ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?
ಶ್ರೀಲಂಕಾದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ರಾಜೀನಾಮೆ ನೀಡುತ್ತೇನೆಂದು ಹೇಳಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾತ್ರೋರಾತ್ರಿ ದೇಶ ಬಿಟ್ಟು ಮಾಲ್ಡೀವ್ಸ್ ತೊರೆದರು. ಈಗ ಅಲ್ಲಿಂದ ಸಿಂಗಾಪುರಕ್ಕೆ ಹಾರಲಿದ್ದಾರೆ.
ಇನ್ನೊಂದೆಡೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡುತ್ತೇನೆಂದು ಹೇಳಿದವರು ಈಗ ಹಂಗಾಮಿ ಅಧ್ಯಕ್ಷರಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಪಲಾಯನ: ತೀವ್ರಗೊಂಡ ಪ್ರತಿಭಟನೆ- ತುರ್ತು ಪರಿಸ್ಥಿತಿ ಘೋಷಣೆ
ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾಗ ತಣ್ಣಗಾಗಿದ್ದ ಜನರ ಪ್ರತಿಭಟನೆ ಮತ್ತೆ ತೀವ್ರಗೊಂಡಿದೆ. ಜನರ ಪ್ರತಿಭಟನೆ ಹಿಂಸಾರೂಪ ಪಡೆಯುವ ಸಾಧ್ಯತೆ ಇದೆ. ಅವಘಡಗಳಾಗದಂತೆ ತಡೆಯಲು ಲಂಕಾ ಮಿಲಿಟರಿಗೆ ಮುಕ್ತ ಹಸ್ತ ನೀಡುವ ಸಾಧ್ಯತೆ ಇದೆ.
ಇದು ನಾಗರಿಕ ಯುದ್ಧವಾಗಿ ಪರಿವರ್ತನೆಯಾಗುವ ರೀತಿಯಲ್ಲಿ ಲಂಕಾ ಪರಿಸ್ಥಿತಿ ಇದೆ. ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅಲ್ಲಿನ ಜನರು ಸತತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ದಂಗೆಗಳಾಗುತ್ತಿವೆ, ಹಿಂಸಾಚಾರಗಳಾಗುತ್ತಿವೆ. ಅನೇಕ ರಾಜಕಾರಣಿಗಳು, ಸಂಸದರು, ಶಾಸಕರ ಮನೆಗಳ ಮೇಲೆ ಜನರು ದಾಳಿ ಮಾಡಿದ್ದಾರೆ. ಹಲವರ ಮನೆಗಳನ್ನು ಸುಟ್ಟುಹಾಕಿದ್ದಾರೆ. ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣಗಳು ಏನು?, ಯಡವಟ್ಟಾಗಿದ್ದು ಎಲ್ಲಿ?
ಶ್ರೀಲಂಕಾದಲ್ಲಿ ಯಾಕೆ ಪ್ರತಿಭಟನೆ?
ಶ್ರೀಲಂಕಾದಲ್ಲಿ ಕಳೆದ 2-3 ವರ್ಷಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈಗ್ಗೆ ಐದಾರು ತಿಂಗಳಿಂದ ಆಹಾರದ ಅಭಾವ ವಿಪರೀತವಾಗಿದೆ. ಪೆಟ್ರೋಲ್ ಸಿಗುತ್ತಿಲ್ಲ, ವಿದ್ಯುತ್ ಕಡಿತದ ಸಮಸ್ಯೆ ಇದೆ. ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಹಣವೇ ಬಹುತೇಕ ಬರಿದಾಗಿದೆ.
ಪೆಟ್ರೋಲ್ ಇತ್ಯಾದಿ ಆಮದು ಮಾಡಿಕೊಳ್ಳಲೂ ಲಂಕಾ ಬಳಿ ನಯಾಪೈಸೆ ಇಲ್ಲವಾಗಿದೆ. ಸಾವಯವ ಕೃಷಿಗೆ ಒತ್ತುಕೊಟ್ಟ ತಪ್ಪಿಗೆ ಲಂಕಾದಲ್ಲಿ ಕೃಷಿ ಉತ್ಪಾದನೆ ಸಂಪೂರ್ಣ ನೆಲಕಚ್ಚಿದೆ. ಪರಿಣಾಮವಾಗಿ ಆಹಾರ ಅಭಾವ ಸೃಷ್ಟಿಯಾಗಿದೆ. ಕೋವಿಡ್ ಹಾಗೂ ಕೆಲ ಭಯೋತ್ಪಾದನಾ ಘಟನೆಗಳಿಂದಾಗಿ ಲಂಕಾದ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಿದೆ. ಇದರ ಜೊತೆಗೆ ಲಂಕಾ ಸರಕಾರ ತೆರಿಗೆ ಕಡಿತ ಮಾಡಿದ್ದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚು ಹಣ ಬರದಂತಾಯಿತು. ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುವ ಯಾವ ಆಶಯವೂ ಇಲ್ಲದಂತಾಯಿತು. ಇವೆಲ್ಲವೂ ಜನರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿವೆ. ಕಳೆದ 2-3 ತಿಂಗಳಿಂದ ಜನರು ಇಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಮೊದಲಿಗೆ ಮಹಿಂದಾ ರಾಜಪಕ್ಸೆ ಈ ಆರ್ಥಿಕ ದುರವಸ್ಥೆಯ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಅದರಿಂದ ಪ್ರತಿಭಟನೆ ಶಮನವಾಗಬಹುದೆಂದು ಹೊಂದಿದ್ದ ನಿರೀಕ್ಷೆ ಹುಸಿಯಾಯಿತು. ಗೋಟಬಯ ರಾಜಕಪ್ಸೆ ಅಧ್ಯಕ್ಷರಾಗಿ ಮುಂದುವರಿದಂತೆ ಜನರ ಪ್ರತಿಭಟನೆಯೂ ಮುಂದುವರಿಯಿತು.
ಲಂಕಾ ಗತಿಯೇ ಭಾರತಕ್ಕೂ ಆಗುತ್ತಾ?
ಶ್ರೀಲಂಕಾದಂತೆ ಪಾಕಿಸ್ತಾನ ದೇಶದಲ್ಲೂ ಆರ್ಥಿಕ ದಿವಾಳಿತನದ ಸುಳಿವು ಕಾಣುತ್ತಿದೆ. ಭಾರತಕ್ಕೂ ಇದೇ ಗತಿ ಬರುತ್ತೆ ಎಂದು ಹಲವರು ಶಂಕಿಸಿದ್ದಾರೆ, ಅಥವಾ ಆತಂಕ ಪಡುತ್ತಿದ್ದಾರೆ. ವಾಸ್ತವವಾಗಿ ಅವಲೋಕಿಸಿದರೆ ಸದ್ಯದ ಮಟ್ಟಿಗಂತೂ ಭಾರತಕ್ಕೆ ಅಂಥ ಅಪಾಯ ಕಾಣುತ್ತಿಲ್ಲ.
ಕೋವಿಡ್ ವೇಳೆ ತೀರಾ ನೆಲಕಚ್ಚಿದ್ದ ಭಾರತದ ಆರ್ಥಿಕತೆ ಈಗ ಕೋವಿಡೋತ್ತರದಲ್ಲಿ ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಂಡಿದೆ. ಆದರೆ, ಹಲವು ದೇಶಗಳಿಗೆ ಹೋಲಿಸಿದರೆ ಜಿಡಿಪಿ ಬೆಳವಣಿಗೆ ದರ ಸದ್ಯ ತುಸು ಕಡಿಮೆ ಇದೆಯಾದರೂ ಮುಂದಿನ ದಿನಗಳಲ್ಲಿ ಜಿಡಿಪಿ ದರ ಉತ್ತಮ ಸ್ಥಿತಿಗೆ ಬರುವ ನಿರೀಕ್ಷೆ ಇದೆ.
ಭಾರತದಲ್ಲಿ ಫೋರೆಕ್ಸ್ ಮೀಸಲು ನಿಧಿ 600 ಬಿಲಿಯನ್ ಡಾಲರ್ (ಸುಮಾರು 48 ಲಕ್ಷ ಕೋಟಿ ರೂಪಾಯಿ) ಇದೆ. ಇಡೀ ಒಂದು ವರ್ಷ ನಾವು ಆಮದು ಮಾಡಿಕೊಳ್ಳಲು ಸಾಕಾಗುವಷ್ಟು ಹಣ ಈ ಮೀಸಲು ನಿಧಿಯಲ್ಲಿ ಇದೆ.
2013ರಲ್ಲಿ ಇದ್ದ ಭಾರತದ ವಿದೇಶೀ ಸಾಲದ ಪ್ರಮಾಣಕ್ಕೆ ಹೋಲಿಸಿದರೆ 2021ರಲ್ಲಿ ಶೇ. 50ರಷ್ಟು ಹೆಚ್ಚಾಗಿರುವುದು ಹೌದು. ಆದರೆ, ಜಿಡಿಪಿಯಲ್ಲಿ ಆಗಿರುವ ಏರಿಕೆಯನ್ನು ಪರಿಗಣಿಸಿದರೆ ವಿದೇಶೀ ಸಾಲದ ಆತಂಕ ಪಡುವ ಮಟ್ಟದಲ್ಲಿ ಇಲ್ಲ.
ಹಣದುಬ್ಬರ
ಭಾರತದಲ್ಲಿ ಹಣದುಬ್ಬರ ಸುಮಾರು ಶೇ. 7ಕ್ಕೆ ಬಂದು ನಿಂತಿದೆ. ಸದ್ಯದ ಸ್ಥಿತಿಯಲ್ಲಿ ಹಣದುಬ್ಬರ ತಾಳಿಕೆ ಸ್ಥಿತಿ ಶೇ. 6 ಎಂದು ಆರ್ಬಿಐ ನಿಗದಿ ಮಾಡಿದ ಮಟ್ಟ ದಾಟಿ ಹೋಗಿದ್ದೇವೆ. ಆದರೂ ಕೂಡ ಬೇರೆ ದೇಶಗಳಿಗೆ ಹೋಲಿಸಿದರೆ ಹಣದುಬ್ಬರ ಭಾರತದಲ್ಲಿ ಪರವಾಗಿಲ್ಲ ಎನ್ನಬಹುದು. ಕೋವಿಡ್, ಲಾಕ್ ಡೌನ್ ಮತ್ತು ಈಗ ಯುದ್ಧ ಈ ಎಲ್ಲಾ ಕಾರಣಗಳಿಂದಾಗಿ ಹಣದುಬ್ಬರ ಎಲ್ಲಾ ದೇಶಗಳಲ್ಲೂ ತಾಂಡವವಾಡುತ್ತಿರುವುದು ಹೌದು.
ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರಿಂದ ಪ್ರಮುಖ ಆದಾಯ ಮೂಲದಿಂದ ಹಣದ ಹರಿವು ಕಡಿಮೆ ಆಯಿತು. ಯುದ್ಧದ ಕಾರಣದಿಂದ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ವ್ಯತ್ಯಯವಾಯಿತು. ಇದು ರಫ್ತು ಇತ್ಯಾದಿಗೆ ಹಿನ್ನಡೆ ಆಯಿತು. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ. ಆದರೂ ಕೂಡ ಭಾರತದಲ್ಲಿ ತಕ್ಕಮಟ್ಟಿಗೆ ಹಣದುಬ್ಬರ ಕೈಮೀರಿ ಹೋಗದಂತೆ ಎಚ್ಚರ ವಹಿಸಲಾಗಿದೆ.
ರೂಪಾಯಿ ಕಳಪೆ ಸ್ಥಿತಿಯಲ್ಲಿದೆಯೇ?
ಡಾಲರ್ ಎದುರು ರೂಪಾಯಿ ಮೌಲ್ಯ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ಒಂದು ಡಾಲರ್ಗೆ ಈಗ 79.66 ರೂಪಾಯಿವರೆಗೂ ಹೋಗಿದೆ. ಇದೊಂದೇ ಮಾನದಂಡ ಇಟ್ಟುಕೊಂಡರೆ ರೂಪಾಯಿ ನೆಲಕಚ್ಚಿದೆ ಎನ್ನಬಹುದು. ಅದರೆ, ವಾಸ್ತವದಲ್ಲಿ ಡಾಲರ್ ಮೌಲ್ಯ ಗಣನೀಯವಾಗಿ ವೃದ್ಧಿಯಾಗಿರುವುದರಿಂದ ಸಹಜವಾಗಿ ರೂಪಾಯಿ ಮೌಲ್ಯ ಕುಸಿದಿದೆ. ಬೇರೆ ಪ್ರಮುಖ ಕರೆನ್ಸಿಗಳಾದ ಬ್ರಿಟನ್ ಪೌಂಡ್, ಯೂರೋ ಮೊದಲಾದವುಗಳ ಎದುರು ರೂಪಾಯಿ ಮೌಲ್ಯವೃದ್ಧಿಸಿಕೊಂಡಿರುವುದು ಹೌದು.
ಅಲ್ಲದೇ ಭಾರತದಲ್ಲಿ ವಿವಿಧ ರಾಜ್ಯಗಳ ಮಧ್ಯೆ ಆರೋಗ್ಯಯುತ ಸ್ಪರ್ಧೆಗೆ ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ. ಹೂಡಿಕೆದಾರರನ್ನು ಒಲಿಸಿಕೊಳ್ಳಲು ಎಲ್ಲಾ ರಾಜ್ಯಗಳೂ ಕಸರತ್ತು ನಡೆಸುತ್ತಿವೆ. ವ್ಯವಹಾರಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದಕ್ಕೆ ಆದ್ಯತೆ ಕೊಡುತ್ತಿವೆ. ಇದು ದೀರ್ಘಕಾಲದಲ್ಲಿ ಆರ್ಥಿಕತೆಯ ಬುಡ ಗಟ್ಟಿಗೊಳಿಸಲು ಸಹಕಾರಿ ಎನಿಸಬಹುದು.
ಭಾರತದಿಂದ ಲಂಕಾಗೆ ಸಹಾಯ
ಶ್ರೀಲಂಕಾದ ಆರ್ಥಿಕ ದುಸ್ಥಿತಿಗೆ ಚೀನಾ ಸಾಲ ಶೂಲವಾಗಿ ಪರಿಣಮಿಸಿರುವುದು ಒಂದು ಕಾರಣ. ಸಾಲದ ಕಂತು ಕಟ್ಟಲೂ ಲಂಕಾ ಬಳಿ ದುಡ್ಡಿಲ್ಲ. ದುರ್ಬಲವಾಗಿರುವ ಶ್ರೀಲಂಕಾವನ್ನು ಚೀನಾ ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಅಪಾಯವೂ ಇದೆ. ಚೀನಾವೇನಾದರೂ ಶ್ರೀಲಂಕಾದಲ್ಲಿ ಮಿಲಿಟರಿ ನೆಲೆ ಸ್ಥಾಪಿಸಿದರೆ ಭಾರತದ ಮಗ್ಗುಲಲ್ಲಿ ಅಪಾಯದ ಕತ್ತಿ ಸಿಕ್ಕಿಸಿದಂತೆ ಆಗುತ್ತದೆ. ಹೀಗಾಗಿ, ಶ್ರೀಲಂಕಾವನ್ನು ತನ್ನ ಪ್ರಭಾವದ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳುವುದು ಭಾರತಕ್ಕೆ ಅಗತ್ಯ.
ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಶ್ರೀಲಂಕಾಗೆ ಭಾರತ 3.8 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂಪಾಯಿ) ಸಾಲದ ನೆರವು ಒದಗಿಸಲು ಮುಂದಾಗಿದೆ. ಇದು ಈ ಒಂದು ವರ್ಷಕ್ಕೆ ಮಾತ್ರ. ಮುಂದಿನ ವರ್ಷ ಭಾರತದ ನೆರವು ಇನ್ನೂ ಹೆಚ್ಚಬಹುದು.
"ಶ್ರೀಲಂಕಾಗೆ ನಮ್ಮ ಬೆಂಬಲ ಸದಾ ಇರುತ್ತದೆ. ಪರಿಸ್ಥಿತಿ ತೀರಾ ಬಿಗಡಾಯಿಸಿಹೋಗದಂತೆ ನಿಭಾಯಿಸಲು ಸಾಧ್ಯವಾಗಿದೆ..." ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)