ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!
ಕರ್ನಾಟಕದಲ್ಲಿ ಡಿಸಿಎಂ ಎಂಬ ಟೈಂ ಬಾಂಬ್ ಕಟ್ಟಿಕೊಂಡು ಬಿಜೆಪಿ ಸರಕಾರ ಯಾವಾಗಲಾದರೂ ಉರುಳಬಹುದು ಎಂಬ ಸ್ಥಿತಿ ಇದೆಯಾ? ಈಗ ಸುಳಿದಾಡುತ್ತಿರುವ ಸುದ್ದಿ ನೋಡಿದರೆ, ದಿನಕ್ಕೊಬ್ಬರ ಹೆಸರು ಉಪ ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಮಾಡಿದ ಮೇಲೆ ಯಾರಿಗೆ- ಯಾವ ಖಾತೆ ಎಂಬುದು ಅಂತಿಮವಾಗಿಲ್ಲ.
ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅಂತೂ ಬಿ. ಎಲ್. ಸಂತೋಷ್ ಆಪ್ತರು. ಮೇಲ್ನೋಟಕ್ಕೆ ನೋಡಿದರೆ, ಯಡಿಯೂರಪ್ಪ ಏನು ಬಯಸುತ್ತಿದ್ದಾರೋ ಅದ್ಯಾವುದೂ ಆಗುತ್ತಿಲ್ಲ. "ಡಿಸಿಎಂ ಹುದ್ದೆ ಸೃಷ್ಟಿಸುವುದಾದರೆ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತೆ" ಎಂದು ಈಗಾಗಲೇ ಹೈ ಕಮಾಂಡ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಬಿಎಸ್ ವೈ ಆಪ್ತ ಮೂಲಗಳಿಂದ ಬರುತ್ತಿರುವ ಸುದ್ದಿ.
Recommended Video
ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸೂಚನೆ?
ಆದರೂ ಇಬ್ಬರು- ಮೂವರ ಹೆಸರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ತೇಲಿ ಬಿಡಲಾಗುತ್ತಿದೆ. ಇನ್ನು ಈಗಾಗಲೇ ಸಿಎಂ ಹುದ್ದೆ ನಿಭಾಯಿಸಿರುವ ಜಗದೀಶ್ ಶೆಟ್ಟರ್, ಡಿಸಿಎಂ ಹುದ್ದೆಗೆ ಏರಿದ್ದ ಈಶ್ವರಪ್ಪ, ಆರ್. ಅಶೋಕ್ ಅವರನ್ನು ಯಾವ ಹುದ್ದೆಗೆ ತಂದು ಕೂರಿಸುತ್ತಾರೆ? ಜೆಡಿಎಸ್- ಮೈತ್ರಿ ಸರಕಾರ ಕೆಡವಲು ಸಹಕರಿಸಿದ ಶಾಸಕರಿಗೆ ಯಾವ ಹುದ್ದೆ ನೀಡಲಾಗುತ್ತದೆ? ಇವೆಲ್ಲ ಅತ್ಯಂತ ಸಹಜ ಪ್ರಶ್ನೆಗಳು.
ಪ್ರವಾಹ ಪರಿಹಾರ ತರಲು ಆಗದ ಅವಮಾನ ಯಡಿಯೂರಪ್ಪಗೆ
ಏಕೆಂದರೆ, ಮೈತ್ರಿ ಸರಕಾರವನ್ನು ಕೆಡವಿದ್ದು ಸ್ವತಃ ಯಡಿಯೂರಪ್ಪ ಮತ್ತು ಅವರ ಟೀಮಿನ ಶ್ರಮ. ಆದಕ್ಕಾಗಿ ಕಾಂಗ್ರೆಸ್ ನಿಂದಲೂ ದೊಡ್ಡ 'ತಲೆ'ಯೊಂದು ಸಹಕಾರ ನೀಡಿದೆ ಎಂಬುದು ಮೂಲಗಳ ಮಾಹಿತಿ. ಅಂದರೆ ಹೈ ಕಮಾಂಡ್ನ ಒಪ್ಪಿಗೆ, ಸಹಕಾರ ಇಲ್ಲದೆ ಸರಕಾರ ಮಾಡುತ್ತಿರುವ ಯಡಿಯೂರಪ್ಪ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಮೂಗುದಾರ ಹಾಕುವ ಸಲುವಾಗಿಯೇ ಹೀಗೆ ಮಾಡಲಾಗುತ್ತದೆಯಾ? ಹೈ ಕಮಾಂಡ್ನ ಕಳೆದ ಒಂದು ತಿಂಗಳ ಸ್ಪಂದನೆ, ಯಡಿಯೂರಪ್ಪ ಅವರು ಎದುರಿಸುತ್ತಿರುವ ಮುಜುಗರ ಇಂಥ ಪ್ರಶ್ನೆಯನ್ನು ಮೂಡಿಸುತ್ತದೆ. ಯಡಿಯೂರಪ್ಪ ಅವರ ಮೇಲೆ ನಾನಾ ಆರೋಪಗಳು ಮಾಡುವವರು ಇದ್ದಾರೆ. ಆದರೆ "ಕರ್ನಾಟಕದಲ್ಲಿ ಭೀಕರ ಪ್ರವಾಹದ ಸ್ಥಿತಿ ಇದ್ದು, ತಮ್ಮದೇ ಪಕ್ಷದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ ತುರ್ತಾಗಿ ಪರಿಹಾರದ ಹಣ ತರಲು ಆಗಲಿಲ್ಲವಲ್ಲಾ ಎಂಬ ಅವಮಾನದ ಮುಂದೆ ಬೇರೇನೂ ಬೇಡ" ಎನ್ನುತ್ತಾರೆ ಅಂಥ ಆರೋಪಗಳನ್ನು ಮಾಡುವವರು.
ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಮೂಗುದಾರ
ಅಧಿಕಾರಕ್ಕೆ ಏರಿದ ಆರಂಭದಲ್ಲಿ ಯಡಿಯೂರಪ್ಪ ಅವರಿಗಿದ್ದ ಉತ್ಸಾಹ ಈಗ ಸಂಪೂರ್ಣ ಕಡಿಮೆಯಾದಂತಿದೆ. ಹೈ ಕಮಾಂಡ್ ನ ಎದುರು ಹೀಗೆ ಎಲ್ಲದಕ್ಕೂ ಕಾದು ನಿಲ್ಲುವ ಬದಲು ಚುನಾವಣೆಗೆ ಹೋಗುವುದೇ ಉತ್ತಮ ಎಂಬ ಸ್ಥಿತಿ ತಲುಪಿದ್ದಾರೆ. ತಮ್ಮ ಮಾತಿನಂತೆ ಅತೃಪ್ತ ಶಾಸಕರಿಗೆ ಸ್ಥಾನ ಮಾನ ನೀಡಲು ಆಗಲಿಲ್ಲ ಎಂಬ ಚಿಂತೆ, ಸಂಪುಟ ಸಚಿವ ಸ್ಥಾನ ಹಂಚಿಕೆಗೆ ಹೈ ಕಮಾಂಡ್ ನಿಂದ ಕಾಯಿಸುತ್ತಿರುವುದು, ಮೂರು- ಮೂರು ಮಂದಿಯನ್ನು ಡಿಸಿಎಂ ಮಾಡಲು ಹೊರಟು ನಿಂತಿರುವುದು ಈ ಎಲ್ಲ ವಿದ್ಯಮಾನಗಳಿಂದ ಯಡಿಯೂರಪ್ಪ ರೋಸತ್ತಿದ್ದಾರೆ.
ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?
ಆರು ತಿಂಗಳಿಗಿಂತ ಹೆಚ್ಚು ಕಾಲ ಸರಕಾರ ಉಳಿಯುವಂತೆ ಕಾಣಲ್ಲ
ಸ್ವಭಾವತಃ ಯಡಿಯೂರಪ್ಪ ಅವರಿಗೆ 'ಜೀ ಹುಜೂರ್' ಎಂದುಕೊಂಡಿರುವುದು ಒಗ್ಗದ ಜಾಯಮಾನ. ಅವರ ಹುಂಬತನ, ಸಿಟ್ಟು ಇಂಥವನ್ನೆಲ್ಲ ಸಹಿಸಿಕೊಂಡೇ ಬಿಜೆಪಿಯ ಉದ್ಧಾರವನ್ನು ಅವರಿಂದ ಮಾಡಿಸಬೇಕೇ ಹೊರತು, ಆದೇಶಗಳಿಗೆ ಕಾಯುತ್ತಾ ಕೂರುವ ಆಸಾಮಿ ಅವರಲ್ಲ. ಈಗಿನ ಪರಿಸ್ಥಿತಿ ಗಮನಿಸಿದರೆ ಮತ್ತು ಇದೇ ಸ್ಥಿತಿ ಮುಂದುವರಿದರೆ ಇನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಬಿಜೆಪಿ ಸರಕಾರ ಉಳಿಯುವಂತೆ ಕಾಣಲ್ಲ. ಕೊನೆಗೆ ಸ್ವತಃ ಯಡಿಯೂರಪ್ಪನವರೇ ಈ ಸರಕಾರವನ್ನು ಕೆಡವಿದರೂ ಅಚ್ಚರಿ ಇಲ್ಲ.
ಅಧಿಕಾರ ಕೇಂದ್ರದಿಂದ ದೂರ ಉಳಿಯುವುದು ಗೌಡರ ಕುಟುಂಬಕ್ಕೆ ಕಷ್ಟ
ಇನ್ನೊಂದು ಕುತೂಹಲಕಾರಿ ಬೆಳವಣಿಗೆ ಅಂದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ 'ಮಾತುಕತೆ' ಶುರುವಾಗಿದೆ. ಮೇಲುನೋಟಕ್ಕೆ ಇದು ದೇವೇಗೌಡರು- ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮಧ್ಯೆ ಕದನದಂತೆ ಗೋಚರಿಸಬಹುದು. ಆದರೆ ಎರಡು ಪಕ್ಷಗಳ ಮಧ್ಯೆ 'ಮಾತುಕತೆ' ಇದೆ. ಇನ್ನು ಆರು ತಿಂಗಳಲ್ಲಿ ಏನು ಬೇಕಾದರೂ ಆಗಬಹುದು ಎಂಬುದರ ಸೂಚನೆ ಅದು. ದೇವೇಗೌಡರ ಕುಟುಂಬ ಅಧಿಕಾರ ಕೇಂದ್ರದಿಂದ ಈಗಿನಷ್ಟು ದೂರ ಇದ್ದ ಕಾಲ ಇಲ್ಲವೇ ಇಲ್ಲ. ಸದಾ ಚಲಾವಣೆಯಲ್ಲಿ ಇರುವ ನಾಣ್ಯ ಅಂದರೆ ದೇವೇಗೌಡರ ಕುಟುಂಬ. ಅವರಿಗೆ ಹೀಗೆ ಮಾತು ನಡೆಯದ ಸರಕಾರವನ್ನು ಉಳಿಸುವುದು ಬೇಕಿಲ್ಲ. ಇದಕ್ಕೆ ತಕ್ಕಂತೆ ಬಿಜೆಪಿಯಲ್ಲೂ ಬೆಳವಣಿಗೆ ಆಗುತ್ತಿದೆ. ಯಡಿಯೂರಪ್ಪ ಅವರು ಒಳಗೊಳಗೆ ಕೊತಕೊತ ಕುದಿಯುತ್ತಿದ್ದಾರೆ.