗುವುದಿಲ್ಲ. ಯಾಕೆಂದರೆ 2004 ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ದಲಿತ ನಾಯಕ ಪರಮೇಶ್ವರ್ ಅವರನ್ನೇ ಸಿಎಂ ಮಾಡಲು ದೇವೇಗೌಡರು ನಿರ್ಧರಿಸಿದ್ದರು.
ದಲಿತ ವಿರೋಧಿ ಪಟ್ಟ
ಯಾವಾಗ ಸಿ.ಎಂ.ಇಬ್ರಾಹಿಂ ಹೋಗಿ ದಲಿತರನ್ನು ಸಿಎಂ ಮಾಡುವುದು ಸುಲಭ. ಆದರೆ, ಬೇಕೆಂದಾಗ ಪದಚ್ಯುತಗೊಳಿಸುವುದು ಕಷ್ಟ. ಯಾಕೆಂದರೆ ಕೊನೆಯ ತನಕ ನೀವು ದಲಿತ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿಯೇ ದೇವೇಗೌಡರು ತಕ್ಷಣವೇ ತಮ್ಮ ನಿಲುವನ್ನು ಬದಲಿಸಿ ಧರ್ಮಸಿಂಗ್ ಅವರನ್ನು ಸಿಎಂ ಹುದ್ದೆಯ ಮೇಲೆ ಕೂರಿಸಿದ್ದರು.
ಇವತ್ತು ಅದೇ ಪರಮೇಶ್ವರ ಡಿಸಿಎಂ ಆಗಲು ದೇವೇಗೌಡ ಹಾಗೂ ಕುಮಾರಸ್ವಾಮಿ ಯಾವ ರೀತಿ ಸಹಕಾರ ನೀಡಿದ್ದಾರೆ? ಮತ್ತು ಅವರನ್ನು ಹಿಡಿದುಕೊಂಡು ತಮ್ಮನ್ನು ಹೇಗೆ ಬಡಿಯಲು ಹೊರಟಿದ್ದಾರೆ? ಅನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತು.
ಸಿದ್ದರಾಮಯ್ಯ ಅದ್ಭುತ ಸೇನಾನಿ
ಹೀಗಾಗಿ ಖರ್ಗೆ ಸಿಎಂ ಆಗಲು ಜೆಡಿಎಸ್ ಸಹಕಾರ ಕೊಡಲಿ.ಇಲ್ಲವಾದರೆ ಯಡಿಯೂರಪ್ಪ ಅವರೇ ಸರ್ಕಾರ ರಚಿಸುವಂತಾಗಲಿ.ಈ ಪೈಕಿ ಏನೇ ಆದರೂ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮಗೆ ಭವಿಷ್ಯ.ಇಲ್ಲದೇ ಇದ್ದರೆ ಕುಸಿದು ಬೀಳುವುದು ಅನಿವಾರ್ಯ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ.
ಹಾಗೆಯೇ ಈ ಮೂಲಕ ಕುಮಾರಸ್ವಾಮಿ, ಪರಮೇಶ್ವರ ಅವರೆಲ್ಲರನ್ನೂ ಒಂದೇ ಏಟಿಗೆ ಮುಗಿಸುವುದು ಅವರ ರಾಜಕೀಯ ಗಣಿತ ಶಾಸ್ತ್ರ. ಈ ಲೆಕ್ಕಾಚಾರ ಏನಾಗುತ್ತದೋ? ಅದು ಮುಂದಿನ ವಿಷಯ. ಯಾಕೆಂದರೆ ರಾಜಕೀಯ ಪ್ರವಾಹದಲ್ಲಿ ದಿನಕ್ಕೊಂದು ಚಿತ್ರ ಕಾಣುತ್ತಿರುತ್ತದೆ. ಕೆಲವು ದೃಶ್ಯಗಳು ಮಾತ್ರ ಮನಸ್ಸಿನಲ್ಲಿ ಸೆರೆಯಾಗುತ್ತವೆ. ಇದು ಹಾಗೆಯೇ. ಆದರೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಗ್ಯಾಂಗಿನ ಹೊಡೆತಕ್ಕೆ ಪ್ರತಿ ಹೊಡೆತ ನೀಡುತ್ತಿರುವ ಸಿದ್ದರಾಮಯ್ಯ ನಿಜಕ್ಕೂ ಒಬ್ಬ ಅದ್ಭುತ ಸೇನಾನಿ ಎಂಬುದು ಮಾತ್ರ ಸ್ಪಷ್ಟ.