ಯಡಿಯೂರಪ್ಪನವರನ್ನ ಬದಲಾಯಿಸಲ್ಲ, ಬಿಜೆಪಿಯಲ್ಲಿ ಆಕ್ರೋಶ ನಿಲ್ಲಲ್ಲ, ಏಕೆ?
Recommended Video
ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪನವರ ಅನಿವಾರ್ಯತೆ ಬಹಳವಾಗಿ ಇದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಪಕ್ಷದಲ್ಲಿ ಎರಡನೇ ಹಂತದ ನಾಯಕರು ಯಾರು ಎಂಬ ಪ್ರಶ್ನೆ ಉದ್ಭವಿಸಿದರೆ ಯಾರಿಂದಲೂ ಉತ್ತರ ಸಿಗುವಂತೆ ಕಾಣುವುದಿಲ್ಲ. ಇದೇ ವಿಚಾರವಾಗಿ ಪಕ್ಷದ ಆಂತರಿಕ ಸಂಗತಿಗಳ ಬಗ್ಗೆ ತಿಳಿದಿರುವ ಹಿರಿಯ ಕಾರ್ಯಕರ್ತರನ್ನು ಮಾತನಾಡಿಸಿದರೆ ಹೊರಬೀಳುವ ಸಂಗತಿಗಳೇ ಆಸಕ್ತಿಕರವಾಗಿವೆ.
ಈ ಸಲ ಉಪ ಚುನಾವಣೆಗಳಲ್ಲಿ ಬಿಜೆಪಿಯ ಪ್ರದರ್ಶನ ಚೆನ್ನಾಗಿರಲಿಲ್ಲ ಎಂಬುದು ನಿಜ. ಅದು ಯಾವ ಮಾನದಂಡದಲ್ಲಿ? ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಪಕ್ಷ ಕಳೆದುಕೊಂಡಿದೆ. ಉಳಿದಂತೆ ರಾಮನಗರದಲ್ಲಿ ಈ ಸಲ ನಿಲ್ಲಿಸಿದ್ದ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಶಸ್ತ್ರತ್ಯಾಗ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ.
ನನ್ನ ಬಿಟ್ರೆ ಇನ್ನಾರಿದ್ದಾರೆ? ಹೈಕಮಾಂಡಿಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ
ಜಮಖಂಡಿಯಲ್ಲಿ ಕೂಡ ನಿರೀಕ್ಷೆ ಮಾಡಿದಂಥ ಫಲಿತಾಂಶವೇ ಬಂದಿದೆ. ಇನ್ನು ಮಂಡ್ಯದಲ್ಲಿ ಆಗಿರುವುದು ಬಿಜೆಪಿ ಪಾಲಿಗೆ ಮುಂದೊಂದು ದಿನ ಪ್ಲಸ್ ಆಗುವುದರಲ್ಲಿ ಅನುಮಾನ ಇಲ್ಲ. ಇಷ್ಟಾದ ಮೇಲೆ ಯಡಿಯೂರಪ್ಪ ಅವರನ್ನು ದೂರಿ, ನಿರ್ಧಾರಗಳ ಬಗ್ಗೆ ಆಕ್ರೋಶ ತೋರ್ಪಡಿಸುವುದರಲ್ಲಿ ಏನಾದರೂ ಅರ್ಥ ಇದೆಯಾ?
ರಾಮನಗರದ ವಿಧಾನಸಭಾ ಕ್ಷೇತ್ರದಿಂದ ಕಳೆದ ಸಲ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯ ಹೆಸರಾದರೂ ಯಾರಿಗಾದರೂ ನೆನಪಿದೆಯಾ? ರಾಮನಗರ, ಚಾಮುಂಡೇಶ್ವರಿ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅನುಕೂಲ ಆಗುವಂಥ ನಡೆಗಳನ್ನು ಇಟ್ಟಿತ್ತು ಬಿಜೆಪಿ. ಅದು ಕೂಡ ಅಗತ್ಯ ಸಂಖ್ಯೆಯ ಕೊರತೆ ಬಂದರೆ ಮೈತ್ರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿಯೇ ತೆಗೆದುಕೊಂಡ ನಿರ್ಧಾರ ಅದು ಎನ್ನುತ್ತವೆ ಪಕ್ಷದ ಆಂತರಿಕ ಮೂಲಗಳು.
ಕಾಂಗ್ರೆಸ್ ನಿಂದ ನಿರಾಕರಿಸಲು ಸಾಧ್ಯವೇ ಇಲ್ಲದಂಥ ಆಫರ್
ಆದರೆ, ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಬಹಳ ಬುದ್ಧಿವಂತಿಕೆ ಹೆಜ್ಜೆ ಇಟ್ಟಿತು. ತಾನಾಗಿಯೇ ಜೆಡಿಎಸ್ ಗೆ ಬೆಂಬಲವನ್ನೂ ಘೋಷಿಸಿ, ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಹೇಳಿತು. ಅಲ್ಲಿಗೆ ಅದು ನಿರಾಕರಿಸಲು ಸಾಧ್ಯವೇ ಆಗದಂಥ ಆಫರ್ ಆಗಿಬಿಟ್ಟಿತು. ಆ ತನಕ ತುಂಬ ಎಚ್ಚರಿಕೆ ಹೆಜ್ಜೆಗಳನ್ನು ಇಟ್ಟು, ಚುನಾವಣೆ ಪ್ರಚಾರದ ವೇಳೆ ಎಲ್ಲಿಯೂ ಜೆಡಿಎಸ್ ಮೇಲೆ ಆರೋಪ ಮಾಡದೆ, ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದ ಬಿಜೆಪಿ ಕನಲಿ ಹೋಗಿದ್ದೇ ಆ ಸಂದರ್ಭದಲ್ಲಿ. ಯಡಿಯೂರಪ್ಪ ಎಂಥ ಮಾಸ್ ಲೀಡರ್ ಅಂದುಕೊಂಡರೂ ಅವರ ಸಿಟ್ಟು, ತನಗೆ ಬೇಕಾದವರಿಗೇ ಎಲ್ಲವನ್ನೂ ಮಾಡಿಕೊಡುವ ಜಾಯಮಾನ ಇತ್ಯಾದಿ ಕಾರಣಗಳಿಗೆ ಅವರು ಮುಖ್ಯಮಂತ್ರಿ ಆಗುವುದು ಪಕ್ಷದೊಳಗೇ ಹಲವರಿಗೆ ಇಷ್ಟವಿರಲಿಲ್ಲ. ಇನ್ನು ಪಕ್ಷದ ವರಿಷ್ಠರಿಗೂ ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಬೇಡ ಎಂಬುದು ಸತ್ಯ. ಚುನಾವಣೆ ಆದ ಹೊಸತು, ಹೆಸರು ಹಾಳು ಮಾಡಿಕೊಳ್ಳಲು ಇಚ್ಛಿಸದ ಶಾಸಕರು, ಆಪರೇಷನ್ ಕಮಲಕ್ಕೆ ನೇರವಾಗಿ ಕೈ ಹಾಕಬೇಡಿ ಎಂದು ತಾಕೀತು ಮಾಡಿದ ಹೈ ಕಮಾಂಡ್ ಇವೆಲ್ಲ ಸೇರಿ ಯಡಿಯೂರಪ್ಪ ತಮ್ಮ ಪಾಲಿನ ಕೊನೆ ಅವಕಾಶ ತಪ್ಪಿಸಿಕೊಳ್ಳುವಂತಾಯಿತು.
ಅಸ್ತಿತ್ವಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುವವರೇ ಹೆಚ್ಚು
ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯೊಳಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಎದ್ದು ಕಾಣುವಂತೆ ಆಗಿದೆ. ತಮ್ಮ ಅಸ್ತಿತ್ವಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುವವರು, ಬಲಿ ಕೊಡುವವರು ಹೆಚ್ಚಾಗುತ್ತಿದ್ದಾರೆ ಎಂಬುದು ಕಾರ್ಯಕರ್ತರ ಆರೋಪ. ಬೆಂಗಳೂರನ್ನೇ ಉದಾಹರಣೆ ಆಗಿ ನೀಡುವ ಅವರು, ಲೋಕಸಭೆ ಚುನಾವಣೆ, ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ಮೂರರ ಲೆಕ್ಕವನ್ನೂ ಮುಂದಿಡುತ್ತಾರೆ. ತಮ್ಮ ಗೆಲುವಿನ ಸಲುವಾಗಿ ಒಂದೋ ಪಕ್ಷದಿಂದ ಡಮ್ಮಿ ಕ್ಯಾಂಡಿಡೇಟ್ ಹಾಕುತ್ತಾರೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿ ಗೆಲ್ಲದ ರೀತಿಯಲ್ಲಿ ವ್ಯವಸ್ಥಿತವಾದ ತಂತ್ರ ಮಾಡಲಾಗುತ್ತದೆ. ಆ ರೀತಿ ಉದಾಹರಣೆ ಸಾಕಷ್ಟು ಸಿಗುತ್ತದೆ. ಅಂಥ ಅಡ್ಜಸ್ಟ್ ಮೆಂಟ್ ಕ್ಷೇತ್ರದಲ್ಲಿ ರಾಮನಗರ ಕೂಡ ಒಂದು ಎಂಬುದು ಮೂಲಗಳ ಮಾಹಿತಿ. ಮೊದಲನೆಯದು ಪಕ್ಷದ ಒಕ್ಕಲಿಗ ನಾಯಕರು ತಮ್ಮ ಸಮುದಾಯದಲ್ಲಿ ಏಕೆ ಕೆಟ್ಟವರಾಗುವುದು ಎಂದು ಆಲೋಚಿಸುತ್ತಾರೆ. ಮತ್ತೂ ಕೆಲವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದು ಯಾರೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಅಂತ ಮಾತ್ರ ಕೇಳಬೇಡಿ. ಏಕೆಂದರೆ ಕೆಲವರದು ವ್ಯಾವಹಾರಿಕ ಸಂಬಂಧಗಳು ಕೂಡ ಇವೆ. ಎರಡು ಬೇರೆ ಪಕ್ಷದ, ಮೇಲ್ನೋಟಕ್ಕೆ ವಿರೋಧಿಗಳಂತೆ ಕಾಣುವ ರಾಜಕಾರಣಿಗಳ ಮಕ್ಕಳು ವ್ಯವಹಾರದಲ್ಲಿ ಪಾರ್ಟನರ್ ಗಳು ಆಗಿರುವ ಉದಾಹರಣೆಯಿದೆ. ಈ ರೀತಿ ಸಾಕಷ್ಟು ಉದಾಹರಣೆಗಳಿವೆ. ಆ ಬಗ್ಗೆ ಇನ್ನೂ ವಿವರ ಬೇಕು ಅಂದರೆ ನೀವೇ ಮೂಲ ಹುಡುಕಿಕೊಳ್ಳಿ ಎನ್ನುತ್ತಾರೆ.
5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು
ಯಾರು, ಯಾವ ಪಕ್ಷದ ಪರ ಇದ್ದಾರೆಂದು ಗೊತ್ತಾಗಲ್ಲ
ಈಗಂತೂ ಕರ್ನಾಟಕದ ಯಾವುದೇ ಪ್ರಮುಖ ಪಕ್ಷಗಳು ವಂಶಪಾರಂಪರ್ಯ ಆಡಳಿತದಿಂದ ಹೊರತಾಗಿಲ್ಲ. ಅದೇ ರೀತಿ ಕೆಲವು ವ್ಯವಹಾರಗಳು ಹಾಗೂ ಬೆಳವಣಿಗೆಗಳ ಬಗ್ಗೆ ಕೂಡ ಮಾತನಾಡಲ್ಲ. ಕೆಲವು ಸಲವಂತೂ ಯಾರು, ಯಾವ ಪಕ್ಷದ ಪರ ಇದ್ದಾರೆ ಅಂತಲೇ ಗೊಂದಲ ಮೂಡುವ ಮಟ್ಟಿಗೆ ಪರಿಸ್ಥಿತಿ ಇದೆ. ಆಯಾ ಪಕ್ಷದ ಅಭಿಮಾನಿಗಳು ರೋಷಾವೇಶದಿಂದ ಹೊಡೆದಾಡುವಂತೆ ನಾಯಕರು, ಮುಖಂಡರ ಮಟ್ಟದಲ್ಲಿ ಪರಿಸ್ಥಿತಿ ಇರುವುದಿಲ್ಲ. ಕೆಲವು ಸಲ ವೈಯಕ್ತಿಕ ದ್ವೇಷ ಕೆಲಸ ಮಾಡಬಹುದೇ ವಿನಾ ಅಂಥ ಸಂದರ್ಭದಲ್ಲಿ ಒಬ್ಬರನ್ನು ಕಾಪಾಡಲು ಹಾಗೂ ಸಿಲುಕಿಸಲು ಮತ್ತೊಬ್ಬರು ಆಯಾ ಪಕ್ಷದಲ್ಲೇ ಇರುತ್ತಾರೆ. ಇವೆಲ್ಲ ಯಾಕೆ ಹೇಳಬೇಕಾಯಿತು ಅಂದರೆ, ಯಡಿಯೂರಪ್ಪನಂಥವರಿಗೆ ವ್ಯವಹಾರವನ್ನು ಸಂಭಾಳಿಸುವುದು ಸುಲಭವಲ್ಲ. ಪಕ್ಷದ ವರಿಷ್ಠರು, ತಮ್ಮದೇ ಪಕ್ಷದ ಇತರ ಮುಖಂಡರು, ಇಡೀ ರಾಜ್ಯದ ಜನರು, ಸಮುದಾಯದ ಮುಖಂಡರು ಎಲ್ಲರೂ ಅವರ ಕಡೆ ನೋಡುತ್ತಿರುತ್ತಾರೆ.
ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು?
ಪರ್ಯಾಯ ನಾಯಕತ್ವದ ಆಯ್ಕೆಗಳು ಯಾವುವು?
ಈಗ ಬಿಜೆಪಿಗೆ ಎದುರಾಗಿರುವ ಸಮಸ್ಯೆ ಏನೆಂದರೆ, ಇಡೀ ಕರ್ನಾಟಕದಲ್ಲಿ ಸ್ವೀಕಾರಾರ್ಹ ಆಗಬಹುದಾದ, ನಾಯಕತ್ವ ಗುಣಗಳಿರುವ, ಪ್ರಬಲ ಸಮುದಾಯದ ಬೆಂಬಲ ಇರುವ ಮಾಸ್ ಲೀಡರ್ ಒಬ್ಬರು ಅಂತ ಇಲ್ಲ. ಯಡಿಯೂರಪ್ಪ ಅವರ ವಯಸ್ಸು, ದುಡುಕು, ಸಿಡುಕು ಹಾಗೂ ಪಕ್ಷದೊಳಗೇ ಅವರ ಬಗ್ಗೆ ಇರುವ ಅಸಮಾಧಾನ ಇವೆಲ್ಲ ಸೇರಿ ಬಿಜೆಪಿಯನ್ನು ದುರ್ಬಲವಾಗಿ ಕಾಣಿಸುವಂತೆ ಮಾಡುತ್ತಿದೆ. ಹಾಗೆ ನೋಡಿದರೆ ಜೆಡಿಎಸ್-ಕಾಂಗ್ರೆಸ್ ಸೇರಿ ಪ್ರಬಲ ಪೈಪೋಟಿ ನೀಡಿದರೂ ಶಿವಮೊಗ್ಗದಲ್ಲಿ ಉಪ ಚುನಾವಣೆಯನ್ನು ಬಿಜೆಪಿ ಗೆಲ್ಲಲು ಸಾಧ್ಯವಾಯಿತು. ಒಂದು ವೇಳೆ ಅಲ್ಲಿ ಸೋತುಬಿಟ್ಟಿದ್ದರೆ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಇನ್ನೂ ಜೋರು ಮಟ್ಟದಲ್ಲಿ ಕೇಳಿಬರುತ್ತಿತ್ತು. ಈಗ ಒಂದು ವೇಳೆ ಅದಕ್ಕಾಗಿ ಬೇಡಿಕೆ ಇಟ್ಟರೂ ಪರ್ಯಾಯವಾಗಿ ಯಾರಿಗೆ ನಾಯಕತ್ವ ವಹಿಸಬಹುದು, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಿಸುವ ಸಾಮರ್ಥ್ಯ ಯಾರಿಗೆ ಇದೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ.