ಊರೊಳಗೆ ಚಿರತೆ ಬಂದರೆ...ಸಂಜಯ್ ಗುಬ್ಬಿ ಏನಂತಾರೆ?
ಈಚೆಗೆ ಅಂದರೆ ಶನಿವಾರದಂದು ತುಮಕೂರಿನ ಜನ ವಸತಿ ಬಡಾವಣೆಯಾದ ಜಯನಗರದ ಮನೆಯೊಳಗೆ ಚಿರತೆಯೊಂದು ಹೊಕ್ಕಿತು. ಕೆಲ ಗಂಟೆಗಳ ಕಾರ್ಯಾಚರಣೆ ನಂತರ ಚಿರತೆಯನ್ನು ಹಿಡಿದ ಅರಣ್ಯ ಇಲಾಖೆಯವರು ಬನ್ನೇರುಘಟ್ಟಕ್ಕೆ ಬಿಡುವುದಾಗಿ ಹೇಳಿದರು. ಆ ಇಡೀ ಕಾರ್ಯಾಚರಣೆಯ ಮಾಹಿತಿಯನ್ನು ಮಾಧ್ಯಮಗಳು ಕೂಡ ನಿರಂತರವಾಗಿ ಪ್ರಸಾರ ಮಾಡಿದವು.
ಅಂದಹಾಗೆ ಚಿರತೆಯಂಥ ವನ್ಯಜೀವಿಗಳು ವಸತಿ ಪ್ರದೇಶಗಳಲ್ಲಿ ಏಕೆ ಕಾಣಿಸಿಕೊಳ್ಳುತ್ತವೆ? ಅದರಲ್ಲೂ ಕೆಲ ಜಿಲ್ಲೆಗಳಲ್ಲಿ ಮಾತ್ರ ಏಕೆ ಪದೇಪದೇ ಚಿರತೆಗಳ 'ಉಪಟಳ' ಹೆಚ್ಚು? ಹಾಗೆ ಚಿರತೆ ಕಾಣಿಸಿಕೊಂಡಾಗ ನಾವು ಹೇಗಿರಬೇಕು? ಇತ್ಯಾದಿ ಪ್ರಶ್ನೆಗಳನ್ನು ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಅವರ ಮುಂದೆ ಇಡಲಾಯಿತು.
ತುಮಕೂರಿನಲ್ಲಿ 'ಆಪರೇಷನ್ ಚಿರತೆ', ಅಸಹಾಯಕ ಅರಣ್ಯ ಇಲಾಖೆ
ಆ ಎಲ್ಲ ಪ್ರಶ್ನೆಗಳಿಗೂ ತುಂಬ ಉಪಯುಕ್ತವಾದ ಉತ್ತರವನ್ನು ಅವರು ಒನ್ಇಂಡಿಯಾ ಕನ್ನಡಕ್ಕೆ ನೀಡಿದ್ದಾರೆ. ವನ್ಯಜೀವಿ- ಮಾನವ ಸಂಘರ್ಷ ಎಂಬುದು ತೀರಾ ಹೆಚ್ಚಾಗಿರುವ ಈ ಕಾಲ ಘಟ್ಟದಲ್ಲಿ ಸಂಜಯ್ ಗುಬ್ಬಿಯವರ ಸಂದರ್ಶನ ಬಹಳ ಪ್ರಯೋಜನಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಸಂಜಯ್ ಗುಬ್ಬಿ ಅವರಿಗೆ ಕೇಳಿದ ಪ್ರಶ್ನೆಗಳು ಮತ್ತು ಅವಕ್ಕೆ ಅವರು ನೀಡಿದ ಉತ್ತರ ನಿಮ್ಮ ಮುಂದಿದೆ.
ಪ್ರಶ್ನೆ: ಚಿರತೆಗಳು ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಏನು?
ಸಂಜಯ್ ಗುಬ್ಬಿ: ಚಿರತೆಗಳ ಸಂಖ್ಯೆ ಜಾಸ್ತಿಯಾಗಿರುವುದು, ಅವುಗಳ ಆವಾಸಸ್ಥಾನ ಕುಂಠಿತಗೊಳ್ಳುತ್ತಿರುವುದು, ಅವುಗಳ ನೈಸರ್ಗಿಕ ಆಹಾರವಾದ ಚಿಂಕೆ, ಕೊಂಡುಕುರಿ, ಮೊಲ, ಕಾಡುಕೋಳಿ, ಇನ್ನಿತರ ಪ್ರಾಣಿಗಳ ಅವ್ಯಾವಹತ ಬೇಟೆ ಆಡುತ್ತಿವುದೇ ಕಾರಣ.
ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ
ಪ್ರಶ್ನೆ: ತುಮಕೂರಿನಲ್ಲಿ ಮೊನ್ನೆ ನಡೆದ ಚಿರತೆ ಕಾರ್ಯಾಚರಣೆ ಅದನ್ನು ಹೆದರಿಸಿ, ಕೊಲ್ಲುವ ರೀತಿ ಇತ್ತಲ್ಲಾ?
ಸಂಜಯ್ ಗುಬ್ಬಿ: ಇಲ್ಲ, ಕಾರ್ಯಾಚರಣೆಯಲ್ಲಿ ಜನ ಜಂಗುಳಿಯ ನಿಯಂತ್ರಣ ಮಾಡಲಿಲ್ಲ ಅನ್ನೋದು ಬಿಟ್ಟರೆ ಇನ್ನುಳಿದ ವಿಚಾರಗಳು ಸಮಂಜಸವಾಗಿ ನಿಭಾಯಿಸಿದ್ದಾರೆ.
ಪ್ರಶ್ನೆ: ಅರಣ್ಯ ಇಲಾಖೆಯಲ್ಲಿ ವನ್ಯಜೀವಿಗಳ ರಕ್ಷಣೆ ಮಾಡುವುದಕ್ಕೆ ಸೂಕ್ತ ಸಲಕರಣೆ ಇವೆಯಾ, ವೈದ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದಾರಾ?
ಸಂಜಯ್ ಗುಬ್ಬಿ: ಅರವಳಿಕೆ ಮದ್ದು ಮತ್ತು ವನ್ಯಜೀವಿ ವೈದ್ಯರ ಕೊರತೆಯಿದೆ. ಇದಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ವನ್ಯಜೀವಿ ವೈದ್ಯರನ್ನು ಇನ್ನು ಹೆಚ್ಚಾಗಿ ಅರಣ್ಯ ಇಲಾಖೆಗೆ ನಿಯೋಜಿಸಬೇಕು, ಅರವಳಿಕೆ ಮದ್ದು ರಫ್ತು ಮಾಡಿಕೊಳ್ಳುವ ಕಾರ್ಯವಿಧಾನವನ್ನು ಸುಲಭಗೊಳಿಸಬೇಕು.
ಪ್ರಶ್ನೆ: ಸಿಕ್ಕ ಪ್ರಾಣಿಗಳನ್ನೆಲ್ಲ ಬನ್ನೇರುಘಟ್ಟಕ್ಕೆ ಬಿಡ್ತೀವಿ ಅನ್ನೋ ಮಾತಾಡ್ತಾರೆ. ಈ ಕ್ರಮ ಸರಿಯಾ? ನಿಜಕ್ಕೂ ಅಲ್ಲಿ ಬಿಡ್ತಾರಾ?
ಸಂಜಯ್ ಗುಬ್ಬಿ: ಎಲ್ಲಾ ಪ್ರಾಣಿಗಳನ್ನು ಬನ್ನೇರುಘಟ್ಟಕ್ಕೆ ಬಿಡಲಾಗುವುದಿಲ್ಲ. ಬಹುಶಃ ಪ್ರಾಣಿಯ ರಕ್ಷಣೆ ದೃಷ್ಟಿಯಿಂದ ಮತ್ತು ಪ್ರಾಣಿಯಿರುವ ವಾಹನವನ್ನು ಜನ ಹಿಂಬಾಲಿಸದಿರಲಿ ಎಂದು ಹೀಗೆ ಹೇಳಿರಬಹುದು.
ಪ್ರಶ್ನೆ: ಅಲ್ಲಿ ಬಿಟ್ಟ ಮೇಲೆ ಆ ಪ್ರಾಣಿಗಳ ಸ್ಥಿತಿ ಏನಾಯಿತು ಎಂದು ಪರಿಶೀಲಿಸುವ ಪರಿಪಾಠ ಇದೆಯಾ?
ಸಂಜಯ್ ಗುಬ್ಬಿ: ಇಲ್ಲ. ಹಿಂದೆ ಕೆಲ ಪ್ರಾಣಿಗಳಿಗೆ ರೇಡಿಯೋ ಕಾಲರ್ ಹಾಕಿ ಏನಾಗುತ್ತದೆ ಎಂದು ತಿಳಿಯಲು ಪ್ರಯತ್ನಿಸಿದ್ದೇವೆ.
ಪ್ರಶ್ನೆ: ರಕ್ಷಣೆ ಮಾಡಿದ ಪ್ರಾಣಿಗಳನ್ನು ಅವುಗಳ ಆವಾಸ ಸ್ಥಾನದಲ್ಲೇ (ಹ್ಯಾಬಿಟೇಟ್) ಮತ್ತೆ ಬಿಡಬೇಕಂತೆ ಹೌದೆ?
ಸಂಜಯ್ ಗುಬ್ಬಿ: ಹೌದು. ಚಿರತೆಗಳನ್ನು ಅವುಗಳ ಆವಾಸ ಸ್ಥಾನದಲ್ಲೇ ಬಿಡುವುದು ಉತ್ತಮ.
ಪ್ರಶ್ನೆ: ಈ ರೀತಿ ಚಿರತೆ ಅಥವಾ ವನ್ಯಪ್ರಾಣಿಗಳು ಕಾಣಿಸಿಕೊಂಡಾಗ ನಮ್ಮ ವರ್ತನೆ ಹೇಗಿರಬೇಕು?
ಸಂಜಯ್ ಗುಬ್ಬಿ: - ಮೊದಲಿಗೆ ಗಾಬರಿಯಾಗಬಾರದು.
- ಚಿರತೆಯಿರುವ ಸ್ಥಳದಲ್ಲಿ ಜನದಟ್ಟಣೆ ಸೇರಬಾರದು. ಅವಶ್ಯವಿದ್ದಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಬೇಕು.
- ಅದರ ಛಾಯಾಚಿತ್ರಣ ಅಥವಾ ವಿಡಿಯೋ ತೆಗೆಯುವ ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ಪ್ರಾಣಹಾನಿ ಅಥವಾ ತೀವ್ರ ಗಾಯಗಳಾಗಬಹುದು.
- ಅರಣ್ಯ ಇಲಾಖೆ ಮಾಧ್ಯಮದವರಿಗೆ ಮಾಹಿತಿ, ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಕೊಡಲು ನಿಯಮಿತವಾಗಿ (ಉದಾ: ಗಂಟೆಗೊಮ್ಮೆ) ನೀಡಲು ಒಬ್ಬ ಅಧಿಕಾರಿಯನ್ನು ನೇಮಿಸಬೇಕು.
- ನುರಿತ ವನ್ಯಜೀವಿ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಜೀವಿ ತಜ್ಞರೊಳಗೊಂಡ ತಂಡ ಮಾತ್ರ ಕಾರ್ಯ ನಿರ್ವಹಿಸಬೇಕು.
- ಮಾಧ್ಯಮದಲ್ಲಿ, ಸಾಮಾಜಿಕ ತಾಣಗಳಲ್ಲಿ ಚಿರತೆಯಿರುವ ವಿಚಾರಕ್ಕೆ ಪ್ರಚಾರ ನೀಡಬಾರದು. ಹೀಗೆ ಮಾಡಿದ ಅಲ್ಲಿ ಜನದಟ್ಟಣೆ ಹೆಚ್ಚುತ್ತದೆ.
- ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯವರ ಸಹಕಾರ ಪಡೆಯಬೇಕು.
ಪ್ರಶ್ನೆ: ಈ ವರೆಗೆ ಚಿರತೆಯ ಗಣತಿ ಆಗಿದೆಯಾ?
ಸಂಜಯ್ ಗುಬ್ಬಿ: ರಾಜ್ಯದ ವಿವಿಧ ಭಾಗಗಳಲ್ಲಿ ನಾವು ಚಿರತೆಗಳ ಸಂಖ್ಯೆಯ ಬಗ್ಗೆ ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಅಧ್ಯಯನ ನಡೆಸಿದ್ದೇವೆ.
ಪ್ರಶ್ನೆ: ಚಿರತೆ, ಕರಡಿ, ಆನೆ ಬಂತು, ದಾಳಿ ಮಾಡಿತು ಎಂದು ತೊಂದರೆಗೆ ಈಡಾಗುವ ಜನರಿಗೆ ಸರಕಾರ ಯಾವ ರೀತಿ ಅನುಕೂಲ ಮಾಡಬಹುದು?
ಸಂಜಯ್ ಗುಬ್ಬಿ: ಜಾನುವಾರು ಸಾವು, ಬೆಳೆ ನಾಶ, ಆಸ್ತಿ ಹಾಳಾದರೆ ಅಥವಾ ಪ್ರಾಣ ಹಾನಿಯಾದರೆ ಸರಕಾರದಿಂದ ಪರಿಹಾರವನ್ನು ಕೊಡಲಾಗುತ್ತಿದೆ.
ಪ್ರಶ್ನೆ: ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ಹೀಗೆ ನಿರ್ದಿಷ್ಟ ಜಿಲ್ಲೆಗಳಲ್ಲೇ ಮಾನವ- ಪ್ರಾಣಿ ಸಂಘರ್ಷ ಹೆಚ್ಚಿನ ಪ್ರಮಾಣದಲ್ಲಿ ಆಗಲು ಕಾರಣವೇನು?
ಸಂಜಯ್ ಗುಬ್ಬಿ: ಚಿರತೆ-ಮಾನವ ಸಂಘರ್ಷಕ್ಕೆ ಮುಖ್ಯ ಕಾರಣಗಳು ಕಲ್ಲು ಗಣಿಗಾರಿಕೆಯಿಂದ ಅವುಗಳ ಆವಾಸಸ್ಥಾನದ ನಾಶ, ಅವುಗಳ ನೈಸರ್ಗಿಕ ಆಹಾರದ ಬೇಟೆ, ಮತ್ತು ಜಾನುವಾರುಗಳಿಗೆ ಸೂಕ್ತವಾಗಿ ರಕ್ಷಣೆ ಕೊಡದಿರುವುದು.