ಬಿಜೆಪಿಗೆ ಶಾಕ್, ರಾಮಮಂದಿರ ವಿಚಾರಕ್ಕೆ ಇನ್ನು ಬ್ರೇಕ್; ಇನ್ನೇನಿದ್ದರೂ 'ಪ್ಲ್ಯಾನ್ ಬಿ'!
ಬಿಜೆಪಿಯು ಮತ್ತೆ ತನ್ನ ಅಜೆಂಡಾ ಬದಲಿಸಿಕೊಳ್ಳಬೇಕಾಗುತ್ತದೆ. ರಾಮ ಮಂದಿರ ಹಾಗೂ ಅಯೋಧ್ಯಾ ವಿಷಯವನ್ನು ಮುನ್ನೆಲೆಗೆ ತಂದು ಚುನಾವಣೆ ಎದುರಿಸಿದರೆ ಸದ್ಯದ ಸನ್ನಿವೇಶಕ್ಕೆ ಏನಾಗುತ್ತದೆ ಎಂಬುದಕ್ಕೆ ಐದು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಉತ್ತರ ಸಿಕ್ಕಿದೆ. ಹಾಗೇ ಗಮನಿಸುತ್ತಾ ಹೋಗಿ, ಇನ್ನು ಕೆಲವೇ ದಿನಕ್ಕೆ ಬಿಜೆಪಿಯಲ್ಲಿನ ಪ್ರಮುಖ ನಾಯಕರೇ ಆ ವಿಚಾರವನ್ನು ಕೈ ಬಿಡುತ್ತಾರೆ.
-ಹೀಗಂದವರು ಒಂದು ದಶಕದಿಂದ ಬಿಜೆಪಿಯ ಚುನಾವಣಾ ತಂತ್ರಗಳನ್ನು ಹತ್ತಿರದಿಂದ ಗಮನಿಸುತ್ತಾ ಬಂದಿರುವ ಪತ್ರಕರ್ತ. ಕರ್ನಾಟಕದ ಪೇಜಾವರ ಶ್ರೀಗಳಿಂದ ಮೊದಲುಗೊಂಡು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಕ ಯಾರೆಲ್ಲ ಅಯೋಧ್ಯೆ ಹಾಗೂ ರಾಮಮಂದಿರದ ಬಗ್ಗೆ ಮಾತನಾಡಲು ಆರಂಭಿಸಿದ್ದರೋ ಇನ್ನು ಅವರೆಲ್ಲ ಸುಮ್ಮನಾಗುತ್ತಾರೆ ಎಂದರು.
ಮೋದಿ ಪಿಎಂ ಆದ ಮೇಲೆ ಬಿಜೆಪಿ ನಿಜಕ್ಕೂ ಅಜೇಯವಾಗಿಯೇ ಉಳಿದಿದೆಯಾ?!
ಪಂಚ ರಾಜ್ಯ ಚುನಾವಣಾ ಫಲಿತಾಂಶ ಹಾಗೂ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿಟ್ಟ ವಿಶ್ಲೇಷಣೆಯು ಇಲ್ಲಿದೆ. ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಾಗೂ ಅದರ ಮೆದುಳು, ಮನಸ್ಸು ಹಾಗೂ ಹೃದಯವಾದ ಆರೆಸ್ಸೆಸ್ ಪಾಲಿಗೆ ಅಯೋಧ್ಯೆ ರಾಮಮಂದಿರ ನಿರ್ಮಾಣವು ಎಲ್ಲ ಚುನಾವಣೆಗಳಲ್ಲೂ ಪ್ರಮುಖ ವಿಷಯ ಏನಾಗಿರಲಿಲ್ಲ. ಈ ಹಿಂದಿನ ಕೆಲವು ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ ಆ ಅಂಶ ತಿಳಿಯುತ್ತದೆ.
ಅಭಿವೃದ್ಧಿ ವಿಚಾರ ಚರ್ಚೆಗೆ ಬರಲಿಲ್ಲ
ಆದರೆ, ಪಂಚ ರಾಜ್ಯ ಚುನಾವಣೆಯಲ್ಲಿ ಕೇಂದ್ರ ಹಾಗೂ ಆಡಳಿತದಲ್ಲಿರುವ ಕಡೆ ಆಯಾ ರಾಜ್ಯ ಸರಕಾರದ ಸಾಧನೆಗಿಂತ ಹೆಚ್ಚಾಗಿ ಚರ್ಚೆ ಆಗಿದ್ದು ರಾಮಮಂದಿರ ನಿರ್ಮಾಣದ ವಿಚಾರ. ಆಡಳಿತದಲ್ಲೇ ಇಲ್ಲದ ಕಾಂಗ್ರೆಸ್ ವಿರುದ್ಧ ಅದೇನೇ ವಾಗ್ದಾಳಿ ನಡೆಸಿದರೂ ನೀವೇನು ಮಾಡಿದಿರಿ ಹೇಳಿ ಎಂಬ ಜನರ ಪ್ರಶ್ನೆಗೆ ಬಿಜೆಪಿ ಬಳಿಯಲ್ಲಿ ಉತ್ತರವೇ ಇರಲಿಲ್ಲ. ನಾಲ್ಕೂವರೆ ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರೈತರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಡವುತ್ತಿದೆ ಎಂಬ ಸಂಗತಿ ಈಗ ಅರಿವಿಗೆ ಬಂದಂತೆ ಇದೆ. ಆ ಕಾರಣಕ್ಕೆ ಕೇಂದ್ರ ಸರಕಾರವು ರೈತರ ಸಾಲ ಮನ್ನಾ ಮಾಡುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಿಲ್ಲ. ಏಕೆಂದರೆ, ರೈತರ ಸಾಲ ಮನ್ನಾಗೆ ಕೇಂದ್ರ ಸರಕಾರದಿಂದ ಬಿಡಿಗಾಸು ಕೂಡ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದು ನೆನಪಿನಲ್ಲಿ ಉಳಿದುಹೋಗಿದೆ.
ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾದ ಪ್ರಸ್ತಾವ
ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ತಾನದಲ್ಲಿ ಕಾಂಗ್ರೆಸ್ ಪ್ರಣಾಳಿಕೆಗಳಲ್ಲಿ ರೈತರ ಕಷ್ಟಗಳು, ಉದ್ಯೋಗ ಸೃಷ್ಟಿ, ಯುವ ಜನರಿಗಾಗಿ ಕಾರ್ಯಕ್ರಮಗಳು ಎಂಬ ಪಟ್ಟಿಯೇ ಮಾಡಿದ್ದರೂ ಕೇಸರಿ ಪಕ್ಷ ಆ ನಿಟ್ಟಿನಲ್ಲಿ ಯೋಚನೆ ಮಾಡದೆ ಉಡಾಫೆ ತೋರಿತೆ ಅಥವಾ ಜನರ ಬಳಿಗೆ ರಾಮಮಂದಿರ ನಿರ್ಮಾಣದಂಥ ಭಾವನಾತ್ಮಕ ಧಾರ್ಮಿಕ ವಿಚಾರದೊಂದಿಗೆ ಎದುರುಗೊಳ್ಳಬೇಕು ಎಂದು ಯೋಚಿಸಿತೋ ಆ ಪಕ್ಷದ ವರಿಷ್ಠರೇ ಹೇಳಬೇಕು. ಅಂಥ ಸನ್ನಿವೇಶ ಸೃಷ್ಟಿಯಾದಾಗ ಜನರು ಬಿಜೆಪಿಯನ್ನು ತಿರಸ್ಕರಿಸಲು ಕಾರಣ ಸಿಕ್ಕಿತು. ಹಾಗಂತ ಜನರ ಆಯ್ಕೆ ಕಾಂಗ್ರೆಸ್ ಆಗಿತ್ತೇ ಅಂದರೆ ಕೆಲ ಕಡೆ ಅದಕ್ಕೂ ಉತ್ತರ 'ಇಲ್ಲ' ಅಂತಲೇ ಹೇಳಬೇಕಾಗುತ್ತದೆ. ಏಕೆಂದರೆ 'ನೋಟಾ' ವೋಟುಗಳು ಹೆಚ್ಚು ಚಲಾವಣೆ ಆಗಿವೆ. ಇದರಿಂದ ಬಹಳ ಕಡೆ ಬಿಜೆಪಿ ಸೋಲುವಂತಾಗಿದೆ. ಆದ್ದರಿಂದ ಎಲ್ಲೋ ಎಡವಿದರೋ ಅದೇ ಜಾಗದಲ್ಲಿ ತಪ್ಪು ತಿದ್ದುಕೊಂಡರೆ ಬಿಜೆಪಿಯು ಲೋಕಸಭೆ ಚುನಾವಣೆ ಹೊತ್ತಿಗೆ ಸುಧಾರಿಸಬಹುದು.
ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ
ನಮಾಮಿ ಗಂಗಾ ಯೋಜನೆ ಏನಾಯಿತು?
ಇನ್ನು ಉತ್ತರ ಭಾರತದಲ್ಲಿ 'ನಮಾಮಿ ಗಂಗಾ' ಯೋಜನೆ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಗಂಗಾ ನದಿ ಹರಿಯುವ ರಾಜ್ಯಗಳು ಹಾಗೂ ತಟದ ಅಕ್ಕಪಕ್ಕದಲ್ಲಿನ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳ ಫಲಿತಾಂಶವನ್ನು ಅವಲೋಕಿಸಿದರೆ ಅಲ್ಲಿನ ಜನರು ಬಿಜೆಪಿಯ ಮೇಲೆ ಇಟ್ಟಿದ್ದ ನಂಬಿಕೆ ಎಂಥದ್ದು ಎಂಬುದು ಗೊತ್ತಾಗುತ್ತದೆ. ಗಂಗೆಯ ಜತೆಗೆ ಭಾವನಾತ್ಮಕವಾಗಿ ಬೆಸೆದೆಕೊಂಡಿರುವ ಜನರು 'ನಮಾಮಿ ಗಂಗೆ' ಯೋಜನೆ ಜಾರಿಗೆ ತರುತ್ತೇನೆ ಎಂದ ಬಿಜೆಪಿ ಬಗ್ಗೆ ಬಹಳ ಪ್ರೀತಿಯಿಂದ ಮತ ಹಾಕಿದರು. ದೊಡ್ಡ ನಿರೀಕ್ಷೆಯಿಂದ ಕಾಯುತ್ತಾ ಕುಳಿತರು. ಆದರೆ ಗಂಗೆ ಶುದ್ಧಳಾಗಲೇ ಇಲ್ಲ. ನೋಡನೋಡುತ್ತಾ ವರ್ಷಗಳು ಉರುಳಿದವು. ಈ ಯೋಜನೆಯೇ ನಾಮ್ ಕೇ ವಾಸ್ಥೆ ಎಂಬಂತೆ ಮಾಧ್ಯಮಗಳಲ್ಲಿ ವರದಿ ಬರಲಾರಂಭಿಸಿದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗಂಗೆ ಹರಿಯುವ ರಾಜ್ಯಗಳ ಉದ್ದಕ್ಕೂ ಫಲಿತಾಂಶವನ್ನು ಗಮನಿಸಬೇಕಾಗುತ್ತದೆ. ಬಿಜೆಪಿ ಈ ವಿಚಾರದಲ್ಲಿ ಈಗ ಎಚ್ಚೆತ್ತುಕೊಳ್ಳುವಷ್ಟು ಸಮಯ ಇದೆಯೇ? ಗೊತ್ತಿಲ್ಲ.
ಪ್ಲಾನ್ ಬಿ ಬಗ್ಗೆ ಮಾತನಾಡಲು ಆರಂಭಿಸಲಿದೆ ಬಿಜೆಪಿ
ಪೆಟ್ರೋಲ್ ದರ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರ, ರೈತರ ಸಮಸ್ಯೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆಗಿನ ತಿಕ್ಕಾಟ, ಉದ್ಯೋಗ ಸೃಷ್ಟಿ ಆಗದಿರುವುದು, ಜಿಡಿಪಿ ಕುಸಿತ, ಅಪನಗದೀಕರಣ, ಜಿಎಸ್ ಟಿ ಜಾರಿ ಇವ್ಯಾವೂ ಚುನಾವಣೆ ವಿಷಯ ಆಗಲಾರದು ಎಂಬುದು ಬಿಜೆಪಿಯ ಬಲವಾದ ನಂಬಿಕೆ ಆಗಿತ್ತು. ಅದರಲ್ಲೂ ಉತ್ತರ ಭಾರತದಲ್ಲಿ ಹಿಂದುತ್ವದ ವಿಚಾರ ಧಾರೆ ಪ್ರಮುಖವಾಗುತ್ತದೆ. ಕಟ್ಟರ್ ಹಿಂದುತ್ವವಾದಿ ನಾಯಕರನ್ನು ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿ ನಿಲ್ಲಿಸಿಕೊಂಡರೆ ಗೆಲುವು ಸಲೀಸು ಎಂಬ ಲೆಕ್ಕಾಚಾರವೂ ಇತ್ತು ಎಂಬುದಕ್ಕೆ ಉದಾಹರಣೆ ಕೂಡ ಸಿಗುತ್ತದೆ. ಆದರೆ ಆ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣೆ ಪ್ರಚಾರ ದೊಡ್ಡ ಪ್ರಯೋಜನ ನೀಡಲಿಲ್ಲ. ಇದೀಗ ಬಿಜೆಪಿ ತನ್ನ ಪ್ಲ್ಯಾನ್ ಬಿ ಆದ ಅಭಿವೃದ್ಧಿ ಬಗ್ಗೆ ಮಾತನಾಡಲು ಆರಂಭಿಸುವುದು ಸ್ಪಷ್ಟವಾಗುತ್ತಿದೆ.